ಬುಧವಾರ, ಫೆಬ್ರವರಿ 15, 2017

ಕೆ. ಆರ್.ಎಸ್. ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಸೈಕಲ್ ಸವಾರಿ

ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಕೃಷ್ಣರಾಜ ಸಾಗರದ ಬಳಿ ನಿರ್ಮಿಸುತ್ತಿರುವ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ೨೯-೧-೨೦೧೭ರಂದು ಸೈಕಲ್ ಸವಾರಿ ಇದೆ ಎಂದು ಸತೀಶಬಾಬು ಪ್ರಕಟಣೆ ಕೊಟ್ಟಿದ್ದರು. ಸೈಕಲ್ ಸವಾರಿ ಮಾಡುವುದೆಂದರೆ ನನಗೆ ಬಲು ಖುಷಿ.  ರೂ. ೧೫೦ ಕೊಟ್ಟು ಹೆಸರು ನೋಂದಾಯಿಸಿದೆ.
  ೨೯ನೇ ತಾರೀಕು ಬೆಳಗ್ಗೆ ೭.೨೫ಕ್ಕೆ ಸರಸ್ವತೀಪುರದ ಗಂಗೋತಿ ಘಟಕದ ಕಛೇರಿ ಎದುರಿನಿಂದ ನಾವು ಹತ್ತು ಮಂದಿ ಸೈಕಲಿಗರು ಹೊರಟೆವು. ಶಾರದಾದೇವಿನಗರ ದಾಟಿ ವರ್ತುಲ ರಸ್ತೆಯಲ್ಲಿ ಸಾಗಿ ಹುಣಸೂರು ರಸ್ತೆ ಸೇರಿ ಮುಂದೆ ಹೂಟಗಳ್ಳಿ ತಲಪಿದೆವು. ಆಗ ಗಂಟೆ ೮.೩೦. ಗ್ರೀನ್ ಹೊಟೇಲಿನಲ್ಲಿ ಸೆಟ್ ದೋಸೆ ವಡೆ ತಿಂದು ಕಾಫಿ ಕುಡಿದು ೯ ಗಂಟೆಗೆ ಅಲ್ಲಿಂದ ಹೊರಟೆವು. ಕೈಗಾರಿಕಾ ಪ್ರದೇಶ ದಾಟಿ ಕೃಷ್ಣರಾಜ ರಸ್ತೆ ಸೇರಿದೆವು. ಮಧ್ಯೆ ಎರಡು ಕಡೆ ಐದು ನಿಮಿಷ ವಿಶ್ರಾಂತಿ ತೆಗೆದುಕೊಂಡಿದ್ದೆವು. ನಮ್ಮೊಡನೆ ಗಾನವಿ ಎಂಬ ಹತ್ತು ವರ್ಷದ ಬಾಲಕಿ ಸೈಕಲ್ ಸವಾರಿ ನಡೆಸಿದ್ದಳು. ಹುಣಸೂರು ರಸ್ತೆ ಸೇರುವಲ್ಲಿವರೆಗೂ ಅವಳೇ ಸೈಕಲ್ ತುಳಿದಿದ್ದಳು. ಅವಳ ಉತ್ಸಾಹವನ್ನು ಮೆಚ್ಚಬೇಕು. ಗಾನವಿಯ ತಂದೆ ಜಯಕುಮಾರ್ ಟಾಟ ಮೊಬೈಲ್ ಜೀಪಲ್ಲಿ ನಮ್ಮನ್ನು ಹಿಂಬಾಲಿಸಿದ್ದರು.  
XL
  XL
XL
 
ನೀರಿಲ್ಲದ ಕೃಷ್ಣರಾಜ ಸಾಗರ
 ನಾವು ೧೦ ಗಂಟೆಗೆ ಕೃಷ್ಣರಾಜಸಾಗರ ತಲಪಿದೆವು. ಸಾಗರದಲ್ಲಿ ನೀರಿನ ಹರಿವು ಸ್ವಲ್ಪ ಇತ್ತಷ್ಟೆ. ರಸ್ತೆಯ ಇಕ್ಕೆಲಗಳಲ್ಲೂ ಭತ್ತದ ಗದ್ದೆ. ಭತ್ತ ಕೊಯಿದಾಗಿ ಗದ್ದೆ ಬೋಳಾಗಿತ್ತು. ಅಲ್ಲಿಂದ ಮುಂದೆ ನಾವು ಹೊಸಕನ್ನಂಬಾಡಿಕಟ್ಟೆ ಕಡೆಗೆ ಮತ್ತೂ ಐದು ಕಿಮೀ ಹೋಗಬೇಕಿತ್ತು. ಅಲ್ಲಿಂದ ದಾರಿ ಏರು ಸುರುವಾಗಿತ್ತು. ನಾನು ಸೈಕಲಿನಿಂದ ಇಳಿಯದೆಯೇ ಕುಳಿತೇ ೧*೨ ಮತ್ತು ೧*೧ ಗೇರಿನಲ್ಲೇ ಏರು ದಾರಿಯನ್ನು ಹತ್ತಿಸಿದೆ. ಗೇರ್ ಸೈಕಲಾದರೆ ಏರು ಬರುವಾಗ ನಾವು ಇಳಿಯಬೇಕಿಲ್ಲ. ಆ ಅನುಕೂಲ ಗೇರ್ ಸೈಕಲ್ ನಮಗೆ ನೀಡುತ್ತದೆ.  ಇಳಿಯದೆಯೇ ದಮ್ಮುಕಟ್ಟಿ ಚಡಾವನ್ನು ಸೈಕಲ್ ತುಳಿಯುತ್ತಲೇ ಏರಬಹುದು. ಗಾನವಿಯೂ ಕೆ.ಆರ್.ಎಸ್ ನಿಂದ ಸೈಕಲ್ ಹತ್ತಿ  ಮೊದಲಿಗಳಾಗಿ ಹೊಸಕನ್ನಂಬಾಡಿಕಟ್ಟೆಯ ವೇಣುಗೋಪಾಲಸ್ವಾಮಿ ದೇವಾಲಯ ತಲಪಿ ಖುಷಿಪಟ್ಟಳು. ಮಕ್ಕಳು ಇಂಥ ಸಾಹಸ ಕಾರ್ಯವನ್ನು ಬೆಳೆಸಿಕೊಳ್ಳುವುದು ಬಹಳ ಒಳ್ಳೆಯದು. ನಾವು ೧೦.೪೫ಕ್ಕೆ ಅಲ್ಲಿ ತಲಪಿದ್ದೆವು. ಸುಮಾರು ೩೦ಕಿಮೀ ದೂರ ಕ್ರಮಿಸಿದ್ದೆವು. ಕೆಲವಾರು ಪ್ರವಾಸಿಗರು ಆಗಲೆ ಅಲ್ಲಿದ್ದರು.
  ಅಲ್ಲಿ ಬಾಳೆಹಣ್ಣು ತಿಂದು ದೇವಾಲಯದೊಳಗೆ ಹೋದೆವು. ದೇವಾಲಯ ನೋಡಿ ಅಲ್ಲಿ ವಿಶ್ರಮಿಸಿದೆವು. ತಂಡದ ಛಾಯಾಚಿತ್ರ ತೆಗೆಸಿಕೊಂಡೆವು. ವೇಣುಗೋಪಾಲ ಸ್ವಾಮಿ ದೇವಾಲಯ ಕೃಷ್ಣರಾಜಸಾಗರದಲ್ಲಿ ಮುಳುಗಡೆಯಾಗಿತ್ತು. ೨೦೦೨ರಲ್ಲಿ ಜಲಾಶಯ ಬತ್ತಿದಾಗ ಆ ದೇವಾಲಯದ ಉಳಿದ ಅವಶೇಷಗಳನ್ನು ಸಾಗಿಸಿ ತಂದು ಹೊಸದಾಗಿ ಈ ದೇವಾಲಯವನ್ನು ಶ್ರೀ ಹರಿಖೋಡೆಯವರು ನಿರ್ಮಿಸಲು ಹೊರಟು ಈಗಲೂ (೨೦೧೭) ಕೆಲಸ ನಡೆಯುತ್ತಲೇ ಇದೆ. ನವೆಂಬರದಲ್ಲಿ ಹರಿಖೋಡೆಯವರು ನಿಧನ ಹೊಂದಿದರು. ಅವರ ಜೀವಿತಾವಧಿಯಲ್ಲಿ ಈ ದೇವಾಲಯದ ಪ್ರತಿಷ್ಟಾಪನೆ ಕಾರ್ಯ ನೆರವೇರಲಿಲ್ಲ. ಬಲು ಸುಂದರವಾಗಿ ವಿಶಾಲ ಸ್ಥಳದಲ್ಲಿ ಕೃಷ್ಣರಾಜಸಾಗರದ ಹಿನ್ನೀರಿನ ಬಳಿಯಲ್ಲಿ ಕೆಲವಾರು ಕೋಟಿ ಖರ್ಚು ಮಾಡಿ  ದೇವಾಲಯವನ್ನು ನಿರ್ಮಿಸಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ದೇವರ ವಿಗ್ರಹಗಳು ಕೆತ್ತನೆಗೊಂಡು ಅವನ್ನು ಭತ್ತದಲ್ಲಿ ಮುಳುಗಿಸಿ ದೇವಾಲಯದ ಪ್ರಾಂಗಣದಲ್ಲಿರಿಸಿದ್ದಾರೆ. ಯಾವಾಗ ಪ್ರತಿಷ್ಠಾಪನೆಯಾಗುತ್ತದೋ ಗೊತ್ತಿಲ್ಲ. ಪ್ರವಾಸಿಗರಿಗೆ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಿದು. ನಾವು ಹೋದಾಗ ಕೃಷ್ಣರಾಜಸಾಗರದಲ್ಲಿ ಸ್ವಲ್ಪವೇ ನೀರಿತ್ತು. ಜಲಾಶಯ ತುಂಬಿದಾಗ ಇಲ್ಲಿಗೆ ಭೇಟಿ ಕೊಟ್ಟೇ ಅದರ ಸೌಂದರ್ಯವನ್ನು ಕಣ್ಣುತುಂಬ ನೋಡಬೇಕು.

XL
 XL
XL
 XL
 
XL
 L
 XL
 
XL
 XL
 XL
 XL
 XL
 XL
 
XL
 XL
   ನಾವು ಅಲ್ಲಿಂದ ೧೨ ಗಂಟೆಗೆ ಹೊರಟೆವು. ದೇವಸ್ಥಾನಕ್ಕೆ ಬರುವವರ ವಾಹನ ಕಾಯುವ ಕಾವಲುಗಾರ ನಮಗೆ ನದಿಯಲ್ಲೇ ಹೋಗಿ. ಒಂದೆರಡು ಕಿಮೀ ಅಷ್ಟೆ ಇರುವುದು ಕೆ.ಆರ್. ಎಸ್ ಗೆ. ತುಂಬ ಹತ್ತಿರದ ದಾರಿ  ಬೇಗ ತಲಪಬಹುದು ಎಂದ. ಬರಿದಾದ ನದಿಗೆ ನಾವು ಸೈಕಲ್ ಇಳಿಸಿ ಸವಾರಿ ಮಾಡಿ ಕೃಷ್ಣರಾಜಸಾಗರ ತಲಪಿದೆವು. ನಾವು ಅಲ್ಲಿ ತಲಪುವುದಕ್ಕೂ ಜಯಕುಮಾರರು ಜೀಪಿನಲ್ಲಿ ಅಲ್ಲಿಗೆ ಬಂದು ಸೇರುವುದಕ್ಕೂ ಸರಿಯಾಗಿತ್ತು. ಬಿಸಿಲು ಜೋರಾಗೇ ಇತ್ತು. ನಮ್ಮ ನಮ್ಮ ಖರ್ಚಿನಲ್ಲೇ ರೂ. ೨೦ಕ್ಕೆ ಎಳನೀರು ಕುಡಿದೆವು. ಅದರಿಂದ ಶಕ್ತಿಯೂಡಿ ಸೈಕಲ್ ತುಳಿಯಲು ಹುರುಪು ಬಂತು. ಗೇರ್ ಸೈಕಲ್ ಆದಕಾರಣ ಎಲ್ಲೂ ಸೈಕಲಿನಿಂದ ಇಳಿದು ನೂಕುವ ಪ್ರಮೇಯ ಬರಲಿಲ್ಲ. ತೀವ್ರ ಏರಿನಲ್ಲಿ ಮಾತ್ರ ನಾನು ಗೇರ್ ಬದಲಾಯಿಸಿದ್ದು. ಮತ್ತೆಲ್ಲ ೨*೬ ಗೇರಿನಲ್ಲೇ ಸಾಗಿದ್ದೆ.
XL
  ಬಂದ ದಾರಿಯಲ್ಲೇ ಮುನ್ನಡೆದೆವು. ವಾಪಾಸು ಹೋಗುವಾಗ ನಾನು ಕೆಲವೊಮ್ಮೆ ಚಡಾವು ಏರುವಲ್ಲಿ ಹಿಂದೆ ಉಳಿಯುತ್ತಿದ್ದೆ. ಬಾಕಿದ್ದವರೆಲ್ಲ ಮುಂದೆ ಸಾಗಿದಾಗ ಸತೀಶಬಾಬು ಅವರು ನನ್ನ ಹಿಂದೆಯೇ ನಿಧಾನವಾಗಿ ಸೈಕಲ್ ತುಳಿಯುತ್ತ ಬರುತ್ತಿದ್ದರು. ಹೀಗೆ ನಾನು ‘ಹಿಂದುಳಿದವಳಾ’ದಾಗ, “ಯಾವಾಗಲೂ ಸೈಕಲ್ ಅಭ್ಯಾಸ ಮಾಡುತ್ತಿರಬೇಕು. ಆಗ ಕ್ಷಮತೆ ಹೆಚ್ಚುತ್ತದೆ. ಹೀಗೆ ಹಿಂದಾಗುವ ಪ್ರಮೇಯ ಬರುವುದಿಲ್ಲ’’ ಎಂದು ಕಿವಿಮಾತು ಹೇಳಿದಾಗ ಹೌದು ದಿನಾ ಸೈಕಲ್ ತುಳಿದು ಬಲ ಹೆಚ್ಚಿಸಿಕೊಳ್ಳಬೇಕು ಎಂದು ಒಪ್ಪಿಕೊಂಡಿತು ಮನಸ್ಸು. ಒಂದೆಡೆ ಏರು ತುಳಿದು ಸುಸ್ತಾದಾಗ ನೆರಳಲ್ಲಿ ತುಸು ವಿಶ್ರಮಿಸೋಣ ಎಂದು ಸತೀಶರಲ್ಲಿ ಭಿನ್ನವಿಸಿಕೊಂಡೆ. ಅವರು ಮುಂದೆ ಹೋಗಿ ಮುಂದಿನ ಸವಾರರಿಗೆ ನಿಲ್ಲಲು ಹೇಳಿದರು. ನಾವೆಲ್ಲ ಐದು ನಿಮಿಷ ದಣಿವಾರಿಸಿ ನೀರು ಕುಡಿದು ಮುಂದೆ ಸಾಗಿ ಹೂಟಗಳ್ಳಿ ತಲಪಿದಾಗ ಮಧ್ಯಾಹ್ನ ೧.೩೦ ಗಂಟೆ. ಅಲ್ಲಿ ಸೌತೆಕಾಯಿ ತಿಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮುಂದುವರಿದು ಹುಣಸೂರು ರಸ್ತೆ ಸೇರುವಲ್ಲಿ ಪ್ರಿಯದರ್ಶಿನಿ ಖಾನಾವಳಿಯಲ್ಲಿ ಊಟಕ್ಕೆ ಹೋದೆವು. ಎಲ್ಲರೂ ಊಟ ಮಾಡಿದರು. ನಾನು ಸೆಟ್ ಮಸಾಲೆದೋಸೆ (೨ದೋಸೆ) ತಿಂದೆ. ಊಟವಾಗಿ ಎಲ್ಲೂ ನಿಲ್ಲದೆ ಹುಣಸೂರು ರಸ್ತೆಯಲ್ಲಿ ಸಾಗಿ ವರ್ತುಲ ರಸ್ತೆಯಲ್ಲೇ ಮುಂದುವರಿದು ಭೋಗಾದಿ ತಲಪಿ ಅಲ್ಲಿಂದ ಸರಸ್ವತೀಪುರದ ನಮ್ಮ ಮನೆ ತಲಪುವಾಗ ಗಂಟೆ ೩.೧೫.

