ಭಾನುವಾರ, ಜನವರಿ 15, 2017

ಉತ್ತರಕರ್ನಾಟಕದ ಶಿಲ್ಪಕಲೆಯ ವೈಭವ ಹಂಪೆ, ಬಾದಾಮಿ, ಐಹೊಳೆ,ಬಿಜಾಪುರ, ಗದಗ ಭಾಗ -೩

ಬಿಜಾಪುರ ಯಾನೆ ವಿಜಯಪುರ

 ಐಹೊಳೆಯಿಂದ ಬಿಜಾಪುರಕ್ಕೆ ೧೨೦ಕಿಮೀ. ತಲಪಲು ೩ ಗಂಟೆ ಬೇಕು. ದಾರಿಯಲ್ಲಿ ಅಮೀನಗಡದ ಪ್ರಸಿದ್ಧ ಖಾದ್ರಿ ಕರದಂಟು ತೆಗೆದುಕೊಂಡೆವು. ಕಿಲೋಗೇ ರೂ. ೮೦೦. ನಮ್ಮ ವಾಹನದಲ್ಲಿ ನಾವು ೧೪ ಮಂದಿ. ಮಂಜುನಾಥ, ಶೋಭಾ, ಸುಬ್ಬಲಕ್ಷ್ಮಿ, ರುಕ್ಮಿಣಿಮಾಲಾ, ಚಿತ್ಕಲಾ, ಜಯಶ್ರೀ, ಸುವರ್ಣ, ಶೈಲಜಾ, ರಮೇಶ, ಐದು ಮಕ್ಕಳಾದ ಸೌಪರ್ಣಿಕಾ, ಮೋನಿಶಾ, ಚರಿತಾ ಇವರು ಒಂದೇ ಶಾಲೆಯಲ್ಲಿ ಒಂಬತ್ತನೆ ಈಯತ್ತೆಯಲ್ಲಿ ಓದುತ್ತಿರುವವರು. (ಮೂರೂ ಮಂದಿಯೂ ಸ್ನೇಹಿತೆಯರು.) ಸ್ನೇಹ (ಇಂಜಿನಿಯರಿಂಗ್) ಹಾಗೂ ಸುಷ್ಮಾ (ಪದವಿ) ಓದುತ್ತಿರುವರು. ಮಂಜುನಾಥ ಹಾಗೂ ಈ ಮಕ್ಕಳು ಕಲ್ಲನ್ನೂ ಮಾತಾಡಿಸುವ ಸ್ವಭಾವದವರಾದ ಕಾರಣ ಪ್ರಯಾಣದ ಏಕತಾನತೆ ಕಾಡಲೇ ಇಲ್ಲ. ಸೀಬೆಹಣ್ಣು ಹೆಚ್ಚುತ್ತ, ಅದಕ್ಕೆ ಕಾರದ ಪುಡಿ (ಒಳೆಮೆಣಸು, ಕೆಂಪುಮೆಣಸಿನಪುಡಿಗೆ ಉಪ್ಪು ಬೆರೆಸಿ ಮಂಜುನಾಥ ತಂದಿದ್ದರು) ಹಾಕಿ ತಿನ್ನುತ್ತ, ಕೋಡುಬಳೆ, ಪುರಿ, ಖಾರಸೇವು ಇತ್ಯಾದಿ ಕುರುಕಲು ತಿಂಡಿ ಕೆಲವರು ತಂದಿದ್ದರು. ನಾನು ಕಿತ್ತಳೆ ತೆಗೆದುಕೊಂಡು ಹೋಗಿದ್ದೆ. ಅವನ್ನೆಲ್ಲ ಹಂಚಿಕೊಂಡು ಕೈಬಾಯಿಗೆ ಕೆಲಸ ಕೊಡುತ್ತ ಪ್ರಯಾಣದ ಮಜ ಅನುಭವಿಸಿದೆವು. ದಾರಿಯುದ್ದಕ್ಕೂ ಮಕ್ಕಳು ದೊಡ್ಡವರು ಸೇರಿ ಅಂತ್ಯಾಕ್ಷರೀ ನಡೆಯಿತು. ನಮ್ಮ ವಾಹನದ ಚಾಲಕ ವಿಷ್ಣು. ೨೨ರ ಪ್ರಾಯದವನು. ಪ್ರಾರಂಭದಲ್ಲಿ ನಗು ಮಾತು ಏನೂ ಇರಲಿಲ್ಲ. ಬಿಗುವಾಗಿಯೇ ಇದ್ದ.  ಕೆಲವೇ ಗಂಟೆಯಲ್ಲಿ ಅವನ ಮುಖದಲ್ಲಿ ನಗು ಅರಳಿಸುವಲ್ಲಿ ಮಂಜುನಾಥ ಯಶಸ್ವೀಯಾದರು! ವಿಷ್ಣು ತನ್ನ ೧೮ನೇ ವಯಸ್ಸಿನಲ್ಲೆ ಕಾರು ಚಾಲನೆ ಕಲಿತು ಈ ವೃತ್ತಿಗೆ ಬಂದಿದ್ದಂತೆ. ಈಗ ಸ್ವಂತಕ್ಕೆ ಕಾರು ಕೊಂಡು ಬೆಂಗಳೂರಿನ ಇನ್ಫೋಸಿಸ್ ಕಂಪನಿಗೆ ಬಾಡಿಗೆಗೆ ಓಡಿಸಲು ಕೊಟ್ಟಿರುವನಂತೆ. ಊರು ಕುಂದಾಪುರ. ವಾಸ ಹುಬ್ಬಳ್ಳಿ. ಅಲ್ಲೇ ಅಪ್ಪ ಅಮ್ಮ ಇರುವುದಂತೆ.
  ವಿಷ್ಣು ಈಗಿನ ಕಾಲದ ಚಲನಚಿತ್ರ ಗೀತೆಗಳನ್ನು ವಾಹನ ಚಾಲನೆವೇಳೆ ಹಾಕುತ್ತಿದ್ದ. ನಾವು ಕೆಲವರು, ಕೆಲವು ಗೀತೆಗಳನ್ನು ಕೇಳಲು ಆಗುವುದಿಲ್ಲ, ಹಳೆ ಗೀತೆಗಳನ್ನು ಹಾಕಪ್ಪ ಎಂದಾಗ ಅವನ್ನು ಹಾಕುತ್ತಿದ್ದ. ಆಗ ಮಕ್ಕಳು ಹಿಂದಿನಿಂದ ‘ಬ್ರೋ, ಹಾಡು ಚೇಂಜ್ ಮಾಡಿ ಎಂದಾಗ ಖುಷಿಯಾಗಿ ಈಗಿನ ಜಮಾನದ ಜಗಮಗ ಗೀತೆಗಳನ್ನು ಹಾಕುತ್ತಿದ್ದ. ಬ್ರೋ ಎಂದರೆ ಏನು ಎಂದು ಅರ್ಥವಾಗದೆ ಅದೇನೆಂದು ಕೇಳಿದೆ ಮಕ್ಕಳನ್ನು. ಬ್ರದರ್ ಎಂಬುದರ ಹ್ರಸ್ವ ರೂಪವೇ ‘ಬ್ರೋ’! ಅದು ಈಗಿನ ಸ್ಟೈಲಂತೆ! ವಿಷ್ಣುವನ್ನು ಆಗಾಗ ರೇಗಿಸುತ್ತಲೇ ಅವನ ಚಾಲನೆಯ ನೀರಸತನದಿಂದ ಹೊರತಂದು ಖುಷಿಯಾಗಿಸುವಲ್ಲಿ ಮಂಜುನಾಥ ಅವರು ವಿಜಯೀದಾದರು. ನಿನಗೆ ಒಳ್ಳೆಯ ಹುಡುಗಿ ನೋಡುತ್ತೇನೆ. ನಿನ್ನ ಫೋಟೋ ತೆಗೆದುಕೊಂಡಿದ್ದೇನೆ. ಜಾತಕ ಎಲ್ಲ ಬೇಡ. ಜಾತಕ ನೋಡಿ ನಾನು ಮದುವೆಯಾಗಿದ್ದೇನಲ್ಲ ನೋಡು ನನ್ನ ಪಾಡು ಎಂದು ತಮಾಷೆ ಮಾಡುತ್ತಲೇ ಅವನ ಮೊಗ ಕೆಂದಾವರೆಯಂತೆ ಅರಳುತ್ತಿತ್ತು. ವಿಷ್ಣು ಆಗಾಗ ಅಡಿಕೆ ಜರ್ದಾ ಜಗಿಯುತ್ತಿದ್ದ. ನಾವೆಲ್ಲರೂ ಅವನಿಗೆ ಈ ಅಭ್ಯಾಸ ಬಿಟ್ಟುಬಿಡಪ್ಪ ಎಂದು ಸಲಹೆ ಕೊಟ್ಟೆವು. ಅವನೂ ನಾಳೆಯಿಂದಲೇ (ಆ ಸಲಹೆಯನ್ನು!) ಬಿಡುವೆ ಎಂದು ಸ್ವೀಕರಿಸಿದ.
     ದಾರಿಯುದ್ದಕ್ಕೂ ರಸ್ತೆ ಚೆನ್ನಾಗಿತ್ತು.  ಇಳಕಲ್ಲು ಊರಿನ ಫಲಕ ಕಂಡಾಗ ಇಳಕಲ್ಲು ಸೀರೆ ನೆನಪಿಗೆ ಬಂತು. ಆದರೆ ನಿಲ್ಲಿಸಲಿಲ್ಲ. ರಾತ್ರೆಯೊಳಗೆ ವಿಜಯಪುರ ಸೇರುವ ಗುರಿ ಇತ್ತಲ್ಲ. ದಾರಿ ಮಧ್ಯೆ ಒಂದು ಹೊಟೇಲಲ್ಲಿ ಊಟಕ್ಕೆ ನಿಲ್ಲಿಸಿದರು. ಅಲ್ಲಿ ಊಟ ಮಾಡಿ ಬಿಜಾಪುರ ತಲಪುವಾಗ ರಾತ್ರೆ ೧೦ ಗಂಟೆಯಾಗಿತ್ತು. ನಮ್ಮ ಕೋಣೆಯಲ್ಲಿ ನಾವು ನಾಲ್ಕು ಮಂದಿ (ಮೂರು ಮಂದಿ ಮಂಚದಲ್ಲಿ ಒಬ್ಬರು ನೆಲದಲ್ಲಿ ಹಾಸಿಗೆ ಹಾಕಿ) ಮಲಗಿದೆವು. 

ಬೆಂಗಳೂರ ಹೋಟೇಲು

 ೨೬-೧೨-೧೬ರಂದು ಬೆಳಗ್ಗೆ ಎದ್ದು ನಿತ್ಯ ಕರ್ಮಾದಿ ಮುಗಿಸಿ (ಬಿಸಿನೀರು ಇತ್ತು) ೮ ಗಂಟೆಗೆ ಹೊರಟು ನಮ್ಮ ವಸತಿ ಗೃಹದ ಹತ್ತಿರವೇ ಇದ್ದ ಬೆಂಗಳೂರ ಹೊಟೇಲಿಗೆ ಹೋದೆವು. ೨೯ ಮಂದಿ ಒಂದೊಂದು ತರಹದ ತಿಂಡಿ ಹೇಳಿದ್ದು ಕೇಳಿದ ಸರ್ವರ್ ಕಕ್ಕಾಬಿಕ್ಕಿ! ಅವರ ಸಹಾಯಕ್ಕೆ ಮಂಜುನಾಥ ಮುಂದಾದರು. ಒಂದು ಚೀಟಿ ಪಡೆದು ಪ್ರತಿಯೊಂದು ಮೇಜಿನ ಬಳಿ ಹೋಗಿ ಏನು ತಿಂಡಿ ಹೇಳಿದರೋ ಅದನ್ನು ಬರೆದುಕೊಂಡು ಟೇಬಲ್ ಸಂಖ್ಯೆ ಹಾಕಿ ಸರ್ವರ್ ಕೈಗೆ ಕೊಟ್ಟರು. ಅದೇ ತರಹವೇ ತಿಂಡಿ ಸರಬರಾಜಿಗೂ ನೆರವಾದರು. ಹೊಟೇಲು ಮಾಲೀಕರಲ್ಲಿ ಹೋಗಿ ಕೆಲಸ ಇದ್ದರೆ ಕೊಡಿ ಮಾಡುವೆ ಎಂದು ಹೆಳಿದರಂತೆ! ಮಾಲೀಕರಿಗೆ ಮಂಜುನಾಥರನ್ನು ಎಷ್ಟು ಖುಷಿಯಾಯಿತೆಂದರೆ ಅವರಿಗೆ ತಿಂಡಿ ಸರಬರಾಜು ಮಾಡಲು ಮುತುವರ್ಜಿ ವಹಿಸಿದರು. ತಿಂದ ತಿಂಡಿಗೆ ದುಡ್ಡು ಬೇಡ ಎಂದರಂತೆ. ಮಂಜುನಾಥ ಅವರು ತಾವು ತಿಂದ ತಿಂಡಿಗೂ ದುಡ್ಡು ಕೊಟ್ಟು ನಾನೇನೂ ಏಜೆಂಟ್ ಅಲ್ಲ. ಗೊಂದಲ ಆಗಬಾರದು ಹಾಗೂ ಬೇಗ ಬೇಗ ಆಗಬೇಕು ಎಂದು ನೆರವಾದದ್ದಷ್ಟೇ ಎಂದು ಹೇಳಿದರಂತೆ. ನಾನು ಈರುಳ್ಳಿ ದೋಸೆ ಮತ್ತು ಒಂದು ವಡೆ ತಿಂದೆ. ಬಲು ರುಚಿಯಾಗಿತ್ತು.

  ಗೋಳಗುಮ್ಮಟ- ಪಿಸುಗುಟ್ಟುವ ಗ್ಯಾಲರಿ

ನಾವು ಅಲ್ಲಿಂದ ಅನತಿ ದೂರದಲ್ಲೇ ಇದ್ದ ವಿಶ್ವವಿಖ್ಯಾತ ಗೋಳಗುಮ್ಮಟ ನೋಡಲು ಹೋದೆವು. ಅಲ್ಲಿ ಶ್ರೀಮಂತ ಕಟ್ಟೀಮನಿ ನಮ್ಮ ಬರುವನ್ನು ಕಾಯುತ್ತಿದ್ದರು. ಗೋಳಗುಮ್ಮಟ ದೂರಕ್ಕೆ ಒಂದೇ ಕಟ್ಟಡದಂತೆ ಭಾಸವಾಗುತ್ತದೆ. ಆದರೆ ಗುಮ್ಮಟದ ಎದುರು ಎರಡು ಕಟ್ಟಡಗಳಿವೆ.  ಮುಂದಿನ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ ಇದೆ. ನಾವು ಒಳಗೆ ಹೋಗಲಿಲ್ಲ. ಎರಡನೇ ಕಟ್ಟಡ ದಾಟಿ ಗೋಳಗುಮ್ಮಟ ಕಟ್ಟಡಕ್ಕೆ ಹೋದೆವು. ಏಳು ಮಹಡಿ ಹತ್ತಿ ಪಿಸುಗುಟ್ಟುವ ಗ್ಯಾಲರಿ ಎಂದು ಪ್ರಸಿದ್ಧವಾದ ಗೋಳಗುಮ್ಮಟದ ಮೇಲೆ ಹೋದೆವು. ಅಲ್ಲಿ ನಾವು ಮಾತಾಡಿದರೆ ಪ್ರತಿಧ್ವನಿ ಏಳುಸಲ ಕೇಳುತ್ತದೆ. ಕೇವಲ ಪಿಸುಗುಟ್ಟಿದರೂ ಸಾಕು ಆ ಧ್ವನಿ ದೊಡ್ಡದಾಗಿಯೇ ಕೇಳುತ್ತದೆ. ಇದರ ವ್ಯಾಸ ೪೪ ಮೀ. ಇಲ್ಲಿನ ವಿಶಾಲವಾದ ಮೇಲ್ಛಾವಣಿ ಹೊದಿಕೆ ಗುಮ್ಮಟದಿಂದ ಶಬ್ದತರಂಗಗಳು ಪ್ರತಿಧ್ವನಿಸಿ ವಿಶಿಷ್ಟ ಪರಿಣಾಮ ಉಂಟು ಮಾಡುತ್ತವೆ. ಪಿಸುಮಾತು, ಚಪ್ಪಾಳೆ, ಸಿಳ್ಳೆ ಏನೇ ಮಾಡಿದರೂ ಅದು ಏಳಕ್ಕೂ ಹೆಚ್ಚುಬಾರಿ ಮಾರ್ದನಿಸುತ್ತದೆ. ಜೊತೆಗೆ ಒಂದೆಡೆ ಮಾಡುವ ಸಣ್ಣ ಸದ್ದು ಈ ಗ್ಯಾಲರಿಯ ಯಾವುದೇ ಭಾಗದಲ್ಲಿ ಅಂದರೆ ೧೨೫ ಅಡಿ ದೂರದಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ಹೀಗಾಗೆ ಇದಕ್ಕೆ ಪಿಸುಗುಟ್ಟುವ ಗ್ಯಾಲರಿ ಎಂದು ಹೆಸರು.
   ಶ್ರೀಮಂತಕಟ್ಟೀಮನಿ ಗೋಳಗುಮ್ಮಟದ ತಯಾರಿಯಲ್ಲಿಂದ ಹಿಡಿದು ಅದರ ಇತಿಹಾಸವನ್ನು ನಮ್ಮೆದುರು ತೆರೆದಿಟ್ಟರು. ಈ ಕಟ್ಟಡ ನಿರ್ಮಾಣಗೊಳ್ಳಲು ಮೂವತ್ತು ವರ್ಷ ಬೇಕಾಯಿತಂತೆ. (ಕ್ರಿಶ. ೧೬೨೬ರಲ್ಲಿ ಪ್ರಾರಂಭಿಸಿ ೧೬೫೬ರಲ್ಲಿ ಪೂರ್ಣಗೊಂಡಿತು) ಕೆಲಸಗಾರರಿಗೆ ಉಳಿದುಕೊಳ್ಳಲೆಂದು ಹೊರಗೆ ಸಾಲಾಗಿ ಕಟ್ಟಡಗಳಿತ್ತು. ಈಗ ಕೆಲವೆಲ್ಲ ಪಾಳುಬಿದ್ದಿವೆ.
  ನಾವು ಅಲ್ಲಿ ಚಪ್ಪಾಳೆ ತಟ್ಟಿ, ಮಾತಾಡಿ ಅದರ ಪ್ರತಿಧ್ವನಿ ಆಲಿಸಿ ಹರ್ಷಿಸಿದೆವು. ಶ್ರೀಮಂತಕಟ್ಟೀಮನಿ ನಮ್ಮನ್ನು ಒಂದು ಕಡೆ ನಿಲ್ಲಿಸಿ ಅವರು ನಮ್ಮ ಎದುರುಭಾಗಕ್ಕೆ ಹೋಗಿ ಅಲ್ಲಿಂದ ಮಾತಾಡಿದರು. ಅದು ನಮಗೆ ಕೇಳಿಸಿತು. ಅವರು ಕರವಸ್ತ್ರ ಕೊಡವಿದ, ಕೆಮ್ಮಿದ ಸದ್ದು ಕೇಳಿತು. ನಾಲ್ಕಾರು ಸಲ ಓಂಕಾರ ಹಾಕಿದರು. ಅದಂತೂ ಮಾರ್ದನಿಸಿದ ಪರಿಗೆ ಕೆಲವರೆಲ್ಲ ಕಣ್ಣುಮುಚ್ಚಿ ಧ್ಯಾನಸ್ಥರಾಗಿ ಕುಳಿತರು. ನಾವೂ ಓಂಕಾರ ಹಾಕಿ ಖುಷಿಪಟ್ಟೆವು.
ಗೋಳಗುಮ್ಮಟ ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟ ಎಂಬ ಖ್ಯಾತಿ ಪಡೆದಿದೆ. ಬಿಜಾಪುರದಲ್ಲೇ ಅತ್ಯಂತ ಎತ್ತರದ ಕಟ್ಟಡವಾಗಿದ್ದು, ಸುಮಾರು ದೂರದವರೆಗೂ ಕಾಣುತ್ತದೆ. ಪ್ರಪಂಚದಲ್ಲೇ ಅತಿ ವಿಸ್ತಾರವಾದ ಹಜಾರವನ್ನು ಕಂಬಗಳ ಆಸರೆ ಇಲ್ಲದೆ ಕಟ್ಟಿದ ಮೇಲ್ಚಾವಣಿ ಇರುವ ಬೃಹತ್ ಗುಮ್ಮಟ. ಕಟ್ಟಡದ ಹೊರಮೈಯ ವಿನ್ಯಾಸ ಸುಂದರವಾಗಿ ರೂಪಿತವಾಗಿದೆ. ವಿಶಾಲ ಚಾವಣಿಯ ಮೇಲೆ ಮಧ್ಯದಲ್ಲಿರುವ ಬೃಹತ್ ಗುಮ್ಮಟ ಅರೆಗೋಳಾಕಾರದ್ದು. ಇದರ ತಳ ಕೂಡ ಮೀನಾರುಗಳ ಮೇಲಿರುವ ಚಿಕ್ಕ ಗುಮ್ಮಟಗಳಂತೆ ಪದ್ಮದಳಗಳಿಂದ ಸುತ್ತುವರಿಯಲ್ಪಟ್ಟಿದೆ. ಅಲ್ಲದೆ ಗೋಡೆಗಳ ಮೇಲೆಲ್ಲ ಗಾರೆಯಲ್ಲಿ ಅನೇಕ ಬಗೆಯ ವಿನ್ಯಾಸಗಳ ಅಲಂಕಾರವಿದೆ. ಈ ವಾಸ್ತು ಮತ್ತು ಅಲಂಕರಣ ಪರಸ್ಪರ ಪೂರಕವಾಗಿ, ಗೋಳಗುಮ್ಮಟವನ್ನು ಮೋಹಕ ಕೃತಿಯನ್ನಾಗಿ ಮಾಡಿವೆ. ಈ ಕಟ್ಟಡವನ್ನು ಹತ್ತಿರದಿಂದ ನೋಡುವವರಿಗೆ, ಇದರ ದೈತ್ಯಾಕಾರದ ಎದುರು ತಮ್ಮ ವಾಮನತ್ವದ ಅನುಭವವಷ್ಟೇ ಆದರೂ ದೂರದಿಂದ ನೋಡಿದಲ್ಲಿ ಈ ಸೌಂದರ್ಯದ ಸ್ವರೂಪ ಸ್ಪಷ್ಟವಾಗುತ್ತದೆ.
    ಗೋಳಗುಮ್ಮಟದ ಒಳಹಜಾರದ ಮಧ್ಯೆ ದೊಡ್ಡ ಚೌಕ ಕಟ್ಟೆಯ ಮೇಲೆ ಮಹಮ್ಮದನ ಮತ್ತು ಅವನ ಸಮೀಪ ಸಂಬಂಧಿಗಳ ಕೃತಕ ಗೋರಿಗಳಿವೆ. ಹೆಂಗಸರ ಸಮಾಧಿ ಚಪ್ಪಟೆಯಾಕರದಲ್ಲೂ, ಗಂಡಸರ ಸಮಾಧಿ ಗೋಳಾಕಾರದಲ್ಲಿಯೂ ಇವೆ. ನಿಜವಾದ ಗೋರಿಗಳು ಇದರ ಕೆಳಗೆ ನೆಲಮಾಳಿಗೆಯಲ್ಲಿವೆ. ಅಲ್ಲಿಗೆ ಪ್ರವಾಸಿಗರಿಗೆ ಈಗ ಪವೇಶವಿಲ್ಲ. ಮಹಮ್ಮದ ತನ್ನ ಆಳ್ವಿಕೆಯ ಉತ್ತರಾರ್ಧದಲ್ಲಿ ಈ ಕಟ್ಟಡವನ್ನು ಕಟ್ಟಲಾರಂಭಿಸಿ, ತನ್ನ ಕೊನೆಗಾಲದವರೆಗೂ ಮುಂದುವರಿಸಿದ. ಆದರೆ ಆ ಹೊತ್ತಿಗೂ ಕಟ್ಟಡದ ಗಾರೆಯ ಅಲಂಕರಣ ಮುಗಿದಿರಲಿಲ್ಲವಾಗಿ ಆ ಭಾಗಗಳು ಇಂದೂ ಅಪೂರ್ಣವಾಗಿಯೇ ಉಳಿದಿವೆ. ಮಹಮ್ಮದ್ ಆದಿಲ್ ಶಾ ತನ್ನ ಗೋರಿಗಾಗಿ ಬಹಳ ಆಸ್ಥೆ ವಹಿಸಿದ್ದನೆಂದೂ, ತನ್ನ ಸಮಾಧಿಗಾಗಿ ಅಸೀಮ ಆಸಕ್ತಿಯಿಂದಾಗಿ ಜಗತ್ತಿನ ಉತ್ತಮ ವಾಸ್ತುರಚನೆಯೊಂದು ಮೈತಳೆದಂತಾಯಿತು.
   ಅಲ್ಲಿಂದ ಹೊರಬಂದು ಹುಲ್ಲುಹಾಸಿನಲ್ಲಿ ನಮ್ಮ ತಂಡದ ಭಾವಚಿತ್ರ ಶ್ರೀಮಂತರು ಕ್ಲಿಕ್ಕಿಸಿದರು. ನಾವು ಅಲ್ಲಿಂದ ಹೊರಬಂದಾಗ ಗಂಟೆ ೧೧.೩೦. ಪ್ರವೇಶ ಸಮಯ ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ. ಬೆಳಗ್ಗೆ ಬೇಗ ಹೋದರೆ ಒಳ್ಳೆಯದು.












ಮಾಲಿಕ್- ಇ- ಮೈದಾನ್

೫೫ ಟನ್ ತೂಕದ ಕಂಚಿನ ದೊಡ್ಡ ಫಿರಂಗಿಯನ್ನು ನೋಡುತ್ತಿರುವಾಗ ಗತಕಾಲದ ಇತಿಹಾಸವನ್ನು ತೆರೆದಿಟ್ಟರು ಶ್ರೀಮಂತಕಟ್ಟಿ. ತುರ್ಕಿ ದೇಶದಿಂದ ಬಂದು ನೆಲೆಸಿದ್ದ ಅಧಿಕಾರಿಯೊಬ್ಬ ೧೫೪೯ರಲ್ಲಿ ಅಹ್ಮದ್ ನಗರದಲ್ಲಿ ಈ  ಫಿರಂಗಿಯನ್ನು ತಯಾರಿಸಿದನೆಂದು ಇದರ ಮೇಲೆ ಕೆತ್ತಲಾಗಿರುವ ಪಾರಸೀ ಮತ್ತು ಅರಬ್ಬೀ ಶಾಸನಗಳಿಂದ ತಿಳಿಯುತ್ತದೆ. ೧೫೬೫ರಲ್ಲಿ ನಡೆದ ತಾಳೀಕೋಟೆ ಕದನ ಸಂದರ್ಭದಲ್ಲಿ ಇದನ್ನು ತೆಗೆದುಕೊಂಡು ಹೋಗಲಾಗಿತ್ತಂತೆ. ೧೬೩೨ರಲ್ಲಿ ಬಿಜಾಪುರದ ಅರಸರು‌ಇದನ್ನು ವಶಪಡಿಸಿಕೊಂಡು ವಿಜಯದ ಕುರುಹಾಗಿ ಇಲ್ಲಿ ಇಟ್ಟಿದ್ದಾರೆ.

ಇಬ್ರಾಹಿಂ ರೋಜಾ

 ಫಿರಂಗಿಯ ಇತಿಹಾಸ ಕೇಳಿ ಮುಗಿಸುತ್ತಿದ್ದ ಹಾಗೆಯೇ ಅಲ್ಲಿಂದ ಇಬ್ರಾಹಿಂ ರೋಜಾ ಮಸೀದಿಗೆ ಹೋದೆವು. ಬಲು ಸುಂದರವಾದ ಕಟ್ಟಡವಿದು.  ಕ್ರಿಶ. ೧೬೨೬ರಲ್ಲಿ ಕಟ್ಟಿದ ಎರಡನೆ ಇಬ್ರಾಹಿಮ್ ಆದಿಲ್ ಶಾ ಅವನ ಸಮಾಧಿ ಸ್ಥಳವಿದು. ಇದನ್ನು ತನ್ನ ಪತ್ನಿ ತಾಜ್ ಸುಲ್ತಾನಳ ನೆನಪಿಗಾಗಿ ಕಟ್ಟಿಸಿದ್ದಂತೆ. ಆದರೆ ಪತ್ನಿಗಿಂತ ಮೊದಲೆ ಪತಿ ತೀರಿದ ಕಾರಣ ಇದಕ್ಕೆ ರಾಜನ ಹೆಸರೇ ಇಡಲಾಯಿತಂತೆ. ಇದನ್ನು ಕಪ್ಪು ತಾಜ್ ಮಹಲ್ ಎಂದೂ ಕರೆಯುತ್ತಾರೆ. ತಾಜ್ ಮಹಲನ್ನು ಕಟ್ಟುವ ಮೊದಲು ಇಬ್ರಾಹಿಂ ರೋಜಾ ಕಟ್ಟಡವನ್ನು ಪರಿಶೀಲಿಸಲಾಗಿತ್ತಂತೆ. 


 
 .


 ಬಾರಾ ಕಮಾನು- ಅಲಿರೋಜಾ -೨ 
 ರಾಜರು ತಮ್ಮ ಸಮಾಧಿಗಳಿಗಾಗಿ ಎಷ್ಟೊಂದು ಖರ್ಚು ಮಾಡಿ ಸುಂದರ ಕಟ್ಟಡ ಕಟ್ಟಿಕೊಳ್ಳುತ್ತಾರಲ್ಲ ನಿಜಕ್ಕೂ ಇದು ಬೇಕಾ ಎಂದು ಆಶ್ಚರ್ಯಗೊಳ್ಳುತ್ತಲೇ ಅಲ್ಲಿಂದ ಬಾರಾಕಮಾನು ಅಲಿರೋಜಾ-೨ ನೋಡಲು ಹೋದೆವು. ಇದೊಂದು ಅಪೂರ್ಣ ಕಟ್ಟಡ. ಅರ್ಧ ಕಟ್ಟಿದ ಕಮಾನುಗಳಿಂದ ನೋಡಲು ಆಕರ್ಷಕವಾಗಿದೆ. ಕ್ರಿಶ. ೧೬೭೨ರಲ್ಲಿ ಈ ಕಟ್ಟಡ ಕಟ್ಟಲು ಪ್ರಾರಂಭಿಸಿದ್ದಂತೆ. ಕಟ್ಟಡ ಪೂರ್ಣಗೊಳ್ಳುವ ಮೊದಲೇ ಅಲಿರೋಜ ತೀರಿಹೋದ ಕಾರಣ ಕಟ್ಟಡದ ಕೆಲಸವನ್ನು ಅಲ್ಲಿಗೆ ನಿಲ್ಲಿಸಲಾಯಿತಂತೆ. ಅಲಿ ಅವನ ಹೆಂಡತಿ ಹಾಗೂ ೧೧ ಜನ ಹೆಣ್ಣುಮಕ್ಕಳ ಗೋರಿಗಳು ಇವೆ. 
 


 


   ಕೂಡಲಸಂಗಮ

ಬಿಜಾಪುರದಿಂದ ಕೂಡಲ ಸಂಗಮಕ್ಕೆ ೩೪ ಕಿಮೀ. ನಾವು ಕೂಡಲ ಸಂಗಮ ತಲಪುವಾಗ ಗಂಟೆ ೪ ಆಗಿತ್ತು. ಹುನಗುಂದ ತಾಲೂಕಿನಲ್ಲಿರುವ ಕೂಡಲ ಸಂಗಮ ಬಸವಣ್ಣನವರ ಐಕ್ಯಸ್ಥಳ. ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಸಂಗಮವಾಗುವ ಸ್ಥಳ.  ಚಾಲುಕ್ಯ ಶೈಲಿಯಲ್ಲಿ ಕಟ್ಟಿರುವ ಸಂಗಮೇಶ್ವರ ದೇವಾಲಯವಿದೆ. ಜನಸಂದಣಿ ವಿಪರೀತವಾಗಿತ್ತು. ಒಂದೆಡೆ ಹೆಂಗಸರು, ಗಂಡಸರು, ಮಕ್ಕಳು ಉರುಳು ಸೇವೆ ಸಲ್ಲಿಸುತ್ತಿದ್ದರು, ಇನ್ನೊಂದೆಡೆ ದೇವಾಲಯದೊಳಗೆ ತೆರಳಲು ಸರತಿ ಸಾಲಿನಲ್ಲಿ ನಿಂತಿದ್ದ ಜನ. ನಾವೂ ಸರತಿ ಸಾಲಿನಲ್ಲಿ ಸೇರಿಕೊಂಡು ದೇವಾಲಯದೊಳಗೆ ಹೋಗಿ ದೇವರ ದರ್ಶನ ಮಾಡಿ ಹೊರಬಂದೆವು. ನದಿ ಮಧ್ಯೆ ಇರುವ ಬಸವಣ್ಣನ ಐಕ್ಯಸ್ಥಳ ನೋಡಲು ಸರತಿ ಸಾಲಿನಲ್ಲಿ ಹೋದೆವು. ನೂರಾರು ಮೆಟ್ಟಲು ಇಳಿದು ಕೆಳಗೆ ಹೋಗಬೇಕು. ಅಲ್ಲಿಂದ ನದಿ ಬಳಿಗೆ ಬಂದು ಮೂರು ನದಿಗಳು ಸಂಗಮಗೊಂಡು ಹರಿಯುವುದನ್ನು ನೋಡಿದೆವು. ಪ್ರವಾಸಿಗರು ಎಲ್ಲ ಕಡೆ ಕಸ ಹಾಕಿ ದೇವಾಲಯದ ಸುತ್ತಮುತ್ತ ವಿಪರೀತ ಗಲೀಜು ಮಾಡಿದ್ದರು.
  ಅಲ್ಲಿಂದ ಸಂಜೆ ಆರು ಗಂಟೆಗೆ ಹೊರಬಂದೆವು. ಹೊರಗೆ ಒಬ್ಬ ಸಾಧು ತಂತಿಯನ್ನು ತುಟಿಯಿಂದ ಬಾಯಿಯೊಳಗೆ ಸಿಕ್ಕಿಸಿ ಕಬ್ಬಿಣದ ಮೊಳೆಯಲ್ಲಿ ನಿಂತು ಆಶೀರ್ವಾದ ಮಾಡುತ್ತಿರುವ ದೃಶ್ಯ ನೋಡಿದೆವು. ಅಲ್ಲೇ ಹೊರಗಡೆ ಚಹಾ ಸೇವಿಸಿ ಬಸ್ ಹತ್ತಿದೆವು. 







  ಗದಗ

ಕೂಡಲಸಂಗಮದಿಂದ ಗದಗದೆಡೆಗೆ ಪ್ರಯಾಣ ಬೆಳೆಸಿದೆವು.   ಬಿಜಾಪುರದಿಂದ ಗದಗಕ್ಕೆ ಸುಮಾರು ೨೦೦ಕಿಮೀ. ನಾಲ್ಕು ಗಂಟೆ ಬೇಕಾಗುತ್ತದೆ. ನಾವಿದ್ದ ಗಾಡಿ ಸ್ವಲ್ಪ ತೊಂದರೆ ಕೊಟ್ಟಿತ್ತು. ರಸ್ತೆ ಸುಗಮವಾಗಿದ್ದರೂ ಮೂರನೇಗೇರಿನಿಂದ ನಾಲ್ಕು ಐದನೇ ಗೇರು ಹಾಕಲು ಸಾಧ್ಯವಾಗದೆ ನಿಧಾನವಾಗಿಯೇ ಗಾಡಿ ಚಲಾಯಿಸಬೇಕಾಯಿತು. ನಾಲ್ಕನೇ ಗೇರಿಗೆ ಬೀಳದೆ ಗರಗರ ಸದ್ದು ಮಾಡುತ್ತಿತ್ತು. ಒಂದು ಎರಡು, ಮೂರು ಗೇರುಗಳ ಉಪಯೋಗದಿಂದಲೆ ವಿಷ್ಣು ಗಾಡಿ ಚಲಾಯಿಸಿ ನಾಲ್ಕು ಗಂಟೆಗಳಲ್ಲಿ ನಮ್ಮನ್ನು ಗದಗ ಮುಟ್ಟಿಸಿದ. ನಾವು ಗದಗ ತಲಪುವಾಗ ರಾತ್ರಿ ಹತ್ತು ಗಂಟೆ. ಇನ್ನೊಂದು ಗಾಡಿ ೯.೩೦ಗೇ ತಲಪಿ ಊಟಮುಗಿಸಿದ್ದರು. ಒಂದು ಖಾನಾವಳಿಯಲ್ಲಿ ಜೋಳದ ರೊಟ್ಟಿ, ಚಪಾತಿ, ಪಲ್ಯ, ಅನ್ನ ಸಾರು ಊಟ ಮಾಡಿದೆವು. ಊಟವಾಗಿ ಶಿವಾನಿ ಇನ್ ಎಂಬ ವಸತಿಗೃಹ ಸೇರುವಾಗ ಗಂಟೆ ೧೧. ಒಂದು ಕೋಣೆಯಲ್ಲಿ ನಾವು ಮೂರು ಮಂದಿ ಸುಬ್ಬಲಕ್ಷ್ಮೀ, ಶೋಭಾ, ನಾನು ಆರಾಮವಾಗಿ ಮಲಗಿದೆವು. ಕೋಣೆ ದೊಡ್ಡದಾಗಿ ತುಂಬ ಚೆನ್ನಾಗಿತ್ತು ವ್ಯವಸ್ಥೆ. 

ಬಸವಣ್ಣ ಪ್ರತಿಮೆ

೨೭-೧೨-೨೦೧೬ರಂದು ಬೆಳಗ್ಗೆ ಎಚ್ಚರವಾಗುವಾಗ ಗಂಟೆ ೬.೪೫. ಗಡಬಡಿಸಿ ಎದ್ದು ಸ್ನಾನಾದಿ ಮುಗಿಸಿ ಹೊರಬಂದಾಗ ೭.೪೫. ಎಲ್ಲರೂ ಹೊರಡುತ್ತಿದ್ದರಷ್ಟೆ. ೮ ಗಂಟೆಗೆ ಅನತಿ ದೂರದಲ್ಲಿದ್ದ ಹೊಟೇಲಿಗೆ ಹೋಗಿ ಅವಲಕ್ಕಿ, ದೋಸೆ ತಿಂದೆವು. ೯ ಗಂಟೆಗೆ ಕೋಣೆ ಕಾಲಿ ಮಾಡಿ ಹೊರಟು ತಯಾರಾದೆವು. ರೂಮಿನಿಂದ ನಮ್ಮ ಬ್ಯಾಗ್ ಒಯ್ಯಲು ಎರಡು ಹುಡುಗರು ತಾ ಮುಂದು ಎಂದು ಧಾವಿಸಿ ಬಂದರು. ಬೇಡಪ್ಪ ಎಂದು ಹೇಳಿದರೂ ಕೇಳಲಿಲ್ಲ. ಹತ್ತನೇ ತರಗತಿ ಓದಿ ಮುಂದೆ ಓದಲು ಇಷ್ಟವಿಲ್ಲದೆ ಅಲ್ಲಿ ಕೆಲಸಕ್ಕೆ ಸೇರಿದ್ದರಂತೆ. ಕೆಲಸ ಖುಷಿ ಇದೆಯಂತೆ ಅವರಿಗೆ. ಚೂಟಿಯಾಗಿ ನಗುನಗುತ್ತ ಕೆಲಸ ಮಾಡುತ್ತಿದ್ದರು. ಅವರ ಉತ್ಸಾಹ ನೋಡಿ ನಾವು ಅವರಿಗೆ ಇನಾಮು ಕೊಟ್ಟೆವು. ವಿಷ್ಣು ನಮ್ಮ ಗಾಡಿ ಅಡಿಯಲ್ಲಿ ಮಲಗಿ ಗೇರ್ ರಿಪೇರಿ ಮಾಡುತ್ತಿದ್ದ. ಅಂತೂ ವಾಹನ ರಿಪೇರಿಯಾಗಿ ಹೊರಡುವಾಗ ೯.೩೦. 
   ನಾವು ಬಸವಣ್ಣನ ಬೃಹತ್ ಪ್ರತಿಮೆ ಇದ್ದ ಸ್ಥಳಕ್ಕೆ ಬಂದೆವು. ಅಲ್ಲಿ ಒಂದು ಸುತ್ತು ಹಾಕಿ ಮುಂದುವರಿದೆವು.

 ಲಕ್ಕುಂಡಿ ಮ್ಯೂಸಿಯಂ

ಗದಗದ ಪ್ರಸಿದ್ಧ ಲಕ್ಕುಂಡಿ ಇತಿಹಾಸ ಮ್ಯೂಸಿಯಂಗೆ ಹೋದೆವು. ಒಳಗೆ ಹೋಗಲು ಪ್ರವೇಶದರವಿದೆ. ಅಲ್ಲಿ ಅಬ್ದುಲ್ ರಜಾಕ್ ನಮಗೆ ಮಾರ್ಗದರ್ಶಕರಾಗಿದ್ದು, ಲಕ್ಕುಂಡಿ ಇತಿಹಾಸವನ್ನು ಎಳೆ‌ಎಳೆಯಾಗಿ ತೆರೆದಿಟ್ಟರು. ಮಧ್ಯೆ ಪ್ರಶ್ನೆ ಕೇಳಿದರೆ ಮುಂದೆ ಹೇಳುವೆ ಎನ್ನುತ್ತಿದ್ದರು. ಅವರು ಕಳೆದ ನಲವತ್ತು ವರ್ಷಗಳಿಂದ ಈ ವೃತ್ತಿಯಲ್ಲಿರುವರಂತೆ. ಅವರಿಗೆ ಸ್ಥಿರದೂರವಾಣಿಯಾಗಲಿ, ಸಂಚಾರಿವಾಣಿಯಾಗಲಿ ಇಲ್ಲವಂತೆ. ಯಾವುದಕ್ಕೂ ಪತ್ರ ಬರೆಯಿರಿ ಎಂದರು.  ಉತ್ಸಾಹ ಇರುವವರು ಮ್ಯೂಸಿಯಂ ನೋಡಿದರು ಇಲ್ಲದವರು ಹೊರಗೆ ಜಮಖಾನ ವ್ಯಾಪಾರ ಮಾಡಿದರು.
ಉತ್ಖನನದಲ್ಲಿ ನಾಲ್ಕಾರು ದೇವಾಲಯಗಳನ್ನು ಪತ್ತೆ ಹಚ್ಚಿದ್ದಾರೆ. ಮ್ಯೂಸಿಯಂ ಪಕ್ಕ ಜಿನದೇವಾಲಯ ಸೊಗಸಾಗಿದೆ. ಅದನ್ನು ನೋಡಿ ಮಾಣಿಕೇಶ್ವರ, ಕಾಶಿ ವಿಶ್ವೇಶ್ವರ, ಸೂರ್ಯ ದೇವಾಲಯಕ್ಕೆ ಹೋದೆವು. ಆ ದೇವಾಲಯದ ಪುಷ್ಕರಿಣಿ ಒಣಗಿದೆ. ನಾಲ್ಕಾರು ವರ್ಷಗಾಳಾಯಿತು ಕೆರೆಯಲ್ಲಿ ನೀರಿಲ್ಲ. ಎಂದು ಅಲ್ಲಿ ಬೋರೆಹಣ್ಣು ಮಾರುತ್ತಿದ್ದ ಹೆಂಗಸು ಹೇಳಿದಳು. ದೇವಾಲಯ ನೋಡಿ ಹೊರಬರುವಾಗ ಹೊಲದಲ್ಲಿ ಹೆಂಗಸರು ಹಸಿಮೆಣಸು ಕೊಯ್ಯುವುದು ಕಂಡಿತು. ನಮ್ಮಲ್ಲಿ ಕೆಲವರು ಹತ್ತು ರೂಪಾಯಿ ಕೊಟ್ಟು ಮೆಣಸು ಕೊಂಡರು. ಅಲ್ಲಿಂದ ಕಪ್ಪತ್ತಗಿರಿಗೆ ಹೋಗುವುದೆಂದು ತೀರ್ಮಾನವಾಯಿತು. ರಜಾಕ್ ಅವರಿಗೆ ವಿದಾಯ ಹೇಳಿದೆವು. 










 ಕಪ್ಪತ್ತಗಿರಿ ಕ್ಷೇತ್ರ: ಎಪ್ಪತ್ತು ಗಿರಿಯ ಬದಲು ಒಂದು ಕಪ್ಪತ್ತಗಿರಿ ನೋಡು
 ವಾಹನದಲ್ಲಿ ಹೋಗುತ್ತ ದಾರಿಯಲ್ಲಿ ಒಂದೆಡೆ ಕಡ್ಲೆಕಾಯಿ ಬೀಜ ರಾಶಿ ಮಾಡುತ್ತಿರುವುದು ಕಂಡಿತು. ಆಗ ಗಂಟೆ ಒಂದು ಆಗಿತ್ತು. ಹೊಟ್ಟೆ ಹಸಿದಿತ್ತು. ಕಡ್ಲೆಕಾಯಿ ಕಾಣುವಾಗ ಹಸಿವು ಇನ್ನೂ ಹೆಚ್ಚಾಯಿತು. ಒಂದೆರಡು ಕಿಲೋ ಕೇಳಿ ತನ್ನಿ ಎಂದು ಮಂಜುನಾಥರಿಗೆ ಹೇಳಿದೆ. ವಿಷ್ಣು ಗಾಡಿ ನಿಲ್ಲಿಸಿದರು. ನಾವು ಕೆಲವರು ಇಳಿದು ಓಡಿದೆವು. ಕಡ್ಲೆ ಕಾಯಿ ತಗೊಳ್ಳಿ ಬೊಗಸೆ ತುಂಬ. ಆದರೆ ದುಡ್ಡು ಬೇಡ. ಎಂದರು. ನೀವು ಇವನ್ನು ಬೆಳೆಯಲು ಎಷ್ಟು ಶ್ರಮ ವಹಿಸಿದ್ದೀರಿ, ಬೀಜಕ್ಕೆ ದುಡ್ಡು ಹಾಕಿ, ಕೂಲಿಗಳಿಗೆ ಮಜೂರಿ ಕೊಟ್ಟು ತುಂಬ ಖರ್ಚಾಗಿರುತ್ತೆ. ದಯವಿಟ್ಟು ದುಡ್ದು ಪಡೆಯಿರಿ ಎಂದೆ. ಇದೆಲ್ಲ ದೇವರು ಕೊಟ್ಟದ್ದು. ನಮಗೆ ಬೇಕಷ್ಟು ದೇವರು ಕೊಟ್ಟಿದ್ದಾನೆ. ಹಾಗೆಲ್ಲ ದುಡ್ಡು ಪಡೆಯುವಂಗಿಲ್ರಿ ಎಂದಾಗ ನಾವು ಅವರ ಮುಂದೆ ಕುಬ್ಜರಾದೆವು. ಸ್ವಾರ್ಥರಹಿತ, ಪ್ರೀತಿ ಚೆಲ್ಲುವ ಬದುಕು ಅವರದು. ನಾವು ಒಂದಷ್ಟು ಕಡ್ಲೆಬೀಜ ತೆಗೆದುಕೊಂಡು ನಮ್ಮ ಕೃತಜ್ಞತೆ ಸಲ್ಲಿಸಿ ಬಸ್ ಹತ್ತಿದೆವು. ಗರಿಗರಿ ಕಡ್ಲೆಕಾಯಿ ಬಹಳ ರುಚಿಯಾಗಿತ್ತು. ಹಸಿದ ಹೊಟ್ಟೆಗೆ ಹೆಚ್ಚು ತಿನ್ನಬೇಡಿ ಎಂದು ಕೆಲವರು ಎಚ್ಚರಿಸಿದರು.


   ಒಂದು ಬಸ್ಸಿನಲ್ಲಿ ಊಟ ತೆಗೆದುಕೊಂಡು ಬರುತ್ತೇವೆ. ಇನ್ನೊಂದು ಬಸ್ ಮುಂದೆ ಹೋಗಲಿ. ಅಲ್ಲಿ ಕಾದಿರಿ ಎಂದು ತೀರ್ಮಾನವಾಗಿ ಅದರಂತೆ ಚಾಲಕ ಮುತ್ತು ಇರುವ ಗಾಡಿ ಮುಂದೆ ಹೋಯಿತು. ನಮ್ಮ ಕೆಲವರನ್ನು ಆ ಗಾಡಿಗೆ ಹತ್ತಲು ಹೇಳಿದರು. ನಾವು ಕಪ್ಪತ್ತಗಿರಿ ಕ್ಷೇತ್ರ ತಲಪುವಾಗ ೨ ಗಂಟೆ. ಆದರೆ ಇನ್ನೊಂದು ಗಂತೆ ಮೂರಾದರೂ ಬರುವುದು ಕಾಣಲಿಲ್ಲ. ನಾವು ಬಂದ ದಾರಿಯಲ್ಲಿ ಅವರು ಬರಲಿಲ್ಲ. ನಾವು ದಾರಿ ತಪ್ಪಿದ್ದೆವು. ಗುಡ್ಡದ ಮೇಲೆ ಪವನ ಕೆಂದ್ರ ಇರುವ ಕಡೆ ನಾವು ಹೋಗಬೇಕಿತ್ತಂತೆ. ಅಂತೂ ಫೋನ್ ಸಂಪರ್ಕ ಸಾಧಿಸಿ ನಾವು ಇಂಥ ಕಡೆ ಇದ್ದೇವೆ ಎಂದು ಹೇಳಿ ಅವರೂ ಇಲ್ಲಿಗೇ ಬರುವುದು ಎಂದು ಮಾತುಕತೆಯಾಯಿತು. ಸಮಯ ಉಳಿಸಲು ಹೊರಟು ಸಮಯ ಹಾಳುಗೆಡವಿದ ಹಾಗಾಯಿತು. ಒಮ್ಮೊಮ್ಮೆ ನಾವು ಯೋಚಿಸಿದ ಹಾಗೆ ಆಗುವುದಿಲ್ಲ. ಇಲ್ಲಿ ಸುಮ್ಮನೆ ಕಾಯುವುದೇಕೆ ಎಂದು  ನಾವು ಕೆಲವರು ಗುಡ್ಡ ಏರಿದೆವು.
 ಎಪ್ಪತ್ತು ಗಿರಿಯ ಬದಲು ಒಂದು ಕಪ್ಪತ್ತಗಿರಿ ನೋಡು ಎಂಬುದು ಅಲ್ಲಿಯ ನಾಣ್ನುಡಿ. ಕಪ್ಪತ್ತಗಿರಿ ಮಳೆಗಾಲದಲ್ಲಿ ಹಸುರಾಗಿ ಬಲು ಸುಂದರವಾಗಿ ಕಂಗೊಳಿಸುತ್ತದೆಯಂತೆ. ಈಗ ಎಲ್ಲ ಒಣಗಿತ್ತು. ಕಪ್ಪತ್ತಗಿರಿ ಈಗ ಭಾರೀ ಸುದ್ದಿಯಲ್ಲಿದೆ. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಸರ್ಕಾರ ಸಮ್ಮತಿಸಿದೆ ಎಂದು ಅದರ ವಿರುದ್ಧ ಹೋರಾಡಲು ಪರಿಸರ ಸಂರಕ್ಷಿಸುವ ಜನರು, ಸ್ವಾಮೀಜಿಗಳು ಮುಂದಾಗಿದ್ದಾರೆ. ಕಪ್ಪತ್ತಗಿರಿ ಔಷಧೀವನಕ್ಕೆ ಹೆಸರಾಗಿದೆ. ಪವನ ವಿದ್ಯುತ್ ಕೇಂದ್ರವೂ ಹೌದು. ಅದರ ದ್ಯೋತಕವಾಗಿ ಗುಡ್ಡದಲ್ಲಿ ಗಾಳಿಗೆ ರೆಕ್ಕೆಗಳು ತಿರುಗುವುದು ಕಾಣುತ್ತವೆ.
   ಮೇಲೆ ಎರಡು ಗುಡಿಗಳಿವೆ. ಅವನ್ನೆಲ್ಲ ನೋಡಿ ನಾವು ಕೆಳಗೆ ಬರುವಾಗ ಬಸ್ ಬಂದಿತ್ತು. ಹೆಚ್ಚಿನವರು ಊಟ ಮುಗಿಸಿದ್ದರು. ಜೋಳದ ರೊಟ್ಟಿ, ಚಪಾತಿ, ಕಾಳು ಪಲ್ಯ, ಎಣ್ಣೆಗಾಯಿ, ಚಟ್ನಿಪುಡಿ, ಹಪ್ಪಳ, ಚಿತ್ರಾನ್ನ, ಅನ್ನ ಸಾಂಬಾರು, ಮಜ್ಜಿಗೆ. ಅಲ್ಲಿಯ ಕಟ್ಟಕಡೆಯ ಒಂಟಿ ಮನೆ ಎದುರು ನಾವು ಊಟ ಮಾಡಿರುವುದು. ಮುನ್ನೂರು ವರ್ಷಗಳಾಗಿದೆಯಂತೆ ಮನೆಗೆ. ತಾತ ಮುತ್ತಾತರ ಕಾಲದಿಂದಲೂ ಇದೆಯಂತೆ ಮನೆ. ಈಗ ಹತ್ತು ಮಂದಿ ಇದ್ದಾರಂತೆ ಆ ಮನೆಯಲ್ಲಿ. ಕಪ್ಪತ್ತಗಿರಿಯಲ್ಲಿ ಸುಮಾರು ೨೫ಕ್ಕೂ ಹೆಚ್ಚು ಔಷಧೀ ಸಸ್ಯಗಳು ಇವೆಯಂತೆ. ಆ ಮನೆಯವರಿಗೆ  ಎಲ್ಲ ಔಷಧೀ ಸಸ್ಯಗಳ ಪರಿಚಯ ಇದೆಯಂತೆ. ಹಾಗೂ ಔಷಧಿ ನೀಡುತ್ತಾರಂತೆ.   ನಮ್ಮ ತಂಡದ ಚಿತ್ರ ತೆಗೆಸಿಕೊಂಡು ೪.೩೦ಗೆ ಹೊರಟೆವು.









 ಬಂದೇವ ನಾವು ಹುಬ್ಬಳ್ಳಿಗೆ
  ನಾವು ರಾತ್ರೆ ಏಳು ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣ ತಲಪಿದೆವು. ನಮ್ಮನ್ನು ನಾಲ್ಕು ದಿನಗಳ ಕಾಲ ಊರೂರು ತೋರಿಸಿ ಸುರಕ್ಷಿತವಾಗಿ ಕರೆತಂದು ಬಿಟ್ಟ ವಿಷ್ಣು ತಂಡದವರಿಗೆ ನಾವು ಕೃತಜ್ಞತೆ ಹೇಳಿ ಬೀಳ್ಕೊಂಡೆವು.  ನಮಗೆ ೮.೧೫ಕ್ಕೆ ಮೈಸೂರಿಗೆ ರೈಲು. ಕಾಮತ್ ಖಾನಾವಳಿಯಲ್ಲಿ ದೋಸೆ ತಿಂದು, ಆಗ ತಿಂಡಿ ತಿನ್ನದವರಿಗೆ ರಾತ್ರಿ ಊಟ ಕಟ್ಟಿಸಿಕೊಂಡು ನಾವು ರೈಲೇರಿದೆವು. ಸ್ವರ್ಣಜಯಂತೀ ಎಕ್ಸ್ ಪ್ರೆಸ್ ರೈಲು ೮.೩೦ಕ್ಕೆ ಹುಬ್ಬಳ್ಳಿ ಬಿಟ್ಟು ಹೊರಟಿತು.
 ಸ್ಕೌಟ್ ಗೈಡ್ಸಿನ ಅಶಿಸ್ತಿನ ಗುರುಗಳು ಹಾಗೂ ಮಕ್ಕಳು 
  ರೈಲಲ್ಲಿ ಕಾಲು ಹಾಕಲಾಗದಷ್ಟು ಜನಸಂದಣಿ ಹಾಗೂ ಸಾಮಾನು ಸರಂಜಾಮು. ದಶಂಬರ ೨೯ರಿಂದ ಜನವರಿ ೪ರವರೆಗೆ ಮೈಸೂರಲ್ಲಿ ನಡೆಯುವ ೧೭ನೇ ಜಾಂಬೂರಿ ಸ್ಕೌಟ್ ಮತ್ತು ಗೈಡ್ಸ್ ಉತ್ಸವದಲ್ಲಿ ಭಾಗಿಯಾಗಲು ಮಕ್ಕಳು ಶಿಕ್ಷಕರು ನಿಜಾಮುದ್ದೀನಿಂದ ಬಂದಿದ್ದರು. (ಮೈಸೂರಿನ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾಪ್ರದೇಶದಲ್ಲಿ ೩೫೦ಕ್ಕೂ ಹೆಚ್ಚಿನ ಎಕರೆ ಪ್ರದೇಶದಲ್ಲಿ, ೨೫ಸಾವಿರಕ್ಕೂ ಹೆಚ್ಚು ಮಕ್ಕಳು ಇದರಲ್ಲಿ ಭಾಗಿಯಾಗಿದ್ದು, ಐದು ಸಾವಿರಕ್ಕೂ ಹೆಚ್ಚು ಗಣ್ಯರು, ವಿದೇಶೀಯರು ಸೇರಿದಂತೆ ಸುಮಾರು ೪೦ ಸಾವಿರ ಮಂದಿ ಸೇರಿರುತ್ತಾರೆ. ನಾಲ್ಕು ವರ್ಷಗಳಿಗೊಮ್ಮೆ ಈ ಜಾಂಬೂರಿ ಉತ್ಸವ ನಡೆಯುತ್ತದೆ. ೧೯೫೦, ನವಂಬರ ೧೭ರಂದು ಭಾರತದಲ್ಲಿ ದಿ. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಾಗಿ ರೂಪುಗೊಂಡಿತು. ಕರ್ನಾಟಕದಲ್ಲಿ ಪ್ರಾರಂಭಗೊಂಡಿದ್ದು ೧೯೧೭ರಲ್ಲಿ. ಹಾಗಾಗಿ ಕರ್ನಾಟಕದ ಸ್ಕೌಟ್ ಮತು ಗೈಡ್ಸ್‌ಗೆ ಈಗ ಶತಮಾನ ವರ್ಷ. ಈ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು) ನಮಗೆ ನಿಗದಿಯಾಗಿದ್ದ ಸ್ಥಳದಲ್ಲಿ ಅವರೆಲ್ಲ ಕೂತಿದ್ದರು. ನಾವು ನಮ್ಮ ಸೀಟು ಬಿಟ್ಟು ಕೊಡಲು ಹೇಳಿದೆವು. ಮನಸ್ಸಿಲ್ಲದ ಮನದಿಂದ ಎದ್ದು ಹೋದರು. ನಾವು ನಮ್ಮ ಸಾಮಾನು ಇಟ್ಟು ಕೂತೆವು.  ಅವರ ಸಾಮಾನುಗಳನ್ನು ನೋಡಿದರೆ ತಲೆ ತಿರುಗಬಹುದು. ಅಷ್ಟು ಬ್ಯಾಗ್, ಟ್ರಂಕುಗಳು ಇದ್ದುವು. ಮಕ್ಕಳ ಗದ್ದಲ ಜೋರಿತ್ತು. ಅಂತ್ಯಾಕ್ಷರಿ ನಿರಂತರವಾಗಿ ನಡೆಯುತ್ತಲೇ ಇತ್ತು. ರಾತ್ರೆ ೧೦.೩೦ ಆದರೂ ಗದ್ದಲ ಕಡಿಮೆ ಆಗಲಿಲ್ಲ. ಆಗ ನಮ್ಮಲ್ಲಿ ಕೆಲವರು ಇನ್ನು ಸಾಕು ಮಾಡಿ. ಮಲಗಬೆಕು. ನೀವೂ ಮಲಗಿ ಎಂದು ಕೆಳಿಕೊಂಡರು. ಆಗ ನಮ್ಮ ಸೀಟಲ್ಲಿ ಕುಳಿತಿದ್ದ ಶಿಕ್ಷಕಿ, ಮಕ್ಕಳಿಗೆ ಇನ್ನೂ ಜೋರಾಗಿ ಹಾಡಿ ಎಂದು ಹೇಳಿದಳು. ಮಕ್ಕಳೂ ಜೋರಾಗಿ ರಘುಪತಿ ರಾಘವ ರಾಜಾರಾಮ್ ಎಂದು ಹಾಡಲು ಸುರುಮಾಡಿದರು. ಗದ್ದಲ ಕಡಿಮೆ ಮಾಡಿ ಎಂದು ನಾವು ಹೇಳಿದಷ್ಟೂ ಸಲವೂ ಜಾಸ್ತಿ ಮಾಡುತ್ತಿದ್ದರು. ನೀವು ಹೀಗೆ ಗದ್ದಲ ಮಾಡಿದರೆ ನಾವು ದೂರು ಕೊಡುತ್ತೇವೆ ಎಂದು ಒಬ್ಬರೆಂದದ್ದಕ್ಕೆ ಆ ಶಿಕ್ಷಕಿ ಕೊಡಿ, ನಾವು ೭೦ ಮಂದಿ ಇದ್ದೇವೆ. ನೋಡಿಕೊಳ್ಳುತ್ತೇವೆ ಎಂದರು. ಅಬ್ಬ ಇವರೆಲ್ಲ ಸ್ಕೌಟ್ ಗೈಡ್ಸ್ ಶಿಕ್ಷಣ ಕಲಿತವರೆ? ಶಿಸ್ತು, ಸಂಯಮ, ಸಹಬಾಳ್ವೆ ಒಂದೂ ಇಲ್ಲದ ಇವರೆಂಥ ಸ್ಕೌಟ್ ಗೈಡ್ಸಿನಲ್ಲಿ ಭಾಗಿಯಾಗುವುದು? ಅದರಿಂದ ಏನು ಪ್ರಯೋಜನ? ಶಿಕ್ಷಕಿಯೇ ಸರಿ ಇಲ್ಲದೆ (ಜೊತೆಗೆ ಶಿಕ್ಷಕರೂ ದನಿಸೇರಿಸಿದ್ದರು) ಅಸಭ್ಯ ಧೋರಣೆ ಬೆಳೆಸಿಕೊಂಡರೆ ಮಕ್ಕಳಿಗೇನು ಶಿಸ್ತು ಕಲಿಸಿಯಾರು ಎನಿಸಿ ಬಲು ಖೇದವೆನಿಸಿತು. ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತನ್ನು ಬೆಳೆಸಬೇಕೆಂಬುದು ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಣದ ಮುಖ್ಯ ಉದ್ದೇಶ. ಮಕ್ಕಳಿಗೆ ದೇಶಪ್ರೇಮ, ನೈತಿಕಶಿಕ್ಷಣದೊಂದಿಗೆ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆ ಮೂಡಿಸಿ ದೇಶದ ಏಕತೆಯನ್ನು ಸಾರುವ ಸಂಸ್ಥೆ ಸ್ಕೌಟ್ ಮತ್ತು ಗೈಡ್ಸ್. ಈ ಮೂಲೋದ್ದೇಶವೇ ಇವರಲ್ಲಿ ಮಾಯವಾಗಿತ್ತು. ನಾವು ಹೇಳಿದಷ್ಟೂ ಅವರು ಹೆಚ್ಚು ಮಾಡುತ್ತಾರೆ. ಬೊಬ್ಬೆ ಹಾಕಲಿ. ಎಷ್ಟು ಹೊತ್ತೂಂತ ಹಾಕಲು ಸಾಧ್ಯ. ಸುಸ್ತಾದಮೇಲೆ ಅವರೇ ನಿಲ್ಲಿಸುತ್ತಾರೆ ಎಂದೆ. ಹಾಗೆಯೇ ಹನ್ನೆರಡು ಘಂಟೆಗೆ ಸ್ತಬ್ಧಗೊಂಡರು. ಮತ್ತೆ ನಾವೂ ಮಲಗಿದೆವು.

  ಮರಳಿ ಗೂಡು ಸೇರಿದೆವು

೨೮-೧೨-೨೦೧೬ರಂದು ಬೆಳಗ್ಗೆ ೫.೧೫ಕ್ಕೆ ಮೈಸೂರು ತಲಪಿದೆವು. ನಾಲ್ಕು ದಿನಗಳ ಬಯಲುಸೀಮೆಯ ಈ ಪಯಣ ತುಂಬ ಖುಷಿ ಕೊಟ್ಟಿತು. ಸಾಕಷ್ಟು ಸ್ನೇಹ ಸಂಪಾದನೆ ಆಯಿತು. ನಮ್ಮನ್ನು ಕರೆದುಕೊಂಡು ಹೋಗಿದ್ದ ಶಿವಶಂಕರರು ಸಾಧುಸಜ್ಜನರು. ಇಷ್ಟು ಗಂಟೆಗೆ ಹೊರಡಿ ಎಂದು ಕಟ್ಟುನಿಟ್ಟಾಗಿ ಹೇಳಲೂ ಸಂಕೋಚಪಡುವ ಸ್ವಭಾವದವರು. ಎಲ್ಲ ಕಡೆ ಪ್ರವೇಶ ಧನ ಪಾವತಿಸಿದ್ದರಿಂದ ಖರ್ಚು ಜಾಸ್ತಿಯಾಗಿ ಹೆಚ್ಚುವರಿಯಾಗಿ ನಮ್ಮಿಂದ ರೂ. ೨೦೦ ಕೇಳಲೂ ಅವರಿಗೆ ಬಲು ಸಂಕೋಚವೇ ಆಯಿತು.  ಅವರು ನಮಗೆ ಏನೂ ತೊಂದರೆಯಾಗದಂತೆ ಬಲು ಮುತುವರ್ಜಿ ವಹಿಸಿ ಈ ಪ್ರವಾಸವನ್ನು ಕೈಗೊಂಡು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದರು. ಅವರಿಗೆ ನಮ್ಮ ತಂಡದ ಎಲ್ಲರ ಪರವಾಗಿ ಧನ್ಯವಾದಗಳು.
ಮುಗಿಯಿತು

ಶುಕ್ರವಾರ, ಜನವರಿ 13, 2017

ಉತ್ತರಕರ್ನಾಟಕದ ಶಿಲ್ಪಕಲೆಯ ವೈಭವ ಹಂಪೆ, ಬಾದಾಮಿ, ಐಹೊಳೆ,ಬಿಜಾಪುರ, ಗದಗ ಭಾಗ -೨

ಬಾದಾಮಿ 
 ಸಂಜೆಯ ಚಹಾ ಕೊಡಿಸಲಿಲ್ಲವೆಂದು ಕೆಲವರು ಆಕ್ಷೇಪವೆತ್ತಿದ ಕಾರಣ ಸಂಜೆ ಏಳು ಗಂಟೆಗೆ ಚಹಾಕ್ಕೆ ನಿಲ್ಲಿಸಲಾಯಿತು. ಹತ್ತು ಮಂದಿ ಚಹಾ ಕುಡಿಯಲು ಬರೋಬ್ಬರಿ ಅರ್ಧ ಗಂಟೆ ವ್ಯಯವಾಯಿತು. ಅಲ್ಲಿಂದ ಮುಂದೆ ಎಲ್ಲೂ ನಿಲ್ಲದೆ ಬಾದಾಮಿ ತಲಪುವಾಗ ಗಂಟೆ ರಾತ್ರೆ ಹತ್ತು. ಅಲ್ಲಿಯ ಒಂದು ಭೋಜನಾಲಯದಲ್ಲಿ ಊಟ ಮಾಡಿದೆವು. ಹಂಪೆಯಿಂದ ಬಾದಾಮಿಗೆ ೧೪೦ಕಿಮೀ. ನಾಲ್ಕು ಗಂಟೆ ಬೇಕಾಯಿತು.
ಹೊಂದಾಣಿಕೆ ಇಲ್ಲದ ಜೀವನ.. ..
 ಅನ್ನ ತಣ್ಣಗೆ, ಚಪಾತಿ ಒಣಗಿದೆ, ಎಂಬ ಆಕ್ಷೇಪ ಕೆಲವರಿಂದ ಬಂತು. ನಾವು ಊಟಕ್ಕೆ ಹೋದದ್ದು ರಾತ್ರೆ ಹತ್ತು ಗಂತೆಗೆ. ಬಿಸಿ ಇರಲು ಹೇಗೆ ಸಾಧ್ಯ? ಅವೇಳೆಯಲಿ ಹೋಗಿದ್ದೇವೆ. ಹಸಿದ ಹೊಟ್ಟೆಗೆ ಅಷ್ಟಾದರೂ ಕೊಟ್ಟಿದ್ದಾರಲ್ಲ. ಹಸಿವೆಗೆ ಒಂದಷ್ಟು ಆಹಾರ ಹಾಕಿದರೆ ಸಾಕು ಎಂಬ ಮನೋಸ್ಥಿತಿ ಬೆಳೆಸಿಕೊಳ್ಳಬೇಕು ಎನಿಸಿತು. ಊಟವಾಗಿ ವಸತಿಗೃಹ ಸೇರುವಾಗ ಗಂಟೆ ೧೧. ಮೂವತ್ತೊಂದು ಮಂದಿಗೆ ೩ ಕೋಣೆಗಳಿತ್ತು. ಬೇರೆ ಖಾಲಿ ಕೋಣೆ ಇರಲಿಲ್ಲ. ಹೇಗೋ ಹೊಂದಾಣಿಕೆ ಮಾಡಿ ಮಲಗಿ ಎಂದು ಹೇಳಿದರು. ನಾವು ೧೯ ಮಂದಿ ಹೆಂಗಸರು ಇದ್ದುದು. ೧೦+೯ ಎಂದು ಎರಡು ಕೋಣೆಗಳಲ್ಲಿ ಏಳು ಮಂಚ ಇದ್ದುದದನ್ನು ಜೋಡಿಸಿ ಅನುಸರಿಸಿ ಮಲಗಿದೆವು. ತಣ್ಣೀರು ಸ್ನಾನ ಮಾಡಿ ಮಲಗುವಾಗ ಹನ್ನೆರಡು ಗಂಟೆ. ಗಂಡಸರಲ್ಲಿ ಒಬ್ಬರು ಇಂಥ ವ್ಯವಸ್ಥೆಗೆ ಅಸಮಾಧಾನವ್ಯಕ್ತಪಡಿಸಿದ್ದು ಕಂಡಿತು. ಇದೇನು ಹೀಗೆ ಒಟ್ಟಿಗೆ ಮಲಗುವುದು ಹೇಗೆ? ಗಂಡ ಹೆಂಡತಿಗೆ ಒಂದು ರೂಮು ಮಾಡಬೇಕಿತ್ತು.  ಬೇರೆ ಬೇರೆ ಮಾಡಿ ನೀವೇನು ದುಡ್ಡು ಉಳಿಸುತ್ತಿದ್ದೀರ? ನಾವು ದುಡ್ಡು ಕೊಟ್ಟಿಲ್ಲವೆ? ಎಂದೆಲ್ಲ ಕೂಗಾಡಿಬಿಟ್ಟರಂತೆ. ಅವರ ಮಾತು ಕೇಳಿ ವ್ಯವಸ್ಥಾಪಕರಿಗೆ ಬಲು ಬೇಸರವಾಯಿತು. ಪ್ರತ್ಯೇಕ ರೂಮು ಮಾಡಲು ಅಲ್ಲಿ ಕಾಲಿ ಇರಬೇಕಲ್ಲ. ಅಷ್ಟು ಸಾಮಾನ್ಯ ಜ್ಞಾನವೂ ಇಲ್ಲದ ವ್ಯಕ್ತಿಗಳಿರುತ್ತಾರಲ್ಲ. ಸಿಟ್ಟಿನಿಂದ ಆ ದಂಪತಿಗಳು ಮಾರನೆದಿನ ಎದ್ದು ಕೊಟ್ಟ ದುಡ್ಡಲ್ಲಿ ಮುಕ್ಕಾಲು ದುಡ್ಡನ್ನು ಪಡೆದು ವಾಪಾಸು ಹೋಗಿಯೇಬಿಟ್ಟರಂತೆ. ಅಂಥ ಮಂದಿ ಈ ತರಹ ಪ್ರವಾಸ ಬಂದಿದ್ದಾದರೂ ಏಕೆ? ಪ್ರತ್ಯೇಕವಾಗಿ ಅವರೇ ಹೋಗಬಹುದಿತ್ತಲ್ಲ ಎನಿಸಿತು. ಒಂದು ದಿನ ಇಷ್ಟು ಸಣ್ಣ ವಿಷಯಕ್ಕೂ ಹೊಂದಾಣಿಕೆ ಮಾಡದ ಅವರ ಜೀವನ.. .. ಈ ಚುಕ್ಕಿಗಳ ಮುಂದಿನ ಸರಿಯಾದ ಪದ ನೀವೇ ಊಹಿಸಿಕೊಳ್ಳಿ!  




ಬಾದಾಮಿ ಗುಹಾಲಯ
೨೫-೧೨-೨೦೧೬ರಂದು ಬೆಳಗ್ಗೆ ಗಂಟೆ ೮ಕ್ಕೆ ಹತ್ತಿರದಲ್ಲೆ ಇದ್ದ ಉಡುಪಿ ಹೋಟೆಲಿಗೆ ಹೋದೆವು. ಅಲ್ಲಿ ಬೇ‌ಕಾದ ತಿಂಡಿ (ಸೆಟ್ದೋಸೆ) ತಿಂದು ಹೊರಡುವಾಗ ೯.೩೦. ಮೊದಲಿಗೆ ಬಾದಾಮಿ ಗುಹಾಲಯಕ್ಕೆ ಹೋದೆವು. ಮಾರ್ಗದರ್ಶಕರಾದ ಮಲ್ಲಿಕಾರ್ಜುನ ಕಲ್ಮಠ ಅವರು ಗುಹಾಲಯದ ಇತಿಹಾಸವನ್ನು ತೆರೆದಿಟ್ಟರು. ಕಳೆದ ೪೦ ವರ್ಷಗಳಿಂದ ನಿರಂತರವಾಗಿ ಇಲ್ಲಿ ಬರುವ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರಂತೆ. ಪ್ರವಾಸಿಗರಿಂದ ದಿನಕ್ಕೆ ೧೫೦೦ ರೂ. ಪಡೆಯುತ್ತಾರಂತೆ. ಒಂದು ನಿಮಿಷ ಇಲ್ಲಿ ಕೇಳಿ ಎಂದು ಕಂಚಿನಕಂಠದಲ್ಲಿ ಸುರು ಮಾಡಿದರೆ ನಾವು ಅಲ್ಲೇ ಸ್ತಬ್ಧವಾಗಿ ನಿಂತು ಅವರ ಮಾತು ಕೇಳಲೇಬೇಕು. ಹಾಗಿತ್ತು ಅವರ ಶೈಲಿ.
ಪ್ರವೇಶಶುಲ್ಕ ರೂ. ೧೫. ವಿದೇಶಿಗರಿಗೆ ರೂ.೨೦೦.  ವಿದೇಶದವರಿಗೆ ಇಷ್ಟೊಂದು ದುಡ್ಡು ಪಡೆಯುವುದು ಇದು ಅನ್ಯಾಯ. ತೆರೆಯುವ ವೇಳೆ: ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ.
ನಾವು ಹೆಂಗಸರೇ ಸ್ಟ್ರಾಂಗು ಗುರು ಎಂದು ರುಜುವಾತುಪಡಿಸಲು ಪ್ರತ್ಯೇಕ ಚಿತ್ರ ಕ್ಲಿಕ್ಕಿಸಿಕೊಂಡೆವು.


   ಬಾದಾಮಿಯಲ್ಲಿ ನಾಲ್ಕು ಗುಹಾಂತರ ದೇವಾಲಯಗಳಿವೆ. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ವೈಭವವನ್ನು ಈ ದೇವಾಲಯಗಳಲ್ಲಿ ನೋಡಬಹುದು. ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಗುಡ್ಡದಲ್ಲಿ ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಕ್ರಿ.ಶ. ೬೪೨ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಮುತ್ತಿ ಹಾಳುಗೆಡವಿದರು. ೧೩ ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ವಶಪಡಿಸಿಕೊಂಡ. ಕ್ರಿ.ಶ. ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದುತ್ತಿತ್ತು. ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಸಾಮ್ರಾಟ ಇಮ್ಮಡಿ ಕೀರ್ತಿವರ್ಮನನ್ನು ಕೆಳಗಿಳಿಸಿ ತನ್ನ ರಾಜವಂಶವನ್ನು ಸ್ಥಾಪಿಸಿದ.


೧) ಶೈವ ಗುಹಾಲಯ

ಇಲ್ಲಿ  ನಟರಾಜ, ಮಹಿಷಾಸುರಮರ್ಧಿನಿ, ಅರ್ಧನಾರೀಶ್ವರ, ಹರಿಹರ ವಿಗ್ರಹಗಳನ್ನು ಏಕಶಿಲೆಯಲ್ಲಿ ಸುಂದರವಾಗಿ ಕೆತ್ತಿರುವುದು ಗಮನಸೆಳೆಯುತ್ತವೆ.
) ನಟರಾಜ: ಈ ಮೂರ್ತಿಯಲ್ಲಿ ೧೮ ಕೈಗಳಲ್ಲಿ ನೃತ್ಯದ ವಿವಿಧ ಭಂಗಿಗಳು ಗಮನ ಸೆಳೆಯುತ್ತವೆ. ನಾಟ್ಯಶಾಸ್ತ್ರದಲ್ಲಿ ಬರುವ ವಿವಿಧ ರೀತಿಗಳನ್ನು ಇದೊಂದೇ ವಿಗ್ರಹದಿಂದ ಅರಿಯಬಹುದಾಗಿದೆ. ೮೧ ಭಂಗಿಗಳಿವೆಯಂತೆ. ಶಿವನ ನರ್ತನ ನೋಡಿ ಗಣೇಶ ಕೂಡ ಎದ್ದು ನರ್ತಿಸುವ ಬಗೆ, ಅವರಿಬ್ಬರ ನಾಟ್ಯಕ್ಕೆ ತಂಡು ಎಂಬ ಸಂಗೀತಗಾರ ತ್ರಿಪುಷ್ಕರ ವಾದ್ಯ ನುಡಿಸುವ, ಪಕ್ಕದಲ್ಲಿ ನಂದಿ ತಲೆದೂಗುತ್ತಿರುವ ಈ ಶಿಲಾಮೂರ್ತಿಯ ಸವಿವರಣೆ ಹೇಳುವ ಮಲ್ಲಿಕಾರ್ಜುನ ಅದನ್ನು ಕೇಳುತ್ತ ನಾವು ನೋಡುತ್ತಿದ್ದರೆ ಸಮಯ ಕಳೆಯುವುದೇ ಗೊತ್ತಾಗದು.
ಆ)    ಮಹಿಷಾಸುರ ಮರ್ದಿನಿ: ತ್ರಿಶೂಲದಿಂದ ಮಹಿಷನೆಂಬ ರಕ್ಕಸನನ್ನು ದೇವಿ ಮರ್ದನ ಮಾಡುತ್ತಿರುವ, ದೇವಿಯ ಬಲಭಾಗದಲ್ಲಿ ನವಿಲಿನ ಮೇಲೆ ಕುಳಿತ ಕಾರ್ತಿಕೇಯ, ಎದುರು ಗಣೇಶನಿರುವ ಈ ವಿಗ್ರಹ ಸುಂದರವಾಗಿದೆ.
ಇ)     ಅರ್ಧನಾರೀಶ್ವರ: ಅರ್ಧಭಾಗ ಪಾರ್ವತಿ, ಇನ್ನರ್ಧ ಭಾಗ ಶಿವ ಇರುವ ಈ ವಿಗ್ರಹದಲ್ಲಿ, ಕರ್ಣಕುಂಡಲ, ಬಳೆ, ತೋಳಬಂದಿ, ನೂಪುರ, ಕೈಯಲ್ಲಿ ಕಮಲ ಹಿಡಿದಿರುವ ಭಾಗ ಪಾರ್ವತಿಯದು, ಕಪಾಲ, ಅರ್ಧಚಂದ್ರ, ಹುಲಿಚರ್ಮ, ನಾಗಬಂಧವಿರುವ ಭಾಗ ಶಿವನದು. ಸ್ತ್ರೀಗಿಂತ ಪುರುಷ ಹೆಚ್ಚಲ್ಲ, ಪುರುಷನಿಗಿಂತ ಸ್ತ್ರೀ ಮೇಲಲ್ಲ ಎಂಬುದನ್ನು ನಾವು ಈ ವಿಗ್ರಹದಿಂದ ತಿಳಿಯಬಹುದು.
ಈ)    ಹರಿಹರ:  ಒಂದೇ ವಿಗ್ರಹದಲ್ಲಿ ಎರಡುಭಾಗವಿರುವ ಇದರಲ್ಲಿ ಶಿವ ಅರ್ಧಚಂದ್ರ,ಕಪಾಲ, ಹುಲಿಧರ್ಮ ಧರಿಸಿದ್ದು, ಕಿರೀಟ, ಮಣಿಯಿರುವ ತೋಳ್ಬಂದಿ, ಕೈಯಲ್ಲಿ ಶಂಖ ಇರುವ ಭಾಗ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಲಕ್ಷ್ಮೀ, ಪಾರ್ವತಿ ಮತ್ತು ನಂದಿ ಇರುವ ಈ ಶಿಲ್ಪ ಮನಮೋಹಕವಾಗಿದೆ. ಪಕ್ಕದಲ್ಲಿ ಗಜವೃಷಭ ಶಿಲ್ಪವಿದೆ. ಈ ವಿಗ್ರಹ ಕೆತ್ತಿದ ಶಿಲ್ಪಿ ಮಹಾಪ್ರತಿಭಾವಂತನಿರಬೇಕು. ಅವನ ಜಾಣ್ಮೆ ಮೆಚ್ಚಬೇಕು. ಎರಡು ಪ್ರಾಣಿಗಳು. ಆದರೆ ಅವೆರಡಕ್ಕೂ ಒಂದೇ ಮುಖ. ಆನೆ ಮತ್ತು ನಂದಿ ಇರುವ ಈ ಶಿಲ್ಪ ಬಹಳ ಅಪರೂಪವಾಗಿದೆ.

   ೨)  ವೈಷ್ಣವ ಗುಹಾಲಯ:

ಅ) ತ್ರಿವಿಕ್ರಮ: ಇಲ್ಲಿ ವಿಷ್ಣುವಿನ ದಶಾವತಾರಗಳಲ್ಲಿ ಐದನೆಯ ಅವತಾರವಾದ ವಾಮನಾವತಾರದ ವಿಗ್ರಹವಿದೆ. ವಿಷ್ಣು ವಾಮನಾವತಾರದಲ್ಲಿ ಬಲಿ ಚಕ್ರವರ್ತಿ ಆಸ್ಥಾನಕ್ಕೆ ಬಂದು ಮೂರು ಪಾದಗಳನ್ನು ಇಡಲು ಸ್ಥಳ ಕೇಳಿದಾಗ ಬಲಿಯ ಗುರು ಶುಕ್ರಾಚಾರ್ಯರು ಸ್ಥಳ ಕೊಡಬೇಡ. ಬಾಲಕನ ವೇಶದಲ್ಲಿ ಬಂದವನು ಸಾಕ್ಷಾತ್ ವಿಷ್ಣು. ಎಂದು ಹೇಳಿದರೂ ಬಲಿ ವರ ಕೊಡುತ್ತಾನೆ. ವಿಷ್ಣು ಒಂದು ಪಾದವನ್ನು ಆಕಾಶಕ್ಕೆ, ಇನ್ನೊಂದು ಪಾದ ಭೂಮಿಗೆ, ಮೂರನೇ ಪಾದವನ್ನು ಬಲಿಯ ತಲೆಮೇಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಕೆಳಗಡೆ ಬಲಿಯ ಮಗ ನಮುಚಿ ವಿಷ್ಣುವಿನ ಕಾಲು ಹಿಡಿದಿರುವುದು, ಬಲಿಯ ಹೆಂಡತಿ ವಿಂದ್ಯಾವಳಿ ಮತ್ತು ವಾಮನ ರೂಪದಲ್ಲಿರುವ ವಿಷ್ಣುವಿನ ಈ ವಿಗ್ರಹ ನೋಡುತ್ತಲಿರಬೇಕಾದರೆ ಮಲ್ಲಿಕಾರ್ಜುನ ಅವರ ಕರೆ ‘ಬೇಗ ಬೇಗ ನೋಡಿ ಫೋಟೋ ಹೊಡೆದು ಜರೂರು ಬನ್ನಿ. ಸಮಯ ಹೆಚ್ಚಿಲ್ಲ’. 


  ಆ) ನರವರಾಹ: ವಿಷ್ಣುವಿನ ಮೂರನೇ ಅವತಾರದಲ್ಲಿ ಹಿರಣ್ಯಕಶಿಪುವಿನ ಸಹೋದರ ಹಿರಣ್ಯಾಕ್ಷ ಭೂದೇವಿಯನ್ನು ಅಪಹರಿಸಿ ಪಾತಾಳದಲ್ಲಿ ಇಟ್ಟಿರುತ್ತಾನೆ. ಆಗ ವಿಷ್ಣು ಹಂದಿಯಮುಖ ಹಾಗೂ ಮನುಷ್ಯದೇಹದಿಂದ ತನ್ನ ಕೋರೆಯಿಂದ ಭೂಮಂಡಲ ಕೊರೆದು ಪಾತಾಳಕ್ಕೆ ಹೋಗಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ಕಮಲಪೀಠದ ಮೇಲೆ ರಕ್ಷಣೆ ಮಾಡಿರುವ ಈ ವಿಗ್ರಹ ನೋಡುತ್ತ, ಮಲ್ಲಿಕಾರ್ಜುನ ಅವರ ಸುಂದರ ವಿವರಣೆ ಕೇಳುತ್ತ ನಾವು ಮುಂದಿನ ಗುಹೆಯತ್ತ ದೌಡಾಯಿಸಿದೆವು. ವರಾಹವು ಚಾಲುಕ್ಯರ ರಾಜಲಾಂಛನದ ಭಾಗವಾಗಿತ್ತು. ವಿಜಯನಗರ ಸಾಮ್ರಾಜ್ಯದ ಅರಸರೂ ಕೂಡ ವರಾಹವನ್ನೇ ತಮ್ಮ ಲಾಂಛನವಾಗಿಸಿಕೊಂಡರು.
ಇ) ಬೌದ್ಧ ಗುಹಾಲಯ : ಕ್ರಿ.ಶ.೫೭೮ರಲ್ಲಿ ಮಂಗಳೇಶನು ಈ ಗುಹೆಯನ್ನು ಕೊರೆಸಿ ತನ್ನ ಅಣ್ಣ ಮೊದಲನೆಯ ಕೀರ್ತಿವರ್ಮ ೧೨ ವರ್ಷ ರಾಜ್ಯ ಆಳ್ವಿಕೆ ಮಾಡಿದ ಸವಿನೆನಪಿಗಾಗಿ ಈ ಗುಹೆಯನ್ನು ಅಣ್ಣನಿಗೆ ಅರ್ಪಿಸಿದನು ಎಂದು ಒಳಗಿರುವ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಬೃಹತ್ ಬುದ್ಧನ ಮೂರ್ತಿಯ ಬಳಿ ಭಕ್ತನೊಬ್ಬ ಕೈಮುಗಿದು ಕುಳಿತ ಭಂಗಿಯ ಈ ವಿಗ್ರಹದ ಬಗ್ಗೆ  ಮಲ್ಲಿಕಾರ್ಜುನ ಅವರು ವಿವರಣೆ ನೀಡಿದರು. ವಿಜಯನರಸಿಂಹ ಮೂರ್ತಿ, ಮಹಾವಿಷ್ಣುವಿನ ಮೂರ್ತಿಗಳಿರುವ ಈ ಗುಹೆಯಲ್ಲಿ ವಾಸ್ತುಶಿಲ್ಪ ವೈಭವವನ್ನು ಪ್ರತಿಯೊಂದು ಕಂಬದಲ್ಲೂ ನೋಡಬಹುದು. ಅತ್ಯಂತ ಚಂದದ ಗುಹಾಲಯವಿದು.
ಈ) ಜೈನಗುಹಾಲಯ:   ಇಲ್ಲಿ ಪಾರ್ಶ್ವನಾಥ, ಬಾಹುಬಲಿ, ವರ್ಧಮಾನ ಮಹಾವೀರ ಇವರ ವಿಗ್ರಹಗಳು ಇವೆ.
ಬರೋಬ್ಬರಿ ೧.೩೦ ಗಂಟೆಗಳ ಕಾಲ ನಾವು ಈ ಗುಹೆಗಳನ್ನು ನೋಡಿದೆವು. ನಮ್ಮ ತಂಡದ ಚಿತ್ರ ಕ್ಲಿಕ್ಕಿಸಿಕೊಂಡೆವು.  ಅಲ್ಲಿಂದ ಕೆಳಗೆ ನೀರುತುಂಬಿದ ವಿಶಾಲವಾದ ಅಗಸ್ತ್ಯ ಕೆರೆ ಕಾಣುತ್ತದೆ. ಕೆರೆಯ ಇನ್ನೊಂದು ಭಾಗದಲ್ಲಿ ಜಂಬುಲಿಂಗಗುಡಿ, ಕೆಳಗಿನ ಶಿವಾಲಯ ಇತ್ಯಾದಿ ಮಂದಿರಗಳು ಇವೆ. ನಮಗೆ ಅಲ್ಲಿಗೆ ಹೋಗಲು ಸಮಯಾವಕಾಶವಾಗಲಿಲ್ಲ.
ಬಂಡೆಯ ನಡುವೆ ಒಂದು ಗಿಡ ಬಾಳಲು ಮಣ್ಣನೇ ಬೇಡೆನು ನಾನು ಬಂಡೆಯಾದರೇನು ಶಿವ ಎಂದು ಚಿಗುರೊಡೆದು ಬಂದಿರುವುದು ಸೃಷ್ಟಿಯ ಸೋಜಿಗ


  ಬನಶಂಕರಿ

ಬಾದಾಮಿಯ ಗುಹಾಲಯ ನೋಡಿ ತೃಪ್ತರಾಗಿ ನಾವು ಬನಶಂಕರಿ ದೇವಾಲಯಕ್ಕೆ ಬಂದೆವು. ದೇವಾಲಯದ ಎದುರು ವಿಶಾಲ ಕಲ್ಯಾಣಿ ಇದೆ. ಅದರಲ್ಲಿ ಪಟ್ಟಪಸೆ ಇಲ್ಲ. ಚಾಪೆ ಹಾಕಿ ಮಲಗಬಹುದು. ೨೦೦೭ರಲ್ಲಿ ಬತ್ತಿದ ಕೆರೆ ಮತ್ತೆ ತುಂಬಲೇ ಇಲ್ಲವಂತೆ. ಮಳೆ ಬಹಳ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳಿದರು.
 ದೇವಾಲಯದೊಳಗೆ ಹೋಗಬೇಡಿ. ತುಂಬ ರಶ್. ಹೋದರೆ ನಮಗೆ ಪಟ್ಟದಕಲ್ಲಿಗೆ ಹೋಗಲು ತಡವಾಗುತ್ತದೆ. ಹೊರಗಿನಿಂದ ಸುತ್ತು ಹಾಕಿ ಬನ್ನಿ ಎಂದು ಮಲ್ಲಿಕಾರ್ಜುನ ಎಚ್ಚರಿಸಿದ್ದರು. ಹೊರ‌ಆವರಣದಲ್ಲಿ ಒಂದು ಸುತ್ತು ಬರುವಾಗ ದೇವಾಲಯದೊಳಗಿಂದ ಹೊರಬರುವ ದಾರಿಯಲ್ಲಿ ನಮ್ಮ ಕೆಲವರು ನುಗ್ಗಿದರು. ನನ್ನನ್ನೂ ಒಳಬರುವಂತೆ ಆಹ್ವಾನಿಸಿದರು. ತಪ್ಪು ದಾರಿಯಲ್ಲಿ ನುಗ್ಗಿ ದೇವಿಯ ದರ್ಶನ ಮಾಡಿದೆ. ಬನಶಂಕರಿಯ ದಿವ್ಯ ಮೂರ್ತಿಗೆ ಚೆನ್ನಾಗಿ ಹೂವಿನ ಅಲಂಕಾರ ಮಾಡಿದ್ದರು. ಹದಿನೈದು ನಿಮಿಷ ಸರದಿ ಸಾಲಿನಲ್ಲಿ ನಿಂತಿದ್ದರೆ ದೇವಿ ದರ್ಶನ ಎಲ್ಲರಿಗೂ ಲಭ್ಯವಾಗಿರುತ್ತಿತ್ತು. ಒಳಗೆ ಅಂಥ ಜನರಿರಲಿಲ್ಲ. ಮಾರ್ಗದರ್ಶಕರು ನಮ್ಮ ದಾರಿತಪ್ಪಿಸಿದ್ದರು. ದೇವಾಲಯಕ್ಕೆ ಬಂದು ಒಳಗೆ ಹೋಗದೆ ಇದ್ದದ್ದು ಕೆಲವರಿಗೆ ಬೇಸರ ತರಿಸಿತು.
  ಚಾಲುಕ್ಯರ ಕಾಲದಲ್ಲಿ ರಾಜರು ಯುದ್ಧಕ್ಕೆ ಹೊರಡುವ ಮೊದಲು ಈ ದೇವಿಯನ್ನು ಪೂಜಿಸಿ ತೆರಳುತ್ತಿದ್ದುದಂತೆ. 
  ಅಲ್ಲಿ ಹೊರಗೆ ಒಂದಿಬ್ಬರು ಹೆಂಗಸರು ಬುಟ್ಟಿಯಲ್ಲಿ ಜೋಳದರೊಟ್ಟಿ, ಪಲ್ಯ, ಮೊಸರು ಮಾರುತ್ತಿದ್ದರು. ಊಟಮಾಡಿ ಎಂದು ನಮ್ಮನ್ನು ಕೇಳಿಕೊಳ್ಳುತ್ತಿದ್ದರು. ಕೆಲವರು ಅವರಿಂದ ಮಜ್ಜಿಗೆ ಕೊಂಡು ಕುಡಿದರು.



ಮಹಾಕೂಟ


   ನಾವು ಅಲ್ಲಿಂದ ಹೊರಟು ಮಹಾಕೂಟ ದೇವಾಲಯಕ್ಕೆ ಹೋದೆವು.  ದೇವಾಲಯ ಸುತ್ತಮುತ್ತ ಸಾಕಷ್ಟು ಗಲೀಜು ಮಾಡಿದ್ದರು. ಭಕ್ತರ ಸಾಲು ಇತ್ತು. ಪುಷ್ಕರಣಿಯಲ್ಲಿ ಅಯ್ಯಪ್ಪ ಭಕ್ತರು ಸ್ನಾನಾದಿಗಳಲ್ಲಿ ತೊಡಗಿದ್ದರು. ದೇವಾಲಯದಲ್ಲಿ ತೀರ್ಥ ಕೊಡುವ ಹಸುವಿನಾಕಾರದ ಚೊಂಬು ಬಹಳ ಚೆನ್ನಾಗಿತ್ತು.
  ಕ್ರಿ ಶ ೬೦೨ರಲ್ಲಿ ಚಾಳುಕ್ಯರ ಮಂಗಳೇಶನು ತನ್ನ ಯುದ್ಧ-ವಿಜಯಗಳ ನೆನಪಿಗಾಗಿ ಇಲ್ಲಿ ಅನೇಕ ಶಿವಲಿಂಗಗಳ ದೇವಾಲಯಗಳನ್ನು ಕಟ್ಟಿಸಿದ್ದಾನೆ. ಶಿವಭಕ್ತರಿಗೆ ಇಂದಿಗೂ ಇದೊಂದು ಪುಣ್ಯಸ್ಥಳವಾಗಿದ್ದು ‘ದಕ್ಷಿಣಕಾಶಿ’ ಎಂದೇ ಪ್ರಸಿದ್ಧವಾಗಿದೆ. ಅನೇಕ ಶಿವಾಲಯಗಳ ಸಮುಚ್ಚಯವಾಗಿರುವುದರಿಂದ ಇದಕ್ಕೆ ‘ಮಹಾಕೂಟ’ ಎಂದು ಹೆಸರು ಬಂದಿದೆ. ಇಲ್ಲಿನ ಮುಖ್ಯ ದೇವಾಲಯವೊಂದರ ಶಾಸನದಲ್ಲಿ ‘ಅನ್ಯ ಕ್ಷೇತ್ರಗಳಲ್ಲಿ ಮಾಡಿದ ಪಾಪವು ಪುಣ್ಯ ಕ್ಷೇತ್ರಗಳಲ್ಲಿ ತೊಳೆಯಲ್ಪಡುತ್ತದೆ ಆದರೆ ಪುಣ್ಯಕ್ಷೇತ್ರಗಳಲ್ಲಿ ಪಾಪ ಮಾಡಿದರೆ ಅದು ವಜ್ರಲೇಪದಂತೆ’ ಎಂದು ಎಚ್ಚರಿಕೆ ಶಾಸನ ಬರೆಸಲಾಗಿದೆ. ಆದರೆ ಇದಾವುದರ ಪರಿವೆಯಿಲ್ಲದ ಭಕ್ತರು ಇಲ್ಲಿ ಗಲೀಜು ಮಾಡುತ್ತಲಿರುವುದು ಕಾಣುವಾಗ ಬೇಸರವಾಗುತ್ತದೆ. ಇಲ್ಲಿನ ಕಾಶಿ ತೀರ್ಥ ಹಾಗು ಶಿವಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುವುದೆಂಬ ಮೂಢ ಗಾಢನಂಬಿಕೆಯಿಂದ ಅವುಗಳು ಮಲೀನವಾಗಿವೆ. ವಿರಳ ಹಾಗೂ ಬಹು ಅಪರೂಪದ ಗಿಡಮರಗಳಿಂದ ಕೂಡಿದ ಕಾನನ ಪ್ರದೇಶದಲ್ಲಿ ನಸುಗೆಂಪು ಮರಳು ಕಲ್ಲಿನ ಎರಡು ಬೆಟ್ಟಗಳ ನಡುವೆ ಇರುವುದೇ ಮಹಾಕೂಟವೆಂಬ ಪುಣ್ಯಕ್ಷೇತ್ರ.ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳು ರಮಣೀಯವಾಗಿ ಕಾಣುತ್ತವೆ. ದೇವಾಲಯದ ಸುತ್ತ ಅಗಸ್ತೇಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ.
ದೇವಾಲಯದ ಹೊರ ಪಾರ್ಶ್ವದಲ್ಲಿ ಆಲದ ಮರವಿದೆ. ಅದಕ್ಕೆ ಮುನ್ನೂರು ವರ್ಷಗಳು ದಾಟಿದೆಯಂತೆ.




ಪಟ್ಟದಕಲ್ಲು


ನಾವು ಅಲ್ಲಿಂದ ಹೊರಟು ಪಟ್ಟದಕಲ್ಲು ಐತಿಹಾಸಿಕ ದೇವಾಲಯದ ಬಳಿಗೆ ಬಂದೆವು. ಬಾದಾಮಿಯಿಂದ ಪಟ್ಟದಕಲ್ಲಿಗೆ ಸುಮಾರು ೨೩ ಕಿಮೀ. ಬಾಗಲಕೋಟೆಜಿಲ್ಲೆಯ ಬಾದಾಮಿ ತಾಲೂಕಿನ ಮಲಪ್ರಭನದಿಯ ಬಳಿ ಪಟ್ಟದಕಲ್ಲು ಇದೆ. ಆಗ ಗಂಟೆ ೧.೩೦ ದಾಟಿತ್ತು. ಊಟ ಮಾಡಿಯೇ ಒಳಗೆ ಹೋಗುವ ಎಂದು ತೀರ್ಮಾನವಾಯಿತು. ಅಲ್ಲಿ ಹೊಟೇಲ್ ಚಾಲುಕ್ಯದಲ್ಲಿ ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಎಣ್ಣೆಗಾಯಿ, ಕಾಳುಪಲ್ಯ, ಅನ್ನ, ಸಾರು, ಹಪ್ಪಳ, ಸಾಂಬಾರು ಬಹಳ ರುಚಿಯಾಗಿತ್ತು. ಊಟವಾದ ಮೇಲೆ ಒಬ್ಬರು ‘ನಿಮಗೆ ಗೊತ್ತಾಯಿತ? ಇದು ಮುಸ್ಲಿಮರ ಹೊಟೇಲು’ ಎಂದರು. ಹೌದು ಗೊತ್ತಾಗಿದೆ. ಶುಚಿರುಚಿಯಾಗಿ ಶಾಖಾಹಾರಿ ಅಡುಗೆಯನ್ನು ಯಾರೇ ಮಾಡಿ ಬಡಿಸಿದರೂ ಅಲ್ಲಿ ಊಟ ಮಾಡುತ್ತೇನೆ. ನನಗೇನೂ ಅನಿಸುವುದಿಲ್ಲ ಎಂದೆ. ಅಲ್ಲಿ ರೊಟ್ಟಿ ಮಾಡುತ್ತಿದ್ದ ಮಹಿಳೆ ಜಲೀಲ ಎಂದೇನೋ ಹೆಸರು ಹೇಳಿದ್ದರು. ಸೌದೆ ಒಲೆಯಲ್ಲಿ ನಮ್ಮ ಎದುರೇ ರೊಟ್ಟಿ ಮಾಡಿ ಬಡಿಸಿದರು. ಸಾವಧಾನದಿಂದ ನಮ್ಮ ತಂಡಕ್ಕೆ ಊಟ ಬಡಿಸಿದ್ದರು.  ಹೊಟೇಲ್ ಎದುರು ಹೋಟೇಲ್ ಚ್ಯಾಲುಕ್ಯ ಎಂದೂ ಬಲಗಡೆಗೆ ಇಸ್ಲಾಂ ಸಾಬಕಿ ದುವಾ, ಎಡಗಡೆಗೆ ಶ್ರೀ ಬಸವೇಶ್ವರ ಪ್ರಸನ್ನ ಎಂದೂ ಹಿಂದೂ ಮುಸ್ಲಿಮ್ ಶೈಲಿಯಲ್ಲಿ ಬರೆಸಿದ್ದ ಫಲಕ ಗಮನ ಸೆಳೆಯಿತು.    
  ಊಟವಾಗಿ ನಾವು ಪಟ್ಟದಕಲ್ಲು ನೋಡಲು ಒಳಗೆ ಹೋದೆವು. ಪ್ರವೇಶದರ ಇದೆ. ವಿಶಾಲವಾದ ಹುಲ್ಲುಹಾಸಿನ ಮಧ್ಯೆ ದೇವಾಲಯಗಳ ಸಂಕೀರ್ಣ ದೂರದಿಂದಲೇ ಬಲು ಸುಂದರವಾಗಿ ಕಂಗೊಳಿಸುತ್ತವೆ.
ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ವೈವಿಧ್ಯಗಳನ್ನು  ಪಟ್ಟದಕಲ್ಲು ದೇವಾಲಯಗಳಲ್ಲಿ ನೋಡಬಹುದು. ಇಲ್ಲಿಯ ಶಿಲ್ಪಕಲೆಯು ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿಯಲ್ಲಿವೆ.


ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವ೦ಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವ೦ಶದ ಅರಸರು ಏಳನೇ ಮತ್ತು ಎ೦ಟನೇ ಶತಮಾನಗಳಲ್ಲಿ ಇಲ್ಲಿಯ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಅವುಗಳು, ಕಾಡಸಿದ್ದೇಶ್ವರ, ಜಂಬುಲಿಂಗ ದೇವಾಲಯ, ಗಳಗನಾಥ ದೇವಾಲಯ, ಸಂಗಮೇಶ್ವರ ದೇವಾಲಯ, ವಿರೂಪಾಕ್ಷ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಪಾಪನಾಥ ದೇವಾಲಯ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ.  ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.
   ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು ೨ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್‌ನಾಥರ್ ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿದೆಯಂತೆ.
     ವಿರೂಪಾಕ್ಷ ದೇವಾಲಯ ಕ್ರಿ ಶ ೭೪೦ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ. ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು.
    ಮಲ್ಲಿಕಾರ್ಜುನ ದೇವಾಲಯವನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ ೭೪೩ರಲ್ಲಿ ನಿರ್ಮಿಸಿದಳು. ಇದು ಕೂಡ ವಾಸ್ತು ವಿನ್ಯಾಸದಲ್ಲಿ ವಿರೂಪಾಕ್ಷ ದೇವಾಲಯವನ್ನು ಹೋಲುತ್ತದೆ.
 ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆರ್ಷಕವಾಗಿವೆ.
 ಈ ಸ್ಥಳವನ್ನು ಯುನೆಸ್ಕೋ ೧೯೮೭ ರಲ್ಲಿ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
   ಪಟ್ಟದಕಲ್ಲು ಚಾಲುಕ್ಯರಿಗೆ ಅತ್ಯಂತ ಪ್ರಮುಖ ಸ್ಥಳ. ಚಾಲುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಮಾಡಿದಮೇಲೆಯೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ ‘ಪಟ್ಟದಕಲ್ಲು’ ಎಂಬ ಹೆಸರು ಬಂದಿದೆ.
  ನಾವು ಎಲ್ಲಾ ದೇವಾಲಯದೊಳಗೆ ಹೋಗಲಿಲ್ಲ. ಮೂರು ದೇವಾಲಯದೊಳಗೆ ಹೋಗಿ ಬಾಕಿದ್ದದ್ದನ್ನು ಹೊರಗಿನಿಂದಲೇ ಸುತ್ತು ಹಾಕಿ ಸಂಜೆ ನಾಲ್ಕು ಗಂಟೆಗೆ ಅಲ್ಲಿಂದ ನಿರ್ಗಮಿಸಿದೆವು. 






ಐಹೊಳೆ

ಪಟ್ಟದಕಲ್ಲಿನಿಂದ ಐಹೊಳೆಗೆ ೧೩ಕಿಮೀ. ನಾವು ಐಹೊಳೆಯಲ್ಲಿ ಎಲ್ಲಾ ದೇವಾಲಯಗಳನ್ನು ನೋಡಲಿಲ್ಲ. ಸುಮಾರು ೨೯ ದೇವಾಲಯಗಳು, ಸುಮಾರು ಬಸದಿಗಳು ಇವೆಯಂತೆ.
  ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿ ಐಹೊಳೆಯಾಗಿತ್ತು. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಶಾಸನಗಳಲ್ಲಿ  ಐಹೊಳೆಯ ಹೆಸರು ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿ‌ ಐಹೊಳೆಯಾಯಿತು. ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು, ಮುಂದೆ ಇದು ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರು ಕೆಂಪಾಗಿತ್ತಂತೆ. ಇದನ್ನು ಕಂಡ ಊರಿನ ಮಹಿಳೆಯರು, ‘ಅಯ್ಯಯ್ಯೋ ಹೊಳಿ’ ಎಂದು ಉದ್ಗರಿಸಿದ್ದೇ ಮುಂದೆ ಐಹೊಳೆಯಾಯಿತೆಂಬ ಪೌರಾಣಿಕ ಕಥೆಗಳು ಈ ಊರಿನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿವೆ.
  ದುರ್ಗದ ದೇವಾಲಯ: ಈ ದೇವಾಲಯ ಗಜಪೃಷ್ಠಾಕಾರವಾಗಿದ್ದು ಬಲು ಸುಂದರವಾಗಿದೆ. ಇದು ಮೂಲತ: ಸೂರ್ಯದೇವಾಲಯವಾಗಿದ್ದು, ಕೋಟೆ ಅಂದರೆ ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ. ಶ. ೭೪೨ರಲ್ಲಿ ೨ನೇ ವಿಕ್ರಮಾದಿತ್ಯನ ಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರ ವಿಶೇಷತೆ. ಇದರ ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯ ಸಂಸತ್ ಭವನವನ್ನು ನೆನಪಿಸುತ್ತದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.
 ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.
  ರಾಮಲಿಂಗೇಶ್ವರ ದೇವಾಲಯ ಮಲಪ್ರಭಾ ನದಿಯ ಬಳಿ ಇದೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ.
ಐಹೊಳೆಯ ಇತಿಹಾಸವನ್ನು ಮಲ್ಲಿಕಾರ್ಜುನ ವಿವರಿಸುತ್ತಿರಬೇಕಾದರೆ ಅಂದಕಾಲತ್ತಿನಲ್ಲಿ ನಮ್ಮ ಇತಿಹಾಸ ಉಪನ್ಯಾಸಕರು ಪಾಟ ಮಾಡಿದ್ದು ಸ್ವಲ್ಪ ಸ್ವಲ್ಪ ನೆನಪಿಗೆ ಬರುವಂತಾಗಿತ್ತು.
  ವಸ್ತು ಸಂಗ್ರಹಾಲಯ: ಇಲ್ಲಿ ಬಾದಾಮಿ ವಾಲುಕ್ಯರ ಕಾಲದ ವಿಗ್ರಹಗಳು ಸಾಕಷ್ಟಿವೆ. ಪ್ರವೇಶ ದರ ರೂ.೫ .   ೧೫ವರ್ಷಗಳೊಳಗಿನ ಮಕ್ಕಳಿಗೆ ಉಚಿತ ಪ್ರವೇಶ. ಸಂಜೆ ೫ ಗಂಟೆಗೆ ಬಾಗಿಲು ಹಾಕುತ್ತಾರೆ.
 ನಾವು ದೇವಾಲಯ ಸಂಕೀರ್ಣದಲ್ಲಿ ಸುತ್ತಿ ಸುಳಿದು, ಮಲ್ಲಿಕಾರ್ಜುನ ಅವರ ವಿವರಣೆ ಕೇಳಿ ಅಲ್ಲಿಂದ ಹೊರಗೆ ಬಂದು ಚಹಾ ಕುಡಿದು ಮಲ್ಲಿಕಾರ್ಜುನ ಅವರಿಗೆ ವಿದಾಯ ಹೇಳಿ ಹೊರಡುವಾಗ ಗಂಟೆ ಸಂಜೆ ಆರು ದಾಟಿತ್ತು.









ಮಲ್ಲಿಕಾರ್ಜುನರಿಗೆ ವಿದಾಯ, ಕೆಂಪುಕೋಟು ಹಾಕಿದವರು ನಮ್ಮ ತಂಡದ ರೂವಾರಿ ಶಿವಶಂಕರ

ಮುಂದುವರಿಯುವುದು