ಬುಧವಾರ, ಡಿಸೆಂಬರ್ 30, 2020

ದುರ್ಗಕ್ಕೆ ಭೈರವದುರ್ಗವೆ ಸಾಟಿ

ಅನವರತ ಚಾರಣ ಕೈಗೊಳ್ಳುತ್ತಿದ್ದವರಿಗೆ ದೀರ್ಘಕಾಲ ಮನೆಯೊಳಗೇ ಕೂರುವುದು ಬಲು ಕಠಿಣ ಶಿಕ್ಷೆಯೇ! ಕೊರೊನಾ ವೈರಾಣು ಹಾವಳಿಯಿಂದಾಗಿ ಇಸವಿ ೨೦೨೦ ಮರೆಯಲಾರದ ಪಾಟ ಕಲಿಸಿದೆ. ಈ ಹತ್ತು ತಿಂಗಳು ಎಲ್ಲೂ ಹೋಗಲುಸಾಧ್ಯವಾಗದೆ ಕಾಲೆಲ್ಲ ಜಡುಗಟ್ಟಿದ್ದು, ಅದನ್ನು ಸಡಿಲಗೊಳಿಸುವ ಸುದಿನ ಬಂದೇ ಬಂತು. ಇದು ಈ ವರ್ಷದ ಕೊನೆಯ ಚಾರಣ ಕೂಡ. ೨೭-೧೨-೨೦೨೦ರಂದು ಬೆಳಗ್ಗೆ ೬ ಗಂಟೆಗೆ ಮೈಸೂರಿನಿಂದ ಹೊರಟು ೧೦ ಗಂಟೆಗೆ ಭೈರವದುರ್ಗ ತಲಪಿದೆವು. ನಾವು ಒಟ್ಟು ೨೨ ಮಂದಿ (೧೦ ವರ್ಷದಿಂದ ತೊಡಗಿ, ೭೮ ವಯಸ್ಸಿನವರೆಗೆ) ಇದ್ದೆವು.
ದಾರಿ ಮಧ್ಯೆ ತಿಂಡಿ ಸೇವನೆಯಾಯಿತು. ಕೆಸ್ತೂರು ದುಂಡನಹಳ್ಳಿ ಮಧ್ಯೆ ಒಂದು ಮಾನವ ನಿರ್ಮಿತ ನೀರಿಲ್ಲದ ಕೆರೆ ಇದೆ. ಅದರ ಸುತ್ತ ಹೂ ಗಿಡ, ಅಲಂಕಾರಿಕ ಸಸ್ಯ ಬೆಳೆಸಿ, ಅಲ್ಲಲ್ಲಿ ಸಿಮೆಂಟ್ ಬೆಂಚು ಹಾಕಿದ್ದಾರೆ. ಸ್ಠಳ ಬಹಳ ಚೊಕ್ಕವಾಗಿದೆ. ತಿಂಡಿ ಊಟ ಮಾಡಲು ಪ್ರಶಸ್ತವಾದ ಸ್ಠಳ. ಜಲಭಾಧೆ ತೀರಿಸಿಕೊಳ್ಳಲು ಪಾಯಿಖಾನೆ ಇದೆ. ಕಸ ಹಾಕಲು ತೊಟ್ಟಿಯೂ ಇದೆ. ಉಸ್ತುವಾರಿಗೆ ಕಾವಲುಗಾರ ಇದ್ದಾನೆ. ರಸ್ತೆ ಹೆದ್ದಾರಿ ಕಾಮಗಾರಿ ವೇಳೆಯಲ್ಲಿ ರಸ್ತೆ ಗುತ್ತಿಗೆದಾರನ ಮುತುವರ್ಜಿಯಿಂದ ಈ ಕೆರೆ ನಿರ್ಮಿಸಿದ್ದಂತೆ. ತಿಂಡಿ ತಿಂದು ಬುತ್ತಿಗೆ ಮಧ್ಯಾಹ್ನದ ಊಟವನ್ನು ಹಾಕಿಸಿಕೊಂಡು ಹೊರಟೆವು.
(ಬೆಂಗಳೂರಿನ ಸುತ್ತಮುತ್ತ ಕೆಂಪೇಗೌಡರು ೯ ದುರ್ಗ ಕಟ್ಟಿಸಿದ್ದರಂತೆ. ಆ ನವದುರ್ಗಗಳು, ೧) ನಂದಿ ದುರ್ಗ (೪೮೫೧ ಅಡಿ) ೨) ಮಾಕಳಿದುರ್ಗ (೩೬೬೪ ಅಡಿ) ೩)ಚನ್ನರಾಯನ ದುರ್ಗ ( ೩೯೪೦ ಅಡಿ) ೪) ದೇವರಾಯನ ದುರ್ಗ ( ೩೭೪೩ ಅಡೀ) ೫)ಭೈರವದುರ್ಗ (೨೩೦೦ ಅಡಿ) ೬) ಹುಲಿಯೂರು ದುರ್ಗ(೨೭೭೨ ಅಡಿ) ೭) ಸಾವನದುರ್ಗ(೧೨೨೬ ಅಡಿ) ೮)ಕಬ್ಬಾಲದುರ್ಗ(೩೬೦೦ ಅಡಿ) ೯) ಹುತ್ರಿ ದುರ್ಗ( ೨೭೦೦ ಅಡಿ) (ಇವುಗಳಲ್ಲಿ ೫ ದುರ್ಗಗಳನ್ನು ಏರುವ ಭಾಗ್ಯ ನನಗೆ ಲಭಿಸಿದೆ.) ಶೈವಗುರು ಗಗನದಾರ್ಯರು ಶಿವೈಕ್ಯರಾದ ಸ್ಥಳವೇ ಭೈರವದುರ್ಗ ಎಂಬುದು ಪ್ರತೀತಿ. ಚಾರಣಿಗರಿಗೆ ಹತ್ತಲು ಅತ್ಯಂತ ಸಂತೋಷ ತರುವ ಬೆಟ್ಟವಿದು. ಮಾಗಡಿ ಮತ್ತು ಹುಲಿಕಲ್ ನಡುವೆ ಇರುವ ಏಕಶಿಲಾ ಬೆಟ್ಟವೇ ಕುದೂರಿನ ಭೈರವದುರ್ಗ. ಕೆಂಪೇಗೌಡರ ಸೇನಾ ನೆಲೆಯಾಗಿದ್ದ ಈ ಬೆಟ್ಟ ಸಮುದ್ರಮಟ್ಟದಿಂದ ಸುಮಾರು ೩೦೦೦ ಮೀಟರು (೨೩೦೦ ಅಡಿ) ಎತ್ತರದಲ್ಲಿದೆ. ಕ್ರಿ.ಶ. ೧೭ನೇ ಶತಮಾನದಲ್ಲಿ ಇಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ. ಅದರ ಅವಶೇಷವನ್ನು ಅಲ್ಲಿ ಈಗ ಕಾಣಬಹುದಾಗಿದೆ. (ಮಾಹಿತಿ ಕೃಪೆ: ಅಂತರ್ಜಾಲ) ನಮ್ಮ ಚಾಲಕ ನಿಧಾನವೇ ಪ್ರಧಾನದವ. ಹಾಗಾಗಿ ಸಾವಕಾಶವಾಗಿಯೇ ನಾವು ೧೦.೧೫ಕ್ಕೆ ಭೈರವ ದುರ್ಗದ ಬುಡ ತಲಪಿದೆವು. ಮುಖ್ಯ ರಸ್ತೆಯಿಂದ ತಿರುಗುವ ಸ್ಥಳದಲ್ಲಿ ಭೈರವೇಶ್ವರ ದೇವಾಲಯ ಎಂಬ ಫಲಕವಿರುವ ದೊಡ್ಡ ಕಮಾನು ಇದೆ.
ಸಾಮಾನ್ಯವಾಗಿ ಆಯೋಜಕರು ಪೂರ್ವಭಾವಿಯಾಗಿ ಸ್ಠಳೀಯರ ನೆರವಿನಿಂದ ಬೆಟ್ಟ ಏರಿ ನೋಡಿ ಬರುತ್ತಾರೆ. ಆದರೆ ಈ ಸಲ ಆ ಕೆಲಸ ಮಾಡದೆಯೇ ಗೂಗಲಿನಲ್ಲಿ ಜಾಲಾಡಿ ಮಾಹಿತಿ ಸಂಗ್ರಹಿಸಿ ಧೈರ್ಯವಾಗಿ ಗುಂಪನ್ನು ಹೊರಡಿಸಿದ್ದರು. ಹಾಗಾಗಿ ಮಾರ್ಗದರ್ಶಕರಿಲ್ಲದೆ ಹೋಗಲು ಸಾಧ್ಯವಿಲ್ಲವೆಂದು ಅಲ್ಲೇ ಆಟವಾಡುತ್ತಿದ್ದ ಸ್ಥಳೀಯ ಇಬ್ಬರು ಹುಡುಗರನ್ನು ವಿಚಾರಿಸಿದರು. ಹುಡುಗರೇನೋ ಬರಲೊಪ್ಪಿದರು. ಆದರೆ ಅರ್ಧ ದಾರಿ ಮಾತ್ರ. ಮೇಲೆ ಬರಲು ನಮ್ಮಜ್ಜಿ ಬಿಡುವುದಿಲ್ಲ. ಸೂತಕ ಇದೆ ಎಂದರು. ಇನ್ನೊಬ್ಬ ಬಂದು ಮೇಲೆವರೆಗೆ ದಾರಿ ತೋರುತ್ತೇನೆಂದೊಪ್ಪಿದವನೇ ದಯಾನಂದ. ಈಗ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವನು. ಮಿತಭಾಷಿ. ನಮ್ಮ ತಂಡದ ಪರಸ್ಪರ ಪರಿಚಯ ವಿನಿಮಯ ಮಾಡಿಕೊಂಡು ಮುಂದುವರಿದೆವು. ಮುಂದೆ ದಯಾನಂದ, ಹಿಂದೆ ಇನ್ನಿಬ್ಬರು ಹುಡುಗರು ಮಧ್ಯೆ ನಾವು ಸಾಗಿದೆವು. ಅಲ್ಲೇ ಬಯಲಲ್ಲಿ ಒಂದಷ್ಟು ಯುವಕರು ಕ್ರಿಕೆಟ್ ಆಡುತ್ತಿದ್ದರು. ರಾಕ್ಲೈನ್ ವೆಂಕಟೇಶ್ ಅವರ ಇಬ್ಬರು ಮಕ್ಕಳು ಇದ್ದಾರೆ. ಅಲ್ಲಿ ಕಾಣುವ ತೋಟ ಅವರದೇ ಎಂಬ ಮಾಹಿತಿ ಭಿತ್ತರವಾಯಿತು! ಭೈರವೇಶ್ವರ ದೇವಾಲಯಕ್ಕೆ ಹೋಗಲು ಇರುವ ಮೆಟ್ಟಲಿನ ಎಡಭಾಗದಲ್ಲಿ ಬೆಟ್ಟಕ್ಕೆ ತೆರಳಲು ದಾರಿ. ಆದರೆ ಈ ಹುಡುಗರು ನಮ್ಮನ್ನು ಇನ್ನೊಂದು ದಾರಿಯಲ್ಲಿ ಕರೆದೊಯ್ದರು. ಮೊದಲಿಗೆ ಕುರುಚಲು ಸಸ್ಯ, ಪೊದೆಗಳ ಮಧ್ಯೆ ತೆರಳಿದೆವು. ಹುಲ್ಲು ಮನುಷ್ಯರಿಗಿಂತ ಎತ್ತರವಾಗಿ ಬೆಳೆದದ್ದು ನೋಡುವಾಗ ಈ ಬೆಟ್ಟಕ್ಕೆ ಯಾರೂ ಇತ್ತೀಚೆಗೆ ಕಾಲಿಟ್ಟಿಲ್ಲವೆಂದು ಭಾವಿಸಬಹುದು. ಅಲ್ಲಿ ದಾರಿ ಇದೆಯೆಂದೇ ಗೊತ್ತಾಗುತ್ತಿರಲಿಲ್ಲ. ಅಜ್ಜಿ ತಾತಂದಿರು ನಿಧಾನಕ್ಕೆ ಬನ್ನಿ ಎಂದು ಆ ಹುಡುಗರು ಆಗಾಗ ಎಚ್ಚರಿಸಿದ್ದರು!

ಮುಂದೆ ಏರುಮುಖವಾಗಿ ಬಂಡೆ ಹತ್ತಬೇಕು. ಬೃಹತ್ ಬಂಡೆ. ಮೆಟ್ಟಲು ಇಲ್ಲ. ಬಗ್ಗಿ ಎದ್ದು ಬಂಡೆ ಏರಿದೆವು. ಮುಂದೆ ಇದ್ದರವ ಬಳಿ ಒಂದು ವಾಕಿಟಾಕಿ, ಹಿಂದೆ ಇದ್ದವರ ಬಳಿ ಇನ್ನೊಂದು ವಾಕಿಟಾಕಿ. ಅದರಲ್ಲಿ ಮಾತಾಡುತ್ತ, ಎಷ್ಟು ಹಿಂದೆ ಇದ್ದೀರಿ ಎಂದು ವಿಚಾರಿಸುತ್ತ, ಹಿಂದಿನವರಿಗೆ ಅಲ್ಲೇ ಕೂತು ಕಾಯುತ್ತ, ಅವರ ತಲೆ ಕಂಡದ್ದೇ ಮುಂದುವರಿಯುತ್ತ ಸಾಗಿದೆವು. ಚಾರಣದ ತೃಪ್ತಿಯ ಅನುಭವ ಈ ಬಂಡೆ ಏರಿದಾಗ ಲಭಿಸಿತು. ಏರಲು ಭಯಪಡುವವರನ್ನು ಕೈಹಿಡಿದು ಹತ್ತಿಸುತ್ತ, ಮತ್ತು ಕೆಲವರಿಗೆ ದಯಾ ದಯೆ ತೋರಿ ಅವರನ್ನು ಮೇಲೆ ಕರೆತಾರಪ್ಪ ಎಂದು ದಯಾನಂದನಿಗೆ ವಿನಂತಿಸುತ್ತ ನಡೆದೆವು. 


 ೧೦.೫೦ಕ್ಕೆ ಹೊರಟು ಬೆಟ್ಟದ ತುದಿ ತಲಪಿದಾಗ ೧೨.೩೦ ಆಗಿತ್ತು. ಮೇಲೆ ಮೂರು ಬೃಹತ್ ಬಂಡೆಗಳು ಪಕ್ಕ ಪಕ್ಕ ನಿಂತಿವೆ. ಬೆಟ್ಟದಲ್ಲಿ ಎರಡು ಬಂಡೆಗಳ ನಡುವೆ ಮಳೆನೀರು ಸಂಗ್ರಹಕ್ಕೆ ಕೈಗೊಂಡ ಒಂದು ದೊಣೆಯೂ ಇದೆ. ಅದರಲ್ಲಿ ಈಗ ನೀರು ಇದೆ. ಅದಕ್ಕೆ ಇಳಿಯಲು ಮೆಟ್ಟಲುಗಳಿವೆ. ಬಂಡೆಗಳು ಕೂಡಿಕೊಳ್ಳಬಾರದೆಂದು ಮಧ್ಯೆ ದೊಡ್ಡ ಬಂಡೆಯನ್ನು ಅಡ್ಡಲಾಗಿ ಇರಿಸಿದ ಅದರ ಹಿಂದಿರುವ ಯೋಜನೆಯ ಜಾಣ್ಮೆ ಮೆಚ್ಚತಕ್ಕದ್ದು. ಕೆಲವರು ಕೆಳಗೆ ಇಳಿದು ನೀರು ಮುಖಕ್ಕೆ ಸೋಕಿಸಿಕೊಂಡರು.

 
 ಬೆಟ್ಟದ ಮೇಲೆ ಬಂಡೆಗಳ ನಡುವೆ ತಂಪಾದ ವಾತಾವರಣದಲ್ಲಿ ಕೂತು, ನಿಂತು ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ನೋಡಿದಾಗ ಇದುವೆ ಸ್ವರ್ಗ ಎಂಬ ಭಾವ ಮೂಡುತ್ತದೆ. ಕಷ್ಟಪಟ್ಟು ಬೆಟ್ಟ ಏರಿದ್ದರ ಫಲ ಈ ಸುಖ. ಬೆಟ್ಟದ ತುದಿಯಲ್ಲಿ ವೃತ್ತಾಕಾರದ ಬಂಡೆಯ ಮಧ್ಯೆ ಪುಟ್ಟ ಪಾದ, ಹದಾ ಪಾದ, ದೊಡ್ಡ ಪಾದ ಹೀಗೆ ಮೂರು ಪಾದಗಳ ಗುರುತು ಇದೆ. ಇದು ಏನು? ಎಂದು ದಯಾನಂದನನ್ನು ಕೇಳಿದೆ. ಇದು ಆಂಜನೇಯನ ಪಾದದ ಗುರುತು ಎಂದುತ್ತರ ಕೊಟ್ಟ.



ತಂದಿದ್ದ ಬುತ್ತಿ ತೆರೆದು ಊಟ ಮಾಡಿದೆವು. ೨.೩೦ ವರೆಗೂ ಅಲ್ಲೇ ಕುಳಿತು ಹರಟೆ ಹೊಡೆದೆವು. ಎತ್ತರದ ಬಂಡೆಯನ್ನು ಕೆಲವರು ಏರಿದರು. ಅಲ್ಲಿ ಭುವನೇಶ್ವರಿಯ ಚಿತ್ರವಿದೆ. ನವೆಂಬರ ಒಂದರಂದು ಆ ಬಂಡೆ ಏರಿ ಬಾವುಟ ಹಾರಿಸುತ್ತಾರೆಂದು ದಯಾನಂದ ಹೇಳಿದ. ನಾನೂ ಪ್ರಯತ್ನಪಟ್ಟೆ. ಧೈರ್ಯ ದಯೆ ತೋರದೆ, ಕಾಲು ಮೇಲೇರಲು ಸಹಕರಿಸಲಿಲ್ಲ! ಅಲ್ಲಿಯ ಬಂಡೆಗಲ್ಲುಗಳಲ್ಲಿ ಹೂ ಸಾಕಷ್ಟು ಇತ್ತು. ಅವುಗಳಲ್ಲಿ ಬಹಳ ಕ್ಯಾಲ್ಸಿಯಂ ಇರುತ್ತವಂತೆ. ಗ್ರಂದಿಗೆ ಅಂಗಡಿಯಲ್ಲಿ ಸಿಗುತ್ತವಂತೆ್. ಬಹಳ ಕ್ರಯವಿದೆ ಎಂಬ ಮಾಹಿತಿ ಸಿಕ್ಕಿತು. ಅಲ್ಲಿಯ ಬಂಡೆಗಳಲ್ಲಿ ಕೈತುರಿಕೆಯವರ ಕುರುಹು ಕಂಡೆವು.
 
ತಂಡದ ಪಟ ತೆಗೆಸಿಕೊಂಡು ನಿಧಾನವಾಗಿ ಬೆಟ್ಟ ಇಳಿಯಲು ತೊಡಗಿದೆವು.
ನಮ್ಮ ಮಾರ್ಗದರ್ಶಕ ದಯಾನಂದ ತುರ್ತು ಕೆಲಸವಿದೆ ಎಂದು ಹೋಗಿ ಆಗಿತ್ತು. ಅವನಿಗೆ ರೂ. ೫೦೦ ಭಕ್ಷೀಸು ಕೊಟ್ಟು ಕಳುಹಿಸಿದರು. ವಾಪಾಸು ಹೋಗಲು ದಾರಿ ಗೊತ್ತಾಗಬಹುದೆ? ಎಂಬ ಭಾವನೆ ಬಂತು. ನಮ್ಮ ತಂಡದ ತರುಣ ನಂದೀಶ ಮೊದಲಿಗೆ ಇಳಿದು ಸರಿಯಾದ ದಾರಿ ತೋರಿದ. ಬಂಡೆಗಲ್ಲನ್ನು ಇಳಿಯುವಾಗ ಕೂತು ಎರಡೂ ಕೈಗಳ ರೆಟ್ಟೆಗೆ ಬಲ ಕೊಟ್ಟು ಜಾರಿ ಇಳಿದೆವು. (ಆ ನೋವು ಒಂದು ದಿನ ಜೋರಾಗಿ ಬೆಟ್ಟದ ನೆನಪನ್ನು ಮಾಡಿಸಿತ್ತು!) ನಾವು ಒಂದಷ್ಟು ಮಂದಿ ಅಲ್ಲಲ್ಲಿ ನಿಲ್ಲುತ್ತ, ಸಂಜೆ ನಾಲ್ಕು ಗಂಟೆಗೆ ಕೆಳಗೆ ಇಳಿದೆವು. ೪.೩೦ಗೆ ಎಲ್ಲರೂ ಸುರಕ್ಷಿತವಾಗಿ ಕೆಳಗಿಳಿದರು.
  ಭೈರವೇಶ್ವರ ದೇಗುಲ 
 ಅಲ್ಲಿಂದ ನಾವು ಭೈರವೇಶ್ವರ ದೇವಾಲಯಕ್ಕೆ ಹೋದೆವು. ಸುಮಾರು ೧೫೦ ಮೆಟ್ಟಲು ಹತ್ತಬೇಕು. ಹೊಸದಾಗಿ ಕಟ್ಟಿದ ಸುಮಾರು ೫೦ ಮೆಟ್ಟಲಿನ ಅಂತರ ಬಹಳ ಕಡಿಮೆ ಇದೆ. ಬಂಡೆಯಲ್ಲಿ ಜೇನುಹುಳಗಳು ಹಾರಾಡುವುದು ಕಂಡಿತು. ನಮ್ಮ ತಲೆಯಿಂದ ಸಾಕಷ್ಟು ಎತ್ತರದಲ್ಲಿ ಹಾರಿದ್ದರಿಂದ ಭಯವೇನೂ ಇರಲಿಲ್ಲ. ಬಂಡೆಯಡಿಯಲ್ಲಿ ದೇವಾಲಯ ಕಾಣುತ್ತದೆ. ಬಂಡೆಯೇ ಶಿವಲಿಂಗಕ್ಕೆ ಛಾವಣಿ. ದೇವಾಲಯದ ಎದುರು ಭಾಗದಲ್ಲಿ ಕಟ್ಟಡ ಕಟ್ಟಿದ್ದಾರೆ. ಆದರೆ ಬಾಗಿಲು ಇಲ್ಲ. ಎಷ್ಟು ಹೊತ್ತಿಗೆ ಯಾರು ಬೇಕಾದರೂ ದೇವರ ದರ್ಶನ ಪಡೆಯುಬಹುದು! ನಾವು ಭೇಟಿ ಇತ್ತ ಸಮಯದಲ್ಲಿ ಬೆಳಗ್ಗೆ ದೇವರ ಪೂಜೆ ಮಾಡಿದ ಕುರುಹಾಗಿ ಸಾಕಷ್ಟು ಹೂವು ಹಾಕಿ ಅಲಂಕಾರ ಮಾಡಿದ್ದರು. ದೇವಾಲಯದೊಳಗೆ ಬೃಹತ್ ಕಾಣಿಕೆ ಡಬ್ಬಿ ಇದೆ. ಕಳ್ಳರ ಗಮನ ಅತ್ತ ಹೋಗಲಿಲ್ಲವೋ? ಅಥವಾ ಹುಂಡಿ ಎದುರು ಇರುವ ನಾಗನ ಚಿತ್ರದ ಹೆದರಿಕೆಯೊ ಗೊತ್ತಿಲ್ಲ.
ಅಲ್ಲಿ ತುಸು ಹೊತ್ತು ಕುಳಿತು, ಮೆಟ್ಟಲಿಳಿದು ಬಂದು ಸಂಜೆ ೬ ಗಂಟೆಗೆ ಬಸ್ ಹತ್ತಿದೆವು. ಆಗ ಶೋಭಕ್ಕ, ಅಯ್ಯೊ ನನ್ನ ಬಿದಿರಿನ ಕೋಲು ಅಲ್ಲೇ ಮೆಟ್ಟಲು ಬಳಿ ಬಾಕಿ. ಕೋಲು ಬೇಕೇ ಬೇಕು. ಚಾರಣದ ಸಂಗಾತಿ ಅದು. ಹೋಗಿ ತರುತ್ತೇನೆ ಎಂದು ಬಸ್ ಇಳಿದರು. ನಮ್ಮ ಬಸ್ ಇದ್ದ ಜಾಗದಿಂದ ಅಲ್ಲಿಗೆ ಸುಮಾರು ೧ಕಿಮೀ ಇರಬಹುದು. ಬೆಂಗಳೂರಿನಿಂದ ಕಾರಿನಲ್ಲಿ ಬಂದವರು, ಕಾರಿನಲ್ಲಿ ಅಲ್ಲಿಗೆ ಹೋಗಿ ಶೋಭಕ್ಕನ ದೊಣ್ಣೆ ತಂದು ಕೊಟ್ಟು ಉಪಕರಿಸಿದರು. ಶೋಭಕ್ಕ ನಿಧಿ ಸಿಕ್ಕಂತೆ ಅದನ್ನು ಜೋಪಾನವಾಗಿ ಇಟ್ಟುಕೊಂಡರು! ನೆಲಮಂಗಲ ರಸ್ತೆಯಲ್ಲಿ ಸಾಗಿದಾಗ, ಬೆಂಗಳೂರಿಗೆ ಹೋಗುವ ಸಾಲು ಸಾಲು ಕಾರುಗಳನ್ನು ನೋಡಿ ದಂಗಾದೆವು. ರಾತ್ರೆ ೭.೪೫ಕ್ಕೆ ಮದ್ದೂರಿನ ಶಿವಲೀಲಾ ಹೊಟೇಲಿನಲ್ಲಿ ಮಸಾಲೆದೋಸೆ ಕಾಫಿ ಸೇವನೆಯಾಗಿ ಮೈಸೂರು ತಲಪುವಾಗ ರಾತ್ರೆ ೯.೪೫ ಆಗಿತ್ತು. ಚಾರಣದಾಟ ಯಶಸ್ವಿಯಾಗಿ ಮುಗಿದಿತ್ತು. ಚಾರಣ ಶುಲ್ಕ: ರೂ. ೧೦೦೦/- ಬೆಳಗ್ಗೆ ಚಹಾ, ತಿಂಡಿಗೆ ಪೊಂಗಲ್ ಕೇಸರಿಭಾತ್, ಬೆಟ್ಟ ಹತ್ತಲು ಶಕ್ತಿವರ್ಧಕಕಳಾಗಿರುವ ಕಿತ್ತಳೆ, ಸೌತೆಕಾಯಿ, ಕಡ್ಲೆಚಿಕ್ಕಿ, ಮಧ್ಯಾಹ್ನ ಊಟಕ್ಕೆ ಬಿಸಿಬೇಳೆಭಾತ್, ಬೂಂದಿ, ಮೊಸರನ್ನ, ರಾತ್ರೆ ಮಸಾಲೆದೋಸೆ, ಕಾಫಿ. ಹೊಟ್ಟೆಯಂತೂ ಪುಷ್ಟಿ! ಹೋಗುವ ದಾರಿ: ಮೈಸೂರಿನಿಂದ ೧೩೫ಕಿಮೀ ದೂರ. ಮೈಸೂರು-ಮಂಡ್ಯ-ಮದ್ದೂರು- ಕುಣಿಗಲ್-ಅಂಚೆಪಾಳ್ಯ-ಪರ್ವತಪುರ(ಬಾಯ್ಸ್ ಹಾಸ್ಟೆಲ್) ಬೆಂಗಳೂರಿನಿಂದ ಸುಮಾರು ೬೨ಕಿಮೀ. ಬೆಂಅಗಳೂರು-ತುಮಕೂರು ರಸ್ತೆ- ನೆಲಮಂಗಲ ಬೈಪಾಸ್- ಮಂಗಳುರು ರಸ್ತೆ- ಸೋಲೂರು- ಮರೂರು ಹ್ಯಾಂಡ್ಪೋಸ್ಟ್-ಕುದೂರು ಯೂಥ್ ಹಾಸ್ಟೆಲ್ ಮೈಸೂರಿನ ಗಂಗೋತ್ರಿ ಘಟಕದ ವತಿಯಿಂದ ಸುಬ್ರಹ್ಮಣ್ಯ ಈ ಚಾರಣ ಹಮ್ಮಿಕೊಂಡು ಯಶಸ್ವಿಯಾಗಿ ಪೂರೈಸಿದರು. ಅವರಿಗೆ ಮುನೀಶ್ ಸಹಕಾರ ಕೊಟ್ಟರು. ನಮ್ಮ ತಂಡದ ಪರವಾಗಿ ಅವರಿಗೆ ಧನ್ಯವಾದ.

ಸೋಮವಾರ, ಅಕ್ಟೋಬರ್ 19, 2020

ವರ್ತುಲ ರಸ್ತೆಯಲ್ಲಿ ಸೈಕಲ್ ಸವಾರಿ

 ಮೈಸೂರಿನ ವರ್ತುಲ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಬೇಕೆಂಬುದು ಬಹಳ ದಿನಗಳಿಂದ ನನ್ನ ಮನದಲ್ಲಿತ್ತು. ಅದು ೧೮.೧೦.೨೦೨೦ ರಂದು ಈಡೇ ರಿತು. ಮೈಸೂರು ವರ್ತುಲ ರಸ್ತೆ ೨೦೧೨ರಲ್ಲಿ ಪ್ರವೇಶಕ್ಕೆ ಮುಕ್ತಗೊಂಡಿತು. ೪೨.೫ ಕಿಲೋಮೀಟರ್ ಉದ್ದವಿರುವ ಈ ರಸ್ತೆ ಆರು ಪಥಗಳನ್ನೊಳಗೊಂಡಿದೆ. ಒಟ್ಟು ನಾಲ್ಕು ರೈಲ್ವೇ ಸೇತುವೆ, ಒಂದು ವಾಹನ ಮೇಲು ಸೇತುವೆಗಳಿವೆ. ಎಕರೆಗಟ್ಟಲೆ ಭೂಮಿ ಇದಕ್ಕೆ ಬಳಕೆಯಾಗಿದೆ. ನಗರದೊಳಗಿನ ವಾಹನ ದಟ್ಟಣೆ ಇದರಿಂದ ಬಹುತೇಕ ಕಡಿಮೆಗೊಳ್ಳಲು ಕಾರಣವಾಗಿದೆ. ಬೆಳಗ್ಗೆ ೬.೧೫ಕ್ಕೆ ಮನೆಯಿಂದ ಹೊರಟು ೨.೫ ಕಿಮೀ ದೂರದಲ್ಲಿರುವ ನಿವೇದಿತಾ ಉದ್ಯಾನವನದ ಬಳಿಗೆ ಹೋದೆ. ಅಲ್ಲಿ ಎಲ್ಲರೂ ಬಂದು ಸೇರಿ ಪರಸ್ಪರ ಪರಿಚಯ ವಿನಿಮಯ ಮಾಡಿಕೊಂಡು ಪಟ ತೆಗೆಸಿಕೊಂಡು ೭ ಗಂಟೆಗೆ ಹೊರಟೆವು.


ಸೋಮವಾರ, ಜುಲೈ 20, 2020

ಲಕ್ಷ್ಮೀ ಸ್ವಪ್ನಲಹರಿ (ಕನಸು ಮೇಲೋಗರ)


ನಮ್ಮ ಅತ್ತೆಗೆ ಕನಸು ಬೀಳುವುದು ಜಾಸ್ತಿ. ಅವರಿಗೆ ಬಿದ್ದ ಕನಸಿನ ಬಗ್ಗೆ ನಾನು ದಿನಾ ಬೆಳಗ್ಗೆ ತಿಂಡಿ ತಿನ್ನುವಾಗ ಇಲ್ಲವೇ ಮಧ್ಯಾಹ್ನ ಊಟ ಮಾಡುವಾಗ ಅಥವಾ ಪತ್ರಿಕೆ ಓದುವಾಗಲೋ ಕೇಳುತ್ತಿದ್ದೆ. ಅವರ ಕನಸು ಕೇಳುವುದು, ಅವರು ಅತಿ ಉತ್ಸಾಹದಿಂದ ಅದನ್ನು ಸ್ವಾರಸ್ಯವಾಗಿ ಹೇಳುವುದು ನನಗೆ ಬಹಳ ಇಷ್ಟದ ಕಾರ್ಯ.  ಒಮ್ಮೊಮ್ಮೆ ಉತ್ಸಾಹದಿಂದ ಬಿದ್ದ ಕನಸನ್ನು ಹೇಳುತ್ತಿದ್ದರು. ಕೆಲವೊಮ್ಮೆ, ಎಲ್ಲ ಅರ್ಧಂಬರ್ಧ ಕನಸು, ಇಲ್ಲವೇ ಕೆಟ್ಟ ಕನಸು, ಹೇಳುವಂತದ್ದಲ್ಲ ಎನ್ನುತ್ತಿದ್ದರು..  ಲೆಕ್ಕವಿಲ್ಲದಷ್ಟು ಕನಸು ಅವರಿಗೆ ಬಿದ್ದಿತ್ತು. ಅವುಗಳಲ್ಲಿ ಎಷ್ಟೋ ಕನಸನ್ನು ಹೇಳಿದ್ದರು. ಕನಸು ಬಹಳ ಸ್ವಾರಸ್ಯವಾಗಿರುತ್ತಿದ್ದುವು. ಅವನ್ನೆಲ್ಲ ದಾಖಲಿಸಿದ್ದರೆ ಪುಟಗಟ್ಟಲೆ ಆಗಿರುತ್ತಿತ್ತು. ಇಷ್ಟು ಕನಸುಗಳನ್ನು ನಾನು ಒಂದು ಡೈರಿಯಲ್ಲಿ ಬರೆದಿಟ್ಟಿದ್ದೆ . ಇತ್ತೀಚೆಗೆ ಆ ಡೈರಿ ತೆರೆದಾಗ ಕನಸು ಮೇಲೋಗರ ಓದಿದೆ. ಓದಿ ಖುಷಿಯಾಗಿ ಅದನ್ನು ಇಲ್ಲಿ ಹಾಕಿದೆ.

೧) ಡೆಂಗ್ಯೂ ಜ್ವರ ಹರಡಲು ಕಾರಣರಾರು?

 ಈ ಡೆಂಗ್ಯೂ ಭಾರತದಲ್ಲಿ ಹೇಗೆ ಹರಡುತ್ತದೆ ಎಂದು ನನಗೆ ಗೊತ್ತಾಯಿತು.

 ಹೌದಾ? ಹೇಗೆ ಹರಡುತ್ತದೆ ಇದು ಎಂದು ಕುತೂಹಲದಿಂದ ಕೇಳಿದೆ.

  ವೈರಾಣು ಹರಡಲು ಕಾರಣಕರ್ತರು ಪರದೇಶದವರು. ಪರದೇಶದವರು ಔಷಧಿ ಎಲ್ಲ ಕಂಡು ಹಿಡಿಯುತ್ತಾರಲ್ಲ. ಡೆಂಗ್ಯೂಗೆ ಕಾರಣವಾಗುವ ವೈರಸ್ಸನ್ನು ಭಾರತಕ್ಕೆ ಬರುವವರಲ್ಲಿ ಹೇಗೋ ಕಳುಹಿಸುತ್ತಾರೆ. ಮತ್ತೆ ಅವರು ಕಂಡು ಹಿಡಿದ ಔಷಧಿ ವ್ಯಾಪಾರವಾಗಲು ಕಂಡುಕೊಂಡ ದಾರಿ ಇದು. ಇಲ್ಲಾಂದರೆ ಮೊದಲೆಲ್ಲ ಈ ಡೆಂಗ್ಯೂ ಚಿಕನ್ ಗುನ್ಯ ಇತ್ಯಾದಿ ಏನೇನೋ ಹೆಸರಿನ ಜ್ವರ ಇರಲೇ ಇಲ್ಲ. ೧೪.೯ ೨೦೧೫ರಂದು ಬೆಳಗ್ಗೆ ನಮ್ಮತ್ತೆ ಹೇಳಿದರು.

 ಈ ಕನಸು ಓದಿದಾಗ ನನಗೆ ಪರಮಾಶ್ಚರ್ಯವಾಯಿತು. ಈಗ ಚೀನದಿಂದ ಬಳುವಳಿಯಾಗಿ ಬಂದ ಕೊರೊನಾ ವೈರಾಣು  ಹೀಗೆಯೇ ನುಸುಳಿದ್ದು ತಾನೆ!

೨) ಅಡೆತಡೆ

ಮೇಲೆ ಮೇಲೆ ಹೋಗುತ್ತಿದ್ದೆ. ಆಗ ಏನೋ ತಡೆ ಎದುರಾಯಿತು.

ಮೇಲಾ? ಹೇಗೆ ಎಲ್ಲಿಗೆ ಹೋಗುತ್ತಿದ್ದಿರಿ? ತಡೆ ಏನು?

ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೆ. ಆಗ ಕೆಳಗಿನಿಂದ ಬಾಂಬ್ ಹಾಕಿದರು. ಹೊಗೆ ಮೇಲೇರಿ ಬಂತು. ನಾನು ಇಳಿಯಲು ಪ್ರಯತ್ನಿಸುತ್ತೇನೆ. ಆಗುತ್ತಿಲ್ಲ. ಕೂಗಲೂ ಆಗುತ್ತಿಲ್ಲ.

ಹೌದಾ? ಮುಂದೆ ಏನಾಯಿತು?

ಎಚ್ಚರ ಆಗೋಯಿತು. ಇಳಿಯಲು ಪ್ರಯತ್ನಿಸುವ ಭರದಲ್ಲಿ ಮಂಚದಿಂದ ಬೀಳದೆ ಇದ್ದದ್ದು ಪುಣ್ಯ!

೧೪.೫.೨೦೧೫ರಂದು ಬೆಳಗ್ಗೆ ನಮ್ಮತ್ತೆ ಹೇಳಿದರು.

 

೩) ಬಂದಿಳಿದ ಮೊಮ್ಮಗಳು

ಬೆಳಗ್ಗೆ ೪.೩೦ಕ್ಕೆ ಮನೆಯ ಕರೆಗಂಟೆ ಸದ್ದಾಯಿತು. ಓಹೋ ಯಾರು ಬಂದದ್ದು? ನಮಗೆ ಕೇಳಲೇ ಇಲ್ಲ.

ಎದ್ದು ಹೋಗಿ ಬಾಗಿಲು ತೆರೆದರೆ ಮೊಮ್ಮಗಳು ಅಕ್ಷರಿ ಹಲ್ಲು ಕಿರಿಯುತ್ತ ನಿಂತದ್ದು ಕಾಣಿಸಿತು. ಪರಮಾಶ್ಚರ್ಯವಾಗಿ ನೀನು ಹೇಗೆ ಬಂದೆ? ಎಂದು ಕೇಳಿದೆ. ಯಾರಿಗೂ ಹೇಳದೆ ಸರ್ಪ್ರೈಸ್ ಮಾಡಬೇಕೆಂದು ಅವಳು ಅಮೇರಿಕಾದಿಂದ ಬಂದದ್ದಂತೆ. ಒಳ ಬಂದವಳೇ ಅಜ್ಜಿ, ನಾನು ನಿನ್ನ ಕೋಣೆಯಲ್ಲೇ ನಿನ್ನ ಪಕ್ಕವೇ ಮಲಗುತ್ತೇನೆ. ಸುಸ್ತಾಗಿದೆ ಎಂದು ಮಲಗಿದಳು.

ಬೆಳಗ್ಗೆದ್ದು ನೋಡುತ್ತೇನೆ. ಮೊಮ್ಮಗಳು ನನ್ನ ಬಳಿ ಮಲಗಿದ್ದು ಕಾಣಲೇ ಇಲ್ಲ!

ಇಸವಿ ೨೦೧೫. ತಾರೀಕು ನಮೂದಿಸಿರಲಿಲ್ಲ.

 

೪) ಅಮ್ಮನ ಕರೆ

ಒಂದೇ ಸಮನೆ ನನ್ನನ್ನು ಕರೆದದ್ದು ಕೇಳಿತು. ಹೋಗಿ ಬಾಗಿಲು ತೆರೆದರೆ ಏನಾಶ್ಚರ್ಯ! ಬಾಗಿಲ ಬಳಿ ನನ್ನಮ್ಮ ನಿಂತಿದ್ದಳು. ಬಾಗಿಲು ತೆರೆದೆ. ಒಳಗೆ ಬಾ ಎಂದು ಕರೆದರೆ, ನಾನು ಬರವುದಿಲ್ಲ, ನೀನೇ ಬಾ ಎಂದು ಕರೆದಳು. ಎಷ್ಟು ಒತ್ತಾಯಿಸಿದರೂ ಒಳಗೆ ಬರಲೇ ಇಲ್ಲ. ಬಾ ನೀನು ಎಂದು ಒತ್ತಾಯದಿಂದ ಅವಳ ಕೈ ಹಿಡಿಯಲು ಹೋದೆ. ಆಗ ಎಚ್ಚರವಾಗಿ ಹೋಯಿತು! ಇದು ೧೨.೧.೨೦೧೬ರಂದು ಬೆಳಗ್ಗೆ ಎದ್ದು ನಮ್ಮತ್ತೆ ಹೇಳಿದ ಸ್ವಪ್ನಲಹರಿ 

೫) ಅಡುಗೆ ತಯಾರಿ

ನಿನ್ನ ರಾತ್ರೆ ಸರಿಯಾಗಿ ನಿದ್ದೆಯೇ ಬರಲಿಲ್ಲ. ನೆಂಟರು ಬರುತ್ತಾರೆ, ಅಡುಗೆಯಾಗಬೇಕಲ್ಲ ಎಂದು ಬೆಳಗ್ಗೆ ಬೇಗ ಎದ್ದು ಎರಡೆರಡು ಬಗೆಯ ತರಕಾರಿ ಹೆಚ್ಚಿ ಬೇಯಿಸಿಟ್ಟೆ. ತೆಂಗಿನ ಕಾಯಿ ಹೆರೆದು ರುಬ್ಬುವ ಕಲ್ಲಲ್ಲಿ ಬೀಸಿಟ್ಟೆ. ಒಂದು ಒಲೆಯಲ್ಲಿ ಸಾಂಬಾರು, ಇನ್ನೊಂದು ಒಲೆಯಲ್ಲಿ ಮಜ್ಜಿಗೆಹುಳಿ ಕುದಿಯಲಿಟ್ಟೆ. ಎಷ್ಟು ಹೊತ್ತಾದರೂ ಮಜ್ಜಿಗೆ ಹುಳಿ ಕುದಿಯುತ್ತಿಲ್ಲವೇಕೆ? ಏನಾಯಿತು? ಗ್ಯಾಸ್ ಮುಗಿಯಿತೆ? ಎಂದು ಚಿಂತಿಸುತ್ತಿರಬೇಕಾದರೆ ಗಡಿಯಾರ ಟಣ್ ಎಂದು ಬಾರಿಸಿದ ಸದ್ದಿಗೆ ಎಚ್ಚರವಾಯಿತು.

 ೧೬.೧೨.೨೦೧೫ರಂದು ಬೆಳಗ್ಗೆ ೮೬ರ ಹರೆಯದ ನಮ್ಮತ್ತೆ ಹೇಳಿದ ಅವರಿಗೆ ಬಿದ್ದ ಕನಸು ಇದು! 

೬) ಸುಸ್ತು

ಅಬ್ಬ ಸಾಕೋ ಸಾಕಾಯಿತು. ನಡೆದೂ ನಡೆದೂ ಸುಸ್ತಾಯಿತು. ಎಷ್ಟು ನಡೆಸಿದರು ಬೀದಿ ಬೀದಿಯಲ್ಲಿ. ಅಲ್ಲಿ ಹೋಗೋಣ, ಇಲ್ಲಿ ಹೋಗೋಣ ಎಂದು. ಕಾಲು ನೋವು ಎಂದರೂ ಕೇಳಲಿಲ್ಲ. ಇನ್ನು ನಡೆಯಲು ಸಾಧ್ಯವಿಲ್ಲವೆಂದು ಒಂದೆಡೆ ಕುಳಿತೇ ಬಿಟ್ಟೆ. ಇನ್ನು ಎಷ್ಟು ಹೊತ್ತು ಇಲ್ಲೇ ಕುಳಿತಿರುವುದು ಎಂದು ಏಳಲು ಹೋದೆ. ಆಗ ಸೊಳ್ಳೆಪರದೆ ಅಡ್ಡ ಬಂದು ಪೂರ್ಣ ಎಚ್ಚರವಾಯಿತು! ಇದು ೧೬-೧೨-೨೦೧೫ರಂದು ದಾಖಲಿಸಿರುವುದು.

೭) ಅರೆಸ್ಟ್

ಪೊಲೀಸರು ನನ್ನ ಮೊಮ್ಮಗನನ್ನು ಅರೆಸ್ಟ್ ಮಾಡಿದರು. ಅವನಲ್ಲಿ ತುಂಬ ಹಣವಿದೆ ಎಂದು ಆಪಾದಿಸಿ ಅರೆಸ್ಟ್ ಮಾಡಿದರು. ಆ ವಿಷಯ ನನಗೆ ಗೊತ್ತಾಯಿತು. ನಾನು ಹೋಗಿ ಹೇಳಿದೆ. ಅವನು ಇಂಥವರ ಮೊಮ್ಮಗ, ಸುಮ್ಮನೆ ಅವನನ್ನು ಬಂಧಿಸಬೇಡಿ.

ಓ ನಮಗೆ ಗೊತ್ತಾಗಲಿಲ್ಲ. ನೀನು ಇಂಥವರ ಮೊಮ್ಮಗನೋ? ನಮ್ಮಿಂದ ತಪ್ಪಾಯಿತು. ಎಂದು ನುಡಿದು ಅವನನ್ನು ಬಿಡುಗಡೆ ಮಾಡಿದರು. ಅವನಲ್ಲಿದ್ದ ಹಣವನ್ನು ಬ್ಯಾಂಕಿಗೆ ಕಟ್ಟಿದ. ಅಬ್ಬ ಬಿಡುಗಡೆಯಾಯಿತಲ್ಲ ಎಂದು ನೆಮ್ಮದಿಯಿಂದ ಮನೆಗೆ ಹೊರಡಲು ತಿರುಗಿದಾಗ ಗೋಡೆ ಬಡಿದು ಎಚ್ಚರವಾಯಿತು!

ಈ ಕನಸನ್ನು ದಾಖಲಿಸಿರುವುದು ೧೬.೧೨.೨೦೧೫


 (ಸುರಹೊನ್ನೆ ೨೦೨೦ ಜುಲಾಯಿ)

http://surahonne.com/?p=28343


 

ಗುರುವಾರ, ಜುಲೈ 9, 2020

ಈ ಜಗದಲಿ ಜಡ ವಸ್ತುಗಳಿಗೆ ಮರುಳಾಗದವರುಂಟೇ!?


‘ಕಂಡದ್ದೆಲ್ಲ ಬೇಕು ಕುಂಡಿಭಟ್ಟನಿಗೆ’ ಎಂಬುದು ನಮ್ಮೂರಲ್ಲಿ ಪ್ರಚಲಿತದಲ್ಲಿರುವ ಗಾದೆ. ಈ ಗಾದೆ ಒಮ್ಮೊಮ್ಮೆ ನನಗೂ ಅನ್ವಯಿಸುವುದೂ ಇದೆ. ನಮ್ಮ ಮೈಸೂರಿನಲ್ಲಿ ವಸ್ತುಪ್ರದರ್ಶನಗಳಿಗೆ ಬರವಿಲ್ಲ. ಸಹರ, ಗೃಹಶೋಭೆ, ದಸರ ಸಮಯದಲ್ಲಿ ವಸ್ತುಪ್ರದರ್ಶನ ಎಂದು ಸರಿ ಸುಮಾರು ವರ್ಷವಿಡೀ ಏನಾದರೊಂದು ಇದ್ದೇ ಇರುತ್ತದೆ. ಹೀಗೆ ಪ್ರದರ್ಶನ ಏರ್ಪಡಿಸಿದ ಮೇಲೆ ನಾವು ಹೋಗದಿದ್ದರೆ ಅದು ನ್ಯಾಯವೇ? ಜನರು ಬಂದು ವಸ್ತುಗಳನ್ನು ನೋಡಿ ಕೊಳ್ಳಲಿ ಎಂದೇ ತಾನೆ ಅವರು ಪ್ರದರ್ಶನ ಏರ್ಪಡಿಸುವುದು? ಸಹರ ವಸ್ತು ಪ್ರದರ್ಶನ ಪ್ರತೀವರ್ಷ ಮೈಸೂರಿನ ಸ್ಕೌಟ್ ಮತ್ತು ಗೈಡ್ ಮೈದಾನದಲ್ಲಿ ಮೂರು ವಾರಗಳಿಗೂ ಹೆಚ್ಚು ದಿನ ಇರುತ್ತದೆ. ಪ್ರತಿ ವರ್ಷವೂ ನನಗೂ ಮಗಳಿಗೂ ಒಂದೆರಡು ಸಲವಾದರೂ  ಅಲ್ಲಿ ತಿರುಗಿ ಬರುವುದೆಂದರೆ ಅದೇನೋ ಸಂಭ್ರಮ. ಅವಳು ಇಡೀ ಸುತ್ತಿ ಬಳೆ, ಕ್ಲಿಪ್, ಚಪ್ಪಲಿ ಅಂಗಡಿ ಎದುರು ಸುಮಾರು ಕಾಲುಗಂಟೆಯಾದರೂ ನಿಂತು ನೋಡಿ ಒಂದೆರಡು ಕ್ಲಿಪ್, ಬಳೆ, ಚಪ್ಪಲಿ ಖರೀದಿಸಿದಮೇಲೆಯೇ ಅಲ್ಲಿಂದ ಕದಲುತ್ತಿದ್ದುದು ಸಾಮಾನ್ಯವಾಗಿತ್ತು! ಚಪ್ಪಲಿ ಬಗ್ಗೆ ಒಲವು ಜಾಸ್ತಿ ಅವಳಿಗೆ. ಪ್ರತೀವರ್ಷ ಒಂದೆರಡು ಜೊತೆ ಚಪ್ಪಲಿ ಖರೀದಿಸಿದರೇ ಅವಳಿಗೆ ಸಮಾಧಾನ. ಅವಳ ಪಾದದ ಅಳತೆಯೂ ನನ್ನ ಪಾದದ ಅಳತೆಯೂ ಸಮವಾಗಿರುವ ಕಾರಣ ನನಗೆ ಕಳೆದ ಹತ್ತು ವರ್ಷಗಳಿಂದ ಚಪ್ಪಲಿ ಕೊಳ್ಳುವ ಪ್ರಮೇಯ ಬರಲಿಲ್ಲ. ಅವಳು ವರ್ಷಕ್ಕೆ ಎರಡು ಮೂರು ಜೊತೆ ಕೊಳ್ಳುತ್ತಾಳೆ. ಅವನ್ನು ಆರು ತಿಂಗಳು ಹಾಕಿದರೆ ಹೆಚ್ಚು. ಮತ್ತೆ ಆ ಚಪ್ಪಲಿಗಳು ನನ್ನ ಪಾದಸೇವೆಗೆ ಮುಡಿಪು! ಹಾಗಾಗಿ ನನಗೆ ಈಗ ವಾಯುಸೇವನೆಗೆ ತೆರಳಲು, ಮದುವೆಗಳಿಗೆ ಹೋಗುವಾಗ ಹಾಕಲು, ಅಂಗಳದಲ್ಲಿ ಸುತ್ತಲು, ಹೀಗೆ ತರಹೇವಾರಿ ಚಪ್ಪಲಿಗಳಿವೆ! ಮಗಳು ಕಾಲೇಜಿನ ಮೆಟ್ಟಲು ಹತ್ತಿದಮೇಲೆ (ನಾನು ಅದು ತೆಗೆಯಬೇಡ ಇದು ತೆಗೆಯಬೇಡ ಎಂದು ಕಡಿವಾಣ ಹಾಕುತ್ತೇನೆಂದು) ವಸ್ತು ಪ್ರದರ್ಶನಗಳಿಗೆ ಅವಳ ಗೆಳತಿಯರೊಡನೆ ಹೋಗಲು ಪ್ರಾರಂಭಿಸಿದ್ದಳು. ಗೆಳತಿಯರೊಡನೆ ಹೋದರೂ ನನ್ನೊಡನೆಯೂ ಒಮ್ಮೆ ಸುತ್ತಲು ಖುಷಿಯಿಂದಲೇ ಬರುತ್ತಾಳೆ. 
   ವಸ್ತು ಪ್ರದರ್ಶನಗಳಲ್ಲಿ ಈರುಳ್ಳಿ ಕತ್ತರಿಸುವ ಯಂತ್ರ ಪರಿಕರಗಳನ್ನು ನೋಡಿ ಅವರು ಚಕಚಕ ಕತ್ತರಿಸುವ ಪರಿಗೆ ಮಾರು ಹೋಗಿ ನಾನು ನಾಲ್ಕಾರು ಯಂತ್ರ ಕೊಂಡದ್ದಿದೆ. ಆದರೆ ಮನೆಗೆ ಬಂದು ನಾನು ಕತ್ತರಿಸಲು ನೋಡಿದರೆ ನನಗೆ ಅಷ್ಟು ಸುಲಭವಾಗಿ ಆಗದೆ ಇದರಿಂದ ಚೂರಿಯಲ್ಲಿ ಹೆಚ್ಚುವುದೇ ಸುಲಭವೆಂದು ಅವೆಲ್ಲ ಈಗ ಅಟ್ಟ ಸೇರಿವೆ. ಈಗ ಈರುಳ್ಳಿ ಕತ್ತರಿಸುವ ನಾನಾ ವಿಧಗಳ ಯಂತ್ರಗಳು ವಸ್ತು ಪ್ರದರ್ಶನಗಳಲ್ಲಿ ಕಂಡರೂ ಅವರು ಸಲೀಸಾಗಿ ಹೆಚ್ಚುವ ಪರಿಗೆ ಮಾರು ಹೋಗಿ, ಒಂದು ಕ್ಷಣ ನೋಡುತ್ತ ನಿಂತು ಅವನ್ನು ಕೊಳ್ಳದೆಯೇ ಇರಲು ಗಟ್ಟಿ ಮನಸ್ಸು ಮಾಡಿ ಹಿಂತಿರುಗುವುದರಲ್ಲಿ ಯಶ ಸಾಧಿಸಿದ್ದೇನೆ! ಕಳೆದ ವರ್ಷ ನನ್ನ ಅತ್ತಿಗೆ ತರಕಾರಿ, ಈರುಳ್ಳಿ ಕತ್ತರಿಸುವ ಪುಟ್ಟ ಯಂತ್ರವೊಂದನ್ನು ಉಡುಗೊರೆ ನೀಡಿದ್ದಾಳೆ. ಅದು ಬಹಳ ಚೆನ್ನಾಗಿ ತರಕಾರಿ, ಈರುಳ್ಳಿ, ಇತ್ಯಾದಿಗಳನ್ನು ಕತ್ತರಿಸಿ ಕೊಟ್ಟು ನನ್ನ ಶ್ರಮ ಹಗುರಗೊಳಿಸಿದೆ. ಹಾಗಾಗಿ ಈಗ ಈರುಳ್ಳಿ ಹೆಚ್ಚಲು ಕಣ್ಣೀರು ಸುರಿಸುವ ಪ್ರಸಂಗದಿಂದ ವಿಮುಕ್ತಿ ದೊರೆತಿದೆ. 
  ಕಳೆದ ವರ್ಷ ಸುತ್ತೂರು ಜಾತ್ರೆಗೆ ಹೋಗಿದ್ದಾಗ ಮರದಲ್ಲಿ ತಯಾರಿಸಿದ ಪುಟ್ಟದಾದ ಒತ್ತು ಶ್ಯಾವಿಗೆ ಮಣೆ ಸಂತೆಯಲ್ಲಿ ಕಂಡದ್ದೇ ಪ್ರೀತಿ ಉಕ್ಕಿ ಹರಿದು ಅದು ನಮ್ಮ ಮನೆಯಲ್ಲಿ ಇರದಿದ್ದರೆ ಹೇಗೆ ಎಂದು ಅದನ್ನು  ರೂ. ೧೫೦ಕ್ಕೆ (ಹೆಚ್ಚು ಚೌಕಾಸಿ ಮಾಡದೆಯೇ) ಕೊಂಡುಕೊಂಡೆ. ಎಲ್ಲಾದರೂ ಶ್ಯಾವಿಗೆ ಮಾಡಲಾಗದಿದ್ದರೂ ಪರವಾಗಿಲ್ಲ. ಅಲಂಕಾರಕ್ಕಾದರು ಇರಲಿ ಎಂದು ಅದರ ಅಂದಚಂದ ನೋಡಿ ಮರುಳಾಗಿ ಕೊಳ್ಳದೆ ಇರಲು ಸಾಧ್ಯವಾಗಲಿಲ್ಲ!  ತಂದಮೇಲೆ ಅದರಲ್ಲಿ ಶ್ಯಾವಿಗೆ ಪ್ರಯೋಗ ಮಾಡದಿದ್ದರೆ ಹೇಗೆ? ಒಂದು ಬೆಳಗ್ಗೆ ಪ್ರಯೋಗಿಸಿದ್ದಾಯಿತು. ಪರವಾಗಿಲ್ಲ ಒತ್ತಲು ಸುಲಭವಾಗುತ್ತದೆ ಎಂದು ತಿಳಿಯಿತು. ಅದರ ಚಿತ್ರವನ್ನು ಫೇಸ್ಬುಕ್ಕಿಗೆ ಹಾಕಿದ್ದಾಯಿತು. ದೂರದ ಊರಲ್ಲಿರುವ ಮಗಳು ಅದನ್ನು ನೋಡಿ ನನಗೂ ಬೇಕು ಎಂಬ ಬೇಡಿಕೆ ಇಟ್ಟಳು. ಸಂತೆಯಲ್ಲಿ ಖರ್ಚಾಗಿ ಹೋಗಿ ಮಗಳಿಗೆ ಸಿಕ್ಕದಿದ್ದರೆ ಎಂದು ಮಾರನೇದಿನವೇ ಪುನಃ ಸುತ್ತೂರಿಗೆ ದೌಡಾಯಿಸಿ ಹೋಗಿ ಇನ್ನೊಂದು ಶ್ಯಾವಿಗೆಮಣೆ ತಂದೆ! ನಮ್ಮ ನೆಂಟರು ಫೇಸ್ಬುಕ್ ಗೋಡೆ ಮೇಲೆ ನೋಡಿ ಅವರಿಗೂ ಬೇಕು ಎಂದು ಬೇಡಿಕೆ ಇಟ್ಟರು. ಅನಂತ ಮತ್ತು ಅಣ್ಣನ ಮಗ ಅಕ್ಷಯ ಹಾಗೂ ಅವರ ಸ್ನೇಹಿತ ಈಶ್ವರ ಮಾರನೆದಿನ ಸುತ್ತೂರಿಗೆ ಹೋಗುವವರಿದ್ದರು. ಮೂವರನ್ನೂ ಕೂರಿಸಿ ಶ್ಯಾವಿಗೆ ಮಣೆ ತೋರಿಸಿ ಹೀಗೀಗೆ ಇರಬೇಕು ಮಣೆ. ಒಳಗೆ ಕೈ ಹಾಕಿ ನೋಡಬೇಕು. ನಯವಾಗಿ ಇರಬೇಕು ಎಂದೆಲ್ಲ ಪಾಟ ಮಾಡಿ ಎರಡು ಮಣೆ ತನ್ನಿ ಎಂದು ಕಳುಹಿಸಿದೆ. (ಇನ್ಯಾರಾದರೂ ನೋಡಿ ನಮಗೂ ಬೇಕು ಅಂದರೆ ಇರಲಿ ಎಂದು ಒಂದು ಹೆಚ್ಚೇ ತರಲು ಹೇಳಿದ್ದೆ!) ನನ್ನ ಪಾಟ ಕೇಳಿದ ಅವರು ಎರಡು ಶ್ಯಾವಿಗೆ ಮಣೆಯನ್ನೇನೋ ತಂದರು. ಆದರೆ ನಾನು ಮಾಡಿದ ಪಾಟ ಸಮುದ್ರದಲ್ಲಿ ಮಾಡಿದ ಹೋಮದಂತಾಗಿದ್ದು ಮಾತ್ರ ವಿಪರ್ಯಾಸ! ಪಾಟ ಒಂದು ಚೂರೂ ಪ್ರಯೋಜನಕ್ಕೆ ಬರದೆ, ಪರಿಣಾಮಕಾರಿಯಾಗಿ ಪಾಟ ಮಾಡಲು ನಾನು ಶಕ್ತಳಾಗಲಿಲ್ಲವಲ್ಲ ಎಂದು ತಿಳಿದು ನನ್ನಮೇಲೆಯೇ ಸಿಟ್ಟು ಬಂತು! ಅವರು ತಂದ ಶ್ಯಾವಿಗೆ ಮಣೆ ಒಂದರಲ್ಲಿ ಮರ ಕಳಪೆಯಾಗಿ ಬಣ್ಣ ಬಿಡುತ್ತಿತ್ತು! ಇನ್ನೊಂದರದ್ದು ಕೈ ಸೀಳುಬಿಟ್ಟಿತ್ತು, ಹಿಟ್ಟು ಹಾಕುವಲ್ಲಿ ಒಳಗೆ ಟೊಳ್ಳಾಗಿ ಪೊಟರೆ ಇತ್ತು! ಅದರೊಳಗೆ ಹಿಟ್ಟು ಹಾಕಿದರೆ ಕೆಳಗೆ ಶ್ಯಾವಿಗೆ ಇಳಿಯಲಿಕ್ಕಿಲ್ಲ. ಹಿಟ್ಟೆಲ್ಲ ಪೊಟರೆಯೊಳಗೆ ಹೋಗಿ ನಿಂತೀತು! ಈಶ್ವರ ಅವರು ನೋಡಿ ಕೂಲಂಕಷವಾಗಿ ಪರೀಕ್ಷೆ ಮಾಡಿಯೇ ತಂದದ್ದಂತೆ ಎಂದು ಅಕ್ಷಯ ಹೇಳಿದ. ಯಾವುದೇ ಒಂದು ವಸ್ತು ಖರೀದಿ ಮಾಡಿ ವ್ಯಾಪಾರ ಮಾಡುವಲ್ಲಿ ಸಾಮಾನ್ಯವಾಗಿ ಹೆಂಗಸರಿಗೆ ಇರುವ ಜಾಣ್ಮೆ ಗಂಡಸರಿಗೆಲ್ಲಿ ಬರಬೇಕು ಎಂದು ಮನವರಿಕೆಯಾಯಿತು! (ಗಂಡಸರು ಸಿಟ್ಟಾಗಬೇಡಿ. ಇದು ನನಗಾದ ಅನುಭವ!) ಅವರು ತಂದ ಶ್ಯಾವಿಗೆ ಮಣೆ ಶೋಕೇಸಿನಲ್ಲಿ ಕೂರಲು ಲಾಯಕ್ಕು. ಪರವಾಗಿಲ್ಲ, ಶ್ಯಾವಿಗೆಮಣೆ ತಯಾರಿಸಿದವರಿಗೆ ಅವರ ಸರಕು ಮಾರಾಟವಾಗಿ ಜೀವನಕ್ಕೆ ದಾರಿಯಾಯಿತಲ್ಲ ಎಂದು ದುಡ್ಡು ದಂಡ ಮಾಡಿದ ನನ್ನನ್ನು ನಾನೇ ಸಂತೈಸಿಕೊಂಡೆ! 
   ಈ ವರ್ಷವೂ ಸಹರ ವಸ್ತು ಪ್ರದರ್ಶನಕ್ಕೆ ಎಂದಿನಂತೆಯೇ ಹೋದೆ. ಎಲ್ಲ ಒಂದು ಸುತ್ತು ನೋಡಿ ಏನೂ ಕೊಳ್ಳದೆಯೇ ಹೊರಗೆ ಬಂದೆ. ಪಿಂಗಾಣಿ ಜಾಡಿಗಳು ಪುಟ್ಟದು ದೊಡ್ಡದು ಎಂದು ಎಲ್ಲವೂ ಚಂದವಾಗಿದ್ದುವು. ನೋಡಿ ಕೈಯಲ್ಲಿ ಮುಟ್ಟಿ ತೃಪ್ತಿ ಪಟ್ಟು ಹಾಗೆಯೇ ಇಟ್ಟು ಹಿಂದಕ್ಕೆ ಬಂದಾಗ ಅಲ್ಲಿ ಮಣ್ಣಿನ ಮಡಕೆಗಳು ಗಮನ ಸೆಳೆದುವು. ಅವನ್ನೂ ನೋಡಿ ಆಹಾ ಚಂದವೇ ಒಂದಕ್ಕಿಂದ ಒಂದು ಚಂದ ಎಂದು ನೋಡಿ ತೃಪ್ತಿಪಟ್ಟು,  ಅದರ ವಾರಾಸುದಾರನಿಗೆ ಅವನು ತಂದ ಮಾಲಿನ ಬಗ್ಗೆ ಹೊಗಳಿದೆ. ಕೊಳ್ಳುವ ಮನಸ್ಸಾದರೂ ಕೊಳ್ಳದೆ ಇರಲು ಮನೋನಿಗ್ರಹಗೊಳಿಸಿ ಮನೆಗೆ ಬಂದೆ. ಮನೆಗೆ ಬಂದಮೇಲೆ ಛೇ! ಒಂದಾದರೂ ಮಡಕೆ ಕೊಳ್ಳಬೇಕಿತ್ತು ಎಂದು ಪರಿತಪಿಸಿದೆ. 
   ರಾತ್ರೆಯೆಲ್ಲ ಮಡಕೆಗಳೇ ಕಣ್ಣಮುಂದೆ ಬಂದು ನರ್ತಿಸಿದ ಪರಿಣಾಮ ಸರಿ ನಿದ್ರೆ ಬರದೆ ಇನ್ನು ಮಡಕೆ ಕೊಳ್ಳದೆ ವಿಧಿಯಿಲ್ಲ ಎನ್ನುವಂತಾಯಿತು. ಬೆಳಗ್ಗೆ ಎದ್ದು ಕೆಲಸವೆಲ್ಲ ಮುಗಿದಬಳಿಕ ಸಹರಕ್ಕೆ ಗಾಡಿ ಓಡಿಸಿದೆ. ಅಲ್ಲಿ ಆ ಮಡಕೆ ಈ ಮಡಕೆ ಎಂದು ಕೈಗೆತ್ತಿ ಅಳೆದು ಸುರಿದು ಒಂದು ದೊಡ್ಡದು ಮಗದೊಂದು ಚಿಕ್ಕ ಮಡಕೆ ರೂ. ೩೫೦ಕ್ಕೆ ಅವರು ಹೇಳಿದ ಬೆಲೆಗಿಂತ ಇಪ್ಪತ್ತು ರೂ. ಕಡಿಮೆ ಕೊಟ್ಟು ಕೊಂಡುಕೊಂಡೆ. ಹೆಚ್ಚು ಚೌಕಾಸಿ ಮಾಡಲು ನನಗೆ ಮನಸ್ಸು ಬರುವುದಿಲ್ಲ. ಚೌಕಾಸಿ ಮಾಡಿದರೆ ಎಲ್ಲಿ ಅವರಿಗೆ ನಷ್ಟವಾದೀತೋ ಎಂದೇ ಕಾಣುತ್ತದೆ. ‘ಮಡಕೆಯಲ್ಲಿ ಅಡುಗೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಮ್ಮ, ಇವು ಅಂತಿಂತ ಮಡಕೆಗಳಲ್ಲ ಇದನ್ನು ನಾವು ಸ್ಪೆಷಲ್ಲಾಗಿ ಗ್ಯಾಸ್ ಮೇಲೆ ಇಡಲು ತಯಾರು ಮಾಡಿರುವುದು. ಆಂಧ್ರದಿಂದ ತರಿಸುವುದು. ತರುವಾಗ ಡ್ಯಾಮೇಜು ಆಗುತ್ತವೆ. ನಷ್ಟವೂ ಆಗುತ್ತದೆ’ ಎಂದು ಅಂಗಡಿಯವ ಹೇಳಿದ. ಒಬ್ಬ ಮಹಿಳೆ ಮೂರು ನಾಲ್ಕು ಮಡಕೆ ಚೌಕಾಸಿ ಮಾಡಿ ಕೊಂಡುಕೊಂಡರು. 
      ಮಾರನೇ ದಿನವೇ ಮಡಕೆ ತೊಳೆದು ಅದರಲ್ಲಿ ಬೆಂಡೆಕಾಯಿ ಸಾಂಬಾರು ಮಾಡಿದೆ. ಸಾಂಬಾರು ಎಂದಿಗಿಂತ ರುಚಿಯಾಗಿದೆಯಲ್ಲ ಎನಿಸಿತು. ಅರೆ ನಾನು ಮಾಡಿದ ಅಡುಗೆಯೂ ರುಚಿಯಾಗಿರುತ್ತದೆ ಎಂದು ಮನವರಿಕೆಯಾಯಿತು. ಗೆಳತಿ ಲಲಿತಾ ಬಂದವಳು ಊಟಮಾಡಿ ಸಾಂಬಾರು ಅದ್ಭುತ ರುಚಿಯಾಗಿದೆ ಎಂದಾಗ ಅದೆಲ್ಲ ಮಡಕೆ ಮಹಿಮೆ ಎಂದೆ. ಮತ್ತೊಂದು ದಿನ ಎಳೆಹಲಸಿನ ಕಾಯಿಯ ಪಲ್ಯ ಮಾಡಿದೆ. ಅದೂ ಉತ್ಕೃಷ್ಟ ಮಟ್ಟದಲ್ಲಿ ರುಚಿಯಾಗಿತ್ತು. ಮಡಕೆ ಕೊಂಡದ್ದೂ ಸಾರ್ಥಕ ಎನಿಸಿತು! ಮೊಸರು ನಾನು ತಿನ್ನುವುದಿಲ್ಲ. ಹಾಗಾಗಿ ನನಗೆ ಮೊಸರು ಮಾಡಲು ಬರುವುದಿಲ್ಲ ಎಂಬ ಅಪವಾದ ನನಗಂಟಿತ್ತು. ಮಡಕೆಯಲ್ಲಿ ಹಾಲು ಹಾಕಿ ಹೆಪ್ಪು ಹಾಕಿದೆ. ಆ ದಿನ ಬಲು ರುಚಿ ಇತ್ತಂತೆ ಮೊಸರು. ಆಹಾ ನನ್ನ ಮೇಲಿದ್ದ ಅಪವಾದವನ್ನು ಮಡಕೆ ಹೋಗಲಾಡಿಸಿತು. ಮಡಕೆಗೆ ಜೈ. ಬಲಗೈಬಂಟಿ ಸಿದ್ದಮ್ಮ ಮಾತ್ರ ನನ್ನ ಈ ಹುಚ್ಚಿಗೆ ಬೈದುಕೊಂಡಿರಬಹುದು. ಒಡೆಯದಂತೆ ಜೋಪಾನವಾಗಿ ಮಡಕೆ ಹಿಡಿದು ಉಜ್ಜಬೇಕಲ್ಲ. ಮಡಕೆ ಎಷ್ಟು ತೊಳೆದರೂ ಉಜ್ಜಿದರೂ ಬೇಗ ಚೊಕ್ಕವಾಗುವುದಿಲ್ಲ. ಮೊಸರು ಪಾತ್ರೆಗೆ ಬಿಸಿನೀರು ಹಾಕದೆ ಇದ್ದರೆ ಚೊಕ್ಕವಾಗುವುದೇ ಇಲ್ಲ!  

   ಮಡಕೆಯಲ್ಲಿ ಮಾಡಿದ ಅಡುಗೆ ನಮ್ಮ ಮನೆಯವರಿಗೆ ಮಾತ್ರ ರುಚಿಯಾದರೆ ಸಾಕೆ? ಮಾಡಿದ ಅಡುಗೆಯನ್ನು ಮಡಕೆ ಸಮೇತ ಚಿತ್ರ ಕ್ಲಿಕ್ಕಿಸಿ ಫೇಸ್ಬುಕ್ಕಿಗೆ ಹಾಕಿದೆ. ಅದನ್ನು ನೋಡಿದ ಹಳ್ಳಿಯಲ್ಲಿರುವ ನಮ್ಮ ನೆಂಟರು ಅಟ್ಟದಿಂದ ಮಡಕೆ ಇಳಿಸಿಕೊಳ್ಳಬೇಕು ಎಂಬ ಮನಸ್ಸಾಗಿದೆ ಎಂದು ಉತ್ತರ ಕೊಟ್ಟರು. ಮೈಸೂರಲ್ಲಿರುವ ಒಬ್ಬ ಗೆಳತಿ ನೋಡಿ, ಸಹರಕ್ಕೆ ಹೋಗಿ ಎರಡು ಮಡಕೆ ತಂದು ಅದರಲ್ಲಿ ಅಡುಗೆ ಮಾಡಿ ವಾಟ್ಸಪಿನಲ್ಲಿ ಅದರ ಚಿತ್ರ ಕಳುಹಿಸಿ ಆಹಾ ಎಷ್ಟು ಚೆನ್ನ ಅದರ ರುಚಿ ಎಂದು ಹಾಕಿದರು! 
     ಆಂಧ್ರದಿಂದ ಮಡಕೆಗಳನ್ನು ಮೈಸೂರಿಗೆ ತರಿಸಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅದನ್ನು ಇಲ್ಲಿ ಮಾರಾಟ ಮಾಡಿ ಅವನ ಜೀವನದ ದಾರಿ ಕಂಡುಕೊಂಡ ವ್ಯಾಪಾರಿಗೆ ನಮೋನಮಃ! ನಾನು ಮಡಕೆ ಕೊಂಡು ಅದರ ಚಿತ್ರ ಫೇಸ್ಬುಕ್ಕಿಗೆ ಹಾಕಿದಾಗ ಅದನ್ನು ನೋಡಿದ ನನ್ನ ಗೆಳತಿ ಮಡಕೆ ಕೊಂಡು ಅವರು ಅದನ್ನು ಫೇಸ್ಬುಕ್ಕಿಗೆ ಹಾಕಿ ಅವರ ಗೆಳತಿಯರು ಮೆಚ್ಚಿ ಅವರು ಮಡಕೆ ಕೊಂಡು ತಂದು ಹೀಗೆಯೇ ಸರಪಳಿ ಮುಂದುವರಿದು ಮಡಕೆ ತಯಾರಿಸಿದವರ ಜೀವನ, ಅದನ್ನು ಮಾರಿದವರ ಜೀವನ ಸುಖಮಯವಾಗಿ ನಡೆಯುತ್ತ, ಈ ಕೊಂಡಿ ಹೀಗೆಯೇ ಸಾಗುತ್ತ ಸಮಾಜದಲ್ಲಿರುವ ಜನರು ಸುಖೀ ಜೀವನ ನಡೆಸುವಂತಾಗಲಿ ಎಂದೇ ನಮ್ಮ ಹಾರೈಕೆ. ಜಡವಸ್ತುಗಳ ಮೋಹ ಹೀಗೆಯೇ ಮುಂದುವರಿಯುತ್ತಿರಲಿ! ಜೈ ಜಡವಸ್ತುಗಳಿಗೆ ಮಾರಾಟಮಾಡುವವರ ಬಾಳ್ಗೆ!