ಬುಧವಾರ, ಆಗಸ್ಟ್ 23, 2017

ಮುದಿಯರೂ ಹತ್ತಿದ ಮುದಿಬೆಟ್ಟ!



ಮಂಡ್ಯಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಮುದಿಬೆಟ್ಟಕ್ಕೆ ಚಾರಣ ಕಾರ್ಯಕ್ರಮ ಎಂದು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ದಿನ ನಿಗದಿಗೊಳಿಸಿದ ಮಾಹಿತಿ ಹೊರಬಿದ್ದಾಗ ಪೂರ್ತಿ ಮುದಿಯಾದಮೇಲೆ ಮುದಿಬೆಟ್ಟ ಹತ್ತುವ ಬದಲು ಅರ್ಧ ಮುದಿಯಾಗಿದ್ದಾಗಲೇ ಹೋಗುವುದೊಳ್ಳೆಯದೆಂದು ರೂ. ೩೫೦ ಶುಲ್ಕ ಕಟ್ಟಿ ಹೆಸರು ನೋಂದಾಯಿಸಿದೆ! 
   ತಾರೀಕು ೨೦-೮-೨೦೧೭ರಂದು ಮೈಸೂರಿನ ವಾರ್ತಾಭವನದ ಬಳಿ ಎಲ್ಲರೂ ಸುಮಾರು ೪೭ ಮಂದಿ ಒಟ್ಟು ಸೇರಿ ೨ ಮಿನಿ ವ್ಯಾನ್ ಮತ್ತು ಒಂದು ಕಾರಿನಲ್ಲಿ ಹೊರಡುವಾಗ (೬.೩೦ಗೆ ಹೊರಡಬೇಕಿದ್ದವರು)  ಬೆಳಗ್ಗೆ ಬರೋಬ್ಬರಿ ೭.೧೫. ಮೈಸೂರಿನಿಂದ ಶ್ರೀರಂಗಪಟ್ಟಣವಾಗಿ ಕೆ.ಆರ್.ಪೇಟೆ ತಲಪಿ, ಅಲ್ಲಿಂದ ನಾಗಮಂಗಲ ರಸ್ತೆಯಲ್ಲಿ ಸಾಗಿ ಬನುಮೇನಹಳ್ಳಿಯ ತೋಟದ ಮನೆ ತಲಪುವಾಗ ಗಂಟೆ ೮.೩೦ ದಾಟಿತ್ತು. ಮೈಸೂರಿನಲ್ಲಿ ವಾಸವಾಗಿರುವ ಸತೀಶ್ ಎಂಬವರಿಗೆ ಸೇರಿದ ತೋಟವದು. ಈ ಚಾರಣದ ಆಯೋಜಕರಾದ ಜಗದೀಶ ಅವರ ಸ್ನೇಹಿತರೇ ಸತೀಶ್. ಅವರು ಉದಾರತೆಯಿಂದ ತೋಟದಮನೆಯಲ್ಲಿ ನಮಗೆ ಸಕಲ ವ್ಯವಸ್ಥೆ ಮಾಡಿಸಿದ್ದರು. ತೋಟದ ಉಸ್ತುವಾರಿ ನೋಡಿಕೊಳ್ಳುವ ವೆಂಕಟೇಶ್ ನಮಗಾಗಿ ತಿಂಡಿ ತರಿಸಿಟ್ಟು ಕಾದಿದ್ದರು. ಬಿಸಿಬಿಸಿ ಉಪ್ಪಿಟ್ಟು, ಕೇಸರಿಭಾತ್, ಕಾಫಿ ಸೇವನೆಯಾಯಿತು. ತಿಂಡಿ ತಿಂದು ಅಲ್ಲಿಂದ ೯.೩೦ಗೆ ಹೊರಟೆವು. 