XL
 XL
 ಮನೆಗೆ ಬಂದು ವಿದ್ಯುತ್ ಪಂಕದ ಕೆಳಗೆ ಕೂತು ವಿಶ್ರಾಂತಿ ಪಡೆಯುವಾಗ ಕಾಲು ನೋಯುತ್ತಿತ್ತು. ಸ್ನಾನ ಮಾಡಿಯಾಗುವಾಗ ಕಾಲು ನೋವು ಮಾಯವಾಗಿತ್ತು. ಆದರೆ ರಾತ್ರೆ ವರೆಗೂ ಬೇರೇನೂ ಕೆಲಸ ಮಾಡುವ ಉಮೇದು ಇರದೆ ಕಾಲುಚಾಚಿ ಮಲಗಿಯೇ ಕಾಲಕಳೆದೆ. ಮಾರನೆದಿನ ಎಂದಿನಂತೆಯೇ ಕೆಲಸಕಾರ್ಯದಲ್ಲಿ ಭಾಗಿಯಾಗಲು ಏನೂ ತೊಂದರೆಯೆನಿಸಲಿಲ್ಲ.
  ನಾವು ಮೂರುಮಂದಿ ಹೆಂಗಸರು ಸೈಕಲ್ ಸವಾರಿ ಮಾಡಿದ್ದೆವು. ಈ ಸೈಕಲ್ ಸವಾರಿ ಕಾರ್ಯಕ್ರಮವನ್ನು  ಸತೀಶಬಾಬು ಬಹಳ ಚೆನ್ನಾಗಿ ಆಯೋಜಿಸಿದ್ದರು. ಅವರಿಗೆ ನಮ್ಮ ಸೈಕಲಿಗಳೆಲ್ಲರ ಪರವಾಗಿ ಧನ್ಯವಾದಗಳು. ವಿಶೇಷವಾಗಿ ಗಾನವಿಯ ಉತ್ಸಾಹಭರಿತ ಸವಾರಿಗೆ ಹ್ಯಾಟ್ಸಾಪ್.  

ಶನಿವಾರ, ಫೆಬ್ರವರಿ 11, 2017

ಮೂರು ಬೆಟ್ಟವೇರಿದ ಸಾಹಸ (ಉದಯಪರ್ವತ, ಅಮೇದಿಕ್ಕೆಲ್, ಎತ್ತಿನಭುಜ) - ಭಾಗ -೨

ಎತ್ತಿನಭುಜ ಏರಿದ ಸಾಹಸ

ಹೊರಡುವ ತಯಾರಿ

    ೯-೧-೧೭ರಂದು ನಾವು ಬೆಳಗ್ಗೆ ೫.೪೫ಕ್ಕೆ ಎದ್ದು ನಿತ್ಯಕರ್ಮ ಮುಗಿಸಿ ಹೊರಟು ತಯಾರಾದೆವು. ಪೂರಿ, ಅಲಸಂಡೆ ಕಾಳಿನ ಗಸಿ, ಅಕ್ಕಿಮುದ್ದೆ ಚಟ್ನಿ, ಕೇಸರಿಭಾತ್. ಎರಡೆರಡು ತಿಂಡಿ ಏಕೆ ಮಾಡುತ್ತೀರಿ? ಇಷ್ಟು ಮಂದಿಗೆ ಮಾಡಲು ಕಷ್ಟ ಅಲ್ಲವೆ? ಎಂದು ಪುರುಷೋತ್ತಮ ಅವರನ್ನು ಕೇಳಿದೆ. ನೀವು ಅಪರೂಪಕ್ಕೆ ಅಷ್ಟು ದೂರದಿಂದ ಬಂದಿದ್ದಿರಿ. ಅದೇನು ಕಷ್ಟವಲ್ಲ. ಬೆಳಗ್ಗೆ ೩.೩೦ಗೆ ಎದ್ದು ಮಾಡಿದ್ದು ಎಂದು ನುಡಿದು ತಿನ್ನಿ ಎಂದು ಒಂದು ಪೂರಿ ತೆಗೆದು ತಟ್ಟೆಗೆ ಹಾಕಿದರು!  ಬುತ್ತಿಗೆ ಪಲಾವ್ ತಯಾರಾಗಿತ್ತು. ನನಗೆ ತಿಂಡಿಯಲ್ಲಿ ಒಲವು ಜಾಸ್ತಿ ಹಾಗಾಗಿ ನಾನು ಬುತ್ತಿಗೆ ಮುದ್ದೆ, ಪೂರಿ ಹಾಕಿಸಿಕೊಂಡೆ.
 ಮೂಡಿಗೆರೆ-ಭೈರಾಪುರ-ಶಿಶಿಲ ಮಾರ್ಗವಾಗಿ ದಕ್ಷಿಣಕನ್ನಡಜಿಲ್ಲೆಯ ಧರ್ಮಸ್ಥಳ, ಮಂಗಳೂರು ನಗರಗಳಿಗೆ ಸಂಪರ್ಕ ಕಲ್ಪಿಸಲು ೬೫ಕಿಮೀ ಹೊಸರಸ್ತೆ ನಿರ್ಮಿಸಲು ರಾಜ್ಯಸರಕಾರ ಮುಂದಾಗಿದೆ. ಅದಕ್ಕಾಗಿ ೫೬ಕೋಟಿ ರೂಪಾಯಿ ಮೀಸಲಿಟ್ಟಿದೆಯಂತೆ. ಈ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದರೆ ಮರಗಳನ್ನು ಕಡಿಯುವುದರಿಂದ ಹಸಿರು ನಾಶವಾಗಿ ಪ್ರಾಣಿಗಳಿಗೆ ಬಹಳ ತೊಂದರೆಯಾಗಲಿದೆ. ಮತ್ತು ಈಗಾಗಲೇ ಮಳೆಯ ಕೊರತೆ ಎದುರಿಸುತ್ತಿದ್ದೇವೆ. ಇನ್ನೂ ಆ ಸಮಸ್ಯೆ ಉಲ್ಭಣಿಸಲಿದೆ. ಅಪರೂಪದ ಜೀವವೈವಿಧ್ಯ ತಾಣವಾಗಿರುವ ಶಿಶಿಲ ಭೈರಾಪುರ ಮಾರ್ಗದಲ್ಲಿ ರಸ್ತೆ ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ದುರುದ್ದೇಶದಿಂದ ಕೂಡಿದೆ. ರಸ್ತೆ ನಿರ್ಮಿಸದಂತೆ ಹೋರಾಟ ನಡೆಸಲು ಪರಿಸರಾಸಕ್ತರು ಮುಂದಾಗಿದ್ದಾರೆ. ಆದರೆ ಯಶ ಸಿಗುವುದು ಸಂಶಯ. ರಸ್ತೆ ನಿರ್ಮಿಸಲು ಮುಂದಾದವರಿಗೆ ಪರಿಸರ ಮುಖ್ಯವಲ್ಲ. ತಮ್ಮ ಸ್ವಾರ್ಥವಷ್ಟೆ ಮುಖ್ಯ. (ಕಾಂಚಾಣದ ಮುಂದೆ ಅವರಿಗೆ ಪರಿಸರ ಕುರುಡು) ಈ ಯೋಜನೆಯಲ್ಲಿ ಎತ್ತಿನಭುಜ ಎಂಬ ನಿಸರ್ಗ ಸೌಂದರ್ಯದ ಭಂಡಾರವೆನಿಸಿದ ಈ ಬೆಟ್ಟಕ್ಕೂ ಹಾನಿಯಾಗುವ ಸಂಭವವಿದೆಯಂತೆ. ಹಾನಿಯಾಗುವ ಮೊದಲು ಒಮ್ಮೆ ಕಣ್ಣುತುಂಬ ಈ ಬೆಟ್ಟದ ಚೆಲುವನ್ನು ಕಾಣಬೇಕು ಎಂಬುದು ನನ್ನ ಬಯಕೆಯಾಗಿತ್ತು. 

  ೮.೩೦ಗೆ ಹೊರಟು ಅರ್ಧಕಿಮೀ ದೂರದಲ್ಲಿ ನಿಂತಿದ್ದ ಬಸ್ಸಿಗೆ ಹೋದೆವು. ಬಸ್ ಹತ್ತಿ ಶಿಶಿಲದಿಂದ ಹೊಳೆಗುಂಡಿಗೆ ಹೋದೆವು. ಹೊಳೆಗುಂಡಿ ಊರಿನ ಕೊನೆ. ಅಣ್ಣೇಗೌಡರ ಮನೆವರೆಗೆ ರಸ್ತೆ ಅಲ್ಲಿಂದ ಮುಂದಕ್ಕೆ ರಸ್ತೆ ಇಲ್ಲ. ಅಲ್ಲಿಗೆ ಧರ್ಮಸ್ಥಳದಿಂದ ನಿತ್ಯ ಬಸ್ ವ್ಯವಸ್ಥೆ ಇದೆ. 


  ಎತ್ತಿನಭುಜ ಬೆಟ್ಟ ಹತ್ತಲು ಬಸ್ ಇಳಿದು ಹೊರಟೆವು. ಸ್ವಲ್ಪ ಮುಂದೆ ಹೋಗುವಾಗ ಹೊಳೆದಾಟಬೇಕು. ಶೂ ಬಿಚ್ಚಲೇಬೇಕು. ಅಷ್ಟು ನೀರಿತ್ತು. ನಾವು ಹೊರಡುವಾಗ ಕಾಲಿಗೆ ಯ್ಯಾಂಟಿಸೆಪ್ಟಿಕ್ ಪೌಡರ್ ಬಳಿದು, ಕಾಲುಚೀಲದೊಳಕ್ಕೂ ಅಷ್ಟು ಪೌಡರ್ ಉದುರಿಸಿ, ಬೆರಳುಗಳಿಗೆ ಅದೇನೋ ಮುಲಾಮು ಮೆತ್ತಿ  ಬೆರಳು ಉಜ್ಜಬಾರದೆಂದು ಪ್ಲಾಸ್ಟರ್ ಹಾಕಿ ತಯಾರಾದದ್ದು! ಇಲ್ಲಿ ಪೌಡರ್ ಬಳಿದ ಮುಲಾಮು ಮೆತ್ತಿದ ಕಾಲು ಹೊಳೆದಾಟುವಾಗ ತೊಳೆದು ಹೋಯಿತು! ನಮ್ಮೊಡನೆ ಬಂದಿದ್ದ ಮಾರ್ಗದರ್ಶಕರಿಬ್ಬರು ಆನಂದರು, ಮತ್ತೊಬ್ಬರು ಚೆನ್ನಪ್ಪ. ಅವರ ಕಾಲಲ್ಲಿ ಹವಾಯಿ ಸ್ಲಿಪ್ಪರ್! ನಾವು ಬೆಲೆಬಾಳುವ ಶೂ ಧರಿಸಿಯೂ ಕಾಲು ನೋವೆಂದು ಒದ್ದಾಡಿದ್ದೆವು!  ಹೊಳೆದಾಟಿ ಪುನಃ ಶೂ ಹಾಕಿ ಕಾಡು ದಾರಿಯೊಳಗೆ ನಡೆದೆವು. ಮೊದಲಿಗೆ ಸುಮಾರು ೨ಕಿಮೀ ನೇರ ದಾರಿ. ಮುಂದೆ ಚಡಾವು. ಮತ್ತೆ ಸಮತಟ್ಟು ದಾರಿ, ಹೀಗೆ ಒಮ್ಮೆ ನೇರ ಏರು, ಮಗದೊಮ್ಮೆ ಸಮತಟ್ಟು ಹೀಗೆಯೇ ಸಾಗಿದೆವು. ದಟ್ಟಕಾಡಿನೊಳಗೆ ನಡೆಯುವಾಗ ಖುಷಿ ಅನುಭವಿಸಿದೆವು. ಪ್ರತೀ ಮರ, ಗಿಡ, ಹುತ್ತ, ಜೇಡನ ಬಲೆ ನೋಡುತ್ತ ಎಷ್ಟು ಚಂದ ಈ ಹೂ, ಬಳ್ಳಿ, ಎಲೆ ಎಂದು ಮಾತಾಡಿಕೊಳ್ಳುತ್ತ ನಾನೂ ಕಾವ್ಯ ಹೆಜ್ಜೆ ಹಾಕುತ್ತಿದ್ದೆವು. ಮರದ ಎಳೆಚಿಗುರು, ಬೋಳಾದ ಮರ, ಹುತ್ತ, ಜೇಡನಬಲೆ, ಕಾಡುಹೂಗಳು ನಮ್ಮ ಕ್ಯಾಮರಾದೊಳಗೆ ಸೆರೆಯಾದುವು. 






   ಕಂಡೆವು ಎತ್ತಿನಭುಜ

 ಸುಮಾರು ನಾಲ್ಕು ಕಿಮೀ ನಡೆದು ಹೋಗುವಾಗ ನಮ್ಮೆದುರು ಎತ್ತಿನ ಭುಜ ಎಂಬ ಬೃಹತ್ ಬಂಡೆ ಕಾಣುತ್ತದೆ. ಅದನ್ನು ಏರಬೇಕಾದರೆ ಮತ್ತೂ ೩ಕಿಮೀ ನಡೆಯಬೇಕು. ಹುಲ್ಲುದಾರಿಯಲ್ಲಿ ಸಾಗಬೇಕು. ನೀರು ಎಲ್ಲ ಖಾಲಿ. ಆನಂದ ಹೇಳಿದರು ಮುಂದೆ ನೀರು ಸಿಗುತ್ತದೆ ಅಲ್ಲಿ ತುಂಬಿಸಿಕೊಡುವ ಎಂದು ಧೈರ್ಯ ಕೊಟ್ಟರು. ಈ ದಿನ ನಡೆದು ನಡೆದು ನನಗೆ ಸುಸ್ತು ಆಯಿತು. ಹಾಗಾಗಿ ಸಹಜವಾಗಿ ನಡಿಗೆ ನಿಧಾನಗತಿಯಲ್ಲಿ ಸಾಗಿತು. ಹಕ್ಕಿಯ ಗಾನ ಕೇಳುತ್ತ ನಡೆದು, ಸುಸ್ತಾದಾಗ ಅಲ್ಲಲ್ಲಿ ನಿಂತು ಶಕ್ತಿಯೂಡಿಕೊಂಡು ಮುಂದೆ ಸಾಗುತ್ತಿದ್ದೆವು. ಅಂತೂ ಮದ್ಯಾಹ್ನ ೧ ಗಂಟೆಗೆ ಎತ್ತಿನ ಬೆನ್ನಿನ ಭಾಗಕ್ಕೆ ಏರುವಲ್ಲಿವರೆಗೆ ತಲಪಿದೆವು. ಇನ್ನು ಊಟ ಮಾಡದೆ ಇದ್ದರೆ ನನಗೆ ನಡೆಯಲು ಕಷ್ಟ ಎಂದು ಕಾವ್ಯ ಬುತ್ತಿ ತೆರೆದಳು. ಮಾರ್ಗದರ್ಶಕರು ಅಲ್ಲಿವರೆಗೆ ಬಂದು ಬುತ್ತಿ ಬಿಚ್ಚಿದರು. ಇನ್ನು ನೀವು ಹೋಗಿ ನಾವು ಇಲ್ಲೇ ಇರುತ್ತೇವೆ. ನೀರು ತುಂಬಿಸಲು ಬಾಟಲುಗಳನ್ನು ಇಟ್ಟು ಹೋಗಿ ಎಂದರು. ನಾನು ನಿಧಾನವಾಗಿ ಹೋಗುತ್ತ ಇರುತ್ತೇನೆ ಎಂದು ಕಾವ್ಯಳಿಗೆ ನುಡಿದು ಎತ್ತಿನ ಬೆನ್ನನ್ನು ಏರುವ ಸಾಹಸಕ್ಕೆ ಅಣಿಯಾದೆ. ಸುಸ್ತು ಬಹಳವಾಗಿ ನಿಂತು ನಿಂತು ಸುಧಾರಿಸಿ ಬೆನ್ನು ತಲಪಿದೆ. ಬೆನ್ನು ತಲಪಿದರಾಯಿತೆ? ಅಲ್ಲಿಂದ ಭುಜವನ್ನೇರಲು ಮತ್ತೂ ಏರಬೇಕಿತ್ತು. ಓಹ್! ಸಾಕಾಯಿತು. ಇಲ್ಲಿಗೆ ನಿಲ್ಲಿಸುತ್ತೇನೆ. ಇಷ್ಟಕ್ಕೇ ತೃಪ್ತಿ ಹೊಂದುತ್ತೇನೆ. ಆಗಲೇ ೧.೧೫. ಭುಜ ಹಿಡಿಯುವ ಸಾಹಸ ಮಾಡಾಲಾರೆ ಎನಿಸಿತು. ಸಾಕು ಇಷ್ಟಾದರೂ ಬಂದಿಯಲ್ಲ. ಕೂತು ವಿರಮಿಸು ಎಂದು ಮನಸ್ಸು ಪಿಸುನುಡಿಯಿತು. ಇಷ್ಟು ಬಂದು ಭುಜ ಏರದಿದ್ದರೆ ಏನು ಪ್ರಯೋಜನ? ಕೊನೆಮುಟ್ಟಿಬಿಡು. ನಿಧಾನವಾಗಿ ಹತ್ತು ಸಾಧ್ಯ ನಿನ್ನಿಂದ. ಎಂದು ಒಳಮನಸ್ಸು ಹುರಿದುಂಬಿಸಿತು. ಕಾವ್ಯ ಊಟವಾಗಿ ಮೇಲೆ ಹತ್ತಿ ನನ್ನಿಂದ ಮುಂದಿದ್ದಳು. 



   ಹೌದಲ್ಲ! ಇಷ್ಟು ದೂರಬಂದು ಗಮ್ಯ ತಲಪದಿದ್ದರೆ ಅದು ನನಗೆ ಶೋಭೆಯಲ್ಲ ಎಂದು ನನಗೆ ನಾನೇ ಹೇಳಿಕೊಂಡು ಕಾಲು ಮುಂದಡಿ‌ಇಟ್ಟೆ. ಏರು ಅಂದರೆ ಏರು. ಕೆಲವು ಕಡೆ ಬಂಡೆಯನ್ನು ಕೋತಿಯಂತೆ ಏರಬೇಕು. ಅಂತೂ ೨ ಗಂಟೆಗೆ ಎತ್ತಿನಭುಜವನ್ನು ಏರಿ ಅಲ್ಲಿ ಉಸ್ಸಪ್ಪ ಎಂದು ಕುಳಿತು ನಿಟ್ಟುಸಿರುಬಿಟ್ಟೆ. ಅಲ್ಲಿ ಕುಳಿತು ಸುತ್ತಲೂ ಪ್ರಕೃತಿಯ ವಿಸ್ಮಯವನ್ನು ನೋಡುತ್ತಿರಬೇಕಾದರೆ ಮೇಲೆ ಹತ್ತಿ ಬಂದದ್ದು ಸಾರ್ಥಕ ಎಂಬ ಭಾವ ಮೂಡಿತು. ದೂರದಲ್ಲಿ ಅಮೇದಿಕಲ್ಲು, ಒಂಬತ್ತುಗುಡ್ಡ ಇತ್ಯಾದಿ ಬೆಟ್ಟಗಳು ಕಾಣುತ್ತವೆ. ಸುತ್ತಲೂ ಪರ್ವತರಾಶಿಗಳು ಹಸುರಿನಿಂದ ಕೂಡಿತ್ತು. ನಾವು ಮನದಣಿಯೆ ನೋಡಿದ್ದೂ ಅಲ್ಲದೆ ಕ್ಯಾಮರದೊಳಗೂ ಆ ನೆನಪನ್ನು ಕ್ಲಿಕ್ಕಿಸಿಕೊಂಡೆವು. ಎತ್ತಿನಭುಜದ ಮೇಲೆ ಒಂದು ಧ್ವಜ ಹಾರಾಡುತ್ತಿತ್ತು. ಅಲ್ಲಿ ಕುಳಿತು ಛಾಯಾಚಿತ್ರ ಕ್ಲಿಕ್ಕಿಸಿಕೊಂಡೆವು. ಹೆಚ್ಚು ಹೊತ್ತು ಕೂತಿರಬೇಡಿ. ಕೆಳಗೆ ಇಳಿದು ಕಾಡುದಾರಿಯಲ್ಲಿ ಊಟ ಮಾಡೋಣ ಎಂದು ಫತೇಖಾನ್ ಹೇಳಿದ್ದರು. ನಾವು ಬೆಟ್ಟ ಹತ್ತುವಾಗ ಮುಂದೆ ಹತ್ತಿದ್ದವರೆಲ್ಲ ಇಳಿಯಲು ತೊಡಗಿದ್ದರು. ಹಾಗಾಗಿ ನಾವು ಹೆಚ್ಚು ಹೊತ್ತು ಕೂರದೆ ೨.೩೦ಗೆ ಬೆಟ್ಟ ಇಳಿಯಲು ಅನುವಾದೆವು. ಸತೀಶಬಾಬು ಬಂಡೆಯಿಂದ ಕೆಳಗೆ ಇಳಿಸಲು ನೆರವಾದರು. 




  ನಾವು ಕೆಳಗೆ ಇಳಿದು ಕಾಡುದಾರಿಯಲ್ಲಿ ಸಾಗಿ ಮರದ ನೆರಳಿನಲ್ಲಿ ಕೂತು ಬುತ್ತಿ ಬಿಚ್ಚಿದೆವು. ನಮ್ಮ ಊಟ ಮುಗಿಯುವ ಮೊದಲು ಆನಂದರಿಬ್ಬರೂ ನೀರು ತುಂಬಿ ತಂದು ಕೊಟ್ಟರು. ಊಟವಾಗಿ ತುಸು ವಿರಮಿಸಿ ಮುಂದೆ ನಡೆದೆವು. ಬೆಟ್ಟ ಹತ್ತುವಾಗ ಆಗಿದ್ದ ಆಯಾಸ ಇಳಿಯುವಾಗ ಇಲ್ಲವಾಗಿತ್ತು. ಹಾಗಾಗಿ ಕ್ಯಾಮರಾ ಬ್ಯಾಗಿನಿಂದ ಹೆಗಲಿಗೇರಿತು. ಇಳಿಯುವಾಗ ಹೆಚ್ಚು ವಿಶ್ರಾಂತಿ ಬಯಸದೆ ಒಂದೆರಡುಕಡೆ ವಿರಮಿಸಿದ್ದು ಬಿಟ್ಟರೆ ಎಲ್ಲೂ ನಿಲ್ಲದೆ ನಡೆದೆವು.  ನಡೆದಷ್ಟೂ ಮುಗಿಯದ ದಾರಿ ಎನಿಸಿತ್ತು. ಮರದ ಬೊಡ್ಡೆಗಳು ದಾರಿಗಡ್ಡ ಬಿದ್ದದ್ದನ್ನು ಬಗ್ಗಿ ದಾಟುತ್ತ ಬರಬೇಕಾದರೆ ಅರೆ ಈ ಸಸ್ಯ ನೋಡು ಕಾವ್ಯ. ಎಲೆಗಳ ಚಂದ ನೋಡು. ಎಲೆಗಳಿಗೆ ಯಾರಿಟ್ಟರೂ ಈ ಚುಕ್ಕೆಗಳನ್ನು ಎಂದು ಹೇಳುತ್ತಲೇ ಅದರ ಫೋಟೋ ಕ್ಲಿಕ್ಕಿಸಿದೆ. ಕಾವ್ಯಳೂ ಹಾಗಲ್ಲ ಹೀಗೆ ಫೋಟೋ ಹೊಡೆಯಬೇಕು ಎಂದು ಶೂಟೀಂಗ್ ಪಾಟ ಮಾಡುತ್ತ ಅವಳೂ ಕ್ಲಿಕ್ಕಿಸಿದಳು. ಹೀಗೆಯೇ ಮರ ಕಡಿದ ಸ್ಥಳದಲ್ಲಿ ಟಿಸಿಲೊಡೆದು ಚಿಗುರಿದ ದೃಶ್ಯವೂ ಎಂಥ ಚಂದವದು ಎನ್ನುತ್ತ ಎಲ್ಲವನ್ನೂ ನಮ್ಮ ಕ್ಯಾಮರಾದೊಳಗೆ ಭದ್ರಪಡಿಸಿಕೊಳ್ಳುತ್ತಲೇ ಸಾಗಿದೆವು. ಮುಂದೆ ಬಂದಾಗ ಕೆಲವು ಯುವತಿಯರು ಅಲ್ಲಿ ಕೂತಿದ್ದರು. ನಾವು ಮೇಲೆ ಬರಲೆ ಇಲ್ಲ. ಇಲ್ಲೇ ಕೂತಿದ್ದೆವು. ಎರಡುಸಲ ಎಲ್‌ಎಂ. ಆಯಿತು. ಮಾತ್ರೆ ತಿಂದೆ ಎಂದು ಅವರು ಹೇಳಿದಾಗ ಈ ‘ಎಲ್‌ಎಂ’ ಅಂದರೆ ಏನು? ಎಂದು ನನಗೆ ಮೊದಲು ಅರ್ಥವಾಗಲೆ ಇಲ್ಲ. ಮತ್ತೆ ಹೊಳೆಯಿತು ‘ಎಲ್‌ಎಂ’ ಅಂದರೆ ಲೂಸ್ ಮೋಶನ್ ಎಂಬುದರ ಹ್ರಸ್ವರೂಪ ಎಂದು! 




ಜಲಥೆರಪಿ
   ಅಂತೂ ನಾವು ಹೊಳೆ ಬಳಿ ಸಂಜೆ ಆರೂಕಾಲಕ್ಕೆ ಬಂದೇ ಬಿಟ್ಟೆವು. ಶೂಬಿಚ್ಚಿ ಹೊಳೆದಾಟಿ ಬಂಡೆಮೇಲೆ ಕುಳಿತು ನೀರಿಗೆ ಕಾಲು ಹಾಕಿ ಕಾಲುಗಳು ಈಜು ಅಭ್ಯಾಸ ಮಾಡುತ್ತಲೇ ಇದ್ದುವು. ಬಾಕಿ ಎಲ್ಲರೂ ಬರುವಲ್ಲಿವರೆಗೂ ಅರ್ಧಗಂಟೆಗೂ ಹೆಚ್ಚುಕಾಲ ಕಾಲುಗಳು ಈಜುತ್ತಿದ್ದುವು. ಶೂಬಿಚ್ಚಿದಾಗ ಕಾಲುಬೆರಳುಗಳೆಲ್ಲ ನೋಯುತ್ತಿದ್ದುವು. ಇನ್ನು ಪುನಃ ಶೂ ಹಾಕಬೇಕಲ್ಲ ಎಂಬ ಚಿಂತೆ ಆಗಿತ್ತು. ಆದರೆ ಏನಾಶ್ಚರ್ಯ! ನೀರಿನಿಂದ ಎದ್ದಾಗ ಪಾದ ಹಾಗೂ ಬೆರಳುಗಳಲ್ಲಿ ನೋವೇ ಇಲ್ಲ. ಇದು ಜಲಥೆರಪಿಯ ಮ್ಯಾಜಿಕ್. ಇದು ನಮಗೆ ತುಂಬ ಖುಷಿ ಕೊಟ್ಟಿತು. ಕೆಲವರೆಲ್ಲ ನೀರಿಗೆ ಇಳಿದು ಮೈಚಾಚಿಕೊಂಡು ಒದ್ದೆಮುದ್ದೆಯಾಗಿ ಎದ್ದು ಚಳಿಯಲ್ಲಿ ನಡುಗಿದರು. ಎಲ್ಲರೂ ಬಸ್ ಬಳಿ ಬಂದು ಸೇರುವಾಗ ಗಂಟೆ ಏಳು ದಾಟಿತ್ತು.


   ಹೊಳೆಗುಂಡಿಯಿಂದ ಶಿಶಿಲ ತಲಪಿ ಪುರುಷೋತ್ತಮರ ಕ್ಯಾಂಟೀನಿನಲ್ಲಿ ಅವಲಕ್ಕಿ ಮಿಕ್ಶ್ಚರು ಕಷಾಯ, ಕಾಫಿ ಹೊಟ್ಟೆ ಸೇರಿದಾಗ ನೆಮ್ಮದಿ ಆಯಿತು. ಪುರುಷೋತ್ತಮರು ಬೇಕಷ್ಟು ತಿನ್ನಿ ತಿನ್ನಿ, ಕಷಾಯ ಕುಡಿದು ಹೇಗಿದೆ ಹೇಳಿ ಎನ್ನುತ್ತ ನಮಗೆಲ್ಲ ಆದರದ ಉಪಚಾರ ಮಾಡಿದ್ದರು. 

ಮರಳಿ  ಹೊರಡುವ ತಯಾರಿ
ಕ್ಯಾಂಟೀನ್ ಎದುರುಭಾಗದಲ್ಲಿರುವ ಶಿಶಿಲೆಶ್ವರ ದೇವಾಲಯ ನೋಡಿ ತಂತ್ರಿಗಳ ಮನೆ ತಲಪಿ ಸ್ನಾನವಾಗಿ ಚೀಲಕ್ಕೆ ಬಟ್ಟೆಬರೆ ತುಂಬಿ ೯.೩೦ಗೆ ತಯಾರಾದೆವು. ಅಷ್ಟರಲ್ಲಿ ಊಟದೊಂದಿಗೆ ಪುರುಷೋತ್ತಮರು ಹಾಜರಾಗಿಯೇಬಿಟ್ಟರು. 
ಭರ್ಜರಿ ಭೋಜನ
ಅನ್ನ, ಸಾರು, ಸಾಂಬಾರು, ಮೆಣಸುಕಾಯಿ, ಹಪ್ಪಳ, ಬಾಳ್ಕಮೆಣಸು, ಕಾಯಿಹೋಳಿಗೆ ಇವಿಷ್ಟು ಬಗೆಯನ್ನು ಚೆನ್ನಾಗಿ ಸವಿದೆವು. ಪುರುಷೋತ್ತಮರೇ ಆತ್ಮೀಯತೆಯಿಂದ ಹೋಳಿಗೆ ಬಡಿಸಿದ್ದರು. 



ಕೃತಜ್ಞತಾ ಸಮರ್ಪಣೆ
ನಾವೆಲ್ಲ ವೃತ್ತಾಕಾರವಾಗಿ ನಿಂತು ಪುರುಷೋತ್ತಮ ಮತ್ತು ಅವರ ಮಕ್ಕಳಿಗೆ, ಹಾಗೂ ಉಳಿದುಕೊಳ್ಳಲು ಜಾಗ ಕಲ್ಪಿಸಿಕೊಟ್ಟ ಗಣೇಶ ತಂತ್ರಿಗಳಿಗೆ ಮತ್ತು ನಮಗೆ ಅಲ್ಲಿ ಸಕಲ ವ್ಯವಸ್ಥೆ ಮಾಡಿಕೊಟ್ಟ ಗೌರಿಗೆ, ಹಾಗೂ ನಮಗೆ ಮೂರು ದಿನ ಮಾರ್ಗದರ್ಶಕರಾಗಿ ಬಂದ ಆನಂದರಿಬ್ಬರು ಹಾಗೂ ಚೆನ್ನಪ್ಪನವರಿಗೆ ಧನ್ಯವಾದ ಅರ್ಪಿಸಿದೆವು.  ಗೌರಿಯೂ ಮುಗ್ಧತೆಯಿಂದ ಚಪ್ಪಾಳೆ ತಟ್ಟುತ್ತ ನಮ್ಮೊಡನೆ ನಿಂತು ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದಳು. 
ಭಾಷಾಪ್ರೇಮದ ಸೆಳೆತ
ನಾವು ನಾಲ್ಕೈದು ಮಂದಿಗೆ ತುಳು ಭಾಷೆ ಮಾತಾಡಲು ಬರುತ್ತಿತ್ತು. ನಾವು ಪುರುಷೋತ್ತಮರು ಹಾಗೂ ಗೌರಿ ಜೊತೆ ತುಳು ಮಾತಾಡುತ್ತಿದ್ದೆವು. ಹಾಗಾಗಿ ನಮಗೆ ಅವರೊಂದಿಗೆ ಹೆಚ್ಚು ಭಾಂದವ್ಯ ಬೆಳೆಯಿತು. ಹೊರಡುವ ಮುನ್ನ ಪುರುಷೋತ್ತಮರು ನಮಗೆ ಮನೆಗೆಂದು ಹೋಳಿಗೆ ಕಟ್ಟು ಕೊಟ್ಟಿದ್ದರು. ಅವರ ಈ ಪ್ರೀತಿಗೆ ಏನು ಹೇಳಲಿ? ಪದಗಳೇ ಇಲ್ಲ. ನಾವು ಯಾರೋ ಏನೋ? ಆದರೂ ಅವರು ನಮ್ಮಲ್ಲಿ ತೋರಿದ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಮೂರೂ ದಿನ ಬೆಳಗ್ಗೆ ಬೇಗ ಎದ್ದು ತಿಂಡಿ ಅಡುಗೆ ಮಾಡಿಸಿ ತಂದು ತುಂಬ ಚೆನ್ನಾಗಿ ನಮ್ಮ ಹೊಟ್ಟೆಯ ಯೋಗಕ್ಷೇಮ ನೋಡಿಕೊಂಡಿದ್ದರು. ಊಟ ಸರಿಯಾಗಿ ಮಾಡಿದಿರ? ಸೇರಿತ ನಿಮಗೆ? ಎಂದು ನಮ್ಮ ತಂಡದ ಪ್ರತಿಯೊಬ್ಬರನ್ನೂ ವಿಚಾರಿಸಿದ್ದರು. ಈ ಪ್ರೀತಿ ದುಡ್ಡಿಗೂ ಮೀರಿದ್ದು ಎಂದೇ ನನ್ನ ಭಾವನೆ. ಪುರುಷೋತ್ತಮರ ತಮ್ಮನ ಪುಟ್ಟಮಗಳು ಒಂದು ದಿನ ಬಂದು ನಮ್ಮೊಡನೆ ಸ್ವಲ್ಪ ಹೊತ್ತು ಇದ್ದು ಆಟವಾಡಿ ಹೋಗಿದ್ದಳು.  ಗೌರಿಯಂತೂ ಮೂರೂ ದಿನ ಅವಳ ಮನೆಗೂ ಹೋಗದೆ ಅಲ್ಲಿಯೇ ಉಳಿದುಕೊಂಡು ನಮ್ಮಲ್ಲಿ ಮಾತಾಡುತ್ತಲೇ ನಮ್ಮೊಳಗೊಬ್ಬಳಾಗಿದ್ದಳು. ಅವಳ ನಾಯಿ ಬೆಕ್ಕುಗಳೂ ನಮ್ಮ ಹಿಂದೆಮುಂದೆ ಸುತ್ತುತ್ತ ಪ್ರೀತಿ ತೋರುತ್ತಿದ್ದುವು. 
ವಿದಾಯ- ಮರಳಿ ಮನೆಗೆ
ಎಲ್ಲರಿಗೂ ವಿದಾಯ ಹೇಳಿ ರಾತ್ರಿ ೧೧ ಗಂಟೆಗೆ ಬಸ್ ಹತ್ತಿದೆವು. ೧೦-೧-೧೭ರಂದು ಬೆಳಗ್ಗೆ ೫.೩೦ ಗಂಟೆಗೆ ಮೈಸೂರು ತಲಪಿದೆವು. ಪ್ರತಿಯೊಬ್ಬರ ಮನೆ ಆಸುಪಾಸಿನಲ್ಲೇ ನಮ್ಮನ್ನೆಲ್ಲ ಇಳಿಸಿದ್ದರು. ಮೂರು ದಿನದ ಈ ಚಾರಣ ಕಾರ್ಯಕ್ರಮ ಕೇವಲ ರೂ ೨೬೦೦ರಲ್ಲಿ ಬಹಳ ಅಚ್ಚುಕಟ್ಟಾಗಿ ಚೆನ್ನಾಗಿ ನಡೆಯಿತು. ಇದನ್ನು ಆಯೋಜಿಸಿದ್ದು ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಅಯ್ಯಪ್ಪ, ಪಲ್ಲವಿ, ಅಡಪ ಹಾಗೂ ಇವರಿಗೆ ಫತೇಖಾನ್, ಸತೀಶಬಾಬು ಸಂಪೂರ್ಣ ನೆರವನ್ನಿತ್ತು ಸಹಕರಿಸಿದ್ದರು ಮತ್ತು ಚಾರಣ ಸಮಯದಲ್ಲಿ ನಮ್ಮೆಲ್ಲರನ್ನೂ ಹುರಿದುಂಬಿಸಿ ಕರೆದೊಯ್ದಿದ್ದರು. ಇವರೆಲ್ಲರಿಗೂ ನಮ್ಮ ಚಾರಣಿಗರ ತಂಡದ ಪರವಾಗಿ ವಂದನೆಗಳು. 
   ಅಮೇದಿಕಲ್ಲು, ಎತ್ತಿನಭುಜ ಚಾರಣ ಹೋಗುವವರು ಆದಷ್ಟು ಗುಂಪಿನಲ್ಲಿ ಹೋಗಿ. ಶಿಶಿಲದಲ್ಲಿ ಅತ್ಯುತ್ತಮ ಊಟ ವಸತಿಗೆ ಪುರುಷೋತ್ತಮ ರಾವ್ ೮೭೬೨೯೨೧೧೫೪, ಸುಸೂತ್ರ ಚಾರಣ ಮಾರ್ಗದರ್ಶನಕ್ಕೆ ಚೆನ್ನಪ್ಪ ೯೪೮೧೭೩೫೮೯೫ ಇವರನ್ನು ಸಂಪರ್ಕಿಸಿ. 
     ಮೈಸೂರು ತಲಪಿದ ಮಾರನೆದಿನ ಪುರುಷೋತ್ತಮರಾಯರು ದೂರವಾಣಿ ಕರೆ ಮಾಡಿ ‘ಸರಿಯಾಗಿ ಮನೆ ತಲಪಿದಿರ? ವಿಶ್ರಾಂತಿ ತೆಗೆದುಕೋಂಡಿರ? ಸುಸ್ತು ಎಲ್ಲ ಪರಿಹಾರವಾಯಿತ?’ ಎಂದು ಯೋಗಕ್ಷೇಮ ವಿಚಾರಿಸಿದ್ದರು.  ಇವರ ಈ ವಿಶ್ವಾಸಕ್ಕೆ ನಮೋನಮಃ 


ಗುರುವಾರ, ಫೆಬ್ರವರಿ 2, 2017

ಮೂರು ಪರ್ವತಗಳನೇರಿದ ಸಾಹಸ ( ಉದಯಪರ್ವತ, ಅಮೇದಿಕಲ್, ಎತ್ತಿನಭುಜ)

                           ಮೂರು ಪರ್ವತಗಳನೇರಿದ ಸಾಹಸ

                       ಉದಯಪರ್ವತ, ಅಮೇದಿಕಲ್, ಎತ್ತಿನಭುಜ


     ಎತ್ತಿನಭುಜದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಚಿತ್ರಲೇಖನ ಓದಿ ಅಲ್ಲಿಗೆ ಚಾರಣ ಹೋಗಲೇಬೇಕೆಂಬುದು ನನ್ನ ಕನಸಾಗಿತ್ತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದಿಂದ ದಶಂಬರ ತಿಂಗಳಲ್ಲಿ ೩ ದಿನ ಕಮರೊಟ್ಟು ಚಾರಣ (ಎತ್ತಿನಭುಜ ಸೇರಿತ್ತು) ಎಂದು ಹೇಳಿದಾಗ ಛೆ! ನನಗೆ ಹೋಗಲು ಆಗುವುದಿಲ್ಲವಲ್ಲ ಎಂದು ಬಹಳ ಬೇಸರವಾಗಿತ್ತು. ಆ ಸಮಯದಲ್ಲಿ ಅಕಾಲಿಕ ಮಳೆ ಸುರಿದ ಕಾರಣ ಅಲ್ಲಿಗೆ ಹೋಗುವುದನ್ನು ಜನವರಿ ತಿಂಗಳಿಗೆ ಮುಂದೂಡಿದ ಮಾಹಿತಿ ಬರುತ್ತಿದ್ದಂತೆಯೇ, ಸೀಟು ಇದೆಯಾ ಎಂದು ಫೋನಿಸಿದೆ. ಇದೆ ಎಂದಾಗ ಬಹಳ ಖುಷಿಯಾಯಿತು. ಬಹುಶಃ ನನಗಾಗಿಯೇ ಈ ಚಾರಣ ಮುಂದೂಡುವ ಹಾಗಾದದ್ದು ಎಂದು ಭಾವಿಸಿದೆ.
ಪ್ರಯಾಣದಾರಂಭ
   ೬-೧-೧೭ರಂದು ರಾತ್ರೆ ಮೈಸೂರಿನಿಂದ ಮಲ್ಲಿಕಾರ್ಜುನ ಎಂಬ ಹೆಸರಿನ ಖಾಸಗಿ ಬಸ್ಸಲ್ಲಿ ೧೦.೩೦ಗೆ ನಮ್ಮ ಪ್ರಯಾಣ ಪ್ರಾರಂಭ. ಬಸ್ ಹಾಸನ ಸಕಲೇಶಪುರ ಶಿರಾಡಿ ಘಾಟಿಯಲ್ಲಿ ಸಾಗಿತು. ನಾನು ಚಾಲಕನ ಹಿಂದಿನ ಸೀಟಲ್ಲಿ ಕುಳಿತಿದ್ದೆ. ರಾತ್ರೆ ಎಷ್ಟೊತ್ತಿಗೋ ಕಣ್ಣುಬಿಟ್ಟು ನೋಡುತ್ತೇನೆ ರಸ್ತೆ ಎದುರು ಕಾಣುವುದೇ ಇಲ್ಲ. ಅಷ್ಟು ಮಂಜು. ಬಸ್ ಎದುರಿನಿಂದ ಬರುವಾಗ ಇನ್ನೇನು ತಾಗಿ ಬಿಡುತ್ತದೆ ಎಂಬಷ್ಟು ಹತ್ತಿರ ಬರುವಾಗ ಸರಕ್ಕನೆ ನಮ್ಮ ಬಸ್ ಎಡಗಡಗೆ ಬರುತ್ತಿತ್ತು. ಜೀವ ಬಾಯಿಗೆ ಬಂದ ಅನುಭವ. ರಸ್ತೆ ನೋಡಿದರೆ ತಾನೆ ಇಂಥ ಗೊಂದಲ ಎಂದು ಕಣ್ಣಿಗೆ ಬಟ್ಟೆ ಕಟ್ಟಿದೆ. ಗುಂಡ್ಯದಲ್ಲಿ ಒಮ್ಮೆ ಚಹಾಕ್ಕೆ ಬಸ್ ನಿಲ್ಲಿಸಿದರು. ಮುಂದೆ ಎಲ್ಲು ನಿಲ್ಲದೆ ಮುಂದುವರಿದೆವು.

ಧರ್ಮಸ್ಥಳದ ಮಂಜುನಾಥ ಕಾಪಾಡಪ್ಪ ಅನವರತ
೮-೧-೨೦೧೭ರಂದು ಬೆಳಗ್ಗೆ ೪.೧೫ಕ್ಕೆ ನಾವು ಧರ್ಮಸ್ಥಳ ತಲಪಿದೆವು. ಅಲ್ಲಿ ಸಾಕೇತ ವಸತಿಗೃಹದಲ್ಲಿ ಕೋಣೆಯಲ್ಲಿ ಸ್ವಲ್ಪಹೊತ್ತು ವಿರಮಿಸಿದೆವು. ಬೆಳಗ್ಗೆ ನಿತ್ಯಕರ್ಮ ಮುಗಿಸಿ ಏಳುಗಂಟೆಗೆ ನಾವು ದೇವಾಲಯಕ್ಕೆ ಹೋದೆವು. ದೇವರ ದರ್ಶನಕ್ಕೆ ಚಕ್ರವ್ಯೂಹದೊಳಗೆ ಹೋಗಬೇಕು. ಕಬ್ಬಿಣದ ಜಾಲರಿ ಹಾಕಿದ ದಾರಿಯಲ್ಲಿ ಸುಮಾರು ಅರ್ಧಕಿಮೀ ನಡೆಯಬೇಕು. ಮುಕ್ಕಾಲುಗಂಟೆ ಸರತಿಸಾಲಿನಲ್ಲಿ ನಿಧಾನವಾಗಿ ಸಾಗಿ ದೇವರದರ್ಶನ ಮಾಡಿದೆವು. ನಮ್ಮ ಅತ್ತೆಯವರು ಪ್ರತಿನಿತ್ಯ ದಿನಕ್ಕೆ ಮೂರುಸಲವಾದರೂ ಧರ್ಮಸ್ಥಳದ ಮಂಜುನಾಥ ಕಾಪಾಡಪ್ಪ ಅನವರತ ಎಂದು ಹೇಳುತ್ತಿರುತ್ತಾರೆ. ಮಂಜುನಾಥನನ್ನು ನೋಡಿದಾಗ ಅತ್ತೆಯವರ ಈ ಮಾತು ನೆನಪಿಗೆ ಬಂತು. ದೇವಾಲಯದಿಂದ ಹೊರಗೆ ಬಂದಾಗ ವೀರೇಂದ್ರ ಹೆಗಡೆಯವರು ತುಲಾಭಾರ ನಡೆಯುವಲ್ಲಿ ಗಂಭೀರವದನರಾಗಿ ಕುಳಿತಿದ್ದುದು ಕಂಡಿತು.
   ದೇವಾಲಯದ ಅನತಿ ದೂರದಲ್ಲಿ ಇರುವ ತೃಪ್ತಿ ಹೊಟೇಲಿನಲ್ಲಿ ಇಡ್ಲಿ ವಡೆ ಕಾಫಿ ಕುಡಿದು ವಾಪಾಸು ಕೋಣೆಗೆ ಬಂದೆವು. ೯.೩೦ಗೆ ಕೋಣೆ ಖಾಲಿ ಮಾಡಿ ಬಸ್ ಹತ್ತಿದೆವು.



ಸೌತಡ್ಕ ಗಣಪ
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯಲ್ಲಿ ಸಾಗಿದೆವು. ಮುಂದೆ ಬಲಭಾಗಕ್ಕೆ ತಿರುಗಿದಾಗ ಸೌತಡ್ಕ ದೇವಾಲಯ ಎಂಬ ದೊಡ್ಡ ಕಮಾನು ಕಾಣುತ್ತದೆ. ಆ ದಾರಿಯಲ್ಲಿ ಸುಮೂರು ೨-೩ಕಿಮೀ ಸಾಗಿದರೆ ಸೌತಡ್ಕ ದೇವಾಲಯ ಕಾಣುತ್ತದೆ. ಬಯಲು ಆಲಯದಲ್ಲಿರುವ, ಗಿಡಮರಗಳೇ ನೆರಳು ಇಲ್ಲಿಯ ಗಣಪನಿಗೆ. ಗಣಪನನ್ನು ನೋಡಿ ಸಿಹಿ‌ಅವಲಕ್ಕಿ ಪ್ರಸಾದ ತಿಂದೆವು. ನಮಗೆ ಆ ದಿನ ಊಟ ದೇವಾಲಯದಲ್ಲೇ ಎಂದು ತೀರ್ಮಾನವಾಗಿತ್ತು. ಊಟಕ್ಕೆ ಇನ್ನೂ ವೇಳೆ ಇತ್ತು. ದೇವಾಲಯದ ಮುಂಭಾಗ ಮರದ ನೆರಳಿನಲ್ಲಿ ನಾವು ಕುಳಿತು ಪರಸ್ಪರ ಪರಿಚಯ ಮಾಡಿಕೊಂಡೆವು. ನಾವು ಒಟ್ಟು ೪೫ ಮಂದಿ ಇದ್ದೆವು. ಡಾ. ಸತೀಶ ಅವರು ತಮ್ಮ ಗತಕಾಲದಲಿ ಪ್ರೀತಿಸಿ ಮದುವೆಯಾಗಿ ಯಶಸ್ವಿಯಾದ ಕಥೆಯನ್ನು ಸ್ವಾರಸ್ಯವಾಗಿ ಹೇಳಿದರು. ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ರಾಮಕೃಷ್ಣಾಶ್ರಮದ ನಂಟು ಇತ್ತಂತೆ. ಮುಂದೆ ಸತೀಶಾನಂದರಾಗುವ ಗುರಿ. ಆಗ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವೀಣಾ ಅವರ ಪರಿಚಯ ಆಯಿತಂತೆ. ಅವರ ಹಿಂದೆ ಬಿದ್ದರಂತೆ. ಈ ಮದುವೆಗೆ ನಮ್ಮ ತಂದೆ ಒಪ್ಪುತ್ತಿಲ್ಲ ಎಂದು ವೀಣಾ ಅವರು ನಿರಾಕರಿಸಿದರಂತೆ. ಇವರು ಹತಾಶೆಯಿಂದ ಪೊನ್ನಂಪೇಟೆಯಲ್ಲಿ ರಾಮಕೃಷ್ಣಾಶ್ರಮದಲ್ಲಿ ವೈದ್ಯರಾಗಿ ಸೇರಿದರಂತೆ. ಆದರೂ ವೀಣಾರ ನೆನಪು ಬಿಡದೆ ಕಾಡಿ ಅವರಿಗೆ ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ನಿಮಗೆ ವಿಪುಲ ಅವಕಾಶವಿದೆ ಬನ್ನಿ ಎಂದು ಕಾಗದ ಹಾಕಿದರಂತೆ ಮೂರು ನಾಲ್ಕು ಸಲ. ಅವರಿಂದ ಉತ್ತರ ಬರಲಿಲ್ಲವಂತೆ. ಮತ್ತೂ ಒಂದು ಸಲ ಕಾಗದ ಹಾಕಿದಾಗ ಉತ್ತರ ಬಂತಂತೆ. ನೀವು ಮದುವೆಯಾಗುವುದಾದರೆ ನಾನು ಅಲ್ಲಿಗೆ ಬರುವೆ ಎಂದು ಬರೆದರಂತೆ. ಅಲ್ಲಿಗೆ ಅವರು ಸತೀಶಾನಂದರಾಗುವ ಪ್ರಯತ್ನಕ್ಕೆ ಎಳ್ಳುನೀರು ಬಿಟ್ಟರಂತೆ! ಮುಕ್ಕಾಲು ಗಂಟೆ ಅವರ ಪ್ರೇಮಕಥೆಯನ್ನು ಬಿಡಿಸಿಟ್ಟರು. ನಮ್ಮೊಡನೆ ಬಂದಿದ್ದ ಮದುವೆಯಾಗದ ಕೆಲವು ಯುವಕರು ಅವರ ಕಥೆಯನ್ನು ತಲ್ಲೀನರಾಗಿ ಕೇಳಿ ಮೈಮರೆತು ಕನಸುಕಾಣಲು ತೊಡಗಿರಬಹುದು! ಆಗ ಗಂಟೆ ೧೨.೧೫. ಮಹಾಮಂಗಳಾರತಿ ಆಯಿತು. ೧೨.೩೦ಗೆ ಊಟಕ್ಕೆ ಹೋದೆವು. ಅನ್ನ, ಪಲ್ಯ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ಉಪ್ಪಿನಕಾಯಿ ಪುಷ್ಕಳ ಭೋಜನವಾಗಿ ನಾವು ೧.೧೫ಕ್ಕೆ ಅಲ್ಲಿಂದ ಹೊರಟೆವು.



 



 

ಶಿಶಿಲಕ್ಷೇತ್ರದೆಡೆಗೆ ಪಯಣ
ನಾವು ಸೌತಡ್ಕದಿಂದ ಕೊಕ್ಕಡ ಮಾರ್ಗವಾಗಿ ಶಿಶಿಲಕ್ಕೆ ಬಂದೆವು. ೨.೩೦ಗೆ ನಾವು ಗಣೇಶ ತಂತ್ರಿಗಳ ಮನೆಗೆ ಹೋದೆವು. ನಮಗೆ ಅಲ್ಲಿ ಉಳಿಯಲು ಏರ್ಪಾಡು ಮಾಡಿದ್ದರು ಪುರುಷೋತ್ತಮರಾಯರು. ಅಚ್ಚುಕಟಾಗಿ ಸಕಲ ವ್ಯವಸ್ಥೆ ಮಾಡಿದ್ದರು. ನಾಲ್ಕು ಕೋಣೆಗಳನ್ನು ನಮಗೆ ಬಿಟ್ಟುಕೊಟ್ಟಿದ್ದರು. ಅಲ್ಲಿ ನಮ ಚೀಲವಿಳಿಸಿ ಹಗುರಾದೆವು. ಕಲ್ಲಂಗಡಿ ಶರಬತ್ತು ತಂಪಾಗಿ ಹೊಟ್ಟೆಗೆ ಇಳಿದಾಗ ಮುಂದಿನ ಪಯಣಕ್ಕೆ ಶಕ್ತಿ ಸಂಚಯನವಾಯಿತು.

                                     ಉದಯಪರ್ವತ

     ನಾವು ೩ ಗಂಟೆಗೆ ತಯಾರಾದೆವು. ಸಮೀಪದ ಉದಯಪರ್ವತವನ್ನು ಹತ್ತುವುದು ನಮ್ಮ ಗುರಿಯಾಗಿತ್ತು. ಇದು ನಮ್ಮ ಚಾಮುಂಡಿಬೆಟ್ಟದಷ್ಟು ಇರಬಹುದು ಎಂದು ಆಯೋಜಕರು ಹೇಳಿದ್ದರು. ನಮಗೆ ಚೆನ್ನಪ್ಪ ಮಾರ್ಗದರ್ಶಕರಾಗಿ ಮುಂದೆ ಹೊರಟರು. ಬೇಗ ಬೇಗ ಬರಬೇಕು. ಕತ್ತಲೆಯಾಗುವ ಮೊದಲೇ ನಾವು ಬೆಟ್ಟ ಇಳಿದಾಗಬೇಕು. ಸಂಜೆ ೫ ಗಂತೆಯೊಳಗೆ ಇಳಿಯಲೇಬೇಕು. ಮೇಲೆ ತಲಪದಿದ್ದರೂ ಸರಿಯೆ ಎಲೀವರೆಗೆ ತಲಪಿರುತ್ತೀರೋ ಅಲ್ಲಿಂದ ವಾಪಾಸು ಹಿಂದಕ್ಕೆ ತಿರುಗಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು ಚೆನ್ನಪ್ಪ.
    ನಮ್ಮ ಸವಾರಿ ಬೆಟ್ಟದೆಡೆಗೆ ಹೊರಟಿತು. ಸ್ವಲ್ಪ ದೂರ ಎಲ್ಲರೂ ಹುರುಪಿನಿಂದಲೇ ಹೆಜ್ಜೆ ಹಾಕಿದೆವು. ಬೆಟ್ಟ ಏರು ಸುರುವಾಗುವಾಗ ಕೆಲವರ ಕಾಲು ನಿಧಾನಗತಿಗೆ ಬಂತು. ಬಿಸಿಲುಬೇರೆ, ಸರಿಯಾಗಿ ನಿದ್ರೆ ಇಲ್ಲದಿರುವುದು ಎಲ್ಲ ಸೇರಿ ನಡಿಗೆಗೆ ವೇಗ ಬರಲೆ ಇಲ್ಲ. ಅರ್ಧ ಬೆಟ್ಟ ಹತ್ತಿ ಆಗುವಾಗ ಚಾಮುಂಡಿಬೆಟ್ಟದಷ್ಟಂತೆ. ಅಲ್ಲವೇ ಅಲ್ಲ. ಅದರ ಎರಡರಷ್ಟು ಇದೆ ಎಂಬ ತೀರ್ಮಾನ ಬಂತು ಕೆಲವರಿಂದ!  ಕುರುಚಲು ಸಸ್ಯ, ಹುಲ್ಲಿನಿಂದ ಆವೃತವಾದ ಬೆಟ್ಟ. ಮರಗಳು ಇಲ್ಲವೇ ಇಲ್ಲ. ಅಂತೂ ನಾವು ೪.೩೦ಗೆ ಉದಯಪರ್ವತದ ಮೇಲೆ ನಿಂತಿದ್ದೆವು. ಅಲ್ಲಿಂದ ಅಮೇದಿಗುಡ್ಡ, ಎತ್ತಿನಭುಜ ಪಿಲಿಬೆಟ್ಟ ಎಲ್ಲ ಕಾಣುತ್ತಿತ್ತು. ಶಿಶಿಲ ನದಿ ಹರಿಯುವುದು ಸೊಗಸಾಗಿ ಕಾಣುತ್ತಿತ್ತು. ಅರ್ಧ ಗಂಟೆ ಅಲ್ಲಿ ಬಿಸಿಲಲ್ಲೇ ಕುಳಿತೆವು. ಅಲ್ಲೊಂದು ಧ್ವಜ ನೆಟ್ಟಿದ್ದರು. ಛಾಯಾಚಿತ್ರ ಕ್ಲಿಕ್ಕಿಸಿಕೊಂಡೆವು. ಐದು ಗಂಟೆಗೆ ಎಲ್ಲರನ್ನೂ ಎಬ್ಬಿಸಿದ ಚೆನ್ನಪ್ಪ ಇಳಿಯಿರಿ ಬೇಗ ಬೇಗ ಕತ್ತಲೆ ಆಗುತ್ತದೆ ಎಂದು ಹೊರಡಿಸಿಯೇ ಬಿಟ್ಟರು. ನಾವು ಕೆಲವರು ದಾಪುಗಾಲು ಹಾಕಿ ಕೆಳಗೆ ಇಳಿದೆವು. ಆರು ಗಂಟೆಗೆ ತಂತ್ರಿಗಳ ಮನೆ ಸೇರಿದೆವು. ಕಾಫಿ, ಶ್ಯಾವಿಗೆ ಉಪ್ಪಿಟ್ಟು ಹಸಿದ ಹೊಟ್ಟೆಗೆ ಬಲು ರುಚಿಯಾಗಿತ್ತು.
   ತಂತ್ರಿಗಳ ಮನೆಯ ಸಕಲ ಉಸ್ತುವಾರಿ ವಹಿಸುತ್ತ ಇರುವಾಕೆ ಗೌರಿ. ಬಲು ಚುರುಕಿನ ಹೆಂಗಸು. ನಮಗೆ ಒಲೆ ಉರಿಹಾಕಿ ಬಿಸಿನೀರು ಧಾರಾಳಾವಾಗಿ ಮಾಡಿಟ್ಟಿದ್ದರು. ಗಂಡಸರಿಗೆ ಹೊರಗೆ ದೊಡ್ಡ ಒಲೆ ಹಾಕಿ ಹಂಡೆಯಲ್ಲಿ ನೀರು ಕಾಯಿಸಿಟ್ಟಿದ್ದಳು. ಅಲ್ಲಿ ಅವಳು ಮಾಡುವ ಕೆಲಸ ಹತ್ತಾರು. ತೋಟಕ್ಕೆ ನೀರು ಬಿಡುವುದು, ಹಟ್ಟಿಯಲ್ಲಿ ದನಕರುಗಳ ಸಾಕಣೆ, ಹಾಲು ಕರೆಯುವುದು ಇತ್ಯಾದಿ ಅಲ್ಲಿಯ ಸರ್ವ ಕೆಲಸವೂ ಅವಳದೇ. ಸ್ನಾನ ಮಾಡಿ ವಿಶ್ರಾಂತಿ ಪಡೆಯುತ್ತಿರುವಾಗ ಉಳಿದ ಕೆಲವು ಮಂದಿ ಚೆನ್ನಪ್ಪನವರೊಡನೆ ಬಂದು ತಲಪುವಾಗ ಗಂಟೆ ೭ ಕಳೆದಿತ್ತು. ಎಲ್ಲರೂ ತಿಂಡಿ ತಿಂದು ಸುಧಾರಿಸಿಕೊಂಡರು. ಕೆಲವರು ಸಂಜೆಯ ತಿಂಡಿಯನ್ನೆ ತಿಂದು ಊಟ ಬಿಟ್ಟರು.   ೮ ಗಂಟೆಗೆ ಬಿಸಿ ಟೊಮೆಟೊ ಸೂಪು ಕುಡಿದೆವು.





   ಬೆಂಕಿ ಇಲ್ಲದ ಫಯರ್ ಕ್ಯಾಂಪ್- ಭೋಜನ- ನಿದ್ರೆ
    ಎಲ್ಲರೂ ಸ್ನಾನ ಮುಗಿಸಿ ಅಂಗಳದಲ್ಲಿ ಕುಳಿತೆವು. ಅಂಗಳಕ್ಕೆ ಶಾಮಿಯಾನ ಹಾಕಿದ್ದರು. ಆದಿನದ ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವಗಳನ್ನು ಹೊಸದಾಗಿ ಚಾರಣಕ್ಕೆ ಬಂದವರು ಹೇಳಿದರು. ಹತ್ತು ಹನ್ನೆರಡು ಮಂದಿ ಯುವಕ ಯುವತಿಯರು ಬಂದಿದ್ದರು. ಗಗನಚಕ್ರವರ್ತಿ, ಫತೇಖಾನ್, ಡಾ. ಸತೀಶ, ಗೋಪಕ್ಕ, ಒಂದಿಬ್ಬರು ಹುಡುಗಿಯರು ಗಾನವಿನೋದ ನಡೆಸಿಕೊಟ್ಟರು. ಅಷ್ಟರಲಿ ಪುರುಷೋತ್ತಮ ರಾವ್ ಊಟದೊಂದಿಗೆ ಹಾಜರಾದರು. ಅನ್ನ, ಸಾರು, ಬಾಳೆಕಾಯಿ ಪಲ್ಯ, ಸಾಂಬಾರು, ಶ್ಯಾವಿಗೆ ಪಾಯಸ, ಹಪ್ಪಳ, ಬಾಳ್ಕ ಮೆಣಸು, ಮಜ್ಜಿಗೆ. ಉತ್ತಮ ಊಟವಾಗಿ ತಿಂದು ತೇಗಿದೆವು. ನಾವು ಎಂಟು ಮಂದಿ ಒಂದು ಕೋಣೆಯಲ್ಲಿ ಮಲಗಿದೆವು.

                                              ಬೆರಗಿನ ಅಮೇದಿಕಲ್ಲು 

  ಬೆಳಗ್ಗೆ ೮-೧-೧೭ರಂದು ೫.೩೦ಗೆ ಎದ್ದು ಹೊರಟು ತಯಾರಾದೆವು. ತಿಂಡಿ ಬರುವಾಗ ೭.೩೦. ಇಡ್ಲಿ ಚಟ್ನಿ, ಸಾಂಬಾರು, ಬನ್ಸ್, ಕಾಯಿಬರ್ಫಿ. ಬನ್ಸ್‌ಗೆ ಬೇಡಿಕೆ ಬಹಳ. ಕಾಫಿ, ಚಹಾ. ಕಾಫಿ ತುಂಬ ರುಚಿಯಾಗಿತ್ತು. ಅದಕ್ಕೆ ಚಹಾ ಕುಡಿಯುವ ಅಭ್ಯಾಸ ಇರುವವರೂ ಕಾಫಿ ರುಚಿಗೆ ಮಾರುಹೋಗಿ ಕಾಫಿ ಕಾಫಿ ಎಂದು ಕೇಳುತ್ತಿದ್ದರು.  ಬುತ್ತಿಗೆ ತುಪ್ಪದನ್ನ (ಗೀರೈಸ್) ತುಂಬಿಸಿ ನಾವು ೮.೩೦ಗೆ ತಯಾರಾಗಿ ನಿಂತೆವು. ಎಲ್ಲ ಸೇರಿದರಾ ಎಂದು ತಲೆಲೆಕ್ಕ ಹಾಕಿ ಹೊರಟೆವು. ಶಿಶಿಲದಿಂದ ಹೊಳೆಗುಂಡಿ ಮಾರ್ಗದಲಿ ಏಳು ಕಿಮೀ ಹೋಗಿ ಬಸ್ಸಿಳಿದೆವು. ಅಲ್ಲಿಂದ ಎಡಕ್ಕೆ ಕಾಡು ದಾರಿಯಲ್ಲಿ ನಮ್ಮ ಪಯಣ ಸಾಗಿತು. ಚೆನ್ನಪ್ಪ ಮತ್ತು ಆನಂದ ನಮ್ಮ ಮಾರ್ಗದರ್ಶಕರು. ಆನಂದ ಬಿರುಸಾಗಿ ನಡೆಯುವ ಗುಂಪಿಗೆ, ನಿಧಾನ ಬರುವ ಗುಂಪಿಗೆ ಚೆನ್ನಪ್ಪ. ಮುಂದಿನವರು ಸ್ವಲ್ಪ ದೂರ ಹೋದಮೇಲೆ ಹಿಂದೆ ಬರುವವರ ತಲೆ ಕಾಣುವಲ್ಲಿವರೆಗೆ ಕಾಯಬೇಕು ಎಂಬ ಅಪ್ಪಣೆ ಆಯಿತು. ಗುಡ್ಡ ಏರಬೇಕು. ಒಮ್ಮೆ ಸಮತಟ್ಟಾದ ದಾರಿ ಸಿಕ್ಕರೆ ಮಗದೊಮ್ಮೆ ತೀವ್ರ ಏರು. ಹೀಗೆ ಸಾಗಿದೆವು. ಒಟ್ಟು ನಾಲ್ಕು ಗುಂಪುಗಳಾದುವು. ಕೆಲವರು ಕಾಲು ಭಾಗ ನಡೆದು ವಾಪಾಸು ಹಿಂದಕ್ಕೆ ಹೋಗುವವರಿದ್ದರು. ಅವರನ್ನು ವಾಪಾಸು ಕರೆದೊಯ್ಯಲು ಚೆನ್ನಪ್ಪನ ಮಗ ಬರುವವನಿದ್ದ. ಇನ್ನೊಂದಷ್ಟು ಮಂದಿ ಅರ್ಧ ಭಾಗ ಹತ್ತಿದರು. ನಾವು ಕೆಲವರು ತೀರ ಬಿರುಸಾಗಿ ಅಲ್ಲದೆ ನಿಧಾನವಾಗಿ ಸಾಗಿದೆವು.  ಕೆಲವೆಡೆ ದಟ್ಟ ಕಾಡು. ಮುಂದೆ ಹೋದ ಯುವಕರ ತಂಡ ನಾವು ಹೋಗುವಾಗ ಕುಳಿತು ಬಲು ಜೋರಾಗಿ ಆಂಗ್ಲ ಪದ ಕೋರಸ್ಸಿನಲ್ಲಿ ಹಾಡುತ್ತಿದ್ದರು. ‘ಇವರೇನು ಹೀಗೆ? ಕಾಡುದಾರಿಯಲ್ಲಿ ಮಾತಾಡದೆ ನಡೆಯಬೇಕು. ಹಾಡು ಬೇರೆ. ಮೌನವಾಗಿ ನಡೆಯುವಾಗ ಹಕ್ಕಿಗಳ ಕೂಗು ಕೇಳಿಸುತ್ತದೆ. ಅದನ್ನು ಕೇಳಬೇಕು. ಇವರಿಗೆ ಹೇಳುವವರು ಯಾರು?’ ಎಂದು ಆನಂದ ನಮ್ಮಲ್ಲಿ ಹೇಳಿಕೊಂಡರು.  ಆದರೆ ನಮ್ಮ ಹೆಚ್ಚಿನವರಿಗೂ ಕಾಡು ದಾರಿಯಲ್ಲಿ ಹೇಗೆ ಸಾಗಬೇಕೆಂಬ ಅರಿವಿಲ್ಲ. ಜೋರಾಗಿ ಮಾತಾಡುತ್ತ ಬೊಬ್ಬೆ ಹಾಕುತ್ತ, ನಡೆಯುತ್ತಿದ್ದರು. ಅರಿವಿಲ್ಲ ಎನ್ನುವಂತಿಲ್ಲ, ಇದು ಶುದ್ಧ ಉಡಾಫೆಯೇ ಎಂದು ನನ್ನ ಭಾವನೆ.  ಏಕೆಂದರೆ ಹೇಳಿದರೂ ತಿಳಿದುಕೊಳ್ಳದಂತ ಅವಿದ್ಯಾವಂತರಲ್ಲವಲ್ಲ. ಯಾರೂ ಗಲಾಟೆ ಮಾಡಬೇಡಿ. ಆನೆ ಇಲ್ಲಿ ಈಗಷ್ಟೆ ಹೋಗಿದೆಯಂತೆ. ಎಂದು ಚೆನ್ನಪ್ಪ ಫೋನ್ ಮಾಡಿ ಎಚ್ಚರಿಸಿದರು ಆನಂದನಿಗೆ. ಅದನ್ನು ಆನಂದ ಹೇಳಿದ್ದಕ್ಕೆ ಆನೆ ಕಂಡರೆ ನಮಗೆ ಭಯವಿಲ್ಲವಪ್ಪ ಎಂದು ಅದಕ್ಕೂ ತಮಾಷೆಯಾಗಿ ಮಾತಾಡುತ್ತ, ನಗುತ್ತ ಸಾಗುತ್ತಿದ್ದರು. ಇವರೊಡನೆ ನಾವು ಸಾಗುವುದು ಬೇಡ. ಸ್ವಲ್ಪ ನಿಧಾನವಾಗಿ ಹೋಗುವ ಎಂದು ನಾವು ಕೆಲವರು ಹಿಂದುಳಿದೆವು. ಮರದ ಕೊಂಬೆಗಳು ಮುರಿದದ್ದು, ಆನೆ ಆಗಷ್ಟೇ ಸಾಗಿ ಹೋದದ್ದಕ್ಕೆ ಕುರುಹಾಗಿ ಅದು ಹೋದ ಜಾಗದಲ್ಲೆಲ್ಲ ಹುಲ್ಲು ಮಡಚಿಕೊಂಡಿದ್ದುದು ಕಂಡು ಆನೆ ಹೋದದ್ದು ಹೌದು ಎಂದು ನಮಗೆ ಮನವರಿಕೆಯಾಯಿತು. ಕೆಲವೆಡೆಯಲ್ಲಿ ಸಾಗುವಾಗ ಯಾವುದೋ ಪ್ರಾಣಿಗಳ ವಾಸನೆ ಜೋರಾಗಿ ಬರುತ್ತಿತ್ತು.
     ಹೀಗೆ ಸಾಗುತ್ತಿರಬೇಕಾದರೆ ಇಬ್ಬರು ಯುವತಿಯರು ವಾಪಾಸಾಗುತ್ತಿದ್ದದ್ದು ಕಂಡು ಅವರನ್ನು ಮಾತಾಡಿಸಿದೆ. ಅವರಿಬ್ಬರು ಬೆಂಗಳೂರಿನವರು. ನಿನ್ನೆ ಅಮೇದಿಕಲ್ಲು ಕೆಳಗೆ ನೀರು ಸಿಗುವ ಸ್ಥಳದಲ್ಲಿ ಟೆಂಟು ಹಾಕಿ ಉಳಿದು ಈಗ ಬೆಳಗ್ಗೆ ಎದ್ದು ವಾಪಾಸಾಗುತ್ತಿರುವುದಂತೆ. ನಾವು ಮೇಲೆ ಹತ್ತಲಲ್ಲಿ ಎಂದರು. ಅವರ ಮಾತು ಕೇಳಿದಾಗ ಈ ಸಾಹಸಕ್ಕೆ ಮೆಚ್ಚಬೇಕೆನಿಸಲಿಲ್ಲ. ಹುಚ್ಚುತನ, ಬೇಜವಾಬ್ದಾರಿ ವರ್ತನೆ ಎಂದು ಖಂಡಿಸುವ ಮನಸ್ಸಾಯಿತು. ಇಬ್ಬರೇ ಆ ರಾತ್ರೆಯಲ್ಲಿ ಕಾಡಿನಲ್ಲಿ ಟೆಂಟು ಹಾಕಿ ಮಲಗಿದ್ದಾರಲ್ಲ. ಕಾಡುಪ್ರಾಣಿಗಳು ಬಂದರೆ ಏನು ಮಾಡಬೇಕಿತ್ತು? ಜೀವಕ್ಕೆ ಹಾನಿಯಾದರೆ ಹೊಣೆ ಯಾರು?  ಅದೂ ಮಾರ್ಗದರ್ಶಕನಾಗಿದ್ದುದು ಸಣ್ಣಪ್ರಾಯದ ಒಬ್ಬ ಯುವಕ ಮಾತ್ರ. ಇದು ಸಾಹಸ ಹೇಗಾದೀತು? ಇವರ ಇಂಥ ಹೊಣೆಗೇಡಿತನಕ್ಕೆ ಹೆತ್ತವರು ಪಾಪ ಏನು ಮಾಡಿಯಾರು? ಇಂಥ ಹುಚ್ಚುತನಗಳಿಗೆ ಸ್ಥಳೀಯ ಮಾರ್ಗದರ್ಶಕರು ಅವಕಾಶ ಮಾಡಿಕೊಡಬಾರದು. ಹತ್ತು ಮಂದಿ ಗುಂಪಿನಲ್ಲಿ ಬಂದರೆ ಮಾತ್ರ ಕರೆದೊಯ್ಯುತ್ತೇವೆಂದು ಕಟ್ಟುನಿಟ್ಟಾಗಿ ಹೇಳಬೇಕು.
     ಮುಂದೆ ಸಾಗಿದಂತೇ ಸಖತ್ ಏರುದಾರಿ. ಹೆಜ್ಜೆ ಹೆಜ್ಜೆಗೂ ಉಸ್ಸಪ್ಪ ಎಂದು ತುಸು ನಿಂತು ಮುಂದುವರಿಯುವ ಹಾಗಾಗುತ್ತಿತ್ತು. ಸುಸ್ತು ಆದಾಗಲೆಲ್ಲ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತ ಸಾಗಿದೆ. ಹೆಚ್ಚು ನೀರು ಕುಡಿಯುವ ಆಸೆ ಆಗುತ್ತಿತ್ತು. ಆದರೆ ನೀರು ಮುಗಿಯುವ ಭಯ. ಮುಂದೆ ಒಂದು ಕಡೆ ಮಾತ್ರ ನೀರು ಸಿಗುತ್ತದೆ ಎಂದಿದ್ದರು. ಕಡ್ಲೆಚಿಕ್ಕಿ ತಿಂದು ನೀರು ಕುಡಿದು ಮುಂದೆ ಸಾಗಿದೆವು. ಕೆಲವು ಯುವಕ ಯುವತಿಯರು ಇನ್ನು ಮುಂದೆ ಹೋಗಲು ಸಾಧ್ಯವೇ ಇಲ್ಲ ಎಂದು ಅರ್ಧದಲ್ಲೇ ವಾಪಾಸಾಗುವ ನಿರ್ಧಾರ ಕೈಗೊಂಡರು.  ಸುಮಾರು ಅರ್ಧ ದಾರಿ ಸಾಗುವಾಗ ಅಮೇದಿಗುಡ್ಡದ ಕಲ್ಲುಬಂಡೆ ಬುಡ ಕಾಣುತ್ತದೆ. ಅಬ್ಬ ಇದನ್ನು ಮುಂದೆ ನಾವು ಏರಬೇಕಲ್ಲ. ಇನ್ನೂ ಎಷ್ಟು ಹೋಗಬೇಕು ಎಂದು ಆನಂದ ಅವರನ್ನು ಕೇಳಿದರೆ, ‘ನೀವೀಗ ಅರ್ಧ ಮಾತ್ರ ಬಂದಿರುವುದು. ಇನ್ನೂ ಹೋಗಬೇಕು ಹೀಗೆ ನಿಧಾನ ಮಾಡಿದರೆ ಆಗಲಿಕ್ಕಿಲ್ಲ. ಬೇಗ ಬೇಗ ಹೋಗಬೇಕು. ನಿಂತರೆ ಅಷ್ಟೆ ಮೇಲೆ ಹೋಗಲು ಸಾಧ್ಯವಾಗದೆ ಹಿಂದೆ ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಈ ಎಚ್ಚರಿಕೆಯಿಂದ ಜಾಗೃತರಾಗಿ ನಿಲ್ಲದೆ ನಡೆದೆವು ನಡೆದೆವು. ಸುಮಾರು ೫ಕಿಮೀ ಕಾಡುದಾರಿಯಲ್ಲಿ ನಡೆದಾಗುವಾಗ ಬೃಹತ್ ಅಮೇದಿಕಲ್ಲು ಕಾಣುತ್ತದೆ. ಅಂತೂ ಆ ಬಂಡೆಗಲ್ಲು ಬುಡ ಕೈಗೆ ಸಿಕ್ಕಿದಾಗ ಬಂಡೆಯೇ, ನಿನಗೊಂದು ನಮಸ್ಕಾರ, ನಿನ್ನ ತುದಿಗೆ ಏರುವಂತ ಶಕ್ತಿ ದಯಪಾಲಿಸಪ್ಪ ಎಂದು ಒಂದು ನಮಸ್ಕಾರ ಹಾಕಿದೆ. ಆ ಬಂಡೆ ತುದಿ ತಲಪಲು ಮತ್ತೆ ಮೂರು ನಾಲ್ಕು ಕಿಮೀ ಸಾಗಬೇಕು. ಒಂದಷ್ಟು ದೂರ ಸಾಗಿದಾಗ ನಾನು ಸೌಮ್ಯ ಕೂತು ವಿರಮಿಸಿದೆವು. ಕಾವ್ಯ ಜೊತೆಗಿದ್ದವಳು ಮುಂದೆ ಹೋದಳು. ಇನ್ನು ನಮ್ಮಿಂದ ಸಾಧ್ಯವಾದೀತ ಈ ಬಂಡೆ ಏರಲು? ಇಲ್ಲಿಗೆ ಸಾಕು ಮಾಡೋಣವೇ? ಎಂದು ನಾವು ಮಾತಾಡುತ್ತ ಇದ್ದಾಗ ಫತೇಖಾನ್ ಅಲ್ಲಿಗೆ ಬಂದರು. “ಬನ್ನಿ ಬನ್ನಿ ಸಾಧ್ಯ’’ ಎಂದು ಹೇಳಿದ ಅವರು ಮುಂದೆ ಸಾಗಿದರು. ಅವರ ಮಾತಿನಿಂದ ಹುರುಪುಗೊಂಡು, ಎಷ್ಟು ಸಾಧ್ಯವೋ ಅಷ್ಟು ಮುಂದೆ ಹೋಗೋಣ. ಅವರು ಹೇಳಿದ ಸಮಯದೊಳಗೆ ತುದಿ ಮುಟ್ಟಿದರೆ ಆಯಿತು. ಇಲ್ಲಾಂದರೆ ಅಲ್ಲಿಂದಲೆ ಮರಳೋಣ ಎಂದು ಸೌಮ್ಯ ಅವರಿಗೆ ಹೇಳಿದೆ. ಕೆಲವೆಡೆ ಬಂಡೆ ಏರುತ್ತ, ಹುಲ್ಲು ದಾರಿಯಲ್ಲಿ ಸಾಗುತ್ತ, ಚಡಾವು ಏರುತ್ತಲೇ ಉಸಿರು ಹೊರಹಾಕುತ್ತ, ನಿಂತು ಸುಧಾರಿಸುತ್ತ ನಡೆದೆವು. ಪ್ರಾರಂಭದಲ್ಲಿ ಹುಲ್ಲು, ಮರ, ಏನೇ ಕಂಡರೂ ಫೋಟೋ ತೆಗೆಯುತ್ತಿದ್ದವಳು ಸುಸ್ತಾಗಿ ಕ್ಯಾಮರಾ ಬ್ಯಾಗಿನಲ್ಲಿರಿಸಿದೆ. ಫೋಟೋವೂ ಬೇಡ ಏನೂ ಬೇಡ. ಮೇಲೆ ತಲಪಿದರೆ ಸಾಕು ಎಂಬ ವೈರಾಗ್ಯ ಆವರಿಸಿತ್ತು. ಅಷ್ಟು ಸುಸ್ತಾದರೆ ಮಾತ್ರ ಫೋಟೋದ ವಿಷಯದಲ್ಲಿ ನನಗೆ ಅಂತ ವೈರಾಗ್ಯ ಬರುತ್ತದೆ! ಅಂತೂ ಅಮೇದಿಗುಡ್ಡವನ್ನು ನಾವು ೨೫ ಮಂದಿ ಏರಿಯೇ ಬಿಟ್ಟೆವು. ಬಂಡೆ ಏರಿ ಸುಸ್ತಾಗಿ ಒಂದು ಕಡೆ ಕುಳಿತಾಗ ಓಹ್ ಇದನ್ನು ಏರಲು ನಮಗೆ ಸಾಧ್ಯವಾಯಿತಲ್ಲ ಎಂಬ ಹರ್ಷವೂ ಆವರಿಸಿತು. ಸುತ್ತಲೂ ಹಸುರಿನಿಂದ ಕೂಡಿದ ಕಾಡು, ಪರ್ವತಗಳನ್ನು ನೋಡುವಾಗ ಸುಸ್ತು ಎಂಬ ಪದವೇ ಇಲ್ಲದಂತೆ ಮನ ಉಲ್ಲಾಸಗೊಂಡಿತು. ಅರ್ಧ ಗಂಟೆ ಅಲ್ಲಿ ವಿರಮಿಸಿದೆವು. ಬುತ್ತಿ ಬಿಚ್ಚಿದೆ. ಆದರೆ ಒಂದು ತುತ್ತು ತಿನ್ನಲೂ ಸಾಧ್ಯವಾಗಲಿಲ್ಲ. ಒಳಗೆ ಇಳಿಯಲೆ ಇಲ್ಲ. ಬುತ್ತಿ ಮುಚ್ಚಿ ಚೀಲಕ್ಕೆ ಸೇರಿಸಿದೆ. ಬೀಸಾಡಲು ಮನ ಒಪ್ಪಲಿಲ್ಲ. ತಂತ್ರಿಗಳ ಮನೆಗೆ ಹೋಗಿ ನಾಯಿಗೆ ಹಾಕಬಹುದು ಎನಿಸಿತು. ಕುಪ್ಪಿಯ ತಳದಲ್ಲಿದ್ದ ಒಂದು ಗುಟುಕು ನೀರು ಕುಡಿದು ಸುಧಾರಿಸಿದೆ. ಸೌಮ್ಯ ನೀರು ಕೊಟ್ಟರು. ಕುಡಿದಾಗ ತೃಪ್ತಿ ಆಯಿತು. ಎದುರು ಭಾಗದಲ್ಲಿ ಎತ್ತಿನಭುಜ ಕಾಣುತ್ತದೆ. ಅದು ಇಲ್ಲಿಗೂ ಬನ್ನಿ ಎಂದು ಆಹ್ವಾನಿಸಿದಂತೆ ಭಾವಿಸಿದೆ. ಇನ್ನು ಇಳಿಯಿರಿ. ಕತ್ತಲಾಗುವ ಮೊದಲು ತಲಪಬೇಕು. ಎಂದು ಬಂದೆ ಅಡಿಯಲ್ಲಿ ಮಲಗಿದ್ದ ಆನಂದ ಎಲ್ಲರಿಗೂ ಇಳಿಯಲು ಹೇಳಿದರು. ಅಮೇತಿಗುಡ್ಡದಿಂದ ಕೆಳಗೆ ಇಳಿಯಲು ತೊಡಗಿದೆವು. ಇಳಿಯಲು ಕಷ್ಟವಾಗುವ ಸುಮಾರು ಮಂದಿಗೆ ಸತೀಶಬಾಬು ಅವರು ಕೈಹಿಡಿದು ನೆರವಾದರು. ನನಗೆ ಇಳಿಯಲು ಯಾವುದೇ ತರಹದ ಕಷ್ಟವಿಲ್ಲ. ಎಂಥ ಬಂಡೆಗಲ್ಲನ್ನಾದರೂ ಕುಳಿತು ಇಳಿದುಬಿಡುತ್ತೇನೆ. ಏರು ಹತ್ತುವುದೇ ಕಷ್ಟ ನನಗೆ. ಇಳಿಯುವಾಗ ಬಲು ಎಚ್ಚರದಿಂದ ಇಳಿಯಬೇಕಿತ್ತು. ಹುಲ್ಲು ಕಾಲಿಟ್ಟರೆ ಜಾರುವಂತಿತ್ತು. ಕೆಲವು ಕಡೆ ಕುಳಿತೇ ಇಳಿಯಬೇಕಿತ್ತು. ಅಷ್ಟು ಇಳಿಜಾರು. ಸ್ವಲ್ಪ ದೂರ ಬಂದಾಗುವಾಗ ಗಂಟಲು ಒಣಗಿ ನೀರು ನೀರು ಎಂಬ ಹಪಹಪಿಕೆ ಸುರುವಾಗಿತ್ತು. ಕಾವ್ಯ, ಸೌಮ್ಯ ಅವರುಗಳು ನೀರು ಕೊಟ್ಟು ನನ್ನ ದಣಿವಾರಿಸಿದರು. ಅಮೃತ ಎಂಬುದು ಹೇಗಿದ್ದಿರಬಹುದು ಎಂಬುದು ಆ ನೀರು ಕುಡಿದಾಗುವಾಗ ನನಗೆ ಗೊತ್ತಾಯಿತು. ಅಷ್ಟೂ ರುಚಿಯಾಗಿತ್ತು ನೀರು. ಬೇಕಷ್ಟು ಕುಡಿಯಿರಿ. ಇನ್ನೂ ನೀರಿದೆ ಎಂದರು ಅವರು ಉದಾರತೆಯಿಂದ. ಒಂದೆರಡು ಕಡೆ ಕೂತು ದಣಿವಾರಿಸಿಕೊಂಡೆವು.
  ಸುಮಾರು ಮೂರು ಕಿಮೀ ಇಳಿದಾಗುವಾಗ ನೀರು ಇರುವ ಸ್ಥಳ ಸಿಕ್ಕಿತು. ಹುಡುಗರು ಕೆಲವರು ಹೋಗಿ ನೀರು ತುಂಬಿಸಿ ತಂದರು. ಆಹಾ ಎಷ್ಟು ರುಚಿಯಾದ ನೀರು. ನೀರಿಗೂ ಇಂಥ ರುಚಿ ಇರುತ್ತದೆ ಎಂದು ಗೊತ್ತಾದ ಕ್ಷಣವದು. ಬಾಯಾರಿದ ನಾನು ಒಂದು ಲೀಟರು ನೀರು ಗಟಗಟ ಕುಡಿದು ತೃಪ್ತಿ ಅನುಭವಿಸಿದೆ. ಆಯಾಸವೆಲ್ಲ ಮಾಯ. ಊಟ ಮಾಡದೆ ಇರುವುದು ಏನೂ ಬಾಧಕವೆನಿಸಲಿಲ್ಲ. ಚಿಕ್ಕಿ ಬಾಯಿಗೆ ಹಾಕಿಕೊಂಡೆ. ಅಲ್ಲಿಂದ ಮುಂದೆ ಎಲ್ಲೂ ನಿಲ್ಲದೆ ಸೀದಾ ನಡೆದೆವು. ಬಸ್ಸಿನ ಬಳಿ ಬರುವಾಗ ಸಂಜೆ ೬.೧೫. ಎಲ್ಲರೂ ಬಂದು ತಲಪುವಾಗ ೬.೪೫.









  ಶ್ರೀಶೈಲ ಕ್ಯಾಂಟೀನಿನಲ್ಲಿ ಗೋಳಿಭಜೆ
ಪುರುಷೋತ್ತಮರಾವ್ ಅವರ   ಶ್ರೀಶೈಲ ಕ್ಯಾಂಟೀನ್ ನಾವು ತಲಪಿದಾಗ ಮುಸ್ಸಂಜೆ ಏಳು ಗಂಟೆ ಕಳೆದಿತ್ತು. ಅಲ್ಲಿ ಅವಲಕ್ಕಿ, ಗೋಳಿಭಜೆ ಕಾಪಿ, ಚಹಾ ಸಿದ್ಧಮಾಡಿಟ್ಟಿದ್ದರು. ಹಸಿದ ನಾವು ಸರಿಯಾಗಿ ತಿಂದೆವು. ಅವಲಕ್ಕಿ ಮತ್ತಷ್ಟು ಹಾಕಿಸಿಕೊಂಡೆವು. ಅಲ್ಲಿಂದ ಗಣೇಶತಂತ್ರಿಗಳ ಮನೆಗೆ ತಲಪಿ ಸ್ನಾನಾದಿ ಮುಗಿಸಿ ಹರುಷಗೊಂಡು ಕೂತೆವು.
  ಪುಸ್ ಬಸ್ ಆಟ
  ಸೌಮ್ಯ ಒಂದು ಹೊಸ ಆಟ ಆಡಿಸಿದರು. ಸಾಲಾಗಿ ಕುಳಿತು ಒಬ್ಬೊಬ್ಬರೇ ಒಂದರಿಂದ ಅಂಕಿ ಹೇಳುತ್ತ ಹೋಗಬೇಕು. ೦ ಸಂಖ್ಯೆಗೆ ಪುಸ್ ಅಂತಲೂ ೫ ಸಂಖ್ಯೆಗೆ ಬಸ್ ಎಂದೂ ಹೇಳಬೇಕು. ಉದಾಹರಣೆಗೆ ನಮ್ಮ ಸರದಿಯಲ್ಲಿ ೫ ಎಂಬ ಅಂಕೆ ಬಂದಾಗ ಬಸ್ ಎನ್ನಬೇಕು. ಹತ್ತು ಎಂಬ ಅಂಕೆ ಬಂದಾಗ ೧ ಪುಸ್ ಎನ್ನಬೇಕು. ಪ್ರಾರಂಭದಲ್ಲಿ ಗೊಂದಲಗೊಂಡು ಬಸ್ ಪುಸ್ ಎನ್ನುವ ಗೊಂದಲದಲ್ಲಿ ನಾವು ಕೆಲವರು ಬೇಗ ಟುಸ್ ಎಂದು ಔಟಾದೆವು! ತಪ್ಪು ಹೇಳಿದವರು ಆಟದಿಂದ ನಿರ್ಗಮನ. ಸಂಗೀತ ಕುರ್ಚಿ ತರಹವೇ. ಬಲು ತಮಾಶೆಯಾಗಿ ವಿನೋದದಿಂದ ನಗುತ್ತಲೇ ನಾವು ಆಟ ಆಡಿದೆವು. ಗಮನವಿಟ್ಟು ಏಕಾಗ್ರತೆಯಿಂದ ನಮ್ಮ ಸರದಿ ಬಂದಾಗ ಕ್ಷಣದಲ್ಲಿ ಪುಸ್ ಬಸ್ ಹೇಳಬೇಕು. ಕೊನೆಗೆ ಮೂರು ಮಂದಿಗೆ ಬಹುಮಾನ ಲಭಿಸಿತು. ಅವರಿಗೆ ಸೌಮ್ಯ ಒಣಹಣ್ಣುಗಳನ್ನು ಬಹುಮಾನವಾಗಿ ನೀಡಿದರು. ಈ ಆಟದಲ್ಲಿ ಹೊತ್ತು ಸರಿದದ್ದೇ ಗೊತ್ತಾಗಲಿಲ್ಲ. ಆ ದಿನದ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಕೆಲವರು ಹೇಳಿದರು. ಒಂದೆರಡು ಮಂದಿ ಹಾಡಿಯಾಗುವಾಗ ಊಟ ಬಂದಿತ್ತು.


ಗೌರಿ. ಪಟ ಕ್ಲಿಕ್ಕಿಸುವಾಗ ಫ್ಲಾಶ್ ಗೆ ಕಣ್ಣು ಮುಚ್ಚಿದ್ದು!

ಪುಷ್ಕಳ ಊಟ- ನಿದ್ದೆ
ಬೀನ್ಸ್ ಪಲ್ಯ, ಎಳೆಹಲಸಿನ ಸಾಂಬಾರು, ಸಾರು, ಸಂಡಿಗೆ ಬಾಳ್ಕಮೆಣಸು, ಗೋದಿ ಪಾಯಸ, ಮಜ್ಜಿಗೆ, ಉಪ್ಪಿನಕಾಯಿ. ಭರ್ಜರಿ ಊಟ ಹೊಟ್ಟೆ ಸೇರಿತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕಕ್ಕೆ ಸೇರಿ ಚಾರಣ ಹವ್ಯಾಸ ಬೆಳೆಸಿಕೊಳ್ಳುವ ಮೊದಲು ಡೊಳ್ಳುಹೊಟ್ಟೆಯೇ ಇರಲಿಲ್ಲ. ಈಗ ಚಾರಣಕ್ಕಿಂತ ಹೆಚ್ಚು ಭರ್ಜರಿ ಊಟವಾಗಿ ಹೊಟ್ಟೆ ಬಂದಿದೆ ಎಂದು ಒಬ್ಬರು ತಮ್ಮ ಹೊಟ್ಟೆ ಸವರುತ್ತ ಹೇಳಿದರು! ೧೦.೩೦ಗೆ ಮಲಗುವ ತಯಾರಿ ನಡೆಸಿದೆವು.
ಮುಂದುವರಿಯುವುದು