ಶನಿವಾರ, ಮಾರ್ಚ್ 21, 2020

ಮೇಘಾಲಯದ ಅಲೆಯಲಿ ತೇಲುತ ದೂರ ದೂರ ಭಾಗ ೩

ಮೇಘಾಲಯದ ಚಳಿಯಲಿ ಚಾರಣ ಸಾಹಸ ಭಾಗ ೨

 ಡೌಕಿ ಕಡೆಗೆ ಪಯಣ

  ಯೂಥ್ ಹಾಸ್ಟೆಲಿನ ವತಿಯಿಂದ ನಿಗದಿಯಾದ ಚಾರಣ ಕಾರ್ಯಕ್ರಮ  ಇಲ್ಲಿಗೆ ಮುಗಿಯಿತು. ಒಂದು ದಿನ ಅಲ್ಲಿ ಉಳಿಯಲು ಹಾಗೂ ನಾವು ಸ್ವತಂತ್ರವಾಗಿ ಊರು ತಿರುಗಲು ಅವಕಾಶ ಕೊಟ್ಟಿದ್ದರು. 
   ೧೩.೨.೨೦೨೦ರಂದು ನಾವು ಬೆಳಗ್ಗೆ ತಿಂಡಿ ಇಡ್ಲಿ ಸಾಂಬಾರು ತಿಂದು ಬುತ್ತಿಗೆ ಜೀರಾ ರೈಸ್, ಆಲೂ ಸಾಂಬಾರ್ ಹಾಕಿಕೊಂಡು ತಯಾರಾದೆವು. ೮.೩೦ಗೆ ಟಾಟಾ ಸುಮೋ ಬಂತು. ಹಿಂದಿನ ದಿನವೇ ಚಾಲಕ ಡೇವಿಡ್ ನ ಟಾಟಾ ಸುಮೊ  ರೂ. ೪೦೦೦ಕ್ಕೆ ಒಂದು ದಿನದ ಸುತ್ತಾಟಕ್ಕೆ ಅದರಲ್ಲೂ ಮುಖ್ಯವಾಗಿ ಭಾರತ- ಬಾಂಗ್ಲಾದೇಶದ ಗಡಿಯಲ್ಲಿರುವ ಡೌಕಿಗೆ ಪ್ರಯಾಣವೆಂದು ನಿಗದಿಗೊಳಿಸಲಾಗಿತ್ತು. ನಾವು ಆರು ಮಂದಿ ಹತ್ತಿದೆವು. ಹೋಗುವ ದಾರಿಯಲ್ಲೆ ಎಲಿಫೆಂಟಾ ಜಲಪಾತ ಸಿಗುತ್ತದೆ. ಅಲ್ಲಿಗೆ ಕರೆದುಕೊಂಡು ಹೋಗು ಎಂದಾಗ ಡೇವಿಡ್ ‘ಅಲ್ಲಿ ನೀರಿಲ್ಲ, ಹೋದರೆ ಡೌಕಿಗೆ ತಡವಾಗುತ್ತದೆ ದೋಣಿಯಾನ ಸಿಗುವುದಿಲ್ಲ’ ಎಂದು ಸಬೂಬು ಹೇಳಿದ. ದಾರಿಯಲ್ಲಿ ಫೈನ್ ಮರದ ಕಾಡಿಗೆ ಕರೆದುಕೊಂಡು ಹೋದ. ಅಲ್ಲಿ ಬೃಹತ್ ಗಾತ್ರದ ಫೈನ್ ಮರ ನೋಡಿ ಪೋಟೋ ಕ್ಲಿಕ್ಕಿಸಿಕೊಂಡೆವು.







 ದಾರಿಯುದ್ದಕ್ಕೂ ಮನೆ ಎದುರು ಪೊರಕೆ  ಕಡ್ದಿಗಳ ಒಣಗಿಸುವಿಕೆ ಹಾಗೂ ಅದರ ಗಿಡಗಳು ಕಂಡುಬಂದುವು. ಜನ ಪೊರಕೆ ಕಡ್ಡಿಗಳನ್ನು ಹೊತ್ತು ಸಾಗಿಸುತ್ತಿದ್ದದ್ದು ಕಂಡುಬಂತು. 





ಡೇವಿಡ್ ಮಾತುಗಾರ. ಅವನಿಗೆ ಎರಡು ಹೆಣ್ಣುಮಕ್ಕಳು. ಹಿರಿಯಾಕೆ ಡಿಗ್ರಿ ಓದುತ್ತಿರುವಳು ಹಾಗೂ ಮುಂದೆ ಪೊಲೀಸ್ ಇಲಾಖೆ ಸೇರುವ ಗುರಿಯಂತೆ. ಕಿರಿಯವಳು ಬೆಂಗಳೂರಿನಲ್ಲಿ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವಳು. ಅವಳಿಗೆ ಫೋನ್ ಮಾಡಿ ನಮಗೂ ಮಾತಾಡಲು ಕೊಟ್ಟ! ಮೇಘಾಲಯದ ಖಾಸಿ ಜನಾಂಗದಲ್ಲಿ ಹೆಣ್ಣುಮಕ್ಕಳಿಗೆ ಪರಮ ಅಧಿಕಾರ. ಹೆಣ್ಣುಮಕ್ಕಳಿಗೆ ಆಸ್ತಿಯ ಸಿಂಹಪಾಲು. ಅದರಲ್ಲೂ ಇಬ್ಬರು ಹೆಣ್ಣು ಮಕ್ಕಳಿದ್ದರೆ ಕಿರಿಮಗಳಿಗೆ ಮುಕ್ಕಾಲುಭಾಗ ಆಸ್ತಿಯಂತೆ. ಮೇಘಾಲಯದಲ್ಲಿ ಎರಡನೇ ಹೆಣ್ಣುಮಗುವಾಗಿ ಜನಿಸುವುದೇ ಒಳ್ಳೆಯದು! ಹಾಗೆಯೇ ಕಿರಿಯಾಕೆಗೆ ಜವಾಬ್ದಾರಿ ಕೂಡ ಹೆಚ್ಚಂತೆ.   ಇದು ಡೇವಿಡ್ ಹೇಳಿದ ಮಾಹಿತಿ.
   