    ಸುಮಾರು ಏಳೆಂಟು ಕಿಮೀ ಸಾಗಿ ರಾಯಸಮುದ್ರ ತಲಪಿ ಅಲ್ಲಿಂದ ಮುಂದೆ ಸಾಗುವಾಗ ಬಲಕ್ಕೆ ನಾರಾಯಣದುರ್ಗಕ್ಕೆ ದಾರಿ ಎಂಬ ಫಲಕ ಕಾಣುತ್ತದೆ. ನಾವು ಎಡಕ್ಕೆ ಸಾಗಿದೆವು. ಸುಮಾರು ಮೂರು ನಾಲ್ಕು ಕಿಮೀ ಸಾಗಿದಾಗ ಮರುಗುನಕೊಪ್ಪಲು ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಮುದಿಬೆಟ್ಟ ಕಾಣುತ್ತದೆ. ಅಲ್ಲಿ ಬಸ್ಸಿಳಿದು ಕಾಲುದಾರಿಯಲ್ಲಿ ಹೋಗಿ ಬೆಟ್ಟದ ಬುಡ ತಲಪಿ ಬೆಟ್ಟದೆಡೆಗೆ ಸಾಗುವಾಗ ಗಂಟೆ ಹತ್ತೂಕಾಲು.

 ನೋಡಲು ಅಷ್ಟೇನೂ ಎತ್ತರವಿಲ್ಲದ ಬೆಟ್ಟ. ಆದರೆ ಹತ್ತುತ್ತ ಹತ್ತುತ್ತ ಇನ್ನೂ ಎಷ್ಟು ದೂರ ಎಂದು ಅನಿಸಲು ತೊಡಗಿತ್ತು. ಕುರುಚಲುಗಿಡ, ಮಜ್ಜಿಗೆಹುಲ್ಲು, ಪೊದೆಗಳಿಂದ ಕೂಡಿದ ಎಲ್ಲಿ ನೋಡಿದರೂ ಕಲ್ಲುಬಂಡೆಗಳೇ ಕಾಣುವ ಹಾದಿಯಲ್ಲಿ ಸಾಗಿದೆವು.


 ಬೆಟ್ಟ ಏರಲು ಮೆಟ್ಟಲುಗಳಿಲ್ಲ. ಸರಿಯಾದ ಹಾದಿ ಇದೆಯೋ ನಮಗೆ ಗೊತ್ತಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ನಾವು ನಡೆದದ್ದೇ ದಾರಿಯಾಗಿತ್ತು. ಕೆಲವೆಡೆ ಬಂಡೆಹತ್ತಿ ಇಳಿದು ಸಾಗಬೇಕಿತ್ತು. ಬೋರೆದೇವರಬೆಟ್ಟದಲ್ಲಿ ಪುಟ್ಟ ದೇವಾಲಯವಿದೆ ಎಂದಿದ್ದರು. ನಮಗೆ ಕೆಲವರಿಗೆ ದೇವಾಲಯ ಕಂಡಿರಲಿಲ್ಲ. ನಾವು ಹೋದ ದಾರಿ ತಪ್ಪಿತ್ತು. ಸರಿಯಾದ ಹಾದಿಯಲ್ಲಿ ಸಾಗಿದ ಕೆಲವರಿಗೆ ಬಂಡೆಯಡಿಯಲ್ಲಿ ಪುಟ್ಟ ದೇವಾಲಯ ಕಾಣಿಸಿತ್ತಂತೆ. ನಾವೂ ಅಲ್ಲಿಯ ಸ್ಥಳೀಯರಾದ ಯಾರಾದರೊಬ್ಬರನ್ನು ಕರೆದುಕೊಂಡು ಹೋಗಿದ್ದರೆ ಬಹಳ ಒಳ್ಳೆಯದಿತ್ತು ಎನಿಸಿತ್ತು. ಕರೆದುಕೊಂಡು ಹೋಗದ ಕಾರಣ ಬೋರೆದೇವರ ಗುಡಿಯನ್ನು ನಮಗೆ ನೋಡಲಾಗಲಿಲ್ಲ. 
   ಇದು ಸಣ್ಣ ಬೆಟ್ಟವಾ? ಓಹ್ ತುಂಬ ಸುಸ್ತಾಯಿತು. ಎಂದು ಬೆಟ್ಟ ಹತ್ತುತ್ತ ಕೆಲವರು ಹೇಳಿದರು! ಆಯೋಜಕರಾದ ಸೋಮಶೇಖರ್ ಹಾಗೂ ಜಗದೀಶರು ಇದು ಬಹಳ ಸಣ್ಣಬೆಟ್ಟ ಎಂದು ನುಡಿದಿದ್ದರಂತೆ! ಇನ್ನೇನು ಬೆಟ್ಟದ ತುದಿ ಕಾಣುತ್ತಲಿದೆ. ಸ್ವಲ್ಪವೇ ಏರಿದರಾಯಿತು ಎಂದು ಎಲ್ಲರನ್ನು ಹುರುದುಂಬಿಸಿ ಸಾಗಿದೆವು. ಕೆಲವು ಬಂಡೆಗಲ್ಲುಗಳ ಎಡೆಯಲ್ಲಿ ಪುಟ್ಟ ಸಸಿಗಳು ಹುಟ್ಟಿದ್ದು ಕಂಡಾಗ ಬಂಡೆಯೊಳು ಸಸಿನೆಟ್ಟು ನೀರೆರೆದವರು ಯಾರು? ಎಂದು  ಗುನುಗುತ್ತ ಸಾಗಿದೆ. 


ಬಿಸಿಲಿಲ್ಲದೆ ಹವೆಯೂ ನಮಗೆ ಸಹಕರಿಸಿತ್ತು. ಅಂತೂ ಬೆಟ್ಟದ ತುದಿ ತಲಪಿದೆವು. ಅಲ್ಲಿ ವಿಶಾಲವಾದ ಸಮತಟ್ಟು ಪ್ರದೇಶ. ಅದರ ಪಕ್ಕದಲ್ಲಿ ಮತ್ತೊಂದು ಬೆಟ್ಟ. ದೊಡ್ಡ ಬಂಡೆಗಲ್ಲು ಕಂಡಿತು. 




ಕೆಲವರೆಲ್ಲ ಅದನ್ನು ಏರಿ ನಿಂತಿದ್ದರು. ಒಹೊ ಇನ್ನೂ ಹೋಗಬೇಕಾ? ನಮ್ಮಿಂದ ಸಾಧ್ಯವಿಲ್ಲ ಎಂದು ಕೆಲವರು ಅಲ್ಲೇ ಕೂತರು.   ಇನ್ನೂ ಕೆಲವರು ಹಿಂದಿದ್ದು, ನಿಧಾನವಾಗಿ ಹತ್ತುತ್ತ ಬರುತ್ತಿದ್ದರು.  ನಾವು ಕೆಲವರು ಉತ್ಸಾಹದಿಂದ ಆ ಬಂಡೆಗಲ್ಲನ್ನು ಕೋತಿಗಳು ಏರುವಂತೆ ಏರಿದೆವು. ಅಲ್ಲೂ ವಿಶಾಲ ಬಯಲು. ಕೂತು ದಣಿವಾರಿಸುತ್ತಿರಬೇಕಾದರೆ ನಮ್ಮಿಂದ ಸಾಧ್ಯವಿಲ್ಲ ಎಂದು ಕೆಳಗೆ ಕೂತವರು ಬಂಡೆ ಏರಿ ಮೇಲೆ ಬಂದದ್ದು ಕಂಡಿತು! ಇಷ್ಟು ಹತ್ತಿದ ಮೇಲೆ ಈ ಬಂಡೆ ಯಾವ ಲೆಕ್ಕ ಎಂದು ಅವರನ್ನು