ಮಂಗಳವಾರ, ಫೆಬ್ರವರಿ 7, 2023

ಗುಜರಾತ್ ರಾಜ್ಯದೊಳಗೆ ಪರಿಭ್ರಮಣ - ಸುತ್ತು ೨

  ಗೀತಾ ಮಂದಿರ (ಪ್ರಭಾಸ್ ಪಟಾನ್, ಸೋಮನಾಥ್, ವೆರಾವಲ್, ಗುಜರಾತ್)

ತಾರೀಕು ೨೮..೨೩ರಂದು ಬೆಳಗ್ಗೆ ಗಂಟೆಗೆ ತಯಾರಾಗಿ ಹೊಟೇಲ್ ಕೋಣೆ ಖಾಲಿ ಮಾಡಿ ತಿಂಡಿಯಾಗಿ .೪೫ಕ್ಕೆ ಹೊರಟೆವು


ಸೋಮನಾಥ ನಗರದ ಹಿರಣ್ಯನದಿ  ತಟದಲ್ಲಿರುವ  ಗೀತಾಮಂದಿರಕ್ಕೆ ಹೋದೆವು. ಶ್ರೀಕೃಷ್ಣನು ವಿಶ್ರಾಂತಿ ಪಡೆದ ಸ್ಥಳದಲ್ಲಿ ಗೀತಾ ಮಂದಿರ ಸ್ಥಾಪಿಸಲಾಗಿದೆ. ಇಲ್ಲಿ ಭಗವದ್ಗೀತೆಯ ೧೮ ಅಧ್ಯಾಯಗಳನ್ನು ಗೋಡೆಯಮೇಲೆ ಕೆತ್ತಲಾಗಿದೆ. ಶ್ರೀಕೃಷ್ಣ, ಲಕ್ಷ್ಮೀನಾರಾಯಣರ ವಿಗ್ರಹಗಳಿವೆ.



   ಇಲ್ಲಿಯ ಸಂಕೀರ್ಣದಲ್ಲಿ ಬಲರಾಮನ ದೇಗುಲ,  ಕೃಷ್ಣ ಪಾದುಕಾ ಮಂದಿರ, ಕಾಶಿ ವಿಶ್ವನಾಥ ದೇಗುಲಗಳು ಇವೆ.  ಕಾಶಿಗೆ ಹೋಗಲಾಗದಿದ್ದವರು ಈ ವಿಶ್ವನಾಥನನ್ನು ಸಂದರ್ಶಿಸಿ ಪುನೀತರಾಗಬಹುದಂತೆ.  ಮುಂಭಾಗದಲ್ಲಿ ಹಿರಣ್ಯ ನದಿ ಪ್ರಶಾಂತವಾಗಿ ಹರಿಯುತ್ತಲಿತ್ತು. 

ಸೂರ್ಯದೇಗುಲ

ಇಲ್ಲಿಯ ವಠಾರದಲ್ಲಿ ಸೂರ್ಯದೇಗುಲ, ಪಾಂಡವ ಗುಹಾ, ಶಂಕರಾಚಾರ್ಯ ಮಂದಿರ ಇದೆ.

ಪುರಾತನವಾದ ಸೂರ್ಯದೇಗುಲವಿದು. ಇಲ್ಲಿ ಮೆಟ್ಟಲಬಾವಿಯ ಸೂರ್ಯಕುಂಡವೂ ಇದೆ.


ಹಿಂಗ್ಲಾಜ್ ಮಾತಾ ಮಂದಿರ ಎಂದು ಕರೆಯಲ್ಪಡುವ ಪಾಂಡವ ಗುಹೆಯನ್ನು ೧೯೪೯ರಲ್ಲಿ ಬಾಬಾ ನಾರಾಯಣದಾಸರು ಕಂಡು ಹಿಡಿದರು. ಪಾಂಡವರು ವನವಾಸದ ಸಮಯದಲ್ಲಿ ಹಿಂಗ್ಲಾಜ್ ಮಾತೆಯನ್ನು ಪೂಜಿಸಿದರು ಎಂಬುದು ಪ್ರತೀತಿ. ಗುಹೆಯ ಒಳಗೆ ಹೋಗಲು ಕಿರಿದಾದ ಮೆಟ್ಟಲು ಇದ್ದು, ಒಳಗೆ ಅಂಬೆಗಾಲಿಟ್ಟು ಹೋಗಬೇಕು. ಒಮ್ಮೆ ನಾಲ್ಕೈದು ಮಂದಿಗಿಂತ ಹೆಚ್ಚು ಹೋಗಲು ಸಾಧ್ಯವಿಲ್ಲ. ಇಲ್ಲಿ ಸೀತಾ ರಾಮ, ಲಕ್ಷ್ಮಣ, ಶಿವ, ಹನುಮ, ದುರ್ಗಾದೇವಿಯ ಮೂರ್ತಿಗಳಿವೆ. 

ತ್ರಿವೇಣಿ ಸಂಗಮ

 ಹಿರಣ್ಯಕಪಿಲಾಸರಸ್ವತಿ ತ್ರಿವೇಣಿ ಸಂಗಮ ನೋಡಿದೆವು. 



ಬಾಲ್ಕಾ ತೀರ್ಥ ಮಂದಿರ

ಸೋಮನಾಥ ದೇವಾಲಯದಿಂದ ನಾಲ್ಕು ಕಿಮೀ ದೂರದಲ್ಲಿರುವ ಬಾಲ್ಕಾ ತೀರ್ಥ ಮಂದಿರಕ್ಕೆ ಹೋದೆವು. ಶ್ರೀಕೃಷ್ಣ ಮಲಗಿದ ಭಂಗಿಯಲ್ಲಿದ್ದು ಬೆರಳ ತುದಿಗೆ ಬಾಣ ಇರುವ ಬಹಳ ಸುಂದರ ವಿಗ್ರಹ ಕಾಣುತ್ತೇವೆ.  ಪಕ್ಕದಲ್ಲಿ ಮರ ಕೂಡ ಇದೆ.

ಪೌರಾಣಿಕ ಕಥೆಯ ಪ್ರಕಾರ, ಶ್ರೀಕೃಷ್ಣ ಪೀಪಲ್ ಮರದ ಕೆಳಗೆ ಧ್ಯಾನ ಮಾಡುತ್ತಿದ್ದನು.  ಆಗ ಜರಾ ಎಂಬ ಬೇಟೆಗಾರನಿಗೆ   ಕೃಷ್ಣನ ಪಾದದ ಬೆರಳ ಉಗುರು  ಜಿಂಕೆಯ ಕೊಂಬಿನಂತೆ ಕಂಡು ಬಾಣ ಹೊಡೆದನು. ಕೃಷ್ಣನ ಉಗುರಿಗೆ ಬಾಣ ತಗಲಿ ರಕ್ತ ಸುರಿಯಿತು. ಬೇಟೆಗಾರ ಓಡಿ ಬಂದು ನೋಡಿದಾಗ ಕೃಷ್ಣನನ್ನು ಕಂಡು ತನ್ನ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಂಡನು. ಈ ಸನ್ನಿವೇಶವೇ ಕೃಷ್ಣನ ನಿರ್ಗಮನದೊಂದಿಗೆ ದ್ವಾಪರಯುಗದ ಅಂತ್ಯವನ್ನು ಸಂಕೇತಿಸುತ್ತದೆ. 

 ಬೇಟೆಗಾರ ಜರಾ ಹೊಡೆದ ಬಾಣ ಶ್ರೀಕೃಷ್ಣನ ಬೆರಳ ತುದಿಗೆ ಬಿದ್ದ  ಆ ಸ್ಥಳವೇ ಈಗ ಬಾಲ್ಕಾ ತೀರ್ಥ ಎಂದು ಪ್ರಸಿದ್ಧಿ ಪಡೆದಿದೆ.

 ಪೋರ್ಬಂದರ್

ಮುಂದೆ ಪೋರಬಂದರದ ಕಡೆಗೆ ನಮ್ಮ ಪಯಣ ಸಾಗಿತು. ಸುಮಾರು ೧೨೫ ಕಿಮೀ. ದೂರ. ಗಂಟೆಗೆ ತಲಪಿ ಸಿದ್ದಿ ಹೊಟೇಲಲ್ಲಿ ಊಟ ಮಾಡಿದೆವು.
ಸುಧಾಮ ದೇಗುಲ

    ಅಲ್ಲಿಂದ ಗಂಟೆಗೆ ಹೊರಟು ರಿಕ್ಷಾದಲ್ಲಿ - ಮಂದಿಯಂತೆ   ಸುಧಾಮ ದೇಗುಲಕ್ಕೆ ಹೋದೆವು. ಶ್ರೀಕೃಷ್ಣನ ಬಾಲ್ಯ ಸ್ನೇಹಿತ ಸುಧಾಮನ ಈ ದೇವಾಲಯವನ್ನು ೧೯೦೨ ಮತ್ತು ೧೯೦೭ರ ನಡುವೆ ಜೆತ್ವಾ ರಾಜವಂಶದ ಶ್ರೀ ರಾಮ್ ದೇವ್ ಜೇತ್ವಾ ನಿರ್ಮಿಸಿದರು. ರಾಜಸ್ಥಾನಿ ಕ್ಷತ್ರಿಯ ಸಮುದಾಯದ ನೂತನ ದಂಪತಿಗಳು ಈ ದೇಗುಲಕ್ಕೆ ತಪ್ಪದೆ ಭೇಟಿ ನೀಡುತ್ತಾರಂತೆ. ಹೊರ ಆವರಣದಲ್ಲಿ  ಕೃಷ್ಣ ಸುಧಾಮನನ್ನು ಉಪಚರಿಸುವ ಚಿತ್ರಪಟ ಇದೆ. ಅದರಲ್ಲಿ ಸುಧಾಮನನ್ನು ಮುದುಕನಂತೆ ಚಿತ್ರಿಸಿದ್ದಾರೆ. ಬಹುಶಃ ಸುಧಾಮ ಬಡತನದಿಂದ ನಲುಗಿ ನಿಸ್ತೇಜರೂಪದಲ್ಲಿದ್ದಿರಬಹುದು ಎಂದು ಭಾವಿಸಿದೆವು. ಅಲ್ಲಿ ಪ್ರಸಾದವಾಗಿ ಅವಲಕ್ಕಿ (ರೂ.೧೦ಹಾಕಿದವರಿಗೆ ಮಾತ್ರ!)ಕೊಡುತ್ತಿದ್ದರು.


  ದೇಗುಲದ ಹೊರಗೆ ಒಂದು ಸ್ವಸ್ತಿಕ ಆಕಾರದ ರಚನೆ ಇತ್ತು. ಅದರಲ್ಲಿ ಪರಿಕ್ರಮ ಮಾಡಿ ಹೊರಬರಬಹುದು.‌ ಜನರೆಲ್ಲ ಅದರಲ್ಲಿ ಸುತ್ತಿ ಹೊರಬಂದರು.

ಕೀರ್ತಿ ಮಂದಿರ (ಗಾಂಧೀಜಿ ಹುಟ್ಟಿದ ಸ್ಥಳ)  

ಕೀರ್ತಿ ಮಂದಿರದ ಪಕ್ಕ ಇರುವ ಗಾಂಧೀಜಿ (೨ ಅಕ್ಟೋಬರ ೧೮೬೯) ಜನಿಸಿದ ಮನೆಯನ್ನು ನೋಡಿದೆವು. ಈಗ ಅದು ದುರಸ್ಥಿಯಲ್ಲಿರುವುದರಿಂದ ಎಲ್ಲ ಕಡೆಗೆ ಪ್ರವೇಶವಿಲ್ಲ. ಮೂರು ಅಂತಸ್ತಿನ ಈ ಮನೆಯನ್ನು ಹದಿನೆಳನೇ ಶತಮಾನದಲ್ಲಿ ಗಾಂಧಿಯವರ ಮುತ್ತಜ್ಜ ಹರ್ಜೀವನ್ ರೈದಾಸ್ ಗಾಂಧಿ ಖರೀದಿಸಿದರು. ಗಾಂಧೀಜಿಯವರ ಅಜ್ಜ ಉತ್ತಮ್ ಚಂದ್, ತಂದೆ ಕರಮಚಂದ್, ಚಿಕ್ಕಪ್ಪ, ತುಳಸೀದಾಸ್ ಈ ಮನೆಯಲ್ಲಿ ವಾಸಿಸಿದ್ದರು.

  ೧೯೪೭ರಲ್ಲಿ ಗಾಂಧೀಜಿಯವರ ಜೀವಿತಾವಧಿಯಲ್ಲಿ ದರ್ಬಾರ್ ಗೋಪಾಲ ದಾಸ್ ದೇಸಾಯಿ ಅವರು ಕೀರ್ತಿ ಮಂದಿರಕ್ಕೆ ಅಡಿಪಾಯ ಹಾಕಿದರು. ಈ ಸ್ಮಾರಕವು ಗಾಂಧೀಜಿಯವರ ನಿಧನಾನಂತರ ೧೯೫೦ರಲ್ಲಿ ಪೂರ್ಣಗೊಂಡಿತು. ಸರ್ದಾರ್ ವಲ್ಲಭಬಾಯಿ ಪಟೇಲ್ ೨೭ ಮೇ ೧೯೫೦ರಂದು ಈ ಸ್ಮಾರಕವನ್ನು ಉದ್ಗಾಟಿಸಿದರು. ಇಲ್ಲಿ ವಸ್ತು ಸಂಗ್ರಹಾಲಯ ಮಾಡಿದ್ದಾರೆಗಾಂಧೀಜಿ ಬಳಸುತ್ತಿದ್ದ ವಸ್ತುಗಳು, ಚರಕ, ಹಳೆಯ ಚಿತ್ರಪಟಗಳನ್ನು ಅಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.


   ಸಂಜೆ ೫ಕ್ಕೆ ರಿಕ್ಷಾದಲ್ಲಿ ಬಸ್ ಇದ್ದ ಸ್ಥಳಕ್ಕೆ ಬಂದು ಹತ್ತಿ ದ್ವಾರಕದೆಡೆಗೆ ಪಯಣ.

ದ್ವಾರಕ
ಪೋರಬಂದರಿನಿಂದ ದ್ವಾರಕಕ್ಕೆ ಸುಮಾರು ೧೦೦ಕಿಮೀ ಪಯಣಿಸಿದೆವು. ದಾರಿಯುದ್ದಕ್ಕೂ ಎಕರೆಗಟ್ಟಲೆ ಕೃಷಿಭೂಮಿ. ಗಾಳಿಯಂತ್ರಗಳು ಕಂಡೆವು. .೫೦ಕ್ಕೆ ದ್ವಾರಕ ತಲಪಿ, ಹೊಟೇಲ್ ದೇವಭೂಮಿಯಲ್ಲಿ ವಾಸ್ತವ್ಯ.


ದ್ವಾರಕಾಧೀಶ ದೇವಾಲಯ

   .೩೦ಗೆ ಹೊಟೇಲಿನಿಂದ ಸುಮಾರು ೮೦೦ಮೀ ದೂರದಲ್ಲಿರುವ ದ್ವಾರಕಾಧೀಶ ದೇಗುಲಕ್ಕೆ ನಡೆದು  ಹೋಗಿ ಕೃಷ್ಣನ ದರ್ಶನ ಮಾಡಿ .೧೫ಕ್ಕೆ ಹೊಟೇಲಿಗೆ ಹೋದೆವು. ಅಲ್ಲಿ ಭರ್ಜರಿ ಊಟ.
ನಾಗೇಶ್ವರ  ಜ್ಯೋತಿರ್ಲಿಂಗ

  ತಾರೀಕು ೨೯..೨೩ರಂದು ಬೆಳಗ್ಗೆ .೧೫ಕ್ಕೆ ತಯಾರಾಗಿ, ತಿಂಡಿ ತಿಂದು ದೇವಭೂಮಿಯಿಂದ .೫ಕ್ಕೆ ಹೊರಟೆವು. ನಾಗೇಶ್ವರ ಜ್ಯೋತಿರ್ಲಿಂಗ ದೇಗುಲಕ್ಕೆ ಕೆಲವೇ ಕಿಮೀ ದೂರ. ಪ್ರಸಿದ್ದ ೧೨ ಜ್ಯೋತಿರ್ಲಿಂಗಗಳಲ್ಲಿ ನಾಗೇಶ್ವರ ದೇಗುಲವೂ ಒಂದು. ಜನಸಂದಣಿ ಇರಲಿಲ್ಲ. ದೊಡ್ಡ ಸಭಾಂಗಣದ ತುದಿಯಲ್ಲಿ ಕೆಳಭಾಗದಲ್ಲಿ ಶಿವಲಿಂಗವಿದ್ದು ಮೇಲೆ ನಂದಿ ವಿಗ್ರಹವಿದೆ. ಹೊರಗೆ ದೊಡ್ಡದಾದ ಶಿವನ ವಿಗ್ರಹ ಇದೆ. 




  

ದಂತಕಥೆಯ ಪ್ರಕಾರ, ದಾರುಕ ಎಂಬ ರಾಕ್ಷಸ ಸುಪ್ರಿಯ ಎಂಬ ಶಿವ ಭಕ್ತನೊಬ್ಬನನ್ನು ಬಂಧಿಸಿದನು. ಸುಪ್ರಿಯನು ಓಂ ನಮ: ಶಿವಾಯ ಎಂಬ ಮಂತ್ರವನ್ನು ಜಪಿಸುವುದು ಶಿವನಿಗೆ ಕೇಳಿಸಿತು. ರಾಕ್ಷಸ ಸೋತು ಹೋದ. ಅಲ್ಲಿ ಶಿವಲಿಂಗ ಉದ್ಭವಗೊಂಡಿತು ಎಂಬುದು ಪ್ರತೀತಿ.

ಗೋಪಿ ತಲವ್ (ಬ್) (ಗೋಪಿಕೆಯರ ಸರೋವರ)

ಅಲ್ಲಿಂದ ಕೆಲವೇ ಕಿಮೀ ದೂರದಲ್ಲಿರುವ ಗೋಪಿ ಕಾ ತಲಾವ್ ಗೆ ಹೋದೆವು. ಗೋಪಿ ತಲವ್ ಅಥವಾ ಗೋಪಿ ಸರೋವರವು ಹಿಂದೂ ಪುರಾಣಗಳಲ್ಲಿ ವಿಶೇಷ ಪ್ರಾಮುಖ್ಯ ಹೊಂದಿದೆ. ಈ ಸ್ಥಳದಲ್ಲಿ ಕೃಷ್ಣನೊಂದಿಗೆ ಗೋಪಿಕೆಯರು ಈ ಸರೋವರದಲ್ಲಿ ತಮ್ಮ ಕೊನೆಯ ರಾಸಲೀಲೆಯನ್ನು ಆಡಿದರು. ಹಾಗೂ ಅಲ್ಲೇ ಐಕ್ಯ ಹೊಂದಿದರು. ಕಥೆಯ ಪ್ರಕಾರ ಗೋಪಿಕೆಯರು ಅಲ್ಲಿ ಹಳದಿ ಬಣ್ಣದ ಮಣ್ಣಾಗಿ ಮಾರ್ಪಟ್ಟಿದ್ದಾರೆ. ಇದೇ ಮಣ್ಣನ್ನು ಗೋಪಿ ಚಂದನ ಎಂದು ಭಾವಿಸಲಾಗುತ್ತದೆ. ಅಲ್ಲಿಯ ಮಣ್ಣೇ ವಿಶಿಷ್ಟ. ಈ ಮಣ್ಣು ಚರ್ಮವ್ಯಾಧಿಗೆ ಬಹಳ ಒಳ್ಳೆಯದೆಂದು ನಂಬಿಕೆ. ಈ ಮಣ್ಣು ಅತ್ಯಂತ ಮೃದು. ಅಲ್ಲಿ ವ್ಯಾಪಕವಾಗಿ ಗೋಪಿ ಚಂದನ ಸಿಗುತ್ತದೆ. ಅನೇಕರು ಗೋಪಿಚಂದನ ತಯಾರಿಸಿ ಮಾರುವ ಕಾಯಕ ಮಾಡುವುದನ್ನು ಕಂಡೆವು. ಅಲ್ಲಿ ಕೆಲವು ದೇಗುಲಗಳು ಸಾಲಾಗಿ ಇವೆ. ಅಲ್ಲಿಗೆ ಹೋಗಬೇಡಿ (ಸಮಯವಿಲ್ಲ) ಎಂದು ಮೊದಲೇ ಎಚ್ಚರಿಸಿದ್ದರು. ಅಲ್ಲಿ ಧಾರಾಳವಾಗಿ ಅಗ್ಗದ ದರದಲ್ಲಿ ಗೋಪಿ ಚಂದನ ಕೊಳ್ಳಲು ಸಿಗುತ್ತದೆ.


ಬೆಟ್ ದ್ವಾರಕ ದ್ವೀಪ

    ನಾವು ಅಲ್ಲಿಂದ ಬೆಟ್ ದ್ವಾರಕಕ್ಕೆ ಹೋಗಲು ದೋಣಿಯಲ್ಲಿ ಹೋದೆವು. ಸೀಗಲ್ ಹಕ್ಕಿಗಳು ಸಾಕಷ್ಟಿದ್ದುವು.  ಅವುಗಳಿಗೆ ಜನರು ಬಿಸ್ಕೆಟ್, ಪುರಿ ಹಾಕಿ ಅಭ್ಯಾಸ ಮಾಡಿಸಿದ್ದರೆ. ಅವುಗಳನ್ನು ತಿನ್ನಲು ದೋಣಿಗೆ ಮುತ್ತಿಗೆ ಹಾಕುತ್ತವೆ. 

ಬೆಟ್ ದ್ವಾರಕ ಕೃಷ್ಣನ ಶಯನ ಮಂದಿರದ್ವಾರಕದಿಂದ ಕೃಷ್ಣ ಮಲಗಲು ಇಲ್ಲಿಗೆ ಬರುತ್ತಿದ್ದ ಸ್ಥಳವೆಂದು ಪ್ರತೀತಿ. ಶೇಕಡಾ ೮೯ ಮಂದಿ ಮುಸ್ಲಿಮರೇ ಇರುವ ಸ್ಥಳವಂತೆ. ಅಲ್ಲಿ ಆರೇಳು ಸುಸಜ್ಜಿತ ಮಸೀದಿಯೂ ಇದೆಯಂತೆ



  

ಬೆಟ್ ದ್ವಾರಕ ಜನವಸತಿ ಇರುವ ದ್ವೀಪ. ಈ ದ್ವೀಪದ ಹೆಸರು ಶಂಖೋಧರ್. ಇಲ್ಲಿ ಶಂಖ ಚಿಪ್ಪುಗಳು ದಂಡಿಯಾಗಿ ಸಿಗುತ್ತವೆಯಂತೆ.


   ಅಲ್ಲಿ ಕೃಷ್ಣನ ದೇಗುಲವಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚು ಇತ್ತುದೋಣಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸರ್ಕಾರೀ ಕೃಪಾರ್ಷಿತ ದೋಣಿಯೂ ಹೋಗಿ ಬರಲು ತಲಾ ರೂ. ೪೦ಕ್ಕೆ   ಇದೆ. ನಾವು ಸರ್ಕಾರೀ ದೋಣಿ ಕಾಯದೆ ಒಂದು ದೋಣಿಯಲ್ಲಿ ಒಟ್ಟಿಗೆ (ತಲಾ ರೂ.೧೦೦) ಹೋಗಿ ಬಂದೆವು. ದ್ವಾರಕದಿಂದ ಬೆಟ್ ದ್ವಾರಕಕ್ಕೆ ಈಗ ಸೇತುವೆ ರಸ್ತೆಯ ಕಾರ್ಯ ಪ್ರಗತಿಯಲ್ಲಿರುವುದು ಕಂಡಿತು. ವಾಪಾಸು ದೋಣಿ ಹತ್ತಿ ದ್ವಾರಕಕ್ಕೆ ಬಂದು ಬಸ್ ಹತ್ತಿ ೨.೧೫ ಗಂಟೆಗೆ ಹೊಟೇಲಿಗೆ ಬಂದು ಊಟ ಮಾಡಿದೆವು.  ಊಟವಾಗಿ ವಿಶ್ರಾಂತಿ.

ರುಕ್ಮಿಣಿ ದೇವಾಲಯ

   .೩೦ ಗಂಟೆಗೆ ಹೊರಟು ೩ಕಿಮೀ ಸಾಗಿ ರುಕ್ಮಿಣಿ ದೇಗುಲಕ್ಕೆ ಹೋದೆವು. ದೊಡ್ಡದಾದ ದೇಗುಲ. ಕೆತ್ತನೆಗಳಿಂದ ಕಂಗೊಳಿಸುತ್ತಲಿತ್ತು. ಅಲ್ಲಿಯ ಉಪ್ಪುನೀರಿನ ಹವೆಗೆ ದೇಗುಲದ ಕಲ್ಲುಗಳು ಅಲ್ಲಲ್ಲಿ ಕರಗಿ ಮಾಸಿರುವುದು ಕಂಡಿತು. ರುಕ್ಮಿಣಿ ದೇವಾಲಯಕ್ಕೆ   ರುಕ್ಮಿಣಿಮಾಲಾ ಭೇಟಿ ಕೊಟ್ಟದ್ದಕ್ಕೆ ಕುರುಹಾಗಿ ಒಂದು ಪಟ ತೆಗೆಸಿಕೊಂಡೆ! 


  ದೇವಾಲಯದ ಪ್ರಸ್ತುತ ರಚನೆಯು ೧೯ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂಬ ಊಹೆ. ದೇವಾಲಯದಲ್ಲಿ ಭಕ್ತರು ಜಲದಾನ ಮಾಡುತ್ತಾರೆ. ಹಾಗೂ ಬಂದ ಭಕ್ತಾದಿಗಳು ಒಂದು ಲೋಟ ನೀರನ್ನು ಕುಡಿದೇ ಹೋಗಬೇಕೆಂದು ಹೇಳುತ್ತಾರೆ.

  ದಂತಕಥೆ: ಕೃಷ್ಣ ಮತ್ತು ರುಕ್ಮಿಣಿ ದುರ್ವಾಸ ಮುನಿಯನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿ, ತಾವೇ ರಥವನ್ನು ಎಳೆದೆಯ್ಯುತ್ತಿರುವಾಗ ದಾರಿಯಲ್ಲಿ ರುಕ್ಮಿಣಿಗೆ ಬಾಯಾರಿಕೆಯಾಯಿತು. ಅವಳು ಕೃಷ್ಣನಿಗೆ ಹೇಳಿದಾಗ, ಕೃಷ್ಣ ನೆಲಕ್ಕೆ ಕಾಲ್ಬೆರಳಿನಿಂದ ಒತ್ತಿದಾಗ ಗಂಗೆ ಚಿಮ್ಮಿತು. ರುಕ್ಮಿಣಿ ನೀರು ಕುಡಿದು ದಾಹ ಇಂಗಿಸಿಕೊಂಡಳು. ಆದರೆ ಇದು ದುರ್ವಾಸನಿಗೆ ಸರಿ ಬರಲಿಲ್ಲ. ತನ್ನನ್ನು ಮನೆಗೆ ಅಹ್ವಾನಿಸಿದವರು, ತನಗೆ ಮೊದಲು ನೀರು ಕೊಡಬೇಕಿತ್ತು  ಎಂದು ಕೋಪಗೊಂಡು ಕೃಷ್ಣ ರುಕ್ಮಿಣಿ ತನ್ನ ಪತಿಯಿಂದ ಪ್ರತ್ಯೇಕವಾಗಿ ಬದುಕಬೇಕೆಂದು ಶಾಪ ಕೊಟ್ಟನು.  

 ಗೋಮತಿ ನದಿ

   ರುಕ್ಮಿಣಿ ದೇಗುಲದಿಂದ ನಾವು ಗೋಮತಿ ನದಿ ದಂಡೆಗೆ ಹೋದೆವು. ಅಲ್ಲಿ ದೋಣಿ ವಿಹಾರ ಕೂಡ ಇದೆ. ಗೋಮತಿ ನದಿಯು ಚಕ್ರತೀರ್ಥ ಘಾಟ್ ನಲ್ಲಿ ಸಮುದ್ರ ಸೇರುತ್ತದೆ.  ಧ್ವಾರಕಾಧೀಶ ದೇಗುಲಕ್ಕೆ ಇಲ್ಲಿಂದ ೫೬ ಮೆಟ್ಟಲು ಹತ್ತಿ ಹೋಗಬೇಕು.


 
ದ್ವಾರಕಾಧೀಶ ದೇವಾಲಯ

  ನಾವು ದ್ವಾರಕಾಧೀಶ ದೇಗುಲದ ಬಳಿ ತಲಪಿದಾಗ ಅಲ್ಲಿ ಗೋಪುರದ ಮೇಲೆ ಧ್ವಜ ಬದಲಾವಣೆ ನಡೆಯುತ್ತಲಿತ್ತು. ಧ್ವಜ ಸೇವೆ ಈಗಾಗಲೇ ವರ್ಷದವರೆಗೆ ನೋಂದಾವಣೆ ಆಗಿದೆಯಂತೆ. ದಿನಕ್ಕೆ ಐದಾರು ಸಲ ಧ್ವಜ ಬದಲಾವಣೆ ನಡೆಯುತ್ತದೆಯಂತೆ. ದ್ವಾರಕಾಧೀಶನ ದರ್ಶನ ಮಾಡಿ, ಕೃಷ್ಣನ ಪತ್ನಿಯರಿಗೂ ಅಲ್ಲಿ ದೇಗುಲಗಳಿವೆ. ಅವೆಲ್ಲವನ್ನು ನೋಡಿದೆವು. ಆಗ ಪುನಃ ಧ್ವಜ ಬದಲಾವಣೆ ನಡೆಯಿತು. ಅದನ್ನು   ನೋಡುತ್ತ ಕುತ್ತಿಗೆ ನೋವು ಬರಿಸಿ ಕೊಂಡೆವುಅಬ್ಬ ಅಷ್ಟು ಎತ್ತರದಲ್ಲಿ ನಿಂತು ಧ್ವಜ ಬದಲಾಯಿಸುತ್ತಾರಲ್ಲ ಅವರ ಗುಂಡಿಗೆ ಅದೆಷ್ಟು ಗಟ್ಟಿ ಎಂದು ಮಾತಾಡಿಕೊಂಡೆವು.

ದೇವಾಲಯದ ಶಿಖರವು ೭೮ ಮೀಟರ್ (೨೫೬ ಅಡಿ) ಎತ್ತರ ಇದೆ. ಎಪ್ಪತ್ತೆರಡು ಕಂಬಗಳ ಮೇಲೆ ನಿರ್ಮಿಸಲಾದ ಐದು ಅಂತಸ್ತಿನ ದೇವಾಲಯ ನೋಡಲು ಸುಂದರವಾಗಿದೆ. ದೇವಾಲಯಕ್ಕೆ ಎರಡು ಪ್ರಮುಖ ಪ್ರವೇಶದ್ವಾರಗಳಿವೆ, ಒಂದು ಮುಖ್ಯ ಪ್ರವೇಶ ದ್ವಾರವನ್ನು ಮೋಕ್ಷ ದ್ವಾರ ಎಂದೂ (ಅಂದರೆ "ಮೋಕ್ಷದ ಬಾಗಿಲು") ಮತ್ತು ನಿರ್ಗಮನ ಬಾಗಿಲು ಇದನ್ನು ಸ್ವರ್ಗ ದ್ವಾರ ಎಂದು ಕರೆಯಲಾಗುತ್ತದೆ. ಗರ್ಭಗುಡಿಯಲ್ಲಿ ಮುಖ್ಯ ದೇವತೆ ದ್ವಾರಕಾದೀಶನಾಗಿದ್ದು, ನಾಲ್ಕು ತೋಳುಗಳಿಂದ ಚಿತ್ರಿಸಲಾಗಿದೆ. ವಿಷ್ಣುವಿನ ತ್ರಿವಿಕ್ರಮ ರೂಪ ಎಂದು ಕರೆಯಲಾಗುತ್ತದೆ.  ಮುಖ್ಯ ಬಲಿಪೀಠದ ಎಡಭಾಗದಲ್ಲಿರುವ ಕೋಣೆಯ ಮೇಲೆ ಕೃಷ್ಣನ ಹಿರಿಯ ಸಹೋದರ ಬಲರಾಮನ ವಿಗ್ರಹವಿದೆ.  ಬಲಭಾಗದಲ್ಲಿ ಪ್ರದ್ಯುಮ್ನ ಮತ್ತು ಅನಿರುದ್ಧ (ಕೃಷ್ಣನ ಮಗ ಮತ್ತು ಮೊಮ್ಮಗ)ನ ವಿಗ್ರಹವಿದೆ. ಕೇಂದ್ರ ದೇಗುಲದ ಸುತ್ತ, ರಾಧಾ, ಜಾಂಬವತಿ, ಸತ್ಯಭಾಮ ಮತ್ತು ಲಕ್ಷ್ಮೀ ದೇವತೆಗಳ ವಿಗ್ರಹಗಳಿವೆ ಮಾಧವ್ ರಾವ್ಜಿ (ಕೃಷ್ಣನ ಇನ್ನೊಂದು ಹೆಸರು), ದೂರ್ವಾಸ ಋಷಿಯ ದೇವಾಲಯವೂ ಇದೆ.



  ಸೂರ್ಯ ಮತ್ತು ಚಂದ್ರನ ಚಿಹ್ನೆಗಳನ್ನು ಹೊಂದಿರುವ ಅತ್ಯಂತ ದೊಡ್ಡ ಧ್ವಜವನ್ನು ಗೋಪುರದ ಮೇಲೆ ಹಾರಿಸಲಾಗಿದೆಧ್ವಜ, ತ್ರಿಕೋನಾಕಾರದಲ್ಲಿದ್ದು, ೫೦ ಅಡಿ (೧೫ ಮೀ) ಉದ್ದವಿದೆ ಧ್ವಜವನ್ನು ದಿನಕ್ಕೆ ಐದು ಬಾರಿ ಹೊಸದರೊಂದಿಗೆ ಬದಲಾಯಿಸಲಾಗುತ್ತದೆ ಮತ್ತು ಹೊಸ ಧ್ವಜವನ್ನು ಖರೀದಿಸುವ ಮೂಲಕ ಅದನ್ನು ಹಾರಿಸಲು ಹಿಂದೂಗಳು ಭಾರಿ ಹಣವನ್ನು ಪಾವತಿಸುತ್ತಾರೆಇದರಲ್ಲಿ ಬಂದ ಹಣವನ್ನು ದೇವಸ್ಥಾನದ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳನ್ನು ಭರಿಸಲು ದೇವಸ್ಥಾನದ ಟ್ರಸ್ಟ್ ನಿಧಿಗೆ ಜಮಾ ಮಾಡಲಾಗುತ್ತದೆ

 

 


ದೇಗುಲ ನೋಡಿ ನಡೆದು ಹೊಟೇಲ್ ತಲಪಿದಾಗ .೫೦. ಊಟವಾಗಿ ನಿದ್ದೆ.
 ಅಹಮದಾಬಾದಿಗೆ ಪಯಣ

   ತಾರೀಕು ೩೦..೨೩ರಂದು ಬೆಳಗ್ಗೆ .೪೫ಕ್ಕೆ ಹೊಟೇಲ್ ಕೋಣೆ ಖಾಲಿ ಮಾಡಿ, ತಿಂಡಿ ತಿಂದು .೫೦ಕ್ಕೆ ಅಹಮದಾಬಾದ್ ಕಡೆಗೆ ಹೊರಟೆವು೪೫೦ಕಿಮೀ ಸುದೀರ್ಘ ಪಯಣ. ದಾರಿಯಲ್ಲಿ ೧೦ಗಂಟೆಗೆ ಚಹಾ ವಿರಾಮ..
೧೨.೩೦ಗೆ ಊಟ ತುಲಸಿ ಹೊಟೇಲಲ್ಲಿ ಊಟದ ವಿರಾಮ.  ಸಂಜೆ ಚಹಾ ವಿರಾಮ. ಪಯಣದ ಏಕತಾನತೆ ಕಾಡದಂತೆ ಹೊಸೂರು ಗುಂಪು, ಕುಪ್ಪಂ ಗುಂಪಿನವರು ಕುರುಕಲು ತಿಂಡಿ, ಹಣ್ಣು ಹಂಚುತ್ತಲಿದ್ದರು. ಹೊಸೂರಿನ ವೆಂಕಟೇಶ ಮೂರ್ತಿಯವರು ವಾಗ್ಮಿಗಳು. ಮಹಾಭಾರತ ಕಥೆ, ನಾವು ನೋಡಿದ ಸ್ಥಳಗಳ ಐತಿಹ್ಯಗಳನ್ನು ಸ್ವಾರಸ್ಯವಾಗಿಇಂದಿನ ಜನಜೀವನಕ್ಕೆ ತಕ್ಕ ಉದಾಹರಣೆ ಕೊಡುತ್ತ ವಿವರಿಸುತ್ತಿದ್ದರು. ಅವರ ಮಾತು ಕೇಳಲು ಬಲು ಹಾಸ್ಯಮಯವಾಗಿ ಚೆನ್ನಾಗಿರುತ್ತಿತ್ತು ಹಾಗೂ ಭೋದನಾ ದಾಯಕವಾಗಿರುತ್ತಲಿತ್ತು. ಹಾಗಾಗಿ ಸುದೀರ್ಘ ಪಯಣವಾದರೂ ಹೆಚ್ಚುಬೇಸರ ಕಾಡಿರಲಿಲ್ಲ

ರಸ್ತೆಯ ಇಕ್ಕೆಲಗಳಲ್ಲಿ ಕಾಣುವ ಹಸಿರು (ಕೃಷಿ ಭೂಮಿ) ಕಣ್ಣಿಗೆ ಹಿತವಾಗಿತ್ತು. ಅದನ್ನು ನೋಡುತ್ತ ಸಾಗಿದಾಗ ಮನದೊಳಗೆ ರೈತರ ಬಗ್ಗೆ ಅತೀವ ಹೆಮ್ಮೆಯೂ ಮೂಡುತ್ತಲಿತ್ತು. ಹೊಲಗಳಲ್ಲಿ ಈರುಳ್ಳಿ ಹೂ ಬಿಟ್ಟು ಬಲು ಸೊಗಸಾಗಿ ಕಾಣುತ್ತಲಿತ್ತು.


ದೀರ್ಘ ಪಯಣಾನಂತರ .೩೦ಗೆ  ಅಹಮದಾಬಾದ್ ತಲಪಿ ರಾಯಲ್ ಆರ್ಕಿಡ್ (REGENTA CENTRAL ANTARIM) ಹೊಟೇಲ್  ತಲಪಿದೆವು. ಈ ಹೊಟೇಲಲ್ಲಿ ಪುಸ್ತಕ ಸಂಗ್ರಹ, ಹಳೆಯ ರೇಡಿಯೋ ಎಲ್ಲ ವರಾಂಡದಲ್ಲಿ ಪ್ರದರ್ಶನ ಮಾಡಿದ್ದರು. ಹೊಟೇಲ್ ಒಳಗೆ ವಿಜ್ಞಾನಿಗಳ ಪಟ ಅವರ ಸಾಧನೆ ಬಗ್ಗೆ ಗೋಡೆಬರಹ ಇತ್ತು. 


ಸಂಜೆ .೧೫ಕ್ಕೆ ಕಾಲ್ನಡಿಗೆಯಲ್ಲಿ ಪೇಟೆ ಸುತ್ತಿ  ಅಲ್ಲಿಯ ಸಾಮಾನ್ಯ ತಿನಿಸು ಕಾಕ್ರ ಕೊಂಡು .೩೦ಗೆ ಹೊಟೇಲಿಗೆ ಬಂದೆವು. ಇಲ್ಲಿ ಊಟ ಮಾಡುವಾಗ ಸ್ವಲ್ಪ ಗೊಂದಲ ಆಯಿತು.   ಶಾಖಾಹಾರಿ ಮಾಂಸಹಾರ ಒಟ್ಟಿಗೆ ಇಟ್ಟಿದ್ದರು. ಇಷ್ಟು ದಿನವೂ ಎಲ್ಲ ಕಡೆ ಶಾಖಾಹಾರಿ ಮಾತ್ರ ಇತ್ತು. ಸಮಸ್ಯೆ ಇರಲಿಲ್ಲ. ಇದು ಶಾಖಾಹಾರಿಗಳಿಗೆ ತುಸು ಮುಜುಗರ ಆಯಿತು.

ರಾಣಿ ಕಾ ವಾವ್

   ತಾರೀಕು ೩೧..೨೩ರಂದು ಬೆಳಗ್ಗೆ .೩೦ಗೆ ಹೊಟೇಲ್ ಕೋಣೆ ಖಾಲಿ ಮಾಡಿ, ತಿಂಡಿ ತಿಂದು .೫೦ಕ್ಕೆ ಹೊರಟೆವು.

 ಸುಮಾರು ೧೦೦ಕಿಮೀ. ಪಯಣಿಸಿ ೧೦.೩೦ಗೆ ರಾಣಿ ಕಾ ತಾವ್ ತಲಪಿದೆವು.   ಅಲ್ಲಿ ಮಾರ್ಗದರ್ಶಿ ಒಬ್ಬರು ಬಾವಿಯ ಐತಿಹ್ಯವನ್ನು ವಿವರಿಸಿದರು

   ರಾಣಿ ಕಿ ವಾವ್ ಅನ್ನು ಚಾಲುಕ್ಯ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಇದು ಸರಸ್ವತಿ ನದಿಯ ದಡದಲ್ಲಿದೆ. ಇದನ್ನು ಚಾಲುಕ್ಯ ರಾಜ ಭೀಮ ಅವರ ನೆನಪಿಗಾಗಿ ಅವರ ಪತ್ನಿ ಉದಯಮತಿ ನಿರ್ಮಿಸಿದಳು. ಇದು ಸರಸ್ವತಿ  ನದಿಯ ಪ್ರವಾಹದಿಂದ  ಸಂಪೂರ್ಣ ಮುಳುಗಿ ಹೂಳು ತುಂಬಿತ್ತು. ೧೯೪೦ರ ದಶಕದಲ್ಲಿ ಉತ್ಖನನ ನಡೆಸಿದಾಗ ಮೆಟ್ಟಲ ಬಾವಿ ಗೋಚರಿಸಿತು.  ೨೦೧೪ರಲ್ಲಿ ಯುನೆಸ್ಕೊ ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಈ ತಾಣವನ್ನು ಸೇರಿಸಲಾಯಿತು.   


ಮತ್ತೊಬ್ಬ ಮಾರ್ಗದರ್ಶಿಯೊಬ್ಬರನ್ನು ತೋರಿಸಿ, ಇವರು ಬಹಳ ಚೆನ್ನಾಗಿ ಪಟ ತೆಗೆಯುತ್ತಾರೆ. ತೆಗೆಸಿಕೊಳ್ಳಿ ಎಂದಾಗ, ನಾವು ಹಾಗೂ ವೀಣಾ ಶ್ರೀನಿವಾಸ ದಂಪತಿ ಅವರ ಬಳಿ ಮೊಬೈಲ್ ಕೊಟ್ಟು ವಿವಿಧ ಭಂಗಿಯಲ್ಲಿ (ಅವರು ಹೇಳಿದಂತೆಯೇ ನಿಂತು) ಪಟ ತೆಗೆಸಿಕೊಂಡೆವು. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ ಅಂತ ಯಾವತ್ತೂ ನಾವು ಪಟ ತೆಗೆಸಿಕೊಳ್ಳಲಿಲ್ಲ! ಈಗ ತೆಗೆಸಿಕೊಂಡಂತಾಯಿತು ಎಂದು ಹೇಳಿಕೊಂಡೆವು


 ಬಾವಿ ಬಹಳ ಕಲಾತ್ಮಕವಾಗಿ ಕಟ್ಟಿದ್ದಾರೆ. ಈಗ ಎರಡು ಹಂತದವರೆಗೆ ಮಾತ್ರ ಬಿಡುತ್ತಾರೆ. ಬಾವಿಯ ಬಳಿಗೆ ಬಿಡುವುದಿಲ್ಲ. ಚಂದದ ಬಾವಿಯ ಬೆರಗು ನೋಡಿ ವಾವ್ ಎಂದು ಉದ್ಗರಿಸುತ್ತ ಅಲ್ಲಿಂದ ನಿರ್ಗಮಿಸಿದೆವು

ಮೊದೆರ ಸೂರ್ಯ ದೇಗುಲ

  ಸುಮಾರು ೩೭ ಕಿಮೀ ಚಲಿಸಿ ಮೊದೆರ ಸೂರ್ಯ ದೇಗುಲಕ್ಕೆ ಹೋದೆವು. ಆಕರ್ಷಕ ಕೆತ್ತನೆಗಳಿರುವ ದೇಗುಲ. ದೇಗುಲದೊಳಗೆ ಸೂರ್ಯನ ಚಿನ್ನದ ಪ್ರತಿಮೆ ಇತ್ತಂತೆ. ಅದನ್ನು ಕಿತ್ತು ತೆಗೆದಿರುವರಂತೆ. ಪೂಜೆ ನಡೆಯುತ್ತಿಲ್ಲ. ವಿಶ್ವ ಪರಂಪರೆಯ ದೇಗುಲದ ಬಗ್ಗೆ ಅಲ್ಲಿ ಒಬ್ಬ ಮಾರ್ಗದರ್ಶಿ ಚೆನ್ನಾಗಿ ವಿವರಿಸಿದರು.
ದೇಗುಲದ ಬಳಿ ಕೆರೆ ಇದೆ. ಅದರ ಸುತ್ತ ಸುಮಾರು ಪುಟ್ಟ ದೇಗುಲಗಳಿವೆ.
ದೇಗುಲದ ಪಕ್ಕದಲ್ಲಿರುವ ಹೊಟೇಲಲ್ಲಿ ಊಟ ಮಾಡಿ ಅಲ್ಲಿಂದ ನಿರ್ಗಮನ.





ಅಕ್ಷರಧಾಮ

ನಾವು ಸೂರ್ಯದೇಗುಲದಿಂದ ಅಕ್ಷರಧಾಮದೆಡೆಗೆ ಪಯಣ ಬೆಳೆಸಿದೆವು.
ಅಕ್ಷರಧಾಮದ ಸ್ವಾಮಿ ನಾರಾಯಣ ಮಂದಿರ ತಲಪಿದಾಗ .೧೫ಗಂಟೆ. ಅಲ್ಲಿಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಸ್ವಾಮಿ ನಾರಾಯಣ ಮಂದಿರದಲ್ಲಿ ಸ್ವಾಮಿ ನಾರಾಯಣರ ಪ್ರತಿಮೆ ಇದೆ. ಮಹಡಿಯಲ್ಲಿ ಅವರು ಬಳಸಿದ ವಸ್ತುಗಳ ಪ್ರದರ್ಶನವಿದೆ. ಅವರ ಜೀವನ ಚರಿತ್ರೆಯ ಸುಂದರ ಚಿತ್ರಪಟಗಳಿವೆ.
ಅಲ್ಲಿ ಓಡಾಡಿ, ಹೊರಬಂದಾಗ, ಹೊಸೂರಿನ ಹೇಮಾವತಿ ಅವರು ನಮಗೆಲ್ಲ ಅವರ ಜನ್ಮದಿನದ ಅಂಗವಾಗಿ ಖುಷಿಗೆ ಐಸ್ಕ್ರೀಂ ಕೊಡಿಸಿದರು. ಐಸ್ಕ್ರೀಂ ತಿಂದು ನಾವು ಅಲ್ಲಿಂದ ಹೊರಟು ಬಸ್ ಹತ್ತಿದೆವು. ಅಲ್ಲಿಗೆ ಗುಜರಾತಿನ ಪರಿಭ್ರಮಣ ಮುಗಿಸಿದೆವು.
ಗುಜರಾತಿಗೆ ವಿದಾಯ

  ನಮ್ಮನ್ನು ಹೊತ್ತ ಬಸ್ ಅಹಮದಾಬಾದ್ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಹೊರಟು ಅಲ್ಲಿ ನಮ್ಮನ್ನಿಳಿಸಿತು. ಬಸ್ ಚಾಲಕ ನಾರಾಯಣ, ಸಹಾಯಕ ಹರೀಶ ಏಳು ದಿನಗಳ ಕಾಲ ನಮ್ಮ ಪಯಣವನ್ನು ಸಲೀಸಾಗಿಸಿದ ಮಹನೀಯರು. ನಗುಮುಖದ ರಣಧೀರರು. ಏಳು ದಿನಗಳ ಕಾಲ ಸುರಕ್ಷಿತವಾಗಿ ವೇಗಮಿತಿಯಲ್ಲಿ ಬಸ್ ಚಾಲಿಸಿದವರು. ಕೃತಜ್ಞತಾ ಪೂರ್ವಕವಾಗಿ ಅವರಿಗೆ ನಮ್ಮ ಕಿರುಕಾಣಿಕೆ ಸಲ್ಲಿಸಿದೆವು. ನಮ್ಮ ತಂಡವನ್ನು ಮುನ್ನಡೆಸಿದ ಶಿವಕುಮಾರ್ ಅವರಿಗೂ ನೆನಪಿನ ಕಿರು ಕಾಣಿಕೆ ಸಲ್ಲಿಸಿದೆವು.

   ವಿಮಾನ ನಿಲ್ದಾಣದೊಳಗೆ ಸಂಬಂಧಿಸಿದ ಎಲ್ಲ ತಪಾಸಣೆ ಮುಗಿಸಿ ಒಳಗೆ ಕಾದಿದ್ದಾಗ, ವಿಮಾನ ತಡವಾಗಿ ಹೊರಡಲಿದೆ ಎಂಬ ವಿಷಯ ತಿಳಿಯಿತು. ನಮಗೆ ಊಟದ ಪೊಟ್ಟಣ ಕೊಟ್ಟದ್ದನ್ನು ತಿಂದೆವು.
    ವಿಮಾನ ತಡವಾದ ಕಾರಣ ವಿಮಾನದ ಸಂಸ್ಥೆಯ ವತಿಯಿಂದ ನಮಗೆ ಊಟ ಕೊಟ್ಟರು. ಕೆಲವರು ಆ ಊಟ ಮಾಡಿದರು. ಯಾರೋ ಒಬ್ಬ ಪ್ರಯಾಣಿಕರು ಊಟದ ಬಗ್ಗೆ ಅವರ ಬಳಿ ಜಗಳಾಡಿದರು. ಪರೋಟವನ್ನು ನಮ್ಮ ಮನೆಯ ನಾಯಿಯೂ ತಿನ್ನಲಾರದು ಹಾಗಿದೆ ಎಂದು ಹೇಳುವುದು ಕೇಳಿತು. ನಾವು ಇದೇ ಊಟವನ್ನು ೪೫೦ರೂಗೆ ಕೊಡುತ್ತಿರುವುದು. ಅದೇ ಊಟ ನಿಮಗೆ ಉಚಿತವಾಗಿ ಕೊಡುತ್ತಿದ್ದೇವೆ ಎಂದು ಉತ್ತರ ಕೊಟ್ಟರು.

ಲಾಂಜ್ ಪ್ರವೇಶ

  ವಿಮಾನ ತಡವಾದರೆ, ಅಥವಾ ತುಂಬ ಹೊತ್ತು ಕಾಯಬೇಕೆಂದಾದರೆ ವಿಮಾನ ನಿಲ್ದಾಣದೊಳಗೆ ಲಾಂಜ್ ಇದೆ. ಅಲ್ಲಿಗೆ ಪ್ರವೇಶಿಸಲು ನಮ್ಮಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಇರಬೇಕು. ಎಲ್ಲ ಕಾರ್ಡ್ ಗಳೂ ಆಗುವುದಿಲ್ಲ. ಕೆಲವು ಕಾರ್ಡ್ಗಳು ಆಗುತ್ತವೆ. ವಿಷಯ ನನಗೆ ಗೊತ್ತಿರಲಿಲ್ಲ. ನಮ್ಮೊಡನೆ ಪ್ರವಾಸ ಬಂದಿದ್ದ ವೀಣಾ ಶ್ರೀನಿವಾಸ ದಂಪತಿ ಹೇಳಿದರು. ನಾನೂ ಕೆನರಾ ಬ್ಯಾಂಕ್ ಕಾರ್ಡಿನ ಸಹಾಯದಿಂದ ಒಳಗೆ ಹೋದೆ. ಒಳ ಹೋಗಲು ಕೇವಲ ರೂ. ಮಾತ್ರ ನಮ್ಮ ಖಾತೆಯಿಂದ ಹೋಗುತ್ತದೆ. ಅಲ್ಲಿ ಕಾಫಿ, ಹಣ್ಣಿನರಸ, ಊಟ, ಕರಿದ ತಿಂಡಿ ಇತ್ಯಾದಿ ಇರುವ ಯಾವ ತಿಂಡಿಯನ್ನು ಎಷ್ಟು ಬೇಕಾದರೂ (ನಮ್ಮ ಹೊಟ್ಟೆಗೆ ಮಿತಿ ಇರುವುದರಿಂದ ಅವರು ಬಚಾವ್!)ತಿನ್ನಬಹುದಂತೆ. ಅಲ್ಲಿ ಕಾಫಿ, ನಿಂಬೆ ಸೂಪ್, ಆಲೂಕಡ್ಡಿ   (ಫ್ರೆಂಚ್ ಫ್ರೈಸ್) ತಿಂದು ಬಂದೆ.

   ಅಂತೂ ಇಂತೂ ನಾವು ಹೋಗಬೇಕಾಗಿದ್ದ ಗೊ ಫಸ್ಟ್ ವಿಮಾನ ಬೆಂಗಳೂರಿಗೆ ಮಧ್ಯರಾತ್ರೆ ೧೨.೩೦ಗೆ ಹೊರಟಿತು. ಗೊ ಫಸ್ಟ್ ಹೋಗಿ ಗೋ ಲಾಸ್ಟ್ ಆಯಿತು ಎಂದು ಯಾರೋ ಹೇಳಿದರು!
.೩೦ಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿದೆವು. ವಿಮಾನ ಚಾಲಕನಿಗೆ ಧನ್ಯವಾದ

ಮರಳಿ ಮನೆಗೆ

..೨೩ರಂದು ಬೆಳಗ್ಗೆ .೨೦ಕ್ಕೆ ಬೆಂಗಳೂರಿನಿಂದ ಬಸ್ ಹತ್ತಿ ಮೈಸೂರು ಮನೆ ತಲಪಿದಾಗ .೨೦ ಆಗಿತ್ತು. ಅಲ್ಲಿಗೆ ನಮ್ಮ ಗುಜರಾತ್ ಪ್ರವಾಸಕ್ಕೆ ತೆರೆಬಿತ್ತು.

   ಬೆಂಗಳೂರಿನ ಸಾಯಿ ಶಿಶಿರ ಪ್ರವಾಸೀ ಸಂಸ್ಥೆಯ ವತಿಯಿಂದ ಪ್ರವಾಸ ಕೈಗೊಂಡಿದ್ದೆವು. ಒಟ್ಟು ೪೨ ಮಂದಿಗೆ ಅವರೇ ವಿಮಾನ ಟಿಕೆಟ್ ಮಾಡಿದ್ದರು. ಪ್ರವಾಸದ ವೆಚ್ಚ  ರೂ  ೩೮೮೫೦ (ಜಿಎಸ್ಟಿ ಸಹಿತ, ವಿಮಾನ ದರವೂ ಒಳಗೊಂಡು). ನಮಗೆ ತಲಾ ಸುಮಾರು ರೂ ೪೧೫೦೦ ಖರ್ಚಾಗಿತ್ತು. ಸಾಯಿಶಿಶಿರ್ ಸಂಸ್ಥೆಯ ವತಿಯಿಂದ ಶಿವಕುಮಾರ್ ಎಂಬ ಹಸನ್ಮುಖಿ ಸಮಾಧಾನಿ ತರುಣ ನಮ್ಮ ಜೊತೆಗೆ ಬಂದಿದ್ದರು. ಎಂಎಸ್ಸಿ ಪದವೀಧರ, ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲವು ವರ್ಷ ಕೆಲಸ ಮಾಡಿ, ಈಗ ಕೆಲವು ವರ್ಷಗಳಿಂದ ಸಾಯಿ ಶಿಶಿರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವರು. ನಾವು ಹೋಗುವ ಎಲ್ಲ ತಾಣಗಳ ಬಗ್ಗೆ ಅಲ್ಲಿಯ ಐತಿಹ್ಯಗಳನ್ನು ಬಹಳ ವಿದ್ವತ್ಪೂರ್ಣವಾಗಿ ವಿವರಿಸುತ್ತಲಿದ್ದರುನಮ್ಮ ಮನೆಯ ಹುಡುಗನೇ  ನಮ್ಮೊಂದಿಗೆ ಬಂದಿದ್ದಾನೋ ಎಂಬ ಭಾವ ಬರುವಂತೆ  ಎಲ್ಲರ ಬೇಕು ಬೇಡಗಳನ್ನು ವಿಚಾರಿಸುತ್ತ, ಎಲ್ಲರ ತಿಂಡಿ ಊಟ ಆದನಂತರ ಅವರು ಊಟ ಮಾಡುತ್ತ, ನಗುನಗುತ್ತ ಎಲ್ಲರೊಡನೆ ಬೆರೆಯುತ್ತ ಇದ್ದದ್ದು ನಮ್ಮೆಲ್ಲರಿಗೂ ಬಹಳ ಖುಷಿಯಾಗಿತ್ತು. ಊಟ ವಸತಿ ಉತ್ಕೃಷ್ಟ ಮಟ್ಟದಲ್ಲಿತ್ತು.  ಸಾಯಿಶಿಶಿರ್ ಸಂಸ್ಥೆಯ ವತಿಯಿಂದ ನೆಮ್ಮದಿಯಿಂದ ಪ್ರವಾಸ ಮಾಡಬಹುದು.

   ನಾವು ಎಲ್ಲರೂ ಏಳು ದಿನ ಒಂದೇ ಮನೆಯವರಂತೆ ಖುಷಿ ಖುಷಿಯಿಂದ ಒಟ್ಟಿಗೆ ಓಡಾಡಿ ಕೊನೆಯ ದಿನ ಅಗಲುವ ದಿನ ಬಂದಾಗ, ಇಷ್ಟು ಬೇಗ ಮುಗಿಯಿತ? ನಾಳೆ ನೀವೆಲ್ಲೊ ನಾವೆಲ್ಲೋ ಎಂದು ಹೇಳುತ್ತ, ಪರಸ್ಪರ ಮನೆಗೆ ಬನ್ನಿ ಎಂದು ಆಹ್ವಾನಿಸುತ್ತ ಬೀಳ್ಕೊಂಡೆವು. ಕುಪ್ಪಂನಿಂದ ಬಂದ ಕಲಾವತಿ, ಶ್ರೀಲಕ್ಷ್ಮೀ, ಶಾಂತ ಅವರು ಅವರ ಮೊಬೈಲ್ ಸಂಖ್ಯೆ ಕೊಟ್ಟು ಮನೆಗೆ ಬಂದೇ ಬರಬೇಕು ಎಂದು ಪ್ರೀತಿಯಿಂದ ಆಹ್ವಾನಿಸಿದ್ದರು. ಗುಂಪು ಪ್ರವಾಸದಿಂದ ಆಗುವ ಲಾಭವೆಂದರೆ ಅತುಲ ಸ್ನೇಹಸಂಪಾದನೆ, ಅಲ್ಲಿಯ ಪರಿಸರದ ನಿಜಚಿತ್ರಣ, ಜ್ಞಾನವೃದ್ಧಿಯಾಗುತ್ತದೆ. ಕೋಶ ಓದು -ದೇಶ ಸುತ್ತು ಎಂಬ ಮಾತು ನನಗೆ ಸದಾ ಆಪ್ಯಾಯಮಾನ!

ಸಮಾಪ್ತಿ.