   ದಾರಿಯಲ್ಲಿ ಸಾಗುತ್ತಿದ್ಡಾಗ ಬೆಟ್ಟ ಗುಡ್ಡಗಳಲ್ಲಿ ಗಣಿಗಾರಿಕೆ ನಡೆಸಿರುವುದು ಕಂಡುಬಂತು. ಹೀಗೆಯೇ ಮುಂದುವರಿದರೆ ಮೇಘಾಲಯದ ಬೆಟ್ಟಗಳು ಕರಗಿ ಕಣ್ಮರೆಯಾಗುವ ದಿನ ದೂರವಿಲ್ಲ ಎಂದೆನಿಸಿತು. ಸ್ವಲ್ಪ ದೂರ ಹೋಗಿ ವ್ಯೂ ಪಾಯಿಂಟ್ ಜಾಗದಲ್ಲಿ ಡೇವಿಡ್ ಕಾರು ನಿಲ್ಲಿಸಿ ತಿಂಡಿಗೆ ಹೋದ. ನಮ್ಮನ್ನು ವ್ಯೂ ಪಾಯಿಂಟ್ ಗುಡ್ಡೆಗೆ ಹತ್ತಿ ಹೋಗಿ ನೋಡಿ ಎಂದ. ಒಬ್ಬರಿಗೆ ರೂ. ೧೦ ಗುಡ್ಡೆ ಹತ್ತಿ ನೋಡಲು! ನಾವು ಗುಡ್ಡೆ ಹತ್ತಿ ನೋಡಿದೆವು. ಶಿಲ್ಲಾಂಗ್ ಸುತ್ತಣ ಪರ್ವತಶ್ರೇಣಿಗಳು ಕಣಿವೆಗಳ ನೋಟ  ಅಲ್ಲಿಂದ ಕಾಣುತ್ತದೆ.  ನೋಡಿ ಕೆಳಗೆ ಬಂದೆವು. ಅಲ್ಲಿ ಒಬ್ಬಾಕೆ ಮೇಘಾಲಯದ ಸಾಂಪ್ರದಾಯಿಕ ಉಡುಗೆಗಳನ್ನು ಇಟ್ಟು ಕೂತಿರುವುದು ಕಂಡಿತು. ಪ್ರವಾಸಿಗರು ಅವನ್ನು ಧರಿಸಿ ಫೋಟೋ ತೆಗೆಸಿಕೊಳ್ಳಲು ಒಬ್ಬರಿಗೆ ರೂ ೧೦೦ ದರವಂತೆ.









     
ಲಾರಿಗಳ ಮೆರವಣಿಗೆ

   ಶಿಲ್ಲಾಂಗಿನಿಂದ ಡೌಕಿಗೆ ಸುಮಾರು ೯೦ಕಿಮೀ. ದಾರಿ ಸುಮಾರಾಗಿದೆ. ದಾರಿಯಲ್ಲಿ ಕಿತ್ತಳೆ ರಾಶಿ ಕಂಡಿತು. ಅಶೋಕಭಾವ ಕಿತ್ತಳೆ ಕೊಂಡರು. ಕಿತ್ತಳೆಗೆ ಅಲ್ಲಿ ಖಾಸಿ ಭಾಷೆಯಲ್ಲಿ ಕಮಲ ಎಂದು ಹೇಳುವುದಂತೆ.     


     ಡೌಕಿ ತಲಪುವ  ಮೊದಲು ದಾರಿಯಲ್ಲಿ ಕಿಲೋಮೀಟರುಗಳುದ್ದಕ್ಕೂ ಸಾಲು ಸಾಲು ನೂರಾರು ಲಾರಿಗಳು ರಸ್ತೆಬದಿ ಕಲ್ಲುತುಂಬಿಕೊಂಡು ನಿಂತಿರುವುದು ಕಂಡು ಕುತೂಹಲವಾಗಿ ಡೇವಿಡನನ್ನು ಕೇಳಿದೆವು. ಬಾಂಗ್ಲಾದೇಶಕ್ಕೆ ಕಲ್ಲು ಒಯ್ಯುವ ಲಾರಿಗಳಂತೆ. ಅವುಗಳಿಗೆ ರಾತ್ರೆ ಮಾತ್ರ ಹೋಗಲು ಪರವಾನಿಗೆ ನೀಡುತ್ತಾರಂತೆ. ದಿನದಲ್ಲಿ ೫೦೦ ಲಾರಿಗಳು ಗಡಿಡಾಟುತ್ತವಂತೆ.  ರಾತ್ರೆ ಆಗುವುದನ್ನೆ ಕಾಯುತ್ತ ಸಾಲಾಗಿ ಲಾರಿಗಳು ನಿಂತಿರುವುದು. ಅಬ್ಬ ಇಷ್ಟು ಕಲ್ಲುಗಳನ್ನು ಬಾಂಗ್ಲಾದವರು ಏನು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿತು. ಸರಕಾರವೇ ಗಣಿಗಾರಿಕೆಗೆ ಗುತ್ತಿಗೆ ಕೊಟ್ಟು ಕಲ್ಲು ರವಾನೆ ಮಾಡುತ್ತಿರುವುದಂತೆ. ಡೌಕಿಯಿಂದ ವಾಪಾಸು ಬರುವಾಗ ಈ ಲಾರಿಗಳ ವೀಡಿಯೋ ಮಾಡಿದೆ.


  ಉಂಗಟ್ ನದಿಯಲ್ಲಿ ದೋಣಿಯಾನ 

   ಡೌಕಿಯಲ್ಲಿ ಕಾರು ನಿಲ್ಲಿಸಿದ ಡೇವಿಡ್ ಇಲ್ಲೇ  ಕೆಳಗೆ ಹೋಗಿ ಎಂದು ತೋರಿಸಿದ. ರಸ್ತೆ ಬದಿಯಿಂದ ಬಗ್ಗಿ ನೋಡಿದರೆ ಉಂಗಟ್ ನದಿ,  ಅಲ್ಲಿ ಹತ್ತಾರು ದೋಣಿಗಳು ನಿಂತಿರುವುದು ಕಂಡಿತು. ಅಲ್ಲೇ ಕೆಳಗೆ ಇಳಿಯಲು ೧೦-೫೦ ಏಣಿ ಮೆಟ್ಟಲುಗಳಿದ್ದುವು. ಅಲ್ಲಿ ಇಳಿದು ದೋಣಿ ಮಾತಾಡಿದೆವು. ಒಂದು ದೋಣಿಯಲ್ಲಿ ೫ ಮಂದಿಗೆ ಮಾತ್ರ ಅವಕಾಶ. ಅಂಬಿಗ ಸೇರಿದರೆ ೬. ನಾವು ೬ ಮಂದಿಯಾದ ಕಾರಣ ಎರಡು ದೋಣಿ ಮಾಡಬೇಕಾಯಿತು. ಗಣಪತಿ ಭಟ್ ಸಾವಿತ್ರಿ ಒಂದು ದೋಣಿಯಲ್ಲಿ, ನಾವು ನಾಲ್ವರು ಇನ್ನೊಂದು ದೋಣಿ ಹತ್ತಿದೆವು. ಒಂದು ದೋಣಿಗೆ ೧೨೦೦. ಒಂದೂಕಾಲು ಗಂಟೆ ದೋಣಿಯಲ್ಲಿ ಉಂಗುಟ್ ನದಿ ಸುತ್ತಾಕಿ, ದ್ವೀಪದಲ್ಲಿಳಿಸಿ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಲು ಅವಕಾಶ, ಮತ್ತೆ ಮರಳಿ ಬಾಂಗ್ಲಾದ ಗಡಿ ಸಮೀಪದವರೆಗೆ ಹೋಗಿ ಹತ್ತಿದ ಸ್ಥಳಕ್ಕೇ ವಾಪಾಸು ಕರೆತರುತ್ತದೆ. ದ್ವೀಪದಲ್ಲಿ ಇಳಿಯುವುದು ಬೇಡವೆಂದಾದರೆ ಸಾವಿರ ರೂಪಾಯಿ ಮಾತ್ರ. (ನನ್ನ ತಂಗಿ ಎಲ್ಲ ಟೂರಿಸ್ಟ್ ಪ್ಯಾಕೇಜಿನಲ್ಲಿ ಇಲ್ಲಿಗೆ ಹೋಗಿದ್ದಾಗ ೫ ಮಂದಿಗೆ ಒಂದು ದೋಣಿ ಯಾನಕ್ಕೆ ರೂ. ೭೦೦ ಪಡೆದಿದ್ದರಂತೆ) 

 ದೋಣಿಯಲ್ಲಿ ಸಾಗುತ್ತ ಇದ್ದಂತೆ ನದಿ ನೀರು ಬಲು ಸ್ವಚ್ಛ. ಕೆಳಗೆ ನೀರಲ್ಲಿ ಕಲ್ಲುಗಳು ಪಾರದರ್ಶಕವಾಗಿ ಕಂಡಿತು. ಒಂದು ಗಂಟೆಯ ದೋಣಿಪಯಣ ಖುಷಿಯೆನಿಸುತ್ತದೆ. ದೋಣಿಯಾನದಲ್ಲಿ ನದಿ ಬದಿಯ ಸಸ್ಯಗಳು, ಬಂಡೆಗಳು, ಒಂದು ಕಡೆ ಬಂಡೆಗಳಲ್ಲಿ ಲಿಂಗಾಕೃತಿಯನ್ನು ಕೆತ್ತಿರುವ ದೃಶ್ಯ, ಮೀನು ಹಿಡಿಯಲು ಗಾಳ ಹಾಕಿ ಬಂಡೆಗಳ ಮೇಲೆ  ಕೂತಿರುವ ಮನುಜ, ದೋಣಿಯಲ್ಲಿ ಸಾಗಿ ಮೀನಿಗೆ ಗಾಳ ಹಾಕುವವರು, ಬಟ್ಟೆ ಒಗೆಯುತ್ತಿರುವವರು, ಸ್ನಾನ ಮಾಡುತ್ತಿರುವವರು, ಮೇಲೆ  ಬ್ರಿಟೀಷರ ಕಾಲದ ಸೇತುವೆ ಎಲ್ಲ ನೋಡುತ್ತ ಸಾಗಿದೆವು.  ಆದರೆ ಈ ಪಯಣಕ್ಕೆ ದರ ದುಬಾರಿಯೆನಿಸಿತು. ಇದರಲ್ಲಿ ದೋಣಿ ನಡೆಸುವಾತನಿಗೆ ಒಂದು ಪಯಣಕ್ಕೆ ಕೇವಲ ರೂ. ೨೦೦ ಅಂತೆ ಕೊಡುವುದು. ಉಳಿದ ಒಂದು ಸಾವಿರ ರೂ. ಯಾರ್ಯಾರಿಗೆ ಸಲ್ಲುತ್ತದೋ ಗೊತ್ತಿಲ್ಲ. 






















  ಕಾಲು ಗಂಟೆಯಲ್ಲಿ ಅನತಿ ದೂರದ ದ್ವೀಪದಲ್ಲಿ ದೋಣಿ ಇಳಿಸಿದಾಗ ಎದುರು ಕಲ್ಲುಬಂಡೆಗಳ ಅಗಾಧ ರಾಶಿ ಕಣ್ಣೆದುರು ಕಂಡಿತು. ದೃಷ್ಟಿ ಹಾಯಿಸಿದಷ್ಟು ದೂರಕ್ಕೂ ಕಲ್ಲುಗಳ ರಾಶಿ. ನೋಡಲು ಆಕರ್ಷಕವಾಗಿತ್ತು. ಕಲ್ಲುಗಳು ವಿವಿಧ ಬಣ್ಣ ಆಕಾರಗಳಲ್ಲಿದ್ದುವು.  ಬಂಡೆಗಳ ಮೇಲೆ ದೂರದಲ್ಲಿ ಬಿದಿರ ಚಾಪೆ ಕಟ್ಟಿ ಮೂತ್ರ ಶಂಕೆಗೆ ವ್ಯವಸ್ಥೆ ಮಾಡಿರುವುದು ಮೆಚ್ಚತಕ್ಕ ವಿಷಯ. 




ಕಲ್ಲುಗಳೆಡೆಯಲ್ಲಿ ಸ್ವಲ್ಪ ದೂರ ನಡೆದೆವು. ಮತ್ತೆ ಹಿಂದೆ ಬಂದು ನದಿಗೆ ಕಾಲು ಇಳಿಬಿಟ್ಟು ಕೂತೆವು. ಕಾಲುಗಂಟೆ ಅಲ್ಲಿ ಕಳೆದೆವು. 







ಅಲ್ಲಿಂದ ದೋಣಿ ಹತ್ತಿ ವಾಪಾಸು ಬಾಂಗ್ಲಾಗಡಿವರೆಗೂ ಹೋದೆವು. ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ನದಿಗಿಳಿದು ಕೆಲವು ಮಂದಿ ಚಿಪ್ಸ್ ಇತ್ಯಾದಿ ವ್ಯಾಪಾರದಲ್ಲಿ ತೊಡಗಿದ್ದದ್ದು ಕಂಡುಬಂತು. ಬಾಂಗ್ಲಾಗಡಿ ಎಂದು ಗುರುತಿಸುವಲ್ಲಿ  ಒಂದು ದೊಡ್ಡ ಬಂಡೆ ಇದೆ.

  








ತಮಾಬಿಲ್ (Tamabil Dawki InDo bangla border)

  ದೋಣಿ ಇಳಿದು ನಾವು ಮೆಲೆ ಹತ್ತಿ ಕಾರು ಬಳಿ ಹೋದಾಗ, ರಸ್ತೆ ಸೇತುವೆ ನಡೆದೇ ದಾಟಿ ಚೆನ್ನಾಗಿರುತ್ತದೆ. ಕಾರು ನಾನು ಅಲ್ಲಿಗೆ ತರುವೆ ಎಂದ ಡೇವಿಡ್. ಹಾಗೆ ನಡೆದೆವು. ಸೇತುವೆ ಸುರುವಾಗುವಲ್ಲಿ ಒಬ್ಬ ಪೊಲೀಸ್. ಕೊನೆಯಾಗುವಲ್ಲಿ ಒಬ್ಬ ಪೊಲೀಸ್ ಕಾವಲು ನಿಂತಿರುವುದು ಕಂಡಿತು. ಸೇತುವೆ ಮೆಲೆ ಫೋಟೋ ತೆಗೆಯಬಾರದು. ಡೌಕಿಯಿಂದ ೮ಕಿಮೀ ಮುಂದೆ ಹೋದರೆ ತಮಾಬಿಲ್ ಎಂಬ ಊರು. ಅಲ್ಲಿಗೆ ಹೋದೆವು. ರಸ್ತೆ ಹಾಳಾಗಿದೆ. ಲಾರಿಗಳ ಓಡಾಟ ಬಲು ಜೋರಾಗಿತ್ತು. ಬಾಂಗ್ಲಾದೇಶಕ್ಕೆ ಕಲ್ಲು ರವಾನಿಸಿ ಖಾಲಿ ಲಾರಿಗಳು ಗಡಿ ತನಿಖಾಠಾಣೆಯೆದುರು ಸಾಲಾಗಿ ಬರುತ್ತಲಿತ್ತು. ಅಲ್ಲಿ ಭಾರತ  ಬಾಂಗ್ಲಾ ಗಡಿಯಲ್ಲಿ ಭಾರತದ ರಾಷ್ಟ್ರಧ್ವಜವಿದೆ. ೧೭ ಆಗಸ್ಟ್ ೧೯೪೭ರಲ್ಲಿ ಅದನ್ನು ಸ್ಥಾಪಿಸಲಾಯಿತು. ಅಲ್ಲಿ ಪಟ ಕ್ಲಿಕ್ಕಿಸಿಕೊಂಡೆವು. ತನಿಖಾಠಾಣೆಯಲ್ಲಿ ನಮ್ಮ ಆಧಾರ ಕಾರ್ಡ್ ಪರಿಶೀಲಿಸಿದರು. ನಾವೇನು ಗಡಿ ದಾಟಿ ಮೂಂದೆ ಹೋಗುವುದಿಲ್ಲ. ಮತ್ಯಾಕೋ ಈ ತಪಾಸಣೆ ಅರ್ಥವಾಗುವುದಿಲ್ಲ. ಅಲ್ಲಿಂದ ಮುಂದೆ ಬಾಂಗ್ಲಾದೇಶಕ್ಕೆ ತೆರಳಬಹುದು. ತನಿಖಾಠಾಣೆಯಲ್ಲಿ  ಕೆಲಸ ಮಾಡುತ್ತಿರುವವರನ್ನು ನೋಡಿ ಅವರ ಆರೋಗ್ಯದ ಬಗ್ಗೆ ಕಾಳಜಿ ಚಿಂತೆಯಾಯಿತು. ಲಾರಿಗಳ ಧೂಳು ಕುಡಿದೇ ಅವರು ಕೆಲಸ ಮಾಡಬೇಕು.


ಬಾಂಗ್ಲಾದೇಶ ಮತ್ತು ಭಾರತವು ೪೧೫೬ಕಿಲೋಮೀಟರು ಉದ್ದದ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಇದು ವಿಶ್ವದ ೫ನೇ ಅತಿ ಉದ್ದದ ಭೂ ಗಡಿಯಾಗಿದೆ. ಗಡಿಯನ್ನು ಸರಳಗೊಳಿಸುವ ಭೂ ಗಡಿ ಒಪ್ಪಂದವನ್ನು ಭಾರತ ಮತ್ತು ಬಾಂಗ್ಲಾದೇಶ ಮೇ ೭ ೨೦೧೫ರಂದು ಅಂಗೀಕರಿಸಿತು.





   ಅಲ್ಲಿಂದ ನಾವು ಹಿಂತಿರುಗಿದಾಗ ಗಂಟೆ ೧.೩೦ ಕಳೆದಿತ್ತು. ಡೇವಿಡ್ ಗೆ ಒಳ್ಳೆ ಸ್ಥಳದಲ್ಲಿ ಊಟಕ್ಕೆ ನಿಲ್ಲಿಸಲು ಹೇಳಿದೆವು.  ಅವನು ಒಂದು ಗಂಟೆ ಪಯಣಿಸಿ ಒಂದು ಸೇತುವೆ ಕೆಳಗೆ ನದಿ ಪಕ್ಕ ಕಾರು ನಿಲ್ಲಿಸಿದ. ಅಲ್ಲಿ ಹತ್ತೈವತ್ತು ಮೆಟ್ಟಲು ಇಳಿದು ನದಿ ಪಾತ್ರದಲ್ಲಿ ಕೂತು ಬುತ್ತಿಯೂಟ ಮಾಡಿದೆವು. ಕಿತ್ತಳೆಹಣ್ಣು ತಿಂದೆವು. ಮೆಟ್ಟಲು ನೋಡಿದ್ದೇ ಅನಂತ, ದೇವಕಿ, ಸಾವಿತ್ರಿ ಒಮ್ಮೆ ಹುಬ್ಬೇರಿಸಿದರು. ಹಿಂದಿನದಿನ ಮೆಟ್ಟಲು ಹತ್ತಿ ಇಳಿದು ಕಾಲುನೋವು ಹೋಗಿರಲಿಲ್ಲ!
   