ಹುರಿದುಂಬಿಸಿ ಮೇಲೆ ಹತ್ತಿಸುವಲ್ಲಿ ಗೋಪಕ್ಕ ಯಶಸ್ವಿಯಾಗಿದ್ದರು. ಅವರೆಲ್ಲರೂ ಹತ್ತಿ ಬಂದು ತುಂಬ ಖುಷಿಪಟ್ಟರು. ಮೂರು ನಾಲ್ಕು ಮಂದಿ ವಯಸ್ಸು ೬೫ ಮೀರಿದವರು ಯಶಸ್ವಿಯಾಗಿ ಮುದಿಬೆಟ್ಟ ಏರಿದ್ದರು. ಬೆಟ್ಟದ ತುದಿಯಲ್ಲಿ ನಿಂತು ಸುತ್ತ ಕಣ್ಣು ಹಾಯಿಸುವಾಗ ಒಂದೆಡೆ ದೂರದಲ್ಲಿ ಮೇಲುಕೋಟೆ, ಪಕ್ಕದಲ್ಲಿ ನಾರಾಯಣದುರ್ಗ ಎಲ್ಲ ಕಾಣುತ್ತಲಿತ್ತು. ಅಲ್ಲಿ ಅರ್ಧ ಗಂಟೆ ಕುಳಿತು ಗಾಳಿಯ ಸುಖವನ್ನು ಆಸ್ವಾದಿಸುತ್ತ ಪ್ರಕೃತಿಯ ಚೆಲುವನ್ನು ನೋಡುತ್ತ ಕಾಲ ಕಳೆದೆವು. 


ನಾರಾಯಣದುರ್ಗದ ತಲೆಮೇಲೆ ಮೋಡದ ಚಿತ್ತಾರ

  ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಮತ್ತೆ ಕೆಳಗೆ ಇಳಿಯಲು ಮುಂದಾದೆವು. ಇಳಿಯಲು ಹೆದರಿಕೆ ಇರುವವರ ಕೈ ಹಿಡಿದು ಇಳಿಸಿದೆವು. 

ಆ ಬಂಡೆಗಲ್ಲು ಇಳಿದಾಗುವಾಗ ಸಣ್ಣಗೆ ಮಳೆಹನಿಯಲು ಸುರುವಾಯಿತು. ಮಳೆ‌ಅಂಗಿ ತಂದವರು ಹಾಕಿಕೊಂಡು ಮಳೆಯಲ್ಲೆ ಇಳಿಯಲು ತೊಡಗಿದೆವು. ಏನೂ ತಾರದಿದ್ದವರು ಬಂಡೆ ಅಡಿ ಕೂತರು. ಮಳೆ ಹೆಚ್ಚು ತೊಂದರೆ ಕೊಡದೆ ಕೆಲವೇ ನಿಮಿಷಗಳಲ್ಲಿ ನಿಂತಿತು. ಮಳೆ ಬಂದ ಕಾರಣ ಎಚ್ಚರಿಕೆಯಿಂದ ಬೆಟ್ಟ ಇಳಿಯಬೇಕಿತ್ತು. ಕೆಲವೆಡೆ ಬಂಡೆ ಒದ್ದೆಯಾಗಿ ಜಾರುತ್ತಿತ್ತು. ಅದಾಗಲೇ ಮಧ್ಯಾಹ್ನ ಒಂದು ಗಂಟೆ ದಾಟಿತ್ತು. ಕೆಲವೆಡೆ ಜಾರುಬಂಡೆಯಂತೆ ಕುಳಿತು ಜಾರಿ ಇಳಿದೆವು. ನನಗಂತೂ ಮುದಿಬೆಟ್ಟ ಹತ್ತಿ ಇಳಿಯಲು ತುಂಬ ಖುಷಿಯೆನಿಸಿತು. ಬೆಟ್ಟಕ್ಕೆ ಸರಿಯಾಗಿ ಮೆಟ್ಟಲಿದ್ದು ಅದನ್ನು ಏರಲು ಅಂಥ ಖುಷಿ ಎನಿಸುವುದಿಲ್ಲ. ಇಂಥ ಬಂಡೆ ಏರಿ ಇಳಿಯುವುದರಿಂದಲೇ ನಿಜವಾದ ಚಾರಣ ಸುಖ ಲಭಿಸುವುದು ಎಂಬುದು ನನ್ನ ಅಭಿಮತ. ನಾವು ಏರಿದ ದಾರಿ ತಪ್ಪಿ ಬೇರೆ ಸ್ವಲ್ಪ ಕಷ್ಟದ ದಾರಿಯಲ್ಲಿ ಬೆಟ್ಟ ಇಳಿದೆವು! ಎಲ್ಲರೂ ಬೆಟ್ಟ ಇಳಿದಾಗುವಾಗ ಗಂಟೆ ೨.೩೦ ದಾಟಿತ್ತು. ನಮ್ಮ ತಂಡದಲ್ಲಿ ಅನೇಕರು ಇದೇ ಮೊದಲಬಾರಿಗೆ ಚಾರಣ ಬಂದವರಿದ್ದರು. ಮೊದಲ ಚಾರಣವೇ ಕಷ್ಟವಾದರೂ ಯಶಸ್ವಿಯಾಗಿ ಮಾಡಿದೆವು ಎಂದು ಅವರಿಗೆ ಖುಷಿಯೋ ಖುಷಿ. ಇನ್ನು ಆಗಾಗ ಇಂಥ ಚಾರಣದಲ್ಲಿ ತಪ್ಪದೆ ಭಾಗಿಯಾಗುತ್ತೇವೆ ಎಂದು ಹೇಳಲು ಮರೆಯಲಿಲ್ಲ. ಒಮ್ಮೆ ಈ ಘಟಕದ ವತಿಯಿಂದ ಚಾರಣಕ್ಕೆಂದು ಬಂದವರು ಪುನಃ ಮತ್ತೆ ಬಾರದೆ ಇರುವುದಿಲ್ಲ. ಅಷ್ಟು ಸುರಕ್ಷಿತವಾಗಿ ಚೆನ್ನಾದ ವ್ಯವಸ್ಥೆಯಿಂದ ಚಾರಣ ಕರೆದೊಯ್ಯುತ್ತಾರೆ. ಇದು ಗಂಗೋತ್ರಿ ಘಟಕಕ್ಕೆ ಸಿಕ್ಕಿದ ದೊಡ್ಡ ಹಿರಿಮೆಯೇ ಹೌದು ಎಂದು ಅದರ ಸದಸ್ಯಳಾಗಿ ಹೆಮ್ಮೆಯಿಂದ ಹೇಳುವೆ. 
  ಮತ್ತೆ ಅಲ್ಲಿಂದ ಒಂದು ಕಿಮೀ ನಡೆದು  ಬಸ್ ನಿಲ್ಲಿಸಿದ ಸ್ಥಳ ಮರುಗುನಕೊಪ್ಪಲಿಗೆ  ಹೋದೆವು. ಅಲ್ಲಿ ಸ್ಥಳೀಯರಾದ ಪುಟ್ಟತಾಯಮ್ಮ ಸಿಕ್ಕಿ ನಮ್ಮನ್ನು ಮಾತಾಡಿಸಿದರು. ‘ಬೋರೆದೇವರು ನಿಮ್ಮ ಮನೆದೇವರ? ದೇವರಿಗೆ ಪೂಜೆ ಮಾಡಿಸಲು ಬಂದಿದ್ದೀರ? ಏಕೆ ಕೇಳಿದೆನೆಂದರೆ ನಾರಾಯಣದುರ್ಗಕ್ಕೆ ತುಂಬ ಜನ ಹೋಗುತ್ತಾರೆ. ಆದರೆ ಮುದಿಬೆಟ್ಟಕ್ಕೆ ಯಾರೂ ಹೋಗಲ್ಲ’ ಎಂದು ಕೇಳಿದಳು. ಎಲ್ಲಿಯೋ ಇರುವ ಯಾವುದೇ ಬೆಟ್ಟವಾದರೂ ಸರಿ. ಅದೇ ನಮ್ಮ ದೇವರು ಎಂದು ಹೇಳಬೇಕೆನಿಸಿತು! ಆದರೆ ಅವರೆದುರು ಹಾಗೆ ಹೇಳಲಿಲ್ಲ. ಅವರು ಮಾತಾಡುತ್ತ ಬೆಟ್ಟದ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಊರಲ್ಲಿ ಅಣ್ಣತಮ್ಮನಿಗೆ ಜಗಳವಾಯಿತು. ಅಣ್ಣನಾದವ ಓಡಿ ಹೋಗಿ ಬೆಟ್ಟ ಹತ್ತಿದನಂತೆ. ತಮ್ಮನಿಗೆ ಕಾಲುನೋವಿನಿಂದ ಹತ್ತಲಾಗಲಿಲ್ಲವಂತೆ. ಆಗ ಅಲ್ಲಿ ಒಬ್ಬ ಮುದುಕಪ್ಪ ಪ್ರತ್ಯಕ್ಷವಾಗಿ ಜಗಳ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದರಂತೆ.  ನನ್ನನ್ನೂ ಕರಕ್ಕೊಂಡು ಹೋಗು ಎಂದು ತಮ್ಮ ಹೇಳಿದನಂತೆ. ಒಂದು ಬಂಡೆ ಉರುಳಿಸುತ್ತೇನೆ. ನೀನು ಅದನ್ನು ಹಿಡಿಯಬೇಕು. ಹಾಗಾದರೆ ಕರೆದುಕೊಂಡು ಹೋಗುತ್ತೇನೆ ಅಂದನಂತೆ ಅಣ್ಣ. ಅಣ್ಣ ಬಂಡೆ ಉರುಳಿಸಿದಾಗ ತಮ್ಮ ಅದನ್ನು ಕಿರುಬೆರಳಿನಿಂದ ಹಿಡಿದು ನಿಲ್ಲಿಸಿದನಂತೆ. ಹಾಗೆ ಮುದುಕಪ್ಪ ಅಣ್ಣ ತಮ್ಮರಿಗೆ ರಾಜಿ ಮಾಡಿಸಿದನಂತೆ. ಅಣ್ಣ ತಮ್ಮನನ್ನು ಬೆಟ್ಟಕ್ಕೆ ಕರೆದುಕೊಂಡು ಹೋದನಂತೆ. ಮತ್ತೆ ಕೆಳಗೆ ಬಂದು ನೋಡಿದರೆ ಮುದುಕಪ್ಪ ಪತ್ತೆಯೇ ಆಗಲಿಲ್ಲವಂತೆ. ಹಾಗಾಗಿ ಇದಕ್ಕೆ ಮುದಿಬೆಟ್ಟ ಎಂದು ಹೆಸರು ಬಂದದ್ದು ಎಂದು ಹೇಳಿ ಕಥೆ ನಿಲ್ಲಿಸಿದಳು! 

  ‘ಊಟಕ್ಕೆ ಏನು ಮಾಡುವಿರಿ?’ ಎಂದು ಅವಳು ನಮ್ಮನ್ನು ಕೇಳಿದಾಗ, ಯಾರೊ ಒಬ್ಬರು ತಮಾಷೆಗಾಗಿ ನಿಮ್ಮ ಮನೆಗೆ ಬರುತ್ತೇವೆ ಎಂದಾಗ, ‘ಓ ಅದಕ್ಕೇನಂತೆ. ನೀವು ಮೊದಲೇ ಹೇಳಿದ್ದರೆ ಪಲಾವ್, ಮೊಸರನ್ನ ತಯಾರಿಸಿ ಇಟ್ಟಿರುತ್ತಿದ್ದೆ. ನಾವು ಹಸು ಸಾಕುತ್ತೇವೆ. ಹತ್ತು ಲೀಟರು ಹಾಲು ಡೈರಿಗೆ ಹಾಕದೆ ಮೊಸರು ಮಾಡುತ್ತಿದ್ದೆ ಅಷ್ಟೆ.’ ಎಂದಳು. ನಾವು ೫೦ ಮಂದಿ ಇದ್ದೇವೆ ಎಂದಾಗ ೫೦ ಅಲ್ಲ ನೂರು ಮಂದಿ ಬೇಕಾದರೂ ಬನ್ನಿ. ಊಟ ಹಾಕಲು ನಾವೇನು ಕಾಸು ತೆಗೆದುಕೊಳ್ಳುವುದಿಲ್ಲ. ಆದರೆ ಮೊದಲೇ ಹೇಳಿ ಬನ್ನಿ ಎಂದು ತಮ್ಮ ಹೃದಯವಂತಿಕೆ ಮೆರೆದರು. ಅವರ ಈ ಪ್ರೀತಿಯ ಮುಂದೆ ನಾವೇ ಸೋತೆವು. ಒಂದು ತೋಟದ ಮನೆಯಲ್ಲಿ ನಮಗೆಲ್ಲ ಊಟದ ವ್ಯವಸ್ಥೆಯಾಗಿದೆ ಎಂದು ಹೇಳಿ ಅವರನ್ನು ಬೀಳ್ಕೊಂಡು ಬಸ್ ಹತ್ತಿದೆವು. 
    ಅಲ್ಲಿಂದ ಸೀದಾ ಬನುಮೇನಹಳ್ಳಿಯ ತೋಟದಮನೆಗೆ ಹೋದೆವು. ತೋಟದ ಮಾಲೀಕರಾದ ಸತೀಶ್ ಅವರು ಕುಟುಂಬ ಸಮೆತರಾಗಿ ಬಂದು ಅಲ್ಲಿ ನಮ್ಮನ್ನು ಸ್ವಾಗತಿಸಿದರು. ಸುಮಾರು ಹತ್ತು ಎಕರೆ ತೋಟದಲ್ಲಿ ಮಾವು, ತೆಂಗು, ಅಡಿಕೆ, ಸಾಗುವಾನಿ ಇತ್ಯಾದಿ ಮರಗಳಿವೆ. ನವಿಲುಗಳ ಕಾಟದಿಂದ ಬೇರೇನೂ ಬೆಳೆ ಬೆಳೆಯಲಾಗುವುದಿಲ್ಲವೆಂದು ಸತೀಶ್ ಅವರ ತಾಯಿ ಜಯಮ್ಮ ಹೇಳಿದರು. ಮನೆ ಪಕ್ಕವೇ ಸುಸಜ್ಜಿತವಾದ ಈಜುಕೊಳವೂ ಇದೆ.  
   ೩ ಗಂಟೆಗೆ ನಾವು ಸಾಲಾಗಿ ಊಟಕ್ಕೆ ಕೂತೆವು. ಬಾಳೆಲೆಯಲ್ಲಿ ಪಲ್ಯ, ಅನ್ನ, ಸಾರು, ಮಜ್ಜಿಗೆಹುಳಿ, ಪಕೋಡ, ಹೋಳಿಗೆ ತುಪ್ಪದಿಂದ ಕೂಡಿದ ಭರ್ಜರಿ ಊಟ. ಊಟದನಂತರ ಬಾಳೆಹಣ್ಣು ಸಮಾರಾಧನೆ. ಊಟವಾದಮೇಲೆ ಈಜುವ ಕಾರ್ಯಕ್ರಮ ಸುರುವಾಯಿತು. ಈಜುವ ಅಭ್ಯಾಸವಿದ್ದವರು ಸುಮಾರು ಮಂದಿ ಇದ್ದರು. ಅವರೆಲ್ಲ ಕೊಳಕ್ಕೆ ಧುಮುಕಿದರು. ಭರ್ಜರಿ ಊಟವಾದ ಕೂಡಲೇ ಹೇಗೆ ಈಜುತ್ತಾರಪ್ಪ ಎಂದು ಈಜಲು ಬರದ ನಾನು ಆಶ್ಚರ್ಯದಿಂದ ಈಜುವವರನ್ನು ನೋಡುತ್ತ ಕುಳಿತೆ. ಇನ್ನು ಕೆಲವರು ನೀರು ಪ್ರಿಯರು ಕೊಳಕ್ಕೆ ಕಾಲು ಹಾಕಿ ಕಟ್ಟೆಯಲ್ಲಿ ಕೂತು ಅರ್ಧಂಮರ್ಧ ಒದ್ದೆಯಾಗಿ ಸಂತೋಷಪಟ್ಟರು. ಕೆಲವರು ಮೇಲಿನಿಂದ ಕೊಳಕ್ಕೆ ಡೈವ್ ಹೊಡೆದು ಈಜಿದರು. ಸಂಜೆ ೫ ಗಂಟೆವರೆಗೂ ಕೊಳದಲ್ಲಿ ಕಾಲ ಕಳೆದರು. 


   ನಮಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನನ ಊಟವನ್ನು ಸತೀಶ್ ಅವರೇ ಪ್ರಾಯೋಜಿಸಿದ್ದರು. ಸತೀಶ್ ಕುಟುಂಬದವರಿಗೆ ನೆನಪಿನ ಕಾಣಿಕೆಯಾಗಿ ೨೦೧೪ರಲ್ಲಿ ಗಂಗೋತ್ರಿ ಘಟಕದ ವತಿಯಿಂದ ಪ್ರಕಟಪಡಿಸಿದ ಚಾರಣಶ್ರೀ ನೆನಪಿನ ಸಂಚಿಕೆಯನ್ನು ಸೋಮಶೇಖರ್ ನೀಡಿ, ನಮಗೆ ಸಕಲ ವ್ಯವಸ್ಥೆ ಮಾಡಿದ ಅವರಿಗೆ ಧನ್ಯವಾದ ಅರ್ಪಿಸಿದರು. ಅವರಿಗೆ ವಂದನೆ ಸಲ್ಲಿಸಿ ನಾವು ಬಸ್ಸೇರಿದೆವು. 

   ಅಲ್ಲಿಂದ ಹೊರಟು ಕೆಲವು ಕಿಮೀ ದೂರದಲ್ಲಿರುವ ಅಗ್ರಹಾರಬಾಚಹಳ್ಳಿಗೆ ಹೋದೆವು. ಅಲ್ಲಿ ಪುರಾತನವಾದ ಹುಣಸೇಶ್ವರ ದೇವಾಲಯ ನೋಡಿದೆವು. ಧರ್ಮಸ್ಥಳದ ಧರ್ಮೋಸ್ಥಾನ ಟ್ರಸ್ಟ್ ವತಿಯಿಂದ ಹಾಗೂ ಊರವರು ಸೇರಿ ಹೊಯ್ಸಳರ ಕಾಲದ ಈ ದೇವಾಲಯವನ್ನು ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಳಿಸಿದ್ದಾರೆ. ಅಲ್ಲಿ ಕೆಲವು ಶಾಸನಗಳು, ವಿಗ್ರಹಗಳನ್ನು, ವೀರಗಲ್ಲುಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ. 




ಅಲ್ಲಿಂದ ಆರು ಗಂಟೆಗೆ ಹೊರಟು ಎಲ್ಲೂ ನಿಲ್ಲದೆ ರಾತ್ರಿ ಎಂಟು ಗಂಟೆಗೆ ಮೈಸೂರು ಸೇರಿದೆವು. ಈ ಚಾರಣವನ್ನು ಜಗದೀಶ್ ಹಾಗೂ ಸೋಮಶೇಖರ್ ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರಿಗೆ ತಂಡದವರೆಲ್ಲರ ಪರವಾಗಿ ಧನ್ಯವಾದ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