ಶನಿವಾರ, ಮೇ 28, 2022

ದೋಡಿತಾಲ್ –ದರ್ವಾ ಪಾಸ್ ಚಾರಣ ಭಾಗ - ೧

ಜನವರಿ ತಿಂಗಳ ಒಂದು  ದಿನ ಯಾವುದೋ ಚಾರಣದ ಸಮಯದಲ್ಲಿ ಕೃಷ್ಣ ಹೆಬ್ಬಾರರು, ಉತ್ತರಾಖಂಡ ಜಿಲ್ಲೆಯ ದೋಡಿತಾಲ್ ಚಾರಣದ ವಿವರ ಹೇಳುತ್ತಲಿದ್ದರು. ನಾನು ಅವರ ಹಿಂದೆ ಬರುತ್ತಲಿದ್ದೆ. ಈ ವಿವರ ಕೇಳಿ ನನ್ನ ಕಿವಿ ನೆಟ್ಟಗಾಗಿ, ಅದರ ಸಂಪೂರ್ಣ ವಿವರ ಕೇಳಲಾಗಿ, ಆ ಚಾರಣಕ್ಕೆ ಹೋಗುವುದೆಂದು ಆಗಲೇ ನಿಶ್ಚಯ ಮಾಡಿದೆವು.

   ಹಿಮಾಲಯದ ಸರಹದ್ದಿನಲ್ಲಿ ಒಂದಾದರೂ ಚಾರಣದಲ್ಲಿ ಭಾಗವಹಿಸಬೇಕೆಂಬುದು ಬಹುದಿನದ ಕನಸಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ ದೋಡಿತಾಲ್-ದರ್ವಾಪಾಸ್ ಚಾರಣಕ್ಕೆ ಹೆಸರು ನೋಂದಾಯಿಸಿ ರೂ.೮೫೦೦ ಕಟ್ಟಿದೆವು.

     ಮೈಸೂರಿನಿಂದ ಡಾ. ಪ್ರಹ್ಲಾದ ರಾವ್, ಕೃಷ್ಣ ಹೆಬ್ಬಾರ, ಪ್ರಭಾಕರ, ಮಾಲಿನಿ, ರುಕ್ಮಿಣಿಮಾಲಾ, ಬೆಂಗಳೂರಿನಿಂದ ಸವಿತಾ, ಶ್ರೀಹರಿ-ಅನನ್ಯಾ ದಂಪತಿ ಸೇರಿ ಒಟ್ಟು ೮ ಮಂದಿಯ ಗುಂಪು ನಮ್ಮ ಕರ್ನಾಟಕದಿಂದ. 

   ಚಾರಣದ ವಿವರ

೧೧.೫.೨೨ ಬೆಳಗ್ಗೆ ಡೆಹರಡೂನ್ ತಲಪಬೇಕು. ಅಲ್ಲಿಂದ ಜೀಪಿನಲ್ಲಿ ಉತ್ತರಕಾಶಿಗೆ ಪಯಣ. ಅಲ್ಲಿ ವಾಸ್ತವ್ಯ

೧೨.೫.೨೨ ಉತ್ತರಕಾಶಿಯಿಂದ ಸಂಗಮಚಟ್ಟಿಗೆ ಜೀಪಿನಲ್ಲಿ ಪಯಣ, ಅಲ್ಲಿಂದ ೮ಕಿಮೀ ಬೆಬ್ರಿಗೆ ಚಾರಣ. ಬೆಬ್ರಿಯಲ್ಲಿ ವಾಸ್ತವ್ಯ

೨೩-೫-೨೨ ಬೆಬ್ರಿಯಿಂದ ೧೪ಕಿಮೀ ದೋಡಿತಾಲ್ ಗೆ ಚಾರಣ. ಅಲ್ಲಿ ವಾಸ್ತವ್ಯ.

೧೪-೫-೨೨ ದೋಡಿತಾಲ್ ನಿಂದ ೫ಕಿಮೀ ದರ್ವಾಪಾಸ್ ಗೆ ಆರೋಹಣ, ವಾಪಾಸ್ ೫ಕಿಮೀ ದೋಡಿತಾಲ್ ಗೆ ಅವರೋಹಣ.

೧೫.೫.೨೦೨೨ರಂದು ದೋಡಿತಾಲ್ ನಿಂದ ೧೬ಕಿಮೀ ಅಗೋಡಗೆ ಚಾರಣ. ಅಲ್ಲಿಂದ ಜೀಪಿನಲ್ಲಿ ಉತ್ತರಕಾಶಿಗೆ.

೧೬.೫.೨೨ ಉತ್ತರಕಾಶಿಯಿಂದ ನಿರ್ಗಮನ

ಈ ಚಾರಣವನ್ನು ಯೂಥ್ ಹಾಸ್ಟೆಲ್ ದೆಹಲಿ ವಿಭಾಗದಿಂದ ಆಯೋಜನೆ ಮಾಡಿದ್ದರು.

   ಬೆಂಗಳೂರಿಗೆ ಪಯಣ

ತಾರೀಕು ೧೦.೫.೨೦೨೨ರಂದು ಬೆಳಗ್ಗೆ ೩ ಗಂಟೆಯ ಫ್ಲೈ ಬಸ್ಸಿನಲ್ಲಿ ನಾವು ೪ ಮಂದಿ ಬೆಂಗಳೂರಿಗೆ ಹೊರಟೆವು. ಬೆಳಗ್ಗೆ ೭ ಗಂಟೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ತಲಪಿದೆವು. ಬಸ್ಸಿನಲ್ಲಿ ಆರೇಳು ಜನರಷ್ಟೇ ಇದ್ದುದು. ಇದರಿಂದ ರಾಜ್ಯ ಸಾರಿಗೆ ನಿಗಮಕ್ಕೆ ಎಷ್ಟು ನಷ್ಟ ಎಂದು  ಮನಸ್ಸಿಗೆ ಖೇದವಾಯಿತು.

  ಕಾಫಿಹಟ್ಟಿ

ಡಾಕ್ಟರ್‍ ಪ್ರಹ್ಲಾದರಾಯರ ಕೊಡುಗೆಯಿಂದ ಕಾಫಿಹಟ್ಟಿಯಲ್ಲಿ ದೊಡ್ಡ ಲೋಟ ಕಾಫಿ ಕುಡಿದೆವು.

ಕಾಫಿಕುಡಿದು ನಾವು ಲಗೇಜು ತಪಾಸಣೆ, ನಮ್ಮ ತಪಾಸಣೆ ಎಲ್ಲ ವಿಧಿವಿಧಾನ ಮುಗಿಸಿ, (ಈಗ ಬೋರ್ಡಿಂಗ್ ಪಾಸ್, ನಮ್ಮ ಲಗೇಜಿಗೆ ಹಾಕುವ ಸ್ಟಿಕರ್ ಎಲ್ಲವನ್ನೂ ನಾವೇ ಹೊರಗೆ ಕಿಯೋಸ್ಕಿಯಿಂದ ತೆಗೆದುಕೊಳ್ಳಬೇಕು.  ನನ್ನಂಥವರಿಗೆ ಇದು ಕಷ್ಟದ ಕೆಲಸ. ಡಾಕ್ಟರ್, ಹೆಬ್ಬಾರರು ನಮಗೆ ಸಹಾಯ ಮಾಡಿದರು.) ೯ನೇ ಗೇಟಿನ ಬಳಿ ಹೋಗಿ ಕೂತೆವು. ಕಟ್ಟಿ ತಂದಿದ್ದ ಚಪಾತಿ ಮುಗಿಸಿದೆವು. ಅಷ್ಟರಲ್ಲಿ ಉಳಿದವರೂ ಬಂದು ಸೇರಿಕೊಂಡರು. ಅಲ್ಲಿ ಕನ್ನಡ ಪತ್ರಿಕೆ ಜೋಡಿಸಿಟ್ಟಿರುವುದು ಕಂಡು ಆಶ್ಚರ್ಯವೂ ಖುಷಿಯೂ ಆಯಿತು. ಸಮಯ ಕಳೆಯಲು ಒಳ್ಳೆಯ ಸಾಧನ ಎಂದು ಒಬ್ಬೊಬ್ಬರು ಒಂದೊಂದು ಪತ್ರಿಕೆ ಹಿಡಿದು ಓದಿದೆವು.

  ಡೆಹರಡೂನಿಗೆ ಹಾರಾಟ

  ೧೦.೨೦ಕ್ಕೆ ಸರಿಯಾಗಿ ಇಂಡಿಗೋ ವಿಮಾನ ಹೊರಟಿತು. ದಾಕ್ಟರ್ ಕಡ್ಲೆಕಾಯಿ, ಹುರಿಗಾಳು ತಂದಿದ್ದರು. ಬಾಯಾಡಿಸಲು ಆರೋಗ್ಯವಾದ್ದು ಅದಕ್ಕಿಂತ ಉತ್ತಮ ಬೇರೇನಿದೆ? ಅರ್ಧ ಡಬ್ಬಿ ಖಾಲಿ ಮಾಡಿದೆವು.  ೧.೨೦ಕ್ಕೆ ಸರಿಯಾಗಿ ವಿಮಾನ ಡೆಹ್ರಾಡೂನ್ ತಲಪಿತು.

    ವಿಷ್ಣು.ಇನ್ ಹೊಟೇಲ್

  ನಾವು ವಿಮಾನ ಇಳಿದು, ನಮ್ಮ ಲಗೇಜು ತೆಗೆದುಕೊಂಡು ೨ ಕಾರಿನಲ್ಲಿ ರೈಲ್ವೇ ನಿಲ್ದಾಣದ ಸಮೀಪವಿರುವ ಹೊಟೇಲ್ ವಿಷ್ಣು ಇನ್ ತಲಪಿದಾಗ ೩ ಗಂಟೆ. ಅಲ್ಲಿ ಊಟ (ಚಪಾತಿ, ಪಲ್ಯ, ಅನ್ನ ಸಾರು) ಮಾಡಿದೆವು.

ಒಂದೊಂದು ಕೋಣೆಯಲ್ಲಿ ಇಬ್ಬರಂತೆ ನಾಲ್ಕು ಕೋಣೆ ಮಾಡಿದ್ದೆವು. ಇಬ್ಬರ ಜಗಳದಲ್ಲಿ ಮೂರನೆಯವರು ಸೋತ ಕಥೆ

ಊಟವಾಗಿ ನಾವು ರಾಬರ್ಸ್ ಕೇವ್ ನೋಡಲು ಹೋಗುವುದೆಂದು ಓಲಾ ಟ್ಯಾಕ್ಸಿ ಬುಕ್ ಮಾಡಿ, ರೈಲು ನಿಲ್ದಾಣದ ಬಳಿ ನಿಂತಿದ್ದೆವು. ಅರ್ಧ ಗಂಟೆಯಾದರೂ ಕಾರು ಬರಲಿಲ್ಲ. ಕಾದು ಕಾದು ಅಂತೂ ಕಾರು ಬಂತು. ಕಾರು ಹತ್ತಿ ಕೂತಿದ್ದೇವಷ್ಟೇ. ಇಳಿಯಿರಿ, ಬೇಗ ಇಳಿಯಿರಿ ಎಂದು ಚಾಲಕ ಕೂಗಿದ. ಏನಾಯಿತಪ್ಪ ಎಂದು ಆತಂಕದಲ್ಲೇ ಗಡಬಡಿಸಿ ಇಳಿದೆವು. ನೋಡಿದರೆ, ಟ್ಯಾಕ್ಸಿಯವರ ಒಳಜಗಳ. ಅಲ್ಲಿಯ ಟ್ಯಾಕ್ಸಿ ನಿಲ್ದಾಣದಿಂದಲೇ ಟ್ಯಾಕ್ಸಿ ಹತ್ತಬೇಕಂತೆ. ಓಲಾದವರಿಗೆ ಅಲ್ಲಿ ಪ್ರವೇಶವಿಲ್ಲವಂತೆ. ಅವರದೋ ಬಾಯಿಗೆ ಬಂದ ರೇಟು.  ಅವರ ಜಗಳದಲ್ಲಿ ನಮಗೆ ಎಲ್ಲಿಗೂ ಹೋಗಲಾಗಲಿಲ್ಲ. ಕೋಣೆಗೆ ಬಂದು ವಿಶ್ರಾಂತಿ ಪಡೆದೆವು.

   ಡೆಹರಾಡೂನ್ ನಗರ ವೀಕ್ಷಣೆ

 ಸಂಜೆ ಅಲ್ಲಿಯೇ ಮಾರುಕಟ್ಟೆಯ ರಸ್ತೆಯಲ್ಲಿ ಒಂದೆರಡು ಕಿಮೀ ಸುತ್ತಿದೆವು. ಚಹಾ, ಕಾಫಿ ಸೇವಿಸಿದೆವು.  ರಾತ್ರಿ ಊಟದ ಶಾಸ್ತ್ರವನ್ನು ರಾಜಹಂಸ ಹೊಟೇಲಿನಲ್ಲಿ ಮಾಡಿ ಕೋಣೆಗೆ ವಾಪಾಸಾದೆವು. ಸ್ವಲ್ಪ ಮಳೆಯೂ ಬಂತು.

  ಬೆಳಗಿನ ನಡಿಗೆ

ತಾರೀಕು ೧೧.೫.೨೨ರಂದು ಬೆಳಗ್ಗೆ ೫ ಗಂಟೆಗೆ ಎಚ್ಚರವಾಯಿತು. ಎಚ್ಚರವಾದಮೇಲೆ ಮಲಗಲು ಮನಸ್ಸು ಬರುವುದಿಲ್ಲ. ಅಲ್ಲಿ ಬೇಗ ಬೆಳಕಾಗುತ್ತದೆ. ನಿತ್ಯದ ಕೆಲಸ ಮುಗಿಸಿ, ನಾನು ಮಾಲಿನಿ ಎರಡು ಕಿಮೀ ನಡೆದೆವು. ಅಗರವಾಲ್ ಭವನ ರೈಲ್ವೇ ನಿಲ್ದಾಣದ ಇರುವುದು ತಿಳಿಯಿತು. ಅಲ್ಲಿ ರಿಯಾಯತಿ ದರದಲ್ಲಿ ವಸತಿಗೆ ಕೋಣೆಗಳು ಲಭಿಸುತ್ತವೆ. ಸಮೀಪ  (೬೫, ಗಾಂಧಿ ರಸ್ತೆ, ಪ್ರಿನ್ಸ್ ಚೌಕ್ ಹತ್ತಿರ, ಡೆಹ್ರಡೂನ್,ಸಂಪರ್ಕ ಸಂಖ್ಯೆ ೦೧೩೫-೨೬೨೨೫೯೭, ೦೯೪೧೦೭೨೮೩೮೪, ಮಿಂಚಂಚೆ:agarwalbhawan61@gmail.com   

  ಉತ್ತರಕಾಶಿಗೆ ಪಯಣ

೭ ಗಂಟೆಗೆ ಪರೋಟ ತಿಂದು ಹೊಟೇಲ್ ಕೋಣೆ ಕಾಲಿ ಮಾಡಿ ೭.೪೫ಕ್ಕೆ ೨ ಜೀಪಿನಲ್ಲಿ ಉತ್ತರಕಾಶಿಗೆ ೧೨ ಮಂದಿ ಹೊರಟೆವು. ನಾಲ್ಕು ಮಂದಿ, ದೆಹಲಿ, ಮಹಾರಾಷ್ಟ್ರ, ಗೋವಾ, ಪಂಡರಾಪುರದಿಂದ ಬಂದಿದ್ದರು. ನಮ್ಮ ಜೀಪಿನ ಚಾಲಕ ನವೀನ. ಅವನ ಸಂಪರ್ಕ ಸಂಖ್ಯೆ (08958663744) ಒಳ್ಳೆಯ ಚಾಲಕ. ಡೆಹರಾಡೂನಿನಿಂದ (೧೪೧೦ ಅಡಿ) ಉತ್ತರಕಾಶಿಗೆ (೩೭೯೯ ಅಡಿ) ಏರಬೇಕು. ದಾರಿಯೂ ಈಗ ಚೆನ್ನಾಗಿ ಆಗಿದೆ. ಒಂದು ಪರ್ವತ ಏರಿದರೆ ಇನ್ನೊಂದು ಇಳಿಯಬೇಕು, ಹತ್ತಬೇಕು ಹಾಗಿರುವ ಮಾರ್ಗ.   ಮಸ್ಸೂರಿ ದಾಟಿ ಸಾಗಬೇಕು. ಊರು ದಾಟುವಾಗ ದಾರಿಯಲ್ಲಿ ಕಾಣುವ ಹೊಲಗಳ ದೃಶ್ಯ ಮನಮೋಹಕ. ಆದರೆ ಅವರ ಕೆಲಸ ಶ್ರಮದಾಯಕ. ಇಳಿಜಾರು ಪ್ರದೇಶದಲ್ಲಿ ತುಂಡು ತುಂಡು ಹೊಲಗಳು, ಅದರಲ್ಲಿ ಆಲೂಗಡ್ಡೆ, ರಾಜ್ಮಾ ಬೆಳೆಗಳು.

ಸ್ಥಳೀಯ ಭಾಷೆಯಲ್ಲಿ ಆಡು ಎಂದು ಕರೆಯಲ್ಪಡುವ ಪೀಚ್ ಹಣ್ಣನ್ನು ದಾರಿ ಮಧ್ಯೆ ಒಂದು ಕಡೆ ಕೊಂಡೆವು.  ೧.೪೫ಕ್ಕೆ ನಾವು ಉತ್ತರಕಾಶಿ ತಲಪಿದೆವು.

   ಕೀರ್ತಿ ಪ್ಯಾಲೇಸ್

ನಮಗೆ ಕೀರ್ತಿ ಪ್ಯಾಲೇಸಿನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಒಂದು ಕೋಣೆಯಲ್ಲಿ ನಾವು ೫ ಮಂದಿ ಹೆಂಗಸರು ಸೇರಿಕೊಂಡೆವು.

ಕೀರ್ತಿ ಪ್ಯಾಲೇಸ್ ೨ ವರ್ಷದ ಹಿಂದೆ ಕಟ್ಟಿದ ವಸತಿ ಗೃಹ. ಆದರೆ ಕೊರೋನಾ ಕಾರಣದಿಂದ ಯಾರೂ ಇದುವರೆಗೂ ಪ್ರವಾಸಿಗರು ಬಂದಿರಲಿಲ್ಲವಂತೆ. ಈ ಸಲ ಯೂಥ್ ಹಾಸ್ಟೆಲ್ ಏರ್ಪಡಿಸಿದ್ದ ದೋಡಿತಾಲ್- ದರ್ವಾ ಪಾಸ್  ಚಾರಣದಲ್ಲಿ ಭಾಗವಹಿಸಲು ಬಂದಿದ್ದ ವರೇ ಉದ್ಘಾಟನೆ ಮಾಡಿದ್ದಂತೆ. ಹೊಟೇಲ್ ಕೋಣೆ ಚೆನ್ನಾಗಿದೆ. ಬಿಸಿನೀರು ವ್ಯವಸ್ಥೆ ಇತ್ತು. ಒಂದು ಕೋಣೆಗೆ (ಇಬ್ಬರು) ದಿನವೊಂದಕ್ಕೆ ರೂ. ೧೫೦೦ ಬಾಡಿಗೆಯಂತೆ.

   ಎದುರಿದ್ದ ಶಾಂತಿ ಹೊಟೇಲಿನಲ್ಲಿ ಊಟ ಮಾಡಿದೆವು.  ನಾವು ಬರುವಷ್ಟರಲ್ಲಿ ಅಲ್ಲಿ ಊಟ ಖಾಲಿ ಆಗಿತ್ತು. ನಮಗಾಗಿ ಮತ್ತೆ ಅನ್ನ ಸಾರು ಮಾಡಿ ಬಡಿಸಿದ್ದರು. 

ಕೀರ್ತಿ ಪ್ಯಾಲೇಸಿನ ತಾರಸಿಯಲ್ಲಿ ನಿಂತರೆ ಗಂಗಾನದಿಯ ಹರಿವು, ಉತ್ತರಕಾಶಿಯ ನೋಟ ಬಲು ಚೆನ್ನಾಗಿ ಕಾಣುತ್ತದೆ. ರಾತ್ರಿಯಂತೂ ವಿದ್ಯುದ್ದಿಪಗಳಿಂದ ಇಂದ್ರನ ಅಮರಾವತಿಯೇನೋ ಎಂಬಂಥ ದೃಶ್ಯ.  ಮೋದಿ ಎಂಬವರು ಅಲ್ಲಿ ಪಟ ತೆಗೆಯುತ್ತಲಿದ್ದರು. ಹಾಗೆಯೇ ನಮ್ಮ ಪಟ ಕ್ಲಿಕ್ಕಿಸಿದರು. 



   ಸಂಜೆ ೪ ಗಂಟೆಗೆ ಚಹಾ, ಕಡ್ಲೆಬೀಜ, ಮಿಕ್ಷ್ಚರ್. ಅದಾಗಿ ಪರಿಚಯ ಕಾರ್ಯಕ್ರಮ, ಚಾರಣದ ವಿವರ, ಬೇಸ್ ಕ್ಯಾಂಪ್ ಗಳಲ್ಲಿ ಸಿಗುವ ಸವಲತ್ತು ಇತ್ಯಾದಿ ಬಗ್ಗೆ ಮಾಹಿತಿ ಕೊಟ್ಟರು. ಗಂಟೆಗೆ ಎಷ್ಟು ಕಿಮೀ ನಡೆಯಬಹುದು ಎಂದು ಕೇಳಿದರು. ನಾವೆಲ್ಲ ನಮ್ಮ ಊರಿನಲ್ಲಿ ನಡೆಯುವಂತೆ, ಅದೇ ಅನುಭವದಿಂದ, ನಾಲ್ಕುಕಿಮೀ, ೫ಕಿಮೀ ಎಂದಾಗ, ನಮ್ಮ ಉತ್ತರ ತಪ್ಪಾಗಿತ್ತು. ಅಲ್ಲಿ ಎತ್ತರದ ಪ್ರದೇಶವಾದ್ದರಿಂದ ಆಮ್ಲಜನಕದ ಕೊರತೆ ಹಾಗೂ ನಮಗೆ ಆ ಹವೆಯ ಅಭ್ಯಾಸವಿಲ್ಲದಿರುವುದರಿಂದ ಅಷ್ಟು ದೂರ ನಡೆಯಲು ಸಾಧ್ಯವಾಗುವುದಿಲ್ಲ. ಗಂಟೆಗೆ ೨ ಕಿಮೀ ಸಾಧ್ಯವಾಗಬಹುದು ಎಂದರು. ನೀವು ನಿಧಾನವಾಗಿ ಒಟ್ಟಿಗೇ ಹೋಗಬೇಕು. ಸ್ಪರ್ಧೆಯಲ್ಲ ಇದು. ಪ್ರಕೃತಿಯ ಸೌಂದರ್ಯವನ್ನು ನೋಡಿ ಅನುಭವಿಸಿ ನಡೆಯಿರಿ. ನಾನು ಮೊದಲು ಗುರಿ ತಲಪಬೇಕು ಎಂಬಂತೆ ಹೋಗದಿರಿ. ೨ ಮಂದಿ ಗೈಡ್ ಇರುತ್ತಾರೆ. ಅವರನ್ನು ದಾಟಿ ಮುಂದೆ ಹೋಗದಿರಿ. ಎಂದು ಕಿವಿಮಾತು ಹೇಳಿದರು. ನಮ್ಮ ತಂಡದಿಂದ ದೆಹಲಿಯ ಸಂದೀಪ ಅವರನ್ನು ನಾಯಕನಾಗಿ ನೇಮಕಮಾಡಿದರು.

    ಪ್ರವೇಶಪತ್ರ, ಆಧಾರಕಾರ್ಡ್ ಪರಿಶೀಲನೆ ಇತ್ಯಾದಿ ಆಗಿ ನಮಗೆ ಐಡಿ ಕಾರ್ಡ್ ಕೊಟ್ಟರು. ಬೆನ್ನಚೀಲ ತರದಿದ್ದವರಿಗೆ ಚೀಲ, ಹೊದೆಯಲು ಬಟ್ಟೆ ಕೊಟ್ಟರು.

 ರಾತ್ರೆ ೮ ಗಂಟೆಗೆ ಊಟ (ಚಪಾತಿ, ಪಲ್ಯ, ಅನ್ನ ಸಾರು, ಪಾಯಸ) ಮಾಡಿ ೧೦ಗಂಟೆಗೆ ನಿದ್ರಿಸಿದೆವು.

   ಉತ್ತರಕಾಶಿ-ಸಂಗಮಚಟ್ಟಿ

ತಾರೀಕು ೧೨-೫-೨೦೨೨ರಂದು ೫ ಗಂಟೆಗೆದ್ದು ಸ್ನಾನಾದಿ ಮುಗಿಸಿ ತಯಾರಾದೆವು. ಮುಂದೆ ಎರಡು ದಿನ ಸ್ನಾನವಿಲ್ಲ ಎಂದು ೨ ದಿನಕ್ಕೆ ಸೇರಿಸಿಯೇ ಸ್ನಾನ ಮಾಡಿದೆ! ೫.೩೦ಗೆ ಚಹಾ. ೬.೩೦ಗೆ ತಿಂಡಿ(ಹೆಸರುಕಾಳು ಕೋಸಂಬರಿ, ಬ್ರೆಡ್, ಕಾರ್ನ್ ಫ್ಲೇಕ್) ತಿಂದೆವು. ನಮ್ಮ ಹೆಚ್ಚುವರಿ ಬಟ್ಟೆ ತುಂಬಿದ ಚೀಲ ಅಲ್ಲಿ ಕಾರಿಡಾರಿನಲ್ಲಿ ಇಟ್ಟೆವು. ೩ ದಿನಕ್ಕೆ ಅವಶ್ಯ ಬಟ್ಟೆ ಇತ್ಯಾದಿ ಬೆನ್ನ ಚೀಲಕ್ಕೆ ತುಂಬಿಸಿಟ್ಟೆವು.


    ೭.೪೫ಕ್ಕೆತಂಡದ ಪಟ ತೆಗೆಸಿಕೊಂಡು, ಹಸಿರು ಬಾವುಟ ಬೀಸಿ ನಮ್ಮನ್ನು ಬೀಳ್ಕೊಟ್ಟರು. ಉತ್ತರಕಾಶಿಯಿಂದ ಸಂಗಮಚಟ್ಟಿಗೆ ೧೫ಕಿಮೀ ಜೀಪಿನಲ್ಲಿ ಹೋದೆವು.

     ಬೆಬ್ರದೆಡೆಗೆ ನಡಿಗೆ

ದೋಡಿತಾಲ್ ಕಡೆಗೆ ನಡಿಗೆ ಸುರುವಾಗುವ ದ್ವಾರ ಹಾದು ನಾವು ಮುಂದುವರಿದೆವು. ೯.೧೦ಕ್ಕೆ ನಾವು ನಡೆಯಲು ಪ್ರಾರಂಭಿಸಿದೆವು. ನಮಗೆ ಮಾರ್ಗದರ್ಶಕರಾಗಿ ಶ್ರವನ್ ಸಾವಂತ್, ಹಾಗೂ ಮುಖೇಶ್ ಜೊತೆಗೂಡಿದರು.


ಮೊದಲ ಹಂತವಾಗಿ ಸಂಗಮಚಟ್ಟಿಯಿಂದ ಅಗೋಡಕ್ಕೆ ಹಾದಿ ಸವೆಸಿದೆವು. ಏರುಗತಿ ಆದಕಾರಣ ರಭಸದ ನಡಿಗೆ ಸಾಧ್ಯವಿಲ್ಲ. ನಿಧಾನವಾಗಿಯೇ ನಡೆದೆವು.

 ದಾರಿಯಲ್ಲಿ ಅಲ್ಲಲ್ಲಿ ನಿಂತು ಕೂತು ನೀರು ಕುಡಿಯುತ್ತ, ವಿಶ್ರಾಂತಿ ಪಡೆಯುತ್ತ ಸಾಗಿದೆವು. ೧೧ ಗಂಟೆಗೆ ಬುತ್ತಿ ಬಿಚ್ಚಿ ಚಪಾತಿ ಪಲ್ಯ ತಿಂದು ಸಾಗಿದೆವು. ಓಕ್, ದೇವದಾರು, ಫೈನ್ ಮರಗಳಿಂದಾವೃತವಾದ ಕಣಿವೆ ಪ್ರದೇಶ.  ಎಲ್ಲೆಲ್ಲೂ ಹಸುರು ತೋರಣ. ಕಾಡು ಹೂಗಳ ಚೆಲುವು, ಹೂವಿಗೆ ಚಿಟ್ಟೆಗಳ ಹಾರಾಟ ನೋಡುತ್ತ ನಡೆದೆವು. ಅಲ್ಲಲ್ಲಿ ಕಲ್ಲು ತುಂಬಿದ ಸಪೂರ ದಾರಿ. ಕೆಳಗೆ ಪ್ರಪಾತ ಕಣಿವೆ. ಆಳ ನೋಡಲು ಭಯವಿದ್ದವರು ನಡೆಯುವುದು ಕಷ್ಟ.



 

ಮಧ್ಯಾಹ್ನ  ೧.೩೦ ಗಂಟೆಗೆ ನಾವು ೬ಕಿಮೀ ಕ್ರಮಿಸಿ ಅಗೋಡ ತಲಪಿದೆವು. ಅಲ್ಲಿ ಭರತ್ ಹೋಮ್ ಸ್ಟೇಯಲ್ಲಿ ಕಟ್ಟಿ ತಂದಿದ್ದ ಬುತ್ತಿ ತೆರೆದು ಉಳಿದ ಚಪಾತಿ ತಿನ್ನಲು ನೋಡಿದೆ. ಆದರೆ ತಿನ್ನಲು ಸಾಧ್ಯವಾಗಲೇ ಇಲ್ಲ. ಪಲ್ಯದಲ್ಲಿ ಹಾಕಿದ ಎಣ್ಣೆ ಎರೆಡೆರಡು ಪ್ಲಾಸ್ಟಿಕ್ ಕವರ್ ಹಾಕಿದರು ಚೀಲಕ್ಕೆ ತೊಟ್ಟಿಕ್ಕಿತ್ತು. ಅಷ್ಟೂ ಎಣ್ಣೆಯಲ್ಲಿ ಮುಳುಗಿತ್ತು. ಅವನ್ನೆಲ್ಲ ಅಲ್ಲೇ ಇದ್ದ ದಷ್ಟಪುಷ್ಟವಾಗಿದ್ದ ನಾಯಿಗೆ ಹಾಕಿದೆ. ಖುಷಿಯಿಂದಲೇ ತಿಂದಿತು. ಇನ್ನಷ್ಟು ಪುಷ್ಟಿಯಾಗಲು ಸಹಕಾರಿಯಾಯಿತು! ಯಾರೋ ಬುತ್ತಿ ತೆರೆದು ಕೂತಿದ್ದರು. ನಾಯಿ ಹೋಗಿ ಬುತ್ತಿಗೇ ಬಾಯಿಹಾಕಿತು! ಅದಕ್ಕೆ ಚಪಾತಿಯ ರಸದೌತಣ! 

ಅಗೋಡದಲ್ಲಿ ಸುಮಾರು ೧೦೦ ಮನೆಗಳಿವೆಯಂತೆ. ೫ ಮತಗಟ್ಟೆ ಇದೆ ಎಂದು ಶ್ರವನ್ ಹೇಳಿದ. ಅಲ್ಲಲ್ಲಿ ತುಂಡು ತುಂಡು ಹೊಲಗಳು ಕಾಣುತ್ತಲಿತ್ತು. ಆಲೂಗಡ್ಡೆ, ಗೋಧಿ, ರಾಜ್ಮಾ ಅಲ್ಲಿಯ ಪ್ರಮುಖ ಬೆಳೆಗಳು. 

  ದಾರಿಯಲ್ಲಿ ಮೂಳೆಗಳು ಕಂಡಿತು. ಬಹುಶಃ ಅವು ಹಸುವಿನದ್ದಾಗಿಬಹುದು. ಯಾವುದಾದರೂ ಪ್ರಾಣಿ ತಿಂದದ್ದೋ, ಅಲ್ಲ, ಹಾಗೆಯೇ ಸತ್ತು ಕೊಳೆತು ಹೋದದ್ದೊ ಮಾಹಿತಿ ತಿಳಿಯಲಿಲ್ಲ.

    ೨ ಗಂಟೆಗೆ ನಾವು ಬೆಬ್ರಿಯೆಡೆಗೆ ಮುಂದುವರಿದೆವು. ಇನ್ನೇನು ಎರಡೇ ಕಿಮೀ ಎಂದು ಡಾಕ್ಟರರಿಗೆ ಆಗಾಗ ಹೇಳುತ್ತ ನಡೆಯುತ್ತಿದ್ದೆ. ಆದರೆ ಎಷ್ಟು ಕ್ರಮಿಸಿದರೂ ಬೆಬ್ರಿ ತಲಪುವುದು ಮಾತ್ರ ಬಲು ನಿಧಾನವಾಗುತ್ತಿದೆ ಎಂಬ ಭಾವ ಒಳೊಗೊಳಗೇ ಕಾಡುತ್ತಲಿತ್ತು! ಒಮ್ಮೆ ಏರುಗತಿ, ಮುಂದೆ ಸಮತಟ್ಟು, ಮತ್ತೆ ತುಸು ಇಳಿಜಾರು, ಹೀಗೆ ಸಮ್ಮಿಶ್ರ ದಾರಿಯಲ್ಲಿ ಸಾಗಿದೆವು.  ಸಣ್ಣಗೆ ಮಳೆಯೂ ಹನಿಯಿತು. ಮಳೆ ಅಂಗಿ ಚೀಲದಿಂದ ತೆಗೆಯಬೇಕಾಯಿತು. ಅಲ್ಲಲ್ಲಿ ನೀರ ತೊರೆಗಳು ಸಿಕ್ಕಿದಾಗ ನೀರು ಕುಡಿದು, ಖಾಲಿಯಾಗಿದ್ದ ಬಾಟಲಿ ತುಂಬಿಸಿಕೊಳ್ಳುತ್ತಲಿದ್ದೆವು. ಹಾಗಾಗಿ ತುಂಬ ನೀರು ಹೊರುವ ಕೆಲಸ ತಪ್ಪಿತು. ಅಸ್ಸಿ ಗಂಗಾನದಿ ದಾಟಿ ೩.೩೦ಗಂಟೆಗೆ ಬೆಬ್ರಿ ತಲಪಿದೆವು. ಹೆಚ್ಚುಕಡಿಮೆ ೬.೩೦ ಗಂಟೆಯಲ್ಲಿ ನಾವು ೮ಕಿಮೀ ಕ್ರಮಿಸಿದ್ದೆವು.

 ಅಲ್ಲಿಗೆ ಆ ದಿನದ ಚಾರಣ ಮುಕ್ತಾಯ. ಅಲ್ಲಿಯ ಕ್ಯಾಂಪ್ ಲೀಡರ್ ಪಂಜಾಬಿನ ತರುಣಿ ನಗುಮೊಗದ ಆಭಾ ಜೋಷಿ. ಬಹಳ ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಂಡಳು. ಕಷ್ಟವಾಯಿತೆ? ಎಂದು ತಮ್ಮ ಮನೆಗೆ ಅತಿಥಿಗಳು ಬಂದವರನ್ನು ಮಾತಾಡಿಸುವಂತೆ ಮಾತಾಡಿಸಿದರು. ಅವರು ನಮಗೆ ಅಪರಿಚಿತರು ಎಂಬ ಭಾವನೆಯೇ ಬರಲಿಲ್ಲ.

     ಸ್ವಾಗತ ಪಾನೀಯ (ಸ್ಥಳೀಯವಾಗಿ ಬೆಳೆಯುವ ಬುರಾನ(burans) (ಸಾಮಾನ್ಯ ಹೆಸರು) ವೈಜ್ಞಾನಿಕ ನಾಮಧೇಯ rhododendron) ಹೂವಿನಿಂದ ತಯಾರಿಸಿದ್ದಂತೆ.) ಪಿಂಕ್ ಬಣ್ಣದ ದ್ರವ ಕೊಟ್ಟರು. ಯಾವುದೇ ಪರಿಮಳ ಇರಲಿಲ್ಲವಂತೆ. (ನಾನು ಕುಡಿಯಲಿಲ್ಲ) ನಾವು ದಾರಿಯಲ್ಲಿ ಬರುತ್ತ, ಈ ಮರವನ್ನು, ಹೂವನ್ನು ನೋಡಿದ್ದೆವು. ಸುಮಾರು ೨೦ಮೀಟರ್ ಎತ್ತರ ಬೆಳೆಯುವ ಮರ. ಮರದ ತುಂಬ ಕೆಂಪು, ಪಿಂಕ್ ಬಣ್ಣದ ಹೂವು. ನೋಡಲು ಚಂದವಾಗಿದೆ. ಬುರಾನ್ಸ್ ಹೂ ಔಷಧೀಯ ಗುಣಗಳನ್ನು ಹೊಂದಿದೆಯಂತೆ, ಉರಿಯೂತ, ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆಯಂತೆ. ಇದರಿಂದ ಚಟ್ನಿ, ಹಾಗೂ ಪಾನಿಯ ತಯಾರಿಸುತ್ತಾರಂತೆ.

   ಸಂಜೆ ೪ ಗಂಟೆಗೆ ಚಹಾ, ಪಕೋಡ (ಸ್ಥಳೀಯವಾಗಿ ಮಟ್ಟಿ ಎನ್ನುವುದು) ಸವಿದೆವು. ೫.೩೦ಗೆ ಜೋಳದ ಸೂಪ್ ಕುಡಿದೆವು. ಚಳಿಯ ವಾತಾವರಣಕ್ಕೆ ಹಿತಕರವಾಗಿತ್ತು.  

ಒಂದು ಗುಡಿಸಲಿನಲ್ಲಿ ಸೋಲಾರ್ ದೀಪದ ಬೆಳಕಿನಲ್ಲಿ ಇಬ್ಬರು ಅಡುಗೆಯಲ್ಲಿ ನಿರತರಾಗಿದ್ದುದು ಕಂಡಿತು. (ಬಹಳ ರುಚಿಕರ ತಿನಿಸನ್ನು ಮಾಡಿದ್ದರು) ಅಲ್ಲಿಗೆ ಅಡುಗೆ ಸಾಮಾನು, ಗ್ಯಾಸ್ ಸಿಲಿಂಡರ್ ಎಲ್ಲ ಹೇಸರಗತ್ತೆಯ ಮೂಲಕ ಸಾಗಿಸಲಾಗುತ್ತದೆ.

    ಆಭಾ ಜೋಷಿಯವರೊಡನೆ ಹರಟುತ್ತ ಕೂತೆವು. ಅವರು ಸುಮಾರು ೧೫ ದಿನ ಅಲ್ಲಿ ವಾಸವಾಗಿದ್ದರು. ಅವರ ಈ ಸೇವೆಯನ್ನು ನಿಜಕ್ಕೂ ಮೆಚ್ಚಬೇಕು. ವಿದ್ಯುತ್, ಮೊಬೈಲ್ ಸಂಪರ್ಕ, ಇತ್ಯಾದಿ ಯಾವ ಆಧುನಿಕ ಸೌಕರ್ಯವೂ ಇಲ್ಲದ ಸ್ಥಳದಲ್ಲಿ ಅದೂ ಒಬ್ಬರೇ (ಇಬ್ಬರು ಸಹಾಯಕ ಅಡುಗೆಯವರನ್ನು ಹೊರತುಪಡಿಸಿ) ಪರಸ್ಥಳದಲ್ಲಿ ಅಷ್ಟು ದಿನ ಇರುವುದು ಸಾಮಾನ್ಯ ಸಂಗತಿಯಲ್ಲ. (ನಮ್ಮದು ಏಳನೇ  ತಂಡ. (ಒಟ್ಟು ಹತ್ತು ತಂಡಗಳು.) ಆದರೂ ಅವರ ಮುಖದಲ್ಲಿ ನಗು ಮಾಸಿರಲಿಲ್ಲ.) ನಮಗೆ ಊಟ ತಿಂಡಿ ಬಡಿಸಲು ಅವರೇ ನಿಂತಿದ್ದರು, ಹಾಗೂ ಬೆಳಗ್ಗೆ ಪೂರಿ ಮಾಡಿದ ಹಾಗೆಯೇ ಬಿಸಿ ಬಿಸಿ ಫೂರಿ ತಂದು ನಾವು ಕೂತಲ್ಲಿಗೇ ಬಡಿಸುತ್ತಲಿದ್ದರು.  

 
    ಅಲ್ಲೆ ಹರಿಯುತ್ತಲಿದ್ದ ಅಸ್ಸಿಗಂಗಾನದಿಗೆ ಇಳಿದೆವು.  ನೀರು ತಣ್ಣಗೆ ಕೊರೆಯುತ್ತಲಿತ್ತು. ರಾತ್ರಿಯಾಗುತ್ತಿದ್ದಂತೆಯೇ ಚಳಿ ಸುರುವಾಗಿತ್ತು. (೭ಡಿಗ್ರಿ ತಾಪಮಾನ) ಸ್ವೆಟರ್, ಟೊಪ್ಪಿಧಾರಿಗಳಾದೆವು. 


 ಬೆಳಕು ಕಂತುವ ಮೊದಲು ೬.೩೦ಗೆ ರಾತ್ರಿಯೂಟ (ಚಪಾತಿ, ಪಲ್ಯ, ಅನ್ನ ಸಾರು, ಹಪ್ಪಳ, ಪಾಯಸ) ಮುಗಿಸಿದೆವು.  
  ಅಲ್ಲಿ ಪಾಯಿಖಾನೆ ವ್ಯವಸ್ಥೆ, ನೀರಿನ ಸೌಕರ್ಯವಿತ್ತು. ನಮಗೆ ಮಲಗಲು ಒಂದು ಕಟ್ಟಡದಲ್ಲಿ ವ್ಯವಸ್ಥೆಯಾಗಿತ್ತು. ಅಲ್ಲಿ ನೆಲಕ್ಕೆ ಜಮಾಖಾನ, ಮಲಗಲು ಮಲಗುಚೀಲದ ಸೌಕರ್ಯವಿತ್ತು. ಅವೆಲ್ಲ ತಣ್ಣಗೆ ಕೊರೆಯುತ್ತಲಿತ್ತು!  ಮಾಡಲು ಬೇರೇನು ಕೆಲಸವಿಲ್ಲದ ಕಾರಣ ಬೇಗನೆ ಮಲಗಿ ನಿದ್ರಿಸಿದೆವು.
  ಇಲ್ಲಿ ಬಳಸಿದ ಕೆಲವು ಚಿತ್ರಗಳು ಸಹಚಾರಣಿಗರದು. 
ಮುಂದುವರಿಯುವುದು

ಬುಧವಾರ, ಮೇ 25, 2022

ಭಾರತ ದರ್ಶನ (ಪುರಿ, ಕೊನಾರ್ಕ್,ಕೊಲ್ಕತ್ತ, ಗಯಾ, ವಾರಣಾಸಿ, ಅಯೋಧ್ಯಾ, ಪ್ರಯಾಗರಾಜ್) ಭಾಗ ೩

 ಅಯೋಧ್ಯಾ ದೇವಾಲಯ ಕಾರ್ಯಾಗಾರ

 ಅಯೋಧ್ಯೆ ಸುತ್ತುವುದು ನಮ್ಮ್ಮದೇ ಖರ್ಚು. ನಾವು ಆಟೋದಲ್ಲಿ ಅಯೋಧ್ಯೆಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೊರಟೆವು. ಒಂದು ಆಟೋದಲ್ಲಿ ಹತ್ತು ಮಂದಿ. ಯಾವ್ಯಾವ ಸ್ಥಳಗಳಿಗೆ ಹೋಗಬಹುದೆಂದು ಗೂಗಲ್ ಸಹಾಯದಿಂದ ಮೊದಲೇ ಪಟ್ಟಿ ಮಾಡಿಟ್ಟುಕೊಂಡಿದ್ದೆವು. ಮೊದಲಿಗೆ ನಾವು ಅಯೋಧ್ಯೆ ದೇಗುಲ ನಿರ್ಮಾಣ ಕಾರ್ಯಕ್ಕೆ ಬೇಕಾದ ಕಲ್ಲು ಕೆತ್ತನೆಗಳು ಮಾಡುವ ಸ್ಥಳಕ್ಕೆ ಹೋದೆವು.

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕಾಗಿ ಕರಸೇವಕಪುರ ಸಂಕೀರ್ಣದಲ್ಲಿ ಕಲ್ಲಿನ ಕೆತ್ತನೆ ಕಾರ್ಯ ಭರದಿಂದ ಸಾಗುತ್ತಲಿತ್ತು. ಸುಮಾರು ೩ ದಶಕಗಳ ಹಿಂದೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲಾಯಿತು. ಅದೇ ಸಮಯದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ ಇಲ್ಲಿ ಕಲ್ಲಿನ ಕೆತ್ತನೆ ಕಾರ್ಯ ಪ್ರಾರಂಭಿಸಲಾಗಿತ್ತು. ಸುಮಾರು ೧೫ ವರ್ಷಗಳ ಕಾಲ ಕಲ್ಲುಗಳ ಕೆತ್ತನೆ ಕಾರ್ಯ ಮುಂದುವರಿದಿತ್ತು. ಅನಂತರ ನಿಂತು ಹೋಗಿತ್ತು. ಈಗ ಪುನಃ ಕೆತ್ತನೆ ಕೆಲಸ ಮುಂದುವರಿದಿದೆ. ರಾಜಸ್ಥಾನದ ಕುಶಲಕರ್ಮಿಗಳು ಕಲ್ಲುಕೆತ್ತನೆ ಕೆಲಸ ಮಾಡುತ್ತಿರುವರು. ಅವನ್ನೆಲ್ಲ ನೋಡುವ ಅವಕಾಶ ನಮಗೆ ಲಭಿಸಿತ್ತು.


   
ರಾಮ ದರ್ಬಾರ್ ಮಂದಿರ

 ರಾಮನ ದೇವಾಲಯ, ದೇಗುಲ ಬಹಳ ದೊಡ್ದದಾಗಿದೆ. ಹಳೆಯ ಕಾಲದ ಕೆತ್ತನೆಗಳು, ಒಂದು ಪಾರ್ಶ್ವದಲ್ಲಿ ಸೀತಾಮಾತಾ ಕಾ ರಸೋಯಿ ಘರ್ ಇದೆ. ಸೀತೆ ಅಡುಗೆ ಮಾಡಿದ ಕೋಣೆ!


  

ಬಡೆ ಹನುಮಾನ್

ಹೇಸರೇ ಹೇಳುವಂತೆ ದ್ವಾರದಲ್ಲೇ ೧೫ ಅಡಿಯ ಬೃಹತ್ ಹನುಮಂತನ ಪ್ರತಿಮೆ ಗಮನ ಸೆಳೆಯುತ್ತದೆ. ಹನುಮನ ದೇಗುಲ.

  ರಾಮಮಂದಿರ

ಪ್ರಸ್ತುತ ರಾಮಮಂದಿರ ನಿರ್ಮಾಣವಾಗುವ ಸ್ಥಳದ ಸಮೀಪ ಈ ರಾಮಮಂದಿರ ಇದೆ. ಅಲ್ಲಿಗೆ ಹೋಗಲು ಕಠಿಣ ತಪಾಸಣೆ ಮಾಡುತ್ತಾರೆ. ಕೈಯಲ್ಲಿ ನೀರೂ ಒಯ್ಯುವಂತಿಲ್ಲ. ಸರತಿ ಸಾಲಿನಲ್ಲಿ ಅರ್ಧ ಗಂಟೆ ಸಾಗಿ ಒಳಗೆ ಹೋದೆವು. ದೂರದಲ್ಲಿ ರಾಮಂದಿರ ನಿರ್ಮಾಣ ಕಾರ್ಯ ಸಾಗಿರುವುದು ಕಾಣುತ್ತದೆ.  ೫ ಆಗಸ್ಟ್ ೨೦೨೦ರಂದು ಅಲ್ಲಿ ಭೂಮಿಪೂಜೆ ನಡೆದಿತ್ತು. ೨೦೨೩ಕ್ಕೆರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಬಹುದು ಎಂಬ ಅಂದಾಜು ಇದೆ. ಆಗಸ್ಟ್ ೨೦೨೧ರಲ್ಲಿ ರಾಮಮಂದಿರ ನಿರ್ಮಾಣವನ್ನು ಸಾರ್ವಜನಿಕರು ವೀಕ್ಷಿಸಲು ವೀಕ್ಷಣಾ ಸ್ಠಳ ರಚಿಸಲಾಯಿತು. ರಾಮಮಂದಿರ ನಿರ್ಮಾಣದ ಜವಾಬ್ದಾರಿ ಎಲ್ ಅಂಡ್ ಟಿ ಕಂಪೆನಿಗೆ ದೊರೆಯಿತು.

ಹನುಮಾನ್ ಗಢ

೧೦ನೇ ಶತಮಾನದಲ್ಲಿ ನಿರ್ಮಾಣವಾದ ಹನುಮಾನ್ ಗಢ ದೇಗುಲ ಅಯೋಧ್ಯೆಯಲ್ಲಿದೆ. ಸುಮಾರು ೭೦ ಮೆಟ್ಟಲು ಹತ್ತಿ ದೇಗುಲಕ್ಕೆ ಹೋಗಬೇಕು. ಅಂಜನಿಯ ತೊಡೆಮೇಲೆ ಹನುಮಂತನನ್ನು ಕೂರಿಸಿದ ಪ್ರತಿಮೆ.

  ರಾವಣನನ್ನು ಸೋಲಿಸಿದನಂತರ ರಾಮನು ಅಯೋಧ್ಯೆಗೆ ಹಿಂತಿರುಗುತ್ತಾನೆ. ಹನುಮಂತನೂ ಅಯೋಧ್ಯೆಯಲ್ಲೇ ವಾಸಿಸಲು ಪ್ರಾರಂಭಿಸುತ್ತಾನೆ. ಅದೇ ಸ್ಥಳ ಈಗ ಹನುಮಾನ್ ಗಢ ಅಥವಾ ಹನುಮಾನ್ ಕೋಟ್ ಎಂದು ಹೆಸರು ಪಡೆಯಿತು.

ಚಾರ್ಧಾಮ ಮಂದಿರ

ಮೂಲ ಚಾರ್ಧಾಮ ಮಂದಿರಕ್ಕೆ ಭೇಟಿ ನೀಡಲು ಸಾಧ್ಯವಿಲ್ಲದವರಿಗಾಗಿ ಈ ಚಾರ್ಧಾಮ ಮಂದಿರ ನಿರ್ಮಿಸಲಾಯಿತಂತೆ. ಇಲ್ಲಿ ರಾಮೇಶ್ವರ ಧಾಮ, ಶ್ರೀದ್ವಾರಕಾಧೀಶಧಾಮ, ಶ್ರೀ ಜಗನ್ನಾಥಧಾಮ ಮತ್ತು ಬದರೀನಾಥಧಾಮಗಳ ವಿಗ್ರಹಗಳಿವೆ.

  ವಾಲ್ಮೀಕಿ ಭವನ

ಮೂರು ಅಂತಸ್ತಿನ ವಾಲ್ಮೀಕಿ ಭವನದ ಒಳಗೆ ಗೋಡೆಗಳ ಮೇಲೆ ವಾಲ್ಮೀಕಿ ಬರೆದ ೨೪೦೦೦ ಶ್ಲೋಕಗಳನ್ನು ಕೆತ್ತಲಾಗಿದೆ. ರಾಷ್ಟ್ರದಾದ್ಯಂತ ಜನರು ರಾಮನಾಮ ಬರೆ್ದು ಕಳುಹಿಸಿದ ನೋಟ್ ಪುಸ್ತಕಗಳು ಇಲ್ಲಿ ಸಂಗ್ರಹವಾಗಿವೆ.

 

ಬಾಬಾ ಶ್ರೀ ಮಣಿರಾಮ್ ದಾಸ್ ಭವನ

 ವಾಲ್ಮೀಕಿ ಭವನದ ಎದುರು ಭಾಗದಲ್ಲೆ ಇರುವ ಈ ಕಟ್ಟಡದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪಟಗಳು, ರಾಮಸೀತೆ ಲಕ್ಷ್ಮಣರ ಪ್ರತಿಮೆಗಳಿವೆ. ಮಲಗಿರುವ ವಿಷ್ಣುವಿನ ವಿಗ್ರಹವಿದೆ.

ಪ್ರವೇಶ ಸಮಯ: ಬೆಳಗ್ಗೆ ೬-೧೧, ಸಂಜೆ ೪ರಿಂದ ೯.೩೦.

ಕನಕ ಭವನ

ವಿಶಾಲವಾದ ಕನಕಭವನದೊಳಗೆ ಹೊಕ್ಕೆವು. ಕನಕ ಭವನ ನೋಡಲು ಭವ್ಯವಾಗಿದೆ. ಸೀತೆಯು ರಾಮನನ್ನು ವಿವಾಹವಾದನಂತರ ಕೈಕೇಯಿ ಸೀತಾದೇವಿಗೆ ಈ ಭವನವನ್ನು ಉಡುಗೊರೆಯಾಗಿ ನೀಡಿದ್ದಳೆಂಬುದು ಪ್ರತೀತಿ. ರಾಮಸೀತೆಯರ ಖಾಸಗಿ ಅರಮನೆಯಾಗಿತ್ತಂತೆ. ೧೮೯೧ರಲ್ಲಿ ಚಂದ್ರಗುಪ್ತ ವಿಕ್ರಮಾದಿತ್ಯ ಅರಮನೆಯನ್ನು ನವೀಕರಿಸಿದನೆಂಬ ಉಲ್ಲೇಖವಿದೆ. ಗರ್ಭಗೃಹದಲ್ಲಿ ರಾಮ ಸೀತೆಯರ ವಿಗ್ರಹಗಳಿವೆ.

ರಾಮನ ಪುತ್ರ ಕುಶನೂ ಈ ದೇವಾಲಯವನ್ನು ನವೀಕರಿಸಿದನು ಎಂಬ ಉಲ್ಲೇಖವಿದೆ.


  ಸರಯೂ ನದಿ

  ಅಯೋಧ್ಯೆ ಸ್ಥಳ ವೀಕ್ಷಣೆಯ ಕೊನೆಯ ಘಟ್ಟ ಸರಯೂ ನದಿ ನೋಡಲು ಹೋದೆವು.

  ಸರಯೂ ನದಿಯು ಭಾರತದ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ನಂದಾಕೋಟ್ ಪರ್ವತದ ದಕ್ಷಿಣದ ಪರ್ವತದಲ್ಲಿ ಹುಟ್ಟುವ ನದಿಯಾಗಿದೆ. ಮಾಹಾಕಾವ್ಯ ರಾಮಾಯಣದಲ್ಲಿ ಈ ನದಿಯ ಉಲ್ಲೇಖವಿದೆ. ಶ್ರೀರಾಮನು ಅಯೋಧ್ಯೆಯ ನಿವಾಸಿಗಳೊಂದಿಗೆ ಸರಯೂ ನದಿಯ ಮೂಲಕ ವೈಕುಂಠಕ್ಕೆ ಹೋದನು ಎಂಬುದು ಪ್ರತೀತಿ.

   ಸರಯೂ ನದಿಯಲ್ಲಿಳಿದು ನೀರನ್ನು ಮುಖಕ್ಕೆ ಎರಚಿಕೊಂಡೆವು. ಆಗ ಒಬ್ಬ ಫೋಟೋಗ್ರಾಫರ್ ಅಲ್ಲಿ ಪ್ರತ್ಯಕ್ಷನಾಗಿ ದುಂಬಾಲು ಬಿದ್ದ. ಕೇವಲ ರೂ. ೨೦. ಒಂದು ಫೋಟೋ ತೆಗೆಸಿಕೊಳ್ಳಿ ಎಂದ. ಆಯಿತು ಎಂದೊಪ್ಪಿದೆವು. ಅವನು ಜೀವನೋಪಾಯಕ್ಕೆ ಈ ಕೆಲಸ ಹಿಡಿದಿರುವನು. ಪ್ರವಾಸಿಗರಿಂದಲೆ ಅವರ ಜೀವನ ಪಥ ಎಂದು ಕನಿಕರಿಸಿದ್ದೇ ತಪ್ಪಾಯಿತು! ಅವನು ಹೇ್ಳಿದಂತೆಲ್ಲ ಫೋಸು ಕೊಟ್ಟು ನಿಂತೆವು! ೨-೩ ಸಲ ಕ್ಲಿಕ್ ಮಾಡಿದ. ಪ್ರಿಂಟ್ ಮಾಡಲು ಓಡಿ ಹೋದ. ೧೦ ನಿಮಿಷದಲ್ಲಿ ೫-೬ ಪ್ರತಿ ಪಟ ಅಚ್ಚು ಹಾಕಿ ನಮ್ಮ ಮುಂದೆ ಹಿಡಿದು ರೂ. ೫೦೦ ಪೀಕಿಸಿಕೊಂಡು ಇನ್ನೊಂದು ಮಿಕ ಹಿಡಿಯಲು ಓಡಿದ!  ೨೦ ರೂಪಾಯಿ ಎಂದೊಪ್ಪಿದ್ದು, ರೂ.೫೦೦ ಕಳೆದುಕೊಳ್ಳಬೇಕಾಯಿತು! ಆ ಪಟ ನಮ್ಮಲ್ಲಿರುವಷ್ಟು ಸಮಯ ಅವನ ನೆನಪು ಸದಾ ಇರುತ್ತದೆ!

ಅಯೋಧ್ಯೆಗೆ ವಿದಾಯ

 ಅಯೋಧ್ಯೆ ಬಿಡುವ ಮುನ್ನ ಅಲ್ಲಿಯ ಚಹಾ ದುಖಾನದಲ್ಲಿ ಕುಡಿಕೆ ಚಹಾ ಕುಡಿಯಲು ನಿಲ್ಲಿಸಲಾಯಿತು. ಚಹಾದೊಂದಿಗೆ ಬಿಸಿಬಿಸಿ ನೀರುಳ್ಳಿ ಪಕೋಡವೂ ಸಾಥ್ ಕೊಟ್ಟಿತು.

ನಾವು ರೈಲು ನಿಲ್ದಾಣ ತಲಪಿದಾಗ ೭ ಗಂಟೆ. ರೈಲು ನಮ್ಮನ್ನು ಸ್ವಾಗತಿಸಿ ಒಳಗೆ ಬರಮಾಡಿಕೊಂಡಿತು! ರೈಲು ಹೊರಡುವಾಗ ರಾತ್ರಿ ೯.೩೦ ಗಂಟೆ. ಊಟಕ್ಕೆ ಪೂರಿ, ಸಾಗು, ಮೊಸರನ್ನ. 

  ಪ್ರಯಾಗ ರಾಜ್

ನಮ್ಮಈ ಪ್ರವಾಸದ  ಕೊನೆಯ ತಾಣ ಪ್ರಯಾಗರಾಜ್. ತಾರೀಕು ೩-೪-೨೦೨೨ರಂದು ಪ್ರಯಾಗ ತಲಪುವಾಗ ಬೆಳಗ್ಗೆ ೫ ಗಂಟೆ. ೮ ಗಂಟೆವರೆಗೂ ರೈಲಲ್ಲೇ ಕಾಲಕ್ಷೇಪ. ತಿಂಡಿ ಸಿಹಿ ಪೊಂಗಲ್, ಚಿತ್ರಾನ್ನ ತಿಂದ ಬಳಿಕವಷ್ಟೇ ಇಳಿಯಲು ಅನುಮತಿ.

 ತ್ರಿವೇಣೀ ಸಂಗಮ

ರೈಲಿಳಿದು ನಮ್ಮನ್ನು ತ್ರಿವೇಣಿಸಂಗಮಕ್ಕೆ ಹೋಗಲು ನದಿ ಬುಡದವರೆಗೆ  ಬಸ್ಸಿನಲ್ಲಿ ಬಿಟ್ಟರು.

ನಾವು ದೋಣಿ ಏರಿದೆವು. ದೋಣಿ ಬಾಡಿಗೆಯೂ ರೈಲ್ವೇಯವರದೇ. ಒಂದು ದೋಣಿಯಲ್ಲಿ ೧೦ ಮಂದಿಗೆ ಅವಕಾಶ. ಗಂಗಾ ಯಮುನಾ ಸರಸ್ವತೀ ನದಿ ಸಂಗಮವಾಗುವ ಸ್ಥಳದಲ್ಲಿ ದೋಣಿ ನಿಲ್ಲಿಸಿದರು.

ಅಲ್ಲಿ ಇನ್ನೊಂದು ದೋಣಿಗೆ ದಾಟಿ ಅಲ್ಲಿ ಗಂಗೆಗೆ ತರ್ಪಣ ಬಿಡಬಹುದು, ಪೂಜೆ ಸಲ್ಲಿಸಬಹುದು. ವೇಣಿದಾನ ನೀಡಬಹುದು. ಸಕಲ ಪೂಜಾ ಕೈಂಕರ್ಯನಡೆಸಲು ವ್ಯವಸ್ಥೆ ಇದೆ. ಒಬ್ಬರು ಪುರೋಹಿತರಿದ್ಡಾರೆ. ನಾವು ಇಷ್ಟಾನುಸಾರ ದಕ್ಷಿಣೆ ಕೊಟ್ಟು(ಇಷ್ಟೇ ಕೊಡಿ ಎಂದು ಕೇಳುವುದಿಲ್ಲ,) ನದಿಗೆ ತೆಂಗು, ಹಾಲು ಅರ್ಪಿಸಿ ನದಿನೀರಲ್ಲಿ ಮಿಂದು ಖುಷಿಪಟ್ಟೆವು. ಈಜು ಬರುವವರು ನದಿಗೆ ಇಳಿದು ಮೀಯಬಹುದು. ಈಜು ಬರದಿದ್ದವರಿಗೆ ಒಂದು ಪಾತ್ರೆಯಲ್ಲಿ ನೀರುಮೊಗೆದು ತಲೆಗೆ ಸುರುದುಕೊಳ್ಳುವ ವ್ಯವಸ್ಥೆ. ಅನಂತ ಚೆನ್ನಾಗಿ ಈಜು ಹೊಡೆದು ಮೇಲೆ ಬಂದ.  

 ದೋಣಿಯಲ್ಲಿ ಬಟ್ಟೆ ಮರೆ ಮಾಡಿ ಒದ್ದೆಬಟ್ಟೆ ಬದಲಾಯಿಸಿಕೊಂಡೆವು.  ಗಂಗಾ ಯಮುನಾ ನದಿಗಳು ರಭಸದಿಂದ ಹರಿಯುತ್ತಲಿತ್ತು. ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಹರಿಯುವುದು.

ಬ್ರಹ್ಮ ಯಾಗ ಮಾಡಿದ ಸ್ಥಳವೇ ಪ್ರಯಾಗ ಎಂದು ಪ್ರತೀತಿ. ಇಲ್ಲಿ ಪ್ರತೀ ೧೨ ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ೧೯೪೯ರಲ್ಲಿ ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ತ್ರಿವೇಣೀಸಂಗಮದಲ್ಲಿ ವಿಸರ್ಜಿಸಲಾಗಿ ತ್ತಂತೆ.

 ನಾವು ಗಂಗಾಪೂಜೆಗೆ ಪುರೋಹಿತರಿಗೆ ೨೦೦ ರೂ. ಹಾಲಿನವನಿಗೆ ರೂ. ೫೦, ತೆಂಗಿನಕಾಯಿಯವನಿಗೆ ರೂ. ೧೦೦, ನಮ್ಮ ದೋಣಿ ನಡೆಸಿದವನಿಗೆ ರೂ.೫೦೦ ಕೊಟ್ಟೆವು.

  ನದಿ ಬಹಳ ಚೊಕ್ಕವಾಗಿದೆ. ಈಗ ನದಿಗೆ ಹಳೆಬಟ್ಟೆ ಹಾಕಲು ಅನುಮತಿ ಇಲ್ಲವಂತೆ. ಮೊದಲೆಲ್ಲಾ ಪೂಜೆ ಮಾಡಿ ಒದ್ದೆಯಾದ ಬಟ್ಟೆಯನ್ನು ನದಿಗೆ ಎಸೆಯುತ್ತಿದ್ದರಂತೆ. ಈಗ ದೋಣಿ ನಡೆಸುವವರಿಗೇ ಕೊಟ್ಟರೆ ತೆಗೆದುಕೊಳ್ಳುತ್ತಾರೆ. ಅನಂತ ಹಾಗೂ ದಾಮೋದರ ಕಿಣಿ ಅವರು ಧರಿಸಿದ ಒದ್ದೆಬಟ್ಟೆ ಅವನಿಗೆ ಕೊಟ್ಟರು.

೧೦.೨೦ಕ್ಕೆ ವಾಪಾಸು ದಡಕ್ಕೆ ಬಂದೆವು.  ಸರಿಯಾದ ಮಾಹಿತಿ ಇಲ್ಲದೆ ಎಲ್ಲಿಗೂ ಹೋಗಲಾಗದೆ ಅಲ್ಲೇ ಬಿಸಿಲಲ್ಲಿ ಸೆಖೆಯಿಂದ  ಒದ್ದಾಡಿದೆವು. ಐಸ್ಕ್ರೀಂ, ಸೌತೆಕಾಯಿ ತಿನ್ನುತ್ತ ಕಾಲ ಕಳೆದೆವು. ಅಂತೂ ೧೨.೧೫ಕ್ಕೆ ಎಲ್ಲರೂ ಬಂದು ಸೇರಿದಾಗ ಬಸ್ ಹೊರಟು ರೈಲು ನಿಲ್ದಾಣಕ್ಕೆ ನಮ್ಮನ್ನು ಹಾಕಿತು.

 ಪ್ರಯಾಗರಾಜ್ ಗೆ ಟಾಟಾ

ರೈಲುನಿಲ್ದಾಣದಲ್ಲಿ ೮೦೦ ಮಂದಿ ಕೂತು ನಿಂತು ನಿದ್ದೆ ತೂಗಿ, ಸೆಖೆಗೆ ಬಸವಳಿದು ಕಾಲಕಳೆದಾಗುವಾಗ ೨ ಗಂಟೆಗೆ ಅಂತೂ ಇಂತೂ ರೈಲು ಬಂತು. ರೈಲೇರಿ ಕೂತ ಕೂಡಲೇ ಅನ್ನಪೂರ್ಣರು ಬಂದು ಉಟ (ಅನ್ನ, ಸಾರು, ಸಾಂಬಾರು, ಮಜ್ಜಿಗೆ, ಹಪ್ಪಳ, ಅಕ್ಕಿ ಪಾಯಸ) ಬಡಿಸಿದರು.

ಸದ್ಯ ರೈಲು ಹೊರಟಿತು ಎಂದು ಸಂತಸ ಪಡುವಷ್ಟರಲ್ಲಿ ಸ್ವಲ್ಪ ಮುಂದೆ ಚಲಿಸಿ ಇನ್ನೊಂದು ನಿಲ್ದಾಣದಲ್ಲಿ ಟಿಕಾಣಿ ಹೂಡಿತು. ಅಲ್ಲಿ ನಿಂತ ರೈಲು ಸಂಜೆ ೬ ಗಂಟೆಗೆ ಹೊರಟಿತು. ಮುಂದೆ ಕೆಲ ನಿಲ್ದಾಣಗಳಲ್ಲೂ ನಿಂತೂ ಹೀಗೆ ಅಲ್ಲಲ್ಲಿ ನಿಂತು ಹೊರಡುತ್ತಲಿತ್ತು. ಹಸಿರು ನಿಶಾನೆ ಸಿಗಲು ಬಹಳ ಕಷ್ಟ. ರೈಲು ನಿಂತ ಕೂಡಲೇ ಒಳಗಿದ್ದವರು ಸೆಖೆಗೆ ಒಡ್ದಡುವಂತಾಗುತ್ತಲಿತ್ತು. ಕಾಲಕಾಲಕ್ಕೆ ಹೊಟ್ಟೆಗೆ ಏನೂ ಕೊರತೆಯಾಗದಂತೆ ರೈಲಿನ ಬಾಣಸಿಗರು ಹಾಗೂ ಬಡಿಸುವ ಮಂದಿ ಬಹಳ ಮುತುವರ್ಜಿಯಿಂದ ನೋಡಿಕೊಂಡಿದ್ದರು. ರಾತ್ರೆ ಊಟಕ್ಕೆ ಉಪ್ಪಿಟ್ಟು, ಬದನೆ ಗಸಿ, ಅನ್ನ ಮಜ್ಜಿಗೆ, ಉಪ್ಪಿನಕಾಯಿ ಬಡಿಸಿದರು. ನಾನು ರಾತ್ರೆಯ ಈ ಊಟ ಮಾಡಲಿಲ್ಲ. ನಾವು ಬೇಗನೇ ಮಲಗಿದೆವು.

ಬೆಂಗಳೂರಿನೆಡೆಗೆ ಗಮನ

 ತಾರೀಕು ೪-೪-೨೦೨೨ರಂದು ಬೆಳಗ್ಗೆ ೬.೩೦ಗೆ ಎದ್ದು ಆಂಧ್ರ ಗಡಿಗೆ ಬಂದಿದ್ದೇವೋ ಎಂದು ನೋಡಿದರೆ ಗೋಧಿ ಗದ್ದೆಯೇ ಕಾಣುತ್ತಲಿತ್ತು. ಇನ್ನೂ ಒಂದು ದಿನವಿಡೀ ರೈಲಲ್ಲಿ ಕಾಲ ಕಳೆಯಬೇಕು ಎಂಬ ಭಾವದಿಂದ ಬೇಸರಹೊತ್ತ ಮನಕ್ಕೆ ತಿಂಡಿ ಬಡಿಸಿ ಸಂತೃಪ್ತಿ ಪಡಿಸಿದರು! ರಾಗಿ ಶ್ಯಾವಿಗೆ, ಇಡ್ಲಿ ಸಾಂಬಾರ್, ಕೇಸರಿಭಾತ್. ಇಡ್ಲಿ ಇರುವಾಗಲೆಲ್ಲ ನಾನು ರಾಗಿ ಶ್ಯಾವಿಗೆಗೆ ಚಟ್ನಿಪುಡಿ ಬೆರೆಸಿ ತಿನ್ನುತ್ತಲಿದ್ದೆ.

  ಗೋಧಿ ಗದ್ದೆಯ ಸಾಲು ಹಿಂದೆ ಸರಿದು ಭತ್ತದ ಗದ್ದೆ ಕಂಡಾಗ ನಮ್ಮೂರಿಗೆ ಹತ್ತಿರ ಬರುತ್ತಲಿದ್ದೇವೆಯೊ ಎಂಬ ಆಶಾಭಾವ  ಹಣಕುತ್ತಿತ್ತು.

   ರೈಲ್ವೇ ಸಿಬ್ಬಂದಿಯಲ್ಲಿ ಪಟ ತೆಗೆಯುವವರಿದ್ದರು. ಅವರು ಪ್ರತೀ ಬೋಗಿಗೂ ಹೋಗಿ ಈ ಪ್ರವಾಸದ ಬಗ್ಗೆ ಪ್ರವಾಸಿಗರ ಅನುಭವಗಳನ್ನು ದಾಖಲಿಸಿಕೊಂಡರು. ನಮ್ಮಲ್ಲಿ ಭಾವ ತಮ್ಮ ಅನುಭವವನ್ನು ಸವಿಸ್ತಾರವಾಗಿ ಹೇಳಿದರು.

 ಹೊತ್ತು ಕಳೆಯಲು ಅಂತ್ಯಾಕ್ಷರಿ ಪ್ರಾರಂಭಿಸಿದರು. ತಂಗಿ, ಅಕ್ಕನೂ ಅವರೊಡನೆ ಸೇರಿಕೊಂಡರು. ಪದ್ಯ ಕೇಳುತ್ತ ಕೂತೆವು. ಹೀಗೆ ಸಮಯ ಸಾಗಲು, ಮಧ್ಯಾಹ್ನದ ಊಟ (ಅನ್ನ, ಆಲೂ ಪಲ್ಯ, ಸಾಂಬಾರ್, ಸಾರು, ಹಪ್ಪಳ, ಮಜ್ಜಿಗೆ ಉಪ್ಪಿನಕಾಯಿ) ಮಾಡಿ ನಿದ್ದೆ ಹೊಡೆದೆವು.

  ಭಜನೆ -ಕಾಲಕ್ಷೇಪ

ತ್ರಿವೇಣಿ ಸಂಗಮದಲ್ಲಿ ತಾಳ ತೆಗೆದುಕೊಂಡಿದ್ದೆವು. ರೈಲಲ್ಲಿ ಅದರ ಸದುಪಯೋಗವಾಯಿತು. ಸಂಜೆ ಹೊತ್ತು ಸುಮನ, ಹಾಗೂ ದಾಮೋದರ ಕಿಣಿ, ಸವಿತ, ಮಂಗಲ, ಲಕ್ಷ್ಮೀ ಎಲ್ಲ ಸೇರಿ ಒಂದು ಗಂಟೆ ತಾಳ ತಟ್ಟುತ್ತ ಸುಶ್ರಾವ್ಯವಾಗಿ ಭಜನೆ ಹಾಡಿದರು. ಹಾಡದ ನಾವು ಹಾಡು ಕೇಳುತ್ತ ತಲೆದೂಗುತ್ತ ಕೂತೆವು. ಅಷ್ಟರಲ್ಲಿ ರಾತ್ರೆ ಊಟ (ಚಪಾತಿ, ಬಟಣಿ ಗಸಿ, ಅನ್ನ ಮಜ್ಜಿಗೆ, ಉಪ್ಪಿನಕಾಯಿ) ಬಂತು. ಹೊಟ್ಟೆ ಪೂಜೆಯೂ ಭರ್ಜರಿಯಾಗಿಯೇ ನಡೆಯಿತು.

  ಆಂಧ್ರ ಪ್ರವೇಶ

ತಾರೀಕು ೫-೪-೨೦೨೨ರಂದು ಬೆಳಗ್ಗೆ ಎದ್ದು ನೋಡಿದಾಗ ಇನ್ನೂ ಆಂಧ್ರ ಗಡಿ ದಾಟಿರಲಿಲ್ಲ. ತಿಂಡಿ (ಪೊಂಗಲ್, ಪಕೋಡ, ಕೇಸರಿಭಾತ್) ತಿಂದು ಹೊಟ್ಟೆ ಗಟ್ಟಿಯಾಗಿ ನಮ್ಮ ಪಕ್ಕದ ವಿಭಾಗದವರೂ ನಮ್ಮವರೂ ಸೇರಿ ಪದಬಂಡಿ ಆಟ ಆಡಿದರು. ಸೊಗಸಾದ ಚಲನಚಿತ್ರ ಗೀತೆ ಕೇಳುತ್ತ ಕೂತಾಗ  ಸಮಯ ಸರಿದದ್ದೇ ತಿಳಿಯಲಿಲ್ಲ. ದಾವಣಗೆರೆಯ ಬಸವರಾಜು ಅವರು ಬಲು ಆತ್ಮೀಯವಾಗಿ ನಮ್ಮೊಡನೆ ಮಾತಾಡುತ್ತಲಿದ್ದರು. ಅವರೂ ಅವರ ತಮ್ಮ ಗಂಗಾಧರ ಜೊತೆಗೂಡಿ ಪ್ರವಾಸ ಬಂದಿದ್ದರು. ನಮ್ಮೊಡನೆ ಪಟ ತೆಗೆಸಿಕೊಂಡರು. ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಊಟ (ಹುಳಿಯನ್ನ, ಕೊಕನಟ್ ರೈಸ್, ಚಟ್ನಿ, ಹಪ್ಪಳ ಬಡಿಸಿದರು. ಪೊಗದಸ್ತಾಗಿ ಊಟ ಮುಗಿಸುತ್ತಿದ್ದಂತೆ ೨.೨೦ಕ್ಕೆ ಯಲಹಂಕ ರೈಲು ನಿಲ್ದಾಣ ತಲಪಿಯೇ ಬಿಟ್ಟೆವು. ಹುರೆ ಎಂದು ಎಲ್ಲರಿಗೂ ಟಾಟಾ ಮಾಡಿ ರೈಲಿಳಿದು ಹೊರಗೆ ಬಂದೆವು.

ಮರಳಿ ಮೈಸೂರು

ಉಬರ್ ಕಾರು ಬಾಡಿಗೆಗೆ ಮಾಡಿಕೊಂಡು ನಾವು ೩.೩೦ಕ್ಕೆ ಹೊರಟು ಮೈಸೂರು ತಲಪಿದಾಗ ೭ ಗಂಟೆ ಆಗಿತ್ತು. ಅಲ್ಲಿಗೆ ನಮ್ಮ ೧೧ ದಿನದ ಪಯಣ ಯಶಸ್ವಿಯಾಗಿ ಮುಗಿದಿತ್ತು. ನಮಗೆ ಸರಿ ಸುಮಾರು ತಲಾ ರೂ.೧೯೦೦೦ ಖರ್ಚಾಗಿತ್ತು.

   ಮುಗಿಸುವ ಮುನ್ನ

   ಒಟ್ಟಿನಲ್ಲಿ ನಮ್ಮ ಈ ಯಾತ್ರೆ ಬಲುಕಾಲ ನೆನಪಿನಲ್ಲಿ ಉಳಿಯುವಂತದು. ನಮ್ಮ ಬೋಗಿಗೆ ಅಷ್ಟೂ ದಿನವೂ ಊಟ ಬಡಿಸಿದವರು ಅಂಡಮಾನಿನ ಸಿಂಘಾರಾಮ್, ಮದನಕುಮಾರ, ಕರುಣಾಕರ. ನಾವು ಅವರ ಮನೆಗೆ ಬಂದ ನೆಂಟರೇನೋ ಎಂಬಂತೆ ಕಕ್ಕುಲತೆಯಿಂದ ಮಾತಾಡಿಸಿ ಪ್ರೀತಿಯಿಂದ ಊಟ ಬಡಿಸುತ್ತಲ್ಲಿದ್ದರು. ಎಲ್ಲ ಕೆಲಸಗಾರರಿಗೂ ನಮ್ಮ ತಂಡದ ವತಿಯಿಂದ ಭಕ್ಷೀಸು ಕೊಡುವ ಏರ್ಪಾಡು ಮಾಡಿದ್ದೆವು. 

   ಅಷ್ಟು ದಿನದ ರೈಲು ಪಯಣದಲ್ಲಿ ನಮಗೆ ಸೆಖೆ ಬಿಟ್ಟರೆ ಬೇರೆ ಏನೂ ತೊಂದರೆಯಾಗಲಿಲ್ಲ. ಪಾಯಿಖಾನೆ ಅತ್ಯಂತ ಸ್ವಚ್ಛವಾಗಿ ಇತ್ತು. ಪಕ್ಕದ ಬೋಗಿಯವರಿಗೂ ವಾಸನೆ ಬರುತ್ತಲಿರಲಿಲ್ಲ.  ಪ್ರತಿ ದಿನ ಎರಡು ಸಲ ಪಿನಾಯಿಲ್ ಹಾಕಿ ಸ್ವಚ್ಛಗೊಳಿಸುತ್ತಲಿದ್ದರು. ಪಾಯಿಖಾನೆಯಲ್ಲಿ ನೀರು ಕಡಿಮೆಯಾದಾಗಲೆಲ್ಲ ಟ್ಯಾಂಕ್ ಭರ್ತಿ ಮಾಡುತ್ತಲಿದ್ದರು. ಪ್ರತೀ ದಿನ ತಿಂಡಿ ಊಟದ ಬಳಿಕ ರೈಲನ್ನು ಸ್ವಚ್ಛಗೊಳಿಸುತ್ತಲಿದ್ದರು. ರೈಲಿನ ಸಿಬ್ಬಂದಿ ವರ್ಗದವರು ನಮ್ಮೊಡನೆ ಆತ್ಮೀಯತೆಯಿಂದ ಇದ್ದರು. ಊಟ ತಿಂಡಿ ಅಂತೂ ಪ್ರತೀದಿನ ಬಹಳ ರುಚಿಯಾಗಿ ಆರೋಗ್ಯಕರವಾಗಿತ್ತು. ಹುಳಿ ಉಪ್ಪು, ಎಣ್ಣೆ ಹಿತಮಿತವಾಗಿತ್ತು. ಮಧುರೆ ವಿಭಾಗದ ವತಿಯಿಂದ ಬಾಣಸಿಗರು ಅಡುಗೆ ತಯಾರಿಸಿದ್ದಂತೆ.

ಸಿಂಘಾರಾಂ
  ಇಷ್ಟು ಜನರ ಯಾತ್ರೆ ಸಂಘಟಿಸುವುದು ಬಹಳ ದೊಡ್ದ ಕೆಲಸ. ಒಟ್ಟಿಗೆ ಯಾತ್ರೆ ಹೊರಟಾಗ ಆದಷ್ಟು ಸಂಘಟಕರೊಂದಿಗೆ ಸಹಕರಿಸಬೇಕು. ಸಣ್ಣಪುಟ್ಟ ತೊಂದರೆಯನ್ನು ದೊಡ್ಡ ವಿಷಯವಾಗಿ ಮಾಡಿ ಜಗಳಾಡದೆ ಹೊಂದಿಕೊಳ್ಳುವ ಮಾನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಒಮ್ಮೆಯಾದರೂ ಇಂಥ ಯಾತ್ರೆ ಮಾಡಲೇಬೇಕು. ಎಂತೆಂಥ ಜನರಿರುತ್ತಾರೆ ಎಂಬ ಅನುಭವ ಆಗುತ್ತದೆ ಹಾಗೂ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಲು ಅನುಕೂಲವಾದೀತು.

ನಮಗಾದ ಸಣ್ಣಪುಟ್ಟ ತೊಂದರೆ ಎಂದರೆ ಸರಿಯಾಗಿ ಸಿಗ್ನಲ್ ಸಿಗದೆ ಕೆಲವು ಕಡೆ ಘಂಟೆಗಟ್ಟಲೆ ರೈಲು ಹೊರಡದೆ ನಿಲ್ಲುತ್ತಿದ್ದುದು, ಅದರಿಂದ ವಾಪಾಸು ಊರು ತಲಪುವಾಗ ವಿಳಂಬವಾದದ್ದು, ಸೆಖೆಯ ವಾತಾವರಣ. ಬಾಕಿ ಬೇರೇನೂ ಸಮಸ್ಯೆಯಾಗಲಿಲ್ಲ. 

 ಕಡಿಮೆ ಖರ್ಚಿನಲ್ಲಿ ಆದಷ್ಟು ಉತ್ತಮ ಸವಲತ್ತು ಕೊಟ್ಟು ಅಚ್ಚುಕಟ್ಟಾಗಿ ಪ್ರವಾಸ ಯೋಜಿಸಿದ ಐಆರ್ಸಿಟಿಸಿ ರೈಲ್ವೇಯ ಸಿಬ್ಬಂದಿ ವರ್ಗದವರೆಲ್ಲರಿಗೂ ನಮ್ಮ ತಂಡದ ಪರವಾಗಿ ಅನಂತಾನಂತ ಧನ್ಯವಾದ  

 

 

 

 

 

 

 

 

 

 

 

 

 

ಸೋಮವಾರ, ಮೇ 23, 2022

ಭಾರತ ದರ್ಶನ (ಪುರಿ, ಕೊನಾರ್ಕ್,ಕೊಲ್ಕತ್ತ, ಗಯಾ, ವಾರಣಾಸಿ, ಅಯೋಧ್ಯಾ, ಪ್ರಯಾಗರಾಜ್) ಭಾಗ ೨

 ವಾರಾಣಾಸಿ

 ತಾರೀಕು ೧.೪.೨೦೨೨ರಂದು ಬೆಳಗಿನ ಝಾವ ೨.೧೫ಕ್ಕೆ ವಾರಾಣಾಸಿ ರೈಲು ನಿಲ್ದಾಣ ತಲಪಿ, ಅಲ್ಲಿಂದ ಬಸ್ ಹತ್ತಿ ನಾಗಸಾಧು ಆಶ್ರಮ ತಲಪಿದಾಗ ೩.೩೦ ಗಂಟೆ. ಅಲ್ಲಿ ನಮಗೆ ಅನುಕೂಲಕರವಾದ ಕೋಣೆ ದೊರೆತಿತ್ತು. ಕೋಣೆಯೊಳಗೇ ಬಚ್ಚಲು ಪಾಯಿಖಾನೆ, ಬಿಸಿನೀರಿನ ಸೌಲಭ್ಯ ಕೂಡ ಇತ್ತು. ಎಲ್ಲರೂ ಖುಷಿಯಿಂದ ಸ್ನಾನ ಮಾಡಿ ೫.೩೦ಗೆ ಹೊರಟು ತಯಾರಾದೆವು.

  ಕಾಶಿ ವಿಶ್ವಣಾಥ ದೇಗುಲ

ರಿಕ್ಷಾದಲ್ಲಿ ಕಾಶಿ ವಿಶ್ವನಾಥನ ಸನ್ನಿಧಾನಕ್ಕೆ ಹೋದೆವು. ಅಲ್ಲಿ ಹೊರಗೆ ದೇವಾಲಯದ ವತಿಯಿಂದಲೇ ಉಚಿತವಾಗಿ ನಮ್ಮ ಮೊಬೈಲ್ ಇಡಲು ಲಾಕರ್ ವ್ಯವಸ್ಥೆ ಇತ್ತು. ರಿಕ್ಷಾದವರು ಕೆಲವು ಅಂಗಡಿಗಳ ಮುಂದೆ ನಿಲ್ಲಿಸಿ ಇಲ್ಲಿ ಲಾಕರ್ ಇದೆ, ಎಂದು ನಮ್ಮನ್ನು ಯಾಮಾರಿಸಲು ನೋಡುತ್ತಾರೆ. 

 ವಿಶ್ವನಾಥ ದೇಗುಲಕ್ಕೆ ಬೃಹತ್ ಆವರಣ ಗೋಡೆ (ಕಾರಿಡಾರ್) ಇತ್ತೀಚೆಗೆ ಭವ್ಯವಾಗಿ ಕಟ್ಟಿದ್ದಾರೆ. ಅದರ ಸೊಬಗನ್ನು ನೋಡಿದೆವು. ಹೇಗೆ ಒಳಗೆ ಹೋಗಬೇಕೆಂಬ ಬಗ್ಗೆ ಅಲ್ಲಿಯ ಪೊಲೀಸ್ ಅವರ ನೆರವು ಕೇಳಿದೆವು.

 ನಾವು ಒಂದು ಗೇಟಿನಲ್ಲಿ ದೇವಾಲಯದೊಳಗೆ ಹೋದೆವು. ಒಳಗೆ ಹೋಗಲು ತಪಾಸಣೆ ಜೋರಾಗಿದೆ. ಮೊಬೈಲ್ ಕೊಂಡೋಗುವಂತಿಲ್ಲ. ಸರತಿ ಸಾಲಿನಲ್ಲಿ ನಿಂತು ಸಾಗಿದೆವು. ಕೇವಲ ಅರ್ಧ ಗಂಟೆಯೊಳಗೆ ನಮಗೆ ವಿಶ್ವನಾಥನ ದರ್ಶನವಾಯಿತು. ಬಹಳ ಅಚ್ಚುಕಟ್ಟಾದ ವ್ಯವಸ್ಥೆ. ಮೂರು ಕಡೆಯಿಂದ ಸರತಿ ಸಾಲು. ಹಾಗಾಗಿ ನೂಕುನುಗ್ಗಲು ಇಲ್ಲವೇ ಇಲ್ಲ. ದೇವಾಲಯದ ಪರಿಸರ ಬಹಳ ಚೊಕ್ಕವಾಗಿದೆ.

 ವಿಶ್ವನಾಥನ ದೇಗುಲ ಗಂಗಾನದಿಯ ಪಶ್ಚಿಮ ದಡದಲ್ಲಿದೆ. ಈ ದೇಗುಲ ಅನೇಕ ಸಲ  ದುಷ್ಟರಿಂದ ಹಾನಿಗೊಳಗಾಗಿತ್ತು. ಈಗಿರುವ ದೇಗುಲವನ್ನು ೧೭೮೦ರಲ್ಲಿ ಇಂದೋರಿನ ರಾಣಿ ಅಹಲ್ಯಬಾಯಿ ಹೋಳ್ಕರ್ ಅವರ ನೇತೃತ್ತ್ವದಲ್ಲಿ ಅಸ್ತಿತ್ತ್ವಕ್ಕೆ ಬಂದಿತು. ೧೯೮೩ರಿಂದ ಈ ದೇವಾಲಯವನ್ನು ಉತ್ತರಪ್ರದೇಶ ಸರಕಾರ ನಿರ್ವಹಿಸುತ್ತ ಬರುತ್ತಿದೆ.

   ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ ೨೦೧೯ರಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಬಗ್ಗೆ ಕಾರ್ಯಪ್ರವೃತ್ತರಾಗಿ ಸುಮಾರು ೧೪೦೦ ನಿವಾಸಿಗಳನ್ನು ಮತ್ತು ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಅವರಿಗೆ ಯುಕ್ತ ಪರಿಹಾರವನ್ನೂ ನೀಡಲಾಯಿತು. ದೇಗುಲ ನವೀಕರಣದ ಸಮಯದಲ್ಲಿ ಗಂಗೇಶ್ವರ ಮಹಾದೇವ, ಮನೋಕಾಮೇಶ್ವರ ಮಹಾದೇವ, ಶ್ರೀ ವಿನಾಯಕ, ಶ್ರೀ ಕುಂಭ ಮಹಾದೇವ ದೇವಸ್ಥಾನ ಸೇರಿದಂತೆ ಪಾಳುಬಿದ್ದ ಶತಮಾನಗಳಷ್ಟು ಹಳೆಯ ಸುಮಾರು ೪೦ ಕ್ಕೂ ಹೆಚ್ಚು ದೇಗುಲಗಳನ್ನು ಪುನರ್ನಿರ್ಮಿಸಲಾಯಿತು.  ೧೩ ದಶಂಬರ ೨೦೨೧ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಥ ದೇಗುಲದ ಕಾರಿಡಾರನ್ನು ಉದ್ಘಾಟಿಸಿದರು. ಈ ಕಾರಿಡಾರನ್ನು ವಿಶ್ವನಾಥ ದೇಗುಲ ಮತ್ತು ಮಣಿಕರ್ಣಿಕಾ ಘಾಟ್ ನಡುವೆ ಗಂಗಾನದಿಯ ಉದ್ದಕ್ಕೂ ನಿರ್ಮಿಸಲಾಗಿದೆ. 

  ಅನ್ನಪೂರ್ಣ ದೇವಿ ಮಂದಿರ

 ವಿಶ್ವನಾಥ  ದೇಗುಲದ ಒಂದು ಪಾರ್ಶ್ವದಲ್ಲೇ ಇರುವ ಅನ್ನಪೂರ್ಣ ದೇವಿ ಮಂದಿರಕ್ಕೆ ಹೋದೆವು. ದೇವಾಲಯದಲ್ಲಿ ಒಂದು ಸುತ್ತು ಬರುತ್ತಿರಬೆಕಾದರೆ ಅಲ್ಲಿದ್ದ ಪಂಡಿತರೊಬ್ಬರು ಕರೆದು ದುಡ್ಡೇನೂ ಕೇಳದೆಯೇ ಕೈಗೆ ಒಂದು ಕೆಂಪು ಅರಿಶಿನ ದಾರ ಕಟ್ಟಿ ತಲೆಮೇಲೆ ಆಶೀರ್ವದಿಸಿ ಕಳುಹಿಸಿದರು.

 ಅನ್ನಪೂರ್ಣ ದೇಗುಲವನ್ನು ೧೮ನೇ ಶತಮಾನದಲ್ಲಿ ಮಾರಾಠ ಪೇಶ್ವೆ ಬಾಜಿರಾವ್ ನಿರ್ಮಿಸಿದನು ಎಂಬ ಉಲ್ಲೇಖವಿದೆ.     ನಮಗೆ ದೇವಾಲಯ ಸುತ್ತ ಕೂಲಂಕುಷವಾಗಿ ಎಲ್ಲಾ ನೋಡಲು ಸಾಧ್ಯವಾಗಲಿಲ್ಲ. ಅಹಲ್ಯಾಬಾಯಿ ಹೋಳ್ಕರ್ ಪ್ರತಿಮೆಯನ್ನೂ ನೋಡಲಾಗಲಿಲ್ಲ.

    ಅಸ್ಥಿ ವಿಸರ್ಜನೆ

ನಮ್ಮ ಭಾವ ಅವರ ಮಾತಾಪಿತೃಗಳ ಅಸ್ಥಿಯನ್ನು ಗಂಗೆಯಲ್ಲಿ ವಿಲೀನಗೊಳಿಸಲು ತಂದಿದ್ದರು. ಅದನ್ನು ವಿಸರ್ಜಿಸಲು ಕೇದಾರ್ ಘಾಟಿನಲ್ಲಿ ವ್ಯವಸ್ಥೆಮಾಡಲು ಹೇರಂಬ ಭಟ್ಟರ ಜೊತೆ ಮಾತಾಡಿ ನಿಗದಿಗೊಳಿಸಿದ್ದರು. ಗಲ್ಲಿ ಗಲ್ಲಿ ಸುತ್ತಿ ಅಂತೂ ಅವರ ಮನೆ ಪತ್ತೆ ಮಾಡಿದೆವು. (ಕಾಶೀ ಸಂಕೇತ ಭವನ, ಬಿ. ೧೪/೧೬, ಮಾನಸ ಸರೋವರ್, ಕೇದಾರ್ ಘಾಟ್ ಅಂಚೆಕಚೇರಿ ಪಕ್ಕ, ವಾರಣಾಸಿ ೨೨೧೦೦೧, ದೂರವಾಣಿ: ೦೫೪೨೨೪೫೫೦೭೬, ೦೯೬೧೬೭೪೬೨೮೭, ೦೮೫೭೬೦೩೦೩೧೪)  ಅಕ್ಕಭಾವ ಅಸ್ಥಿ ವಿಸರ್ಜನೆಯ ವಿಧಿ ವಿಧಾನಗಳಿಗೆ ಕೇದಾರ್ ಘಾಟಿನಲ್ಲಿ ಕುಳಿತರು. ಹೇರಂಬ ಭಟ್ಟರು ನಮ್ಮನ್ನು ನೋಡಿ, ನೀವು ಅಸ್ಥಿ ತಂದವರ ಜೊತೆ ಇದ್ದಿರಿ. ಪವಿತ್ರವಾಗಲು ಗಂಗಾನದಿಯಲ್ಲಿ ಮುಳುಗು ಹಾಕಿ ಏಳಿ ಎಂದರು.

 ನಾವಿನ್ನು ಅಲ್ಲೆ ಇದ್ದರೆ ನಮ್ಮನ್ನು ಗಂಗಾನದಿಯಲ್ಲಿ ಮುಳುಗಿಸಿಯಾರೆಂದು ನಾವು ಅಲ್ಲಿಂದ ಹೊರಟು ನಾಗಸಾಧು ಆಶ್ರಮಕ್ಕೆ ಹೋದೆವು.

ಒಂದು ಆಟೋ ಹತ್ತಿ ನಾಗಸಾಧು ಆಶ್ರಮಕ್ಕೆ ಬಿಡಲು ಹೇಳಿದೆವು. ಅವನು ಯಾವುದೋ ಗಲ್ಲಿ ಬಳಿ ಇಳಿಸಿ, ಇಲ್ಲೇ ಮುಂದೆ ಹೋಗಿ ಸಿಗುತ್ತದೆ ಎಂದು ಮಾಯವಾದ. ವಿಳಾಸ ಹೇಳಲು ನಮ್ಮಲ್ಲಿ ಪುಣ್ಯಕ್ಕೆ ಒಂದು ಕಾರ್ಡ್  ಇತ್ತು. (ನಾವು ಹೊರಡುವ ಮೊದಲು ಒಬ್ಬ ಸೀರೆ ಅಂಗಡಿಯವ ಅವನ ಕಾರ್ಡ್ ಕೊಟ್ಟಿದ್ದ. ಹಾಗಾಗಿ ನಾವು ಬಚಾವ್) ಗಲ್ಲಿ ಗಲ್ಲಿ ಸುತ್ತಿ ವಿಳಾಸ ಕೇಳುತ್ತ ನಾವು ಆಶ್ರಮ ತಲಪುವಲ್ಲಿ ಯಶಸ್ವಿ ಆದೆವು.

  ತಿಂಡಿ (ಪೊಂಗಲ್, ಸಾಂಬಾರ್, ವಡೆ, ಶ್ಯಾವಿಗೆ ಕೇಸರಿಭಾತ್)ತಿಂದು ಕೂತೆವು. ಅಕ್ಕ ಭಾವ ಬರಲು ಇನ್ನೂ ಸಮಯವಿತ್ತು. ಕೋಣೆಯಲ್ಲಿ ಸುಮ್ಮನೆ ಕೂರುವುದುಂಟೆ?

   ಕಾಶಿ ಗಲ್ಲಿಯಲ್ಲಿ ಸುತ್ತಾಟ.

  ತಂಗಿಯೂ ನಾನೂ ಹೊರಗೆ ಗಲ್ಲಿ ಸುತ್ತಲು ಹೊರಟೆವು. ಹಾಗೆ ಒಂದು ಗಲ್ಲಿಯಲ್ಲಿ ಹೋಗುತ್ತಿರುವಾಗ  ಒಬ್ಬರು ಸಿಕ್ಕರು. ಅವರು ಮಾತಾಡುತ್ತ, ನಮ್ಮನ್ನು ಸೀರೆಗಳಿಗೆ ಬಣ್ಣ ಹಾಕುವ ಸ್ಥಳಕ್ಕೆ ಕರೆದೊಯ್ದರು.

   ಅಲ್ಲಿ ನಾಲ್ಕಾರು ಮಂದಿ ಸೀರೆಗಳಿಗೆ ಬಣ್ಣ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದರು. ಅವರ ಅನುಮತಿ ಪಡೆದು ವಿಡಿಯೋ  ಮಾಡಿದೆ. ತುಸು ಹೊತ್ತು ನೋಡಿ ಅಲ್ಲಿಂದ ಮಗ್ಗದ ಮನೆಗೆ ಹೋದೆವು. ಅಲ್ಲಿ ವಿದ್ಯುತ್ ಚಾಲಿತ ಮಗ್ಗದಲ್ಲಿ ಸೀರೆ ನೇಯುತ್ತಲಿದ್ದದ್ದನ್ನು ನೋಡಿ ವಾಪಾಸಾದೆವು. ಅಷ್ಟರಲ್ಲಿ ಅಕ್ಕ ಭಾವ ಹಿಂದಿರುಗಿದ್ದರು.



   ಸಂಕಟಮೋಚನ ದೇಗುಲ (sankat mochan Rd, padampuri colony, bhelupur, Varanasi UP 221010)

 ಎರಡು ರಿಕ್ಶಾದಲ್ಲಿ ನಾವು ಕಾಶಿ ಸುತ್ತಲು ಹೊರಟೆವು. ಸಂಕಟಮೋಚನ ದೇಗುಲವನ್ನು ೧೬ನೇ ಶತಮಾನದಲ್ಲಿ ಕವಿ ಸಂತ ಶ್ರೀ ಗೋಸ್ವಾಮಿ ತುಳಸಿದಾಸ್ ಸ್ಥಾಪಿಸಿದರು. ಇದು ಅಸ್ಸಿ ನದಿಯ ದಡದಲ್ಲಿದೆ. ಇಲ್ಲಿ ಹನುಮ ಮತ್ತು ರಾಮನ ವಿಗ್ರಹಗಳಿವೆ. ತುಳಸೀದಾಸರು ಹನುಮಂತನ ದರ್ಶನ ಪಡೆದ ಸ್ಥಳದಲ್ಲಿಯೇ ಈ ದೇಗುಲ ನಿರ್ಮಿಸಲಾಗಿದೆ ಎಂಬುದು ನಂಬಿಕೆ.

ಪ್ರವೇಶ ಸಮಯ: ಬೆಳಗ್ಗೆ ೪ರಿಂದ ೧೧.೩೦ ಸಂಜೆ ೩ರಿಂದ ರಾತ್ರೆ ೧೦

   ತ್ರಿದೇವ್ ಮಂದಿರ (ಲಮ್ಕಾ ರಸ್ತೆ, ತುಳಸಿಮಾನಸ ಮಂದಿರ ಕಾಲೊನಿ, ನಾರಿಯಾ, ವಾರಣಾಸಿ, ಉತ್ತರಪ್ರದೇಶ)

   ತ್ರಿದೇವಮಂದಿರದಲ್ಲಿ ದುರ್ಗೆ, ರಾಮಸೀತೆ, ಲಕ್ಷ್ಮಣ, ಲಕ್ಷ್ಮೀನಾರಾಯಣರ ಮೂರ್ತಿಗಳಿವೆ. ಉತ್ತರದಲ್ಲಿ ದೇಗುಲದ ಮೂರ್ತಿಗಳು ಅಷ್ಟೇನೂ ಸುಂದರವಾಗಿರುವುದಿಲ್ಲ. ಬೊಂಬೆಗಳಂತೆ ಭಾಸವಾಗುತ್ತವೆ.  ನಮ್ಮ ದಕ್ಷಿಣದಲ್ಲಾದರೆ ಕಲ್ಲಿನ ಮೂರ್ತಿಗಳ ಕೆತ್ತನೆಗಳು ಬಲು ಚೆನ್ನಾಗಿರುತ್ತವೆ.

ತ್ರಿದೇವಿಯರು! 
ಪ್ರವೇಶ: ಬೆಳಗ್ಗೆ ೬ರಿಂದ ೧೨, ಸಂಜೆ ೫ರಿಂದ  ರಾತ್ರೆ ೧೦

ಮಣಿಮಂದಿರ

ಮಣಿಮಂದಿರ ದೇಗುಲದೊಳಗೆ ಕಾಲಿಟ್ಟೊಡನೆ ಗಮನ ಸೆಳೆದ ದೃಶ್ಯ ೧೫೦ಕ್ಕೂ ಹೆಚ್ಚು ಶಿವಲಿಂಗಗಳು ಸಾಲಾಗಿ ಎರಡೂ ಬದಿಗಳಲ್ಲಿ ಜೋಡಿಸಿಟ್ಟಿರುವುದು. ೧೯೪೦ರ ದಶಕದಲ್ಲಿ ಈ ಮಣಿಮಂದಿರವನ್ನು ನಿರ್ಮಿಸಲಾಯಿತು. ಭಗವಾನ್ ರಾಮನ ಪರಂಪರೆಯನ್ನು ಮುಂದುವರಿಸುವುದು ಈ ದೇವಾಲಯದ ಮುಖ್ಯ ಗುರಿಯಂತೆ. ಮಧ್ಯಭಾಗದಲ್ಲಿ ರಾಮದರ್ಬಾರ್ ಇದೆ. ದೇವಾಲಯದ ಒಳಭಾಗ ಗ್ರನೈಟ್ ಶಿಲೆಯಿಂದ ನಿರ್ಮಿಸಲಾಗಿದೆ. ಅಲ್ಲಿ ಅನ್ನಪೂರ್ಣ, ರಾಮಸೀತೆ, ಲಕ್ಷ್ಮಣ, ಆಂಜನೇಯ, ಶಿವ, ಸತ್ಯನಾರಾಯಣ ಪ್ರತಿಮೆಗಳಿವೆ.

  ತುಳಸಿಮಾನಸ ಮಂದಿರ (ಸಂಕಟ ಮೋಚನ ರಸ್ತೆ, ದುರ್ಗಾಕುಂಡ್ ಮಾರ್ಗ, ಜಲನ್, ವಾರಣಾಸಿ, ೨೨೧೦೦೫)

 ವಾರಣಾಸಿಯಲ್ಲಿರುವ ತುಳಸಿಮಾನಸ ಮಂದಿರವನ್ನು ೧೯೬೪ರಲ್ಲಿ ಭಾರತದ ಪಶ್ಚಿಮಬಂಗಾಳದ ಹೌರಾದ ಸುರೇಖಾ ಕುಟುಂಬದವರು ನಿರ್ಮಿಸಿದರು. ಗೋಸ್ವಾಮಿ ತುಳಸಿದಾಸ್ ಅವರು ರಾಮಚರಿತ  ಮಾನಸ ಬರೆದ ಅದೇ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದಂತೆ. ದೇವಾಲಯವನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ದೇವಾಲಯದ ವಿಶೇಷ ಅಂದರೆ, ರಾಮಚರಿತ ಮಾನಸ ಪದ್ಯಗಳು ಮತ್ತು ದೃಶ್ಯಗಳನ್ನು ಗೋಡೆಮೇಲೆ ಉದ್ದಕ್ಕೂ ಕೆತ್ತಲಾಗಿದೆ. ದೇವಾಲಯದಲ್ಲಿ ಕಲಾಕೃತಿಗಳು, ಹಸ್ತಪ್ರತಿಗಳ ಸಂಗ್ರಹ, ಗ್ರಂಥಾಲಯವಿದೆ.

  ಗೌರಿ ಮಂದಿರ

ಯಾವುದೋ ಮೂಲೆಯಲ್ಲಿರುವ ಗೌರಿಮಂದಿರಕ್ಕೆ ರಿಕ್ಷಾ ಚಾಲಕರು ನಮ್ಮನ್ನು ಕರೆದೊಯ್ದರು. ಪುಟ್ಟದಾದ ಗೌರಿ ಗುಡಿ. ಅಲ್ಲಿಯ ಅರ್ಚಕರು, ಕನ್ನಡದಲ್ಲಿ, ‘ಕಾಶೀ ಫಲ ನಿಮಗೆ, ೩ ಕವಡೆ ದೇವಿಗೆ, ಒಂದು ಕವಡೆ ನಿಮಗೆ, ಹುಂಡಿಗೆ ೨೦ ರೂಪಾಯಿ ಹಾಕಿ ಎಂದು ಕನ್ನಡದಲ್ಲಿ ಹೇಳುತ್ತಲಿದ್ದರು! ಭಕ್ತಾದಿಗಳು ಕವಡೆ ಅರ್ಪಿಸುತ್ತಿದ್ದರು.

  ಕಾಳಿಮಂದಿರ

ನಮ್ಮ ಅರ್ಧ ದಿನದ ಕೊನೆಯ ದೇಗುಲ ದರ್ಶನ ಕಾಳಿಮಾತೆಯನ್ನು ನೋಡುವುದರ ಮೂಲಕ ಮುಕ್ತಾಯಗೊಂಡಿತು. ನಾವು ಅಲ್ಲಿ ಹೋದ ಸಮಯಕ್ಕೆ ಸರಿಯಾಗಿ ಮಹಾಮಂಗಳಾರತಿ ನಡೆಯುತ್ತಲಿತ್ತು.

  ರಾಧೆ ಸಿಲ್ಕ್ ಪ್ಯಾಲೇಸ್

  ಕಾಶಿಗೆ ಬಂದು ಸೀರೆ ಕೊಳ್ಳದೆ ಹೋಗುವುದುಂಟೆ ಎಂದು ನಾವು ರಾಧೆ ಸಿಲ್ಕ್ ಅಂಗಡಿಗೆ ಹೋದೆವು. ಅಲ್ಲಿ ಒಂದು ಗಂಟೆ ಸೀರೆ ಹರಗಿ ಅದು ಇದು ಎಂದು ನಾಲ್ಕಾರು ಸೀರೆ ಆರಿಸಿಕೊಂಡೆವು.  ಅಂಗಡಿಯಾತ ಬಹಳ ಚೆನ್ನಾಗಿ ಮಾತಾಡುತ್ತಲಿದ್ದ. ನಮಗೆ ಮಣ್ಣಿನ ಕುಡಿಕೆಯಲ್ಲಿ ಕಾಫಿ ತರಿಸಿ ಕೊಟ್ಟು ಉಪಚರಿಸಿದ. ಮಣ್ಣಿನ ಕುಡಿಕೆ ನೋಡಿ ಖುಷಿಯಾಗಿ ನಾವು ನಾಲ್ಕಾರು ಕುಡಿಕೆ ಕೊಂಡು ತಂದೆವು!

ಸೀರೆ ಖರೀದಿಸಿ ನಾವು ೨.೩೦ಗೆ ಆಶ್ರಮ ತಲಪಿ ಊಟ (ಅನ್ನ, ಸಾರು, ಸಾಂಬಾರು, ಪಲ್ಯ, ಹಪ್ಪಳ, ಮಜ್ಜಿಗೆ, ಉಪ್ಪಿನಕಾಯಿ) ಮಾಡಿ ತುಸು ವಿಶ್ರಾಂತಿ ಪಡೆದೆವು.

 ಕಾಲ ಭೈರವೇಶ್ವರ ದೇಗುಲ (ಭರೋನಾಥ್, ವಿಶ್ವೇಶ್ವರಗಂಜ್, ವಾರಣಾಸಿ)

 ಸಂಜೆ ೩.೩೦ಕ್ಕೆ ನಾವು ಕಾಲಭೈರವೇಶ್ವರ ದೇಗುಲಕ್ಕೆ ಹೊರಟೆವು. ಅನಂತ ಬರಲಿಲ್ಲ. ನಾವೈವರು ಹೊರಟೆವು.  ಸುಮಾರು ೧೩ಕಿಮೀ ದೂರದ ಕಾಲಭೈರವೇಶ್ವರ ವಾರಣಾಸಿಯಲ್ಲಿರುವ ಅತ್ಯಂತ ಹಳೆಯ (೧೭ನೇ ಶತಂಆನ) ಶಿವ ದೇಗುಲ. ಶಿವನ ಉಗ್ರರೂಪದ ಮೂರ್ತಿ.

   ಪ್ರವೇಶ ಸಮಯ: ಬೆಳಗ್ಗೆ ೫ರಿಂದ ೧.೩೦, ಸಂಜೆ ೩ರಿಂದ ರಾತ್ರೆ ೧೦

  ದೇವಾಲಯದಲ್ಲಿರುವಾಗಲೇ ನಮಗೆ ಚರವಾಣಿ ಬಂತು. ಎಲ್ಲಿರುವಿರಿ? ಗಂಗಾರತಿ ನೋಡಲು ದೋಣಿ ಹೊರಡುತ್ತಿದೆ. ಬೇಗ ಬನ್ನಿ ಎಂದರು. ನಾವು ರಿಕ್ಷಾ ಹತ್ತಿ ಶಿವಾಲಿ ಘಾಟಿಗೆ ಬಂದು ದೋಣಿ ಹತ್ತಿದೆವು.

  ಗಂಗಾನದಿಯಲ್ಲಿ ಒಂದು ಸುತ್ತು

ದೋಣಿಯಲ್ಲಿ ನಾವು ಗಂಗಾನದಿಯಲ್ಲಿ ವಿಹಾರ ನಡೆಸಿದೆವು. ನದಿ ಅತ್ಯಂತ ಚೊಕ್ಕವಾಗಿತ್ತು. ಪರಿಶುಭ್ರ ನದಿ ನೋಡುವುದೇ ಒಂದು ಆನಂದ. ದೋಣಿಯಲ್ಲಿ ಸುತ್ತುತ್ತ, ದೂರದಿಂದಲೇ ಎಲ್ಲಾ ಘಾಟ್ ಗಳನ್ನು ನೋಡಿದೆವು. ಒಟ್ಟು ೮೮ ಘಾಟ್ ಗಳು ಇವೆ. ೮೮ರಲ್ಲಿ ಒಂದು ಘಾಟ್ ಕರ್ನಾಟಕದ್ದು. ಅದರಲ್ಲಿ ಮೈಸೂರು ಮಹಾರಾಜರ ಘಾಟ್ ಎಂಬ ಫಲಕವಿದೆ. ಹೆಚ್ಚಿನ ಘಾಟ್ ಗಳು ಪೂಜಾ, ಮತ್ತು ಸ್ನಾನ ಘಟ್ಟಗಳಾಗಿ ಉಪಯೋಗವಾದರೆ, ಮಣಿಕರ್ಣಿಕಾ ಹಾಗೂ ಹರಿಶ್ಚಂದ್ರ ಘಾಟ್ ಗಳು ಸ್ಮಶಾನ ಸ್ಥಳಗಳಾಗಿ ಪ್ರತ್ಯೇಕವಾಗಿ ಬಳಸಲಾಗುತ್ತಿದೆ.  ಹರಿಶ್ಚಂದ್ರ ಘಾಟಿನಲ್ಲಿ ಸುಸಜ್ಜಿತ ವಿದ್ಯುತ್ ಚಿತಾಗಾರ ಕೂಡ ಇದೆ. ಮೊದಲೆಲ್ಲ ಅರೆಬೆಂದ ಹೆಣಗಳು ನದಿಯಲ್ಲಿ ತೇಲುತ್ತಿದ್ದುವಂತೆ. ಈಗ ಅಂಥ ದೃಶ್ಯ ಕಾಣಲು ಸಿಗುವುದಿಲ್ಲ. ನದಿಯಲ್ಲಿ ಯಾವುದೇ ಕಸ ಕೊಳಕು ಇಲ್ಲವೇ ಇಲ್ಲ.

  ವಾರಾಣಾಸಿಯ ಘಾಟ್ ಗಳನ್ನು ೧೮ನೇ ಶತಮಾನದಲ್ಲಿ ಮರಾಠರ ಆಶ್ರಯದಲ್ಲಿ ಪುನರ್ನಿರ್ಮಿಸಲಾಯಿತು. ಪ್ರಸ್ತುತ ಘಾಟ್ ಗಳ ಪೋಷಕರೆಂದರೆ ಮರಾಠ, ಶಿಂಧೆ(ಸಿಂಧ್ಯಾ), ಹೋಳ್ಕರ್, ಭೋಂಸ್ಲೆ, ಪೇಶ್ವೆ ಮತ್ತು ಬನಾರಸ್ಸಿನ ಮಹಾರಾಜರು.  ಈ ಎಲ್ಲಾ ಘಾಟ್ ಗಳ ಮೂಲಕ ಗಂಗಾನದಿಯಲ್ಲಿ ದೋಣಿವಿಹಾರ ಪ್ರವಾಸಿಗರ ಆಕರ್ಷಣೆಯಾಗಿದೆ.  ಹರಿಶ್ಚಂದ್ರ ಘಾಟಿನಲ್ಲಿ ಹೆಣ ಸುಡುವುದು ಕಾಣುತ್ತಲಿತ್ತು.

   ಗಂಗಾರತಿ

ನದಿಮೇಲೆ ದೋಣಿಯಲ್ಲಿ ಕುಳಿತು (ದೋಣಿ ಲಂಗರು ಹಾಕಿತ್ತು) ದಶಾಶ್ವಮೇಧ ಘಾಟಿನಲ್ಲಿ ನಡೆಯುವ ಗಂಗಾರತಿ ನೋಡಿದೆವು. ಪ್ರತೀ ದಿನ ಸಂಜೆ ೬.೩೦ರಿಂದ ೭.೩೦ರತನಕ ಭಜನೆ, ಆರತಿ ನಡೆಯುತ್ತದೆ. ಅಲ್ಲಿ ಗಂಗೆಯ ವಿಗ್ರಹ ಇದೆ. ೫-೬ ಮಂದಿ ರಾಗವಾಗಿ ಹಾಡುತ್ತ,   ಆರತಿ ಹಿಡಿದು  ಮೇಲೆ ಕೆಳಗೆ, ಗಂಗಾನದಿ ಎದುರು ಹಾಗೂ ಹಿಂದೆ ಕೂತ ಜನರೆದುರು ಆರತಿ ಎತ್ತುವ ದೃಶ್ಯ ನೋಡಿ ಪುಳಕಿತರಾದೆವು. ಆ ಕತ್ತಲೆಯಲ್ಲಿ ನೀರಿನ ಎದುರು ಕತ್ತಲೆ ಬೆಳಕಿನ ದೃಶ್ಯ ಬಲು ಸುಂದರವಾಗಿ ಕಾಣುತ್ತದೆ.  ಆ ಸಂದರ್ಭವನ್ನು ಡ್ರೋನ್ ಕ್ಯಾಮರಾ ಮೂಲಕ ಇಡೀ ದೃಶ್ಯಾವಳಿಗಳ ವೀಡಿಯೋ ಮಾಡುತ್ತಾರೆ. ಆ ದೃಶ್ಯಗಳು ಅಲ್ಲಿ ದೊಡ್ದ ಪರದೆಯ ಮೂಲಕ ಪ್ರದರ್ಶನವಾಗುತ್ತಿರುತ್ತದೆ.  

    

ಗಂಗಾರತಿ ನೋಡಿ ನಾವು ಕೋಣೆಗೆ ಹಿಂದಿರುಗಿದೆವು. ರಾತ್ರಿ ಊಟ ಸಿದ್ಧವಾಗಿತ್ತು. (ಪಲಾವ್, ಬದನೆ ಗಸಿ, ಬಾಳ್ಕ ಮೆಣಸು ಮೊಸರನ್ನ)

   ಕಾಶಿಗೆ ವಿದಾಯ

 ತಾರೀಕು ೨.೪.೨೨ರಂದು ಬೆಳಗ್ಗಿನ ಝಾವ ೨.೩೦ಗೆ ಎಚ್ಚರವಾಯಿತು. ವಿಪರೀತ ಸೆಖೆ ಇತ್ತು. ಇನ್ನೇನು ಮಲಗುವುದೆಂದು ಒಬ್ಬೊಬ್ಬರಾಗಿ ಸ್ನಾನಾದಿ ಮುಗಿಸಿ ೪.೩೦ಗೇ ತಯಾರಾಗಿ ಕೂತೆವು. ೫.೩೦ಗೆ ಕಾಶಿಗೆ ವಿದಾಯ ಹೇಳಿ ಬಸ್ ಹತ್ತಿದೆವು. ಕಾಶಿ ವೀಕ್ಷಣೆ ಪರಿಪೂರ್ಣವಾಗಲಿಲ್ಲ. ಕಾಶಿ ಗಲ್ಲಿ ಗಲ್ಲಿ ಸುತ್ತಬೇಕು, ವಿವಿಧ ಘಾಟ್ ಗಳನ್ನು ಹತ್ತಿರದಿಂದ ನೋಡಬೇಕು. ಹಾಗಾಗಿ ಮತ್ತೊಮ್ಮೆ ವಾರಾಣಾಸಿಗೆ ಹೋಗಬೇಕು!

  ರೈಲು ನಿಲ್ದಾಣಕ್ಕೆ ಹೋದೆವು. ಆ ದಿನ ಯುಗಾದಿ ಹಬ್ಬ. ಹೊಸ ವರ್ಷಾಚರಣೆ. ಬಸ್ಸಿನಲ್ಲಿ ವೀರಪ್ಪಾಚಾರಿ ಎಲ್ಲರಿಗೂ ಬೇವು ಬೆಲ್ಲ ಹಂಚಿದರು. ಇನ್ನು ಕೆಲವರು ಪಂಚಕಜ್ಜಾಯ ಹಂಚಿದರು. ಆ ದಿನ ಸಿಹಿ ಕಹಿಯೊಂದಿಗೆ ದಿನ ಪ್ರಾರಂಭವಾಯಿತು. ೬.೪೫ಕ್ಕೆ ರೈಲೇರಿದೆವು. ತಿಂಡಿ (ರಾಗಿ ಶ್ಯಾವಿಗೆ- ಅದರಲ್ಲಿ ಬರೀ ಕಾಯಿತುರಿ ಇರುತ್ತದೆ. ಉಪ್ಪು ಇರುವುದಿಲ್ಲ. ಅದಕ್ಕೆ ಸಕ್ಕರೆ ಬೆರೆಸಿ ತಿನ್ನುತ್ತಾರೆ. ಇಲ್ಲವೇ ಚಟ್ನಿಪುಡಿ ಬೆರೆಸಿ ತಿನ್ನಬಹುದು, ಇಡ್ಲಿ ಸಾಂಬಾರ್.) ಸರಬರಾಜಾಯಿತು.   

ಅಯೋಧ್ಯೆಗೆ ಪಯಣ

ಕಾಶಿ ಬಿಟ್ಟು ರೈಲು ೨೧೯ಕಿಮೀ ದೂರದ ಅಯೋಧ್ಯೆಯೆಡೆಗೆ ಸಾಗಿತು.   ಸುಮಾರು ೩.೩೦ ಗಂಟೆಯ ಹಾದಿ. ಆದರೆ ನಮ್ಮ ರೈಲಿಗೆ ಅಷ್ಟೆಲ್ಲ ಬೇಗ ಹೋಗಲು ಹಸಿರು ನಿಶಾನೆ ಸಿಗುವುದಿಲ್ಲವಾದ್ದರಿಂದ ನಾವು ಅಯೋಧ್ಯೆ ತಲಪುವಾಗ ೧೨ಗಂಟೆ ಆಗಿತ್ತು. ರೈಲಿಳಿಯಲು ಅನುಮತಿ ಸಿಕ್ಕಿರಲಿಲ್ಲ. ೧೨.೩೦ಗೆ ಊಟ ( ಸಾಂಬಾರನ್ನ, ಮೊಸರನ್ನ) ಮಾಡಿದ ಬಳಿಕ ಒಂದು ಗಂಟೆಗೆ ರೈಲಿಳಿದೆವು.

ಸಶೇಷ