ಜೀವಂತಮರದ ಬೇರಿನ ಸೇತುವೆ ದೊರ್ಬಾರ್ ಶೊಂಗ್ ರಿವಾಯಿ
  ಊಟವಾಗಿ ನಮ್ಮನ್ನು ಈಸ್ಟ್ ಖಾಸಿ ಬೆಟ್ಟದ ದೊರ್ಬಾರ್ ಶಾಂಗ್ ರಿವಾಯಿ ಊರಿಗೆ ಕರೆದುಕೊಂಡು ಹೋದ.  ಅಲ್ಲಿ ಕಾರು ಪಾರ್ಕಿಂಗ್ ಎಂದು ೫೦ರೂ. ವಸೂಲಿ ಮಾಡಿದರು. ಅಲ್ಲಿ ಜೀವಂತ ಮರದ ಸೇತುವೆ ಇದೆ. ನೋಡಿ ಬನ್ನಿ ಎಂದ ಡೇವಿಡ್. ನಾವು ೧೦೦ ಮೆಟ್ಟಲು ಇಳಿದು ಕೆಳಗೆ ನಡೆದೆವು. ಊರು ಬಹಳ ಸ್ವಚ್ಚವಾಗಿತ್ತು. ದಾರಿಯುದ್ದಕ್ಕೂ ಅಂಗಡಿಮಳಿಗೆಗಳು ಇದ್ದುವು. ಊರೊಳಗೆ ಸಾಗಿದೆವು.  ಮಕ್ಕಳು ಆಟವಾಡುತ್ತಿದ್ದರು. ದಾರಿಯುದ್ದಕ್ಕೂ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟ ಸಾಮಾನು ನೋಡುತ್ತ ನಡೆದೆವು.  ಅಲ್ಲಿ ಸಾಮಾನು ಹೊರಲು ಬುಟ್ಟಿ ಉಪಯೋಗಿಸುತ್ತಾರೆ. ಹೆಂಗೆೆ್ಳೆಯರು ಬುಟ್ಟಿ ಹೊತ್ತು ನಡೆಯುವುದನ್ನು ನೋಡಿದೆವು






  ಸೇತುವೆ ಕಂಡಿತು. ಸೇತುವೆ ನೋಡಲು ತಲಾ ಒಬ್ಬರಿಗೆ ರೂ. ೪೦ . ನಾವು ಡಬ್ಬಲ್ಡೆಕ್ಕರ್ ಸೇತುವೆ ನೋಡಿದ್ದೇವೆ. ಇದನ್ನೇನು ನೋಡುವುದು ಎಂದು ಸೇತುವೆವರೆಗೆ ಹೋಗದೆಯೇ ವಾಪಾಸಾದೆವು!





     ಇಲ್ಲಿ ಕರೆತಂದು ನಮ್ಮ ಸಮಯವನ್ನು ಹಾಳುಮಾಡಿದ ಎಂದು ಡೇವಿಡನನ್ನು ಬೈದುಕೊಂಡೆವು.

ಸ್ವಚ್ಛನಗರ ಮಾವ್ಲಿನೊಂಗ್ Mawlynnong, Meghalaya, 793109

ಮೇಘಾಲಯದಲ್ಲಿ ಅತ್ಯಂತ ಸ್ವಚ್ಛ ಗ್ರಾಮವೆಂದು ಬಿರುದಾಂಕಿತವಾದ ಮಾವ್ಲಿನೊಂಗಿಗೆ   ನಮ್ಮನ್ನು ಕರೆದುಕೊಂಡು ಹೋದ. ಅಲ್ಲಿ ಮೈಂಟೆನೆನ್ಸ್ ಶುಲ್ಕ ರೂ.೧೦೦.  ವಸೂಲಿ ಮಾಡಿದರು!   ದೇವರ ಸ್ವಂತ ಉದ್ಯಾನವನ ಎಂದೂ ಕರೆಯಲ್ಪಡುವ ಮಾವ್ಲಿನೊಂಗ್ ಗ್ರಾಮವನ್ನು ೨೦೦೩ರಲ್ಲಿ ಏಷ್ಯಾದ ಸ್ವಚ್ಛವಾದ ಹಳ್ಳಿ ಎಂದು ಘೋಷಿಸಲಾಯಿತು. ಅಲ್ಲಿಯ ಜನಸಂಖ್ಯೆ (೨೦೧೯ರಲ್ಲಿ) ಕೇವಲ ೯೦೦. ಒಟ್ಟು ೯೫ ಕುಟುಂಬಗಳಿವೆಯಂತೆ. ಇದು ಪೈನುಸ್ಲಾರ್ ಸಮುದಾಯ ಅಭಿವೃದ್ಧಿ ಬ್ಲಾಕ್ ಮತ್ತು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 

ಅಲ್ಲಿಯ ಬೀದಿಗಳಲ್ಲಿ ನಡೆದೆವು. ಹತ್ತಿಪ್ಪತ್ತು ಮನೆಗಳಿದ್ದುವು. ಮನೆ ಎದುರು ಅಂಗಳ, ಹಿತ್ತಲು ಎಲ್ಲ ಬಲು ಸ್ವಚ್ಛವಾಗಿ ಇಟ್ಟುಕೊಂಡಿದ್ದರು. ಹೂ ಗಿಡಗಳನ್ನು ಅಷ್ಟೇ ಬಹಳ ಚೆನ್ನಾಗಿ ಬೆಳೆಸಿದ್ದರು. ಬೀದಿ ರಸ್ತೆ ಎಲ್ಲಕಡೆಯೂ ಸ್ವಚ್ಛವಾಗಿಯೇ ಇತ್ತು. ಮನೆಯೆದುರು ಅಡಿಕೆ ಒನಗಲು ಹಾಕಿದ್ದು ನೋಡಲು ಅಚ್ಚುಕಟ್ಟಾಗಿತ್ತು. ಒಂದು ಕಡೆ ಬಿದಿರಿನ ಮೇಲ್ಸೇತುವೆ ಮಾಡಿದ್ದರು. ಅಲ್ಲಿ ಹತ್ತಿ ನೋಡಲು ಟಿಕೆಟ್ ಇದೆ. ಅಲ್ಲಿಂದ ಬಾಂಗ್ಲಾದೇಶ ನೋಡಬಹುದಂತೆ. 

 ಆದರೆ ಅಷ್ಟು ದೂರ ಪಯಣಿಸಿ ಆ ನಗರ ನೋಡುವ ಅಗತ್ಯ ಖಂಡಿತಾ ನಮಗಿರಲಿಲ್ಲ. ಡೇವಿಡ್ ನಮ್ಮನ್ನು ಮರುಳುಗೊಳಿಸಿದ್ದ. ಬೇರೆಕಡೆ ಹೋದರೆ ಅವನಿಗೆ ಲಾಭವಿಲ್ಲ. ಇದಾದರೆ ಡೌಕಿಯಿಂದ ಬರುವ ದಾರಿಯಲ್ಲೇ ಇತ್ತು.
 ಅರ್ಧದಿನ ಸಮಯದಲ್ಲಿ ಬೇರೆ ಏನಾದರೂ ನೋಡಬಹುದಿತ್ತೆನಿಸಿತು. 







  ಅಲ್ಲಿಂದ ಹೊರಟು ಶಿಲ್ಲಾಂಗ್ ತಲಪುವಾಗ ಗಂಟೆ ೮ ದಾಟಿತ್ತು. ಅಲ್ಲಿಗೆ ನಮ್ಮ ಒಂದು ದಿನದ ತಿರುಗಾಟ ಸಮಾಪ್ತಿಗೊಂಡಿತು.
    ಯೂಥ್ ಹಾಸ್ಟೆಲಿನಲ್ಲಿ ಊಟಕ್ಕೆ ಇನ್ನೊಂದು ಬ್ಯಾಚಿನ ಜನ ಎಲ್ಲ ಸೇರಿ ೧೦೦ಕ್ಕೂ ಮಿಕ್ಕಿತ್ತು. ಹಾಗೆಂದು ಊಟದ ರುಚಿಯಲ್ಲಿ ವ್ಯತ್ಯಾಸವಿಲ್ಲ. ಉತ್ಕೃಷ್ಟವಾಗಿ ಗಡದ್ದಾಗಿಯೇ ಎಲ್ಲ ದಿನಗಳಂತೆಯೇ ಅದೇ  ಮೆನು ಇತ್ತು. 
    
ಶಿಲ್ಲಾಂಗ್ ಯೂಥ್ ಹಾಸ್ಟೆಲಿಗೆ ವಿದಾಯ 

   ತಾರೀಕು ೧೪-೨-೨೦೨೦ರಂದು ಬೆಳಗ್ಗೆ ಎದ್ದು ಪ್ಯಾಕಿಂಗ್ ಮುಗಿಸಿ ಹೊರಡುವ ತಯಾರಿ ನಡೆಸಿದೆವು. ಯೂಥ್ ಹಾಸ್ಟೆಲ್ ಖಾಲಿ ಮಾಡಿ ನಾವು ರಾತ್ರೆಗೆ ಗೌಹಾತಿ ತಲಪುವುದೆಂದು ನಿಶ್ಚಯಿಸಿದ್ದೆವು. ತಿಂಡಿಗೆ ಇಡ್ಲಿ ಸಾಂಬಾರು. ಇಲ್ಲಿ ಇಡ್ಲಿ ತಯಾರಿಸಿದವರಾರು ಎಂದು ಅಡುಗೆ ಕೋಣೆಗೆ ಹೋಗಿ ವಿಚಾರಿಸಿದಾಗ ಮನೋಜ ಕೇರಳದ ಕಣ್ಣೂರಿನವನು  ಎಂದು ತಿಳಿಯಿತು. ಬೆಳಗ್ಗೆ ೬.೩೦ಗೆ ಫ್ರೈಡ್ರೈಸ್ ಮಾಡುತ್ತಿದ್ದರು.  ಮನೋಜ, ರಾಜ್ ಹಾಗೂ ಸಮೀರ್ ಅಡುಗೆಯ ಪಾರುಪತ್ಯ ವಹಿಸಿದ್ದರು. ಪ್ರತೀ ದಿನದ ಅಡುಗೆಯಲ್ಲೂ ಉಪ್ಪು, ಖಾರ, ಮಸಾಲೆ ಹದವಾಗಿ ಬೆರೆತು ಬಹಳ ಚೆನ್ನಾಗಿದ್ದುವು ಎಂದು ಹೇಳಿ ಅವರಿಗೆ ಧನ್ಯವಾದ ಅರ್ಪಿಸಿದೆ.  

   ನಮ್ಮ ತಂಡಕ್ಕೆ ಮಾರ್ಗದರ್ಶಕರಾಗಿ ನಾಲ್ಕು ಮಂದಿ ಬಂದಿದ್ದರು. ಅವರ ಹೆಸರು ನೊಯಿಮ್ (Niom) ಡಾರ್ಕರ್(Darker) ಡಾಪ್ಮೈನ್ (Dapmain) ವಾನ್ಬ್ಟ್ಸ್ಕೆಮ್ (Wanbatskhem) ಅಬ್ಬ ಇವರ ಹೆಸರನ್ನು ಹೇಳಲು ಬಜೆ ನಾಲಗೆಗೆ ತಿಕ್ಕಿದರೂ ಸಾಧ್ಯವಿಲ್ಲವೇನೋ?! ಅವರು ಹೆಸರು ಹೆಳಿ ಅರೆ ನಿಮಿಷದಲ್ಲೆ ಅವರು ಹೇಳಿದ ಹೆಸರು ಮರೆತು ಹೋಗುತ್ತಿತ್ತು! ಹಾಗಾಗಿ ಅವರ ಬಳಿ ಸ್ಪೆಲ್ಲಿಂಗ್ ಕೇಳಿಯೇ ಹೆಸರನ್ನು ಬರೆದುಕೊಂಡಿದ್ದೆ!
ನಾಲ್ಕು ದಿನದ ಗುಹಾ, ಜಲಪಾತ ಚಾರಣ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ಆಯೋಜಿಸಿದ ಯೂಥ್ ಹಾಸ್ಟೆಲ್ ಮೇಘಾಲಯ ಘಟಕಕ್ಕೆ ಧನ್ಯವಾದ.  
     ನಾವು ಬುತ್ತಿಗೆ ಫ್ರೈಡ್ರೈಸ್ ತರಕಾರಿ ಮಂಚೂರಿ ತುಂಬಿಕೊಂಡು ಶಿಲ್ಲಾಂಗ್ ಯೂಥ್ ಹಾಸ್ಟೆಲ್ ಬೆಳಗ್ಗೆ ೮ ಗಂಟೆಗೆ ಬಿಟ್ಟೆವು. ೧೨ ಗಂಟೆಯೊಳಗೆ ನಾವು ಅಲ್ಲಿಂದ ನಿರ್ಗಮಿಸಬೇಕಿತ್ತು.

ಬಂಬೂ ಬ್ರಿಡ್ಜ್ –ಮಾವ್ರಿಂಗ್ ಖಾಂಗ್ ಬೆಟ್ಟ Mawryngkhang Trek Wahkhen, Meghalaya 793102

 ನಮ್ಮ ಲಗೇಜು ಸಮೇತ ನಾವು ೬ ಮಂದಿ ೨ ಕಾರಿನಲ್ಲಿ ಹೊರಟೆವು. ಗಣಪತಿ ಭಟ್ ಸಾವಿತ್ರಿ ಆ ದಿನ ಶಿಲ್ಲಾಂಗ್ ಇಸ್ರೋಗೆ ಹೋಗುವವರಿದ್ದರು. ಹಾಗಾಗಿ ಎರಡು ಕಾರು ಹಿಡಿದೆವು. ನಮ್ಮ ಕಾರಿನ ಚಾಲಕ ರಾಜ್ ದೀಪ್ ಎಂಬ ಯುವಕ. ಮಾತುಗಾರ ಕೂಡ. ಮೇಘಾಲಯದ ಜನಸಂಖ್ಯೆ ೩೨ ಲಕ್ಷವಂತೆ. ಮೇಘಾಲಯದಲ್ಲಿ ಶೇಕಡಾ ೮೫ ಮಂದಿ ಕ್ರಿಶ್ಚಿಯನ್ನರು ಉಳಿದ ಶೇಕಡಾ ೧೫ ಮಂದಿಯಲ್ಲಿ ಹಿಂದೂ ಮುಸ್ಲಿಮ್ ಜನಾಂಗದವರು ಸೇರಿದ್ಧಾರೆ ಎಂಬ ಮಾಹಿತಿ ಕೊಟ್ಟ.
   ನಮ್ಮ ತಂಡದ ಕೆಲವರು ಅಲ್ಲಿಗೆ ಹೋಗಿ ಬಂದವರು ಬಂಬೂ ಬ್ರಿಡ್ಜ್ ನೋಡಲೇಬೇಕು. ಸಾಹಸಮಯವಾಗಿದೆ ಎಂದು ಹೇಳಿ ವೀಡಿಯೋ ತೋರಿಸಿದ್ದರಂತೆ. ಇರುವ ಒಂದು ದಿನದಲ್ಲಿ ನಾವು ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿದ್ದೆವು.
  ಶಿಲ್ಲಾಂಗಿನಂದ ಡೌಕಿಗೆ ಹೋಗುವ ದಾರಿಯಲ್ಲೇ ಸಾಗಿದೆವು. ಶಿಲ್ಲಾಂಗಿನಿಂದ ವಾಹ್ಖೇನ್ ಗ್ರಾಮಕ್ಕೆ ಸುಮಾರು ೪೨ಕಿಮೀ.  ಅಲ್ಲಲ್ಲಿ ಬುಲ್ಡೋಜರ್ ಬೆಟ್ಟವನ್ನು ಬಗೆದು ಕಲ್ಲು ಸಾಗಾಣೆಯ ಕೆಲಸದಲ್ಲಿದ್ದುದನ್ನು ನೋಡಿದೆವು.. ಡೌಕಿ ದಾರಿಯಿಂದ ಪೊಮ್ಲಮ್ ಗ್ರಾಮದಿಂದ ಬಲಕ್ಕೆ ತಿರುಗಿ ಸುಮಾರು ೨೦ಕಿಮೀ ಸಾಗಬೇಕು ಮೇಘಾಲಯದ ಪೂರ್ವ ಖಾಸಿ ಬೆಟ್ಟದ ಪೈನುರ್ಸ್ಲಾ ತಹಸಿಲ್ ಜಿಲ್ಲೆಯ ವಾಹ್ಖೇನ್ ಗ್ರಾಮದ ಮಾವ್ರಿಂಗ್ ಖಾಂಗ್ ಬೆಟ್ಟಕ್ಕೆ. ಎರಡು ಗಂಟೆ ದಾರಿ. ದಾರಿಮಧ್ಯೆ ರಸ್ತೆ ಬಗೆದು ಡಾಮಾರು ಹಾಕುತ್ತಿದ್ದರು. ಹಾಗೆ ಕಾಲು ಗಂಟೆ ನಾವು ಕಾಯಬೇಕಾಯಿತು.
 ವಾಹ್ಖೇನ್ ಗ್ರಾಮ ತಲಪಿ ಅಲ್ಲಿ ತಲಾ ಒಬ್ಬರಿಗೆ ರೂ. ೫೦ ಕೊಟ್ಟು ಟಿಕೆಟ್ ಪಡೆದೆವು. ಪ್ರಪಾತಕ್ಕೆ ಇಳಿಯುವಂತೆ ಮೆಟ್ಟಲುಗಳಿದ್ದುವು. ದಾರಿಯುದ್ದಕ್ಕೂ ಕೆಳಗೆ ಬಾಂಬೆ ಪೊರಕೆ ಕಡ್ಡಿ ಗಿಡ, ಕಿತ್ತಳೆ ಮರ ಕಂಡುವು. ನೂರು ಇನ್ನೂರು ಮೆಟ್ಟಲು ಇಳಿದಾಗುವಾಗ ಉಮ್ರೂ ನದಿ ಎದುರಾಯಿತು.





 ಬಿದಿರಿನಿಂದ ಮಾಡಿದ ಸೇತುವೆ ದಾಟಿ ಸುಮಾರು ೨ಕಿಮೀ ನಡೆಯಬೇಕು. ನಮ್ಮೊಂದಿಗೆ ಕುಳ್ಳ ಗೈಡ್ (ಅವನು ಹೆಸರು ಹೇಳಿದ್ದ. ಆದರೆ ಆ ಕ್ಷಣದಲ್ಲೇ ಮರೆತೆ ಕೂಡ) ಜೊತೆಗಿದ್ದ. ಹೀಗೆ ನಡೆದು ಸಾಗಿದಾಗ ಒಂದು ಕಡೆ ಪುಟ್ಟ ಬೇಲಿ ಗೇಟ್ ಕಾಣುತ್ತದೆ. ಬೆಳಗ್ಗೆ ೭ರಿಂದ ಸಂಜೆ ೪ ರವರೆಗೆ ಮಾತ್ರ ಪ್ರವೇಶ. ಆಮೇಲೆ ಬೀಗ ಹಾಕಿ ಬಿಡುತ್ತಾರೆ. ಯಾರೂ ಒಳ ಪ್ರವೇಶಿಸಲು ಸಾಧ್ಯವಿಲ್ಲ. ಅಲ್ಲಿ ಗೈಡ್ ಎಲ್ಲರ ಟಿಕೆಟ್ ಪರಿಶೀಲಿಸಿ ಒಳ ಬಿಡುತ್ತಾನೆ. ಆಳವಾದ ಕಮರಿಗಳ ಮೇಲೆಯೇ ಬಿದಿರಿನ ಸೇತುವೆ ಉದ್ದಕ್ಕೂ ಇದೆ. ಅದರಲ್ಲೇ ನಡೆದು ಮುಂದೆ ಹೋಗಬೇಕು. ಕೆಲವು ಕಡೆ ಏಣಿ ಹತ್ತಬೇಕು. ಸಪೂರದ ದಾರಿಯಲ್ಲಿ ಬಿದಿರಸೇತುವೆಯಲ್ಲಿ ನಡೆಯಬೇಕು. ಇನ್ನು ಕೆಲವು ಕಡೆ ಬೆನ್ನು ಬಾಗಿಸಿ ಬಂಡೆ ಅಡಿ ನುಸುಳಬೇಕು. ಕೆಳಗೆ ನದಿ ಹರಿಯುವುದು ಕಾಣುತ್ತದೆ. ಇಲ್ಲಿನಿಂತು ಪ್ರಕೃತಿ ಸೌಂದರ್ಯ ನೋಡಿ ಎಂದು ಗೈಡ್ ನಮಗೆ ಸಲಹೆ ಕೊಡುತ್ತಿದ್ದ. ಒಂದು ಬಂಡೆ ಮೇಲೆ ನಿಂತಾಗ ನದಿಯ ಆಚೆ ಭಾಗ ತೋರಿಸಿ ಅಲ್ಲೆ ನಮ್ಮ ಮನೆ. ನಿತ್ಯ ಅಲ್ಲಿಂದ ಬರಲು ಇಪ್ಪತ್ತು ನಿಮಿಷ ಬೇಕಾಗುತ್ತದೆ  ಎಂದು ಹೇಳಿದ. ಅವರು ಸಾಹಸಿಗರೇ ಸರಿ.




















   ಮುಂದೆ ಸಾಗುತ್ತಿದ್ದಂತೆ ಎರಡು ಬೃಹತ್ ಬಂಡೆಗಳು ಕಾಣುತ್ತವೆ. ಮೊದಲ ಬಂಡೆಗೆ ತೆರಳಲು ಏನೂ ಕಷ್ಟವಿಲ್ಲ. ಯಾರು ಬೇಕಾದರೂ ಹೋಗಬಹುದು. ಅಲ್ಲಿ ನಿಂತಾಗ ಇದು ಮೊದಲ ವ್ಯೂ ಪಾಯಿಂಟ್ ಎಂದ ಗೈಡ್. ಅಲ್ಲಿ ನಮ್ಮ ಪಟ ಕ್ಲಿಕ್ಕಿಸಿದ. ಬಿದಿರಿನ ಸೇತುವೆ ದಾರಿಯುದ್ದಕ್ಕೂ ವೀಡಿಯೋ ಮಾಡಿದೆ. ಕೆಲವೆಡೆ ನನ್ನ ಮೊಬೈಲು ಪಡೆದು ಗೈಡ್ ವೀಡಿಯೋ ಮಾಡಿದ.   ದೊಡ್ಡ ಬಂಡೆಗೇರಲು ೯೦ ಡಿಗ್ರಿಯಾಕಾರದ ಬಿದಿರಿನ ಏಣಿ ಇದೆ. ಅದನ್ನು ದೂರದಿಂದ ನೋಡಲು ಹೆದರಿಕೆ ಹುಟ್ಟಿಸುವಂತಿದೆ. ಹಾಗೂ ಕೆಳಗೆ ನೋಡಿದರೆ ಪ್ರಪಾತದ ಹೆದರಿಕೆ ಇರುವವರಿಗೆ ಹತ್ತಲು ಕಷ್ಟ. ಅದನ್ನು ಹತ್ತಲು ಗುಂಡಿಗೆ ಗಟ್ಟಿ ಇರಬೇಕು!  














   ಈ ಪ್ರಪಾತದಲ್ಲಿ ಮೇಲೆ ಬಿದಿರಿನ ಸೇತುವೆ ಕಟ್ಟಿದ ಇಲ್ಲಿಯವರ ಕೌಶಲವನ್ನು ಎಷ್ಟು ಮೆಚ್ಚಿದರೂ ಸಾಲದು. ಬಿದಿರ ಸೇತುವೆಗೆ ಬಿಗಿಯಾಗಿ ಹಗ್ಗ ಕಟ್ಟಿ, ಬಿದಿರಿನ  ಕೈತಾಂಗು ಹಾಕಿ, ಕೆಲವೆಡೆ ಕಬ್ಬಿಣದ ಸಲಾಕೆಯನ್ನು ಬಂಡೆಗೆ ಸಿಕ್ಕಿಸಿ ಬಂದೋಬಸ್ತ್ ಮಾಡಿರುವ ಕೆಲಸ ನೋಡಿದರೆ ದಂಗಾಗಬೇಕು. ಈ ಬಿದಿರ ಸೇತುವೆ ತಯಾರಿಸಿ ಕೇವಲ ಒಂದು ವರ್ಷ ಆಯಿತಷ್ಟೇ. ಸರ್ಕಾರದ ಹಸ್ತಕ್ಷೇಪವಿಲ್ಲದೆ ವಾಹ್ಖೇನ್ ಗ್ರಾಮದ ಸೊಸೈಟಿ ವತಿಯಿಂದ ಸ್ಥಳೀಯರೇ ಸೇರಿ ಈ ಬಿದಿರ ಸೇತುವೆ ಕಟ್ಟಲ್ಪಟ್ತಿದೆಯಂತೆ. ಮೊದಲು ಈ ಬಂಡೆಗಳಿಗೆ ಸಾಹಸ ಚಾರಣದ ಮೂಲಕ ಕೆಲವರು ಬರುತ್ತಿದ್ದರಂತೆ. ಬಿದಿರ ಸೇತುವೆಯಾದ ಬಳಿಕ ಸುಮಾರು ಮಂದಿ ಬರುತ್ತಿರುತ್ತಾರಂತೆ.
   ನಾವು ೯೦ ಡಿಗ್ರಿ ಬಿದಿರ ಏಣಿಯನ್ನು ಲೀಲಾಜಾಲವಾಗಿ ಹತ್ತಿ ಮಾವ್ರಿಂಗ್ ಖಾಂಗ್ ಬಂಡೆ ತಲಪಿದೆವು. ೧೦೦ ಮೀಟರ್ ಎತ್ತರವಿದೆಯಂತೆ ಈ ಬಂಡೆ. ಬಿದಿರ ಏಣಿ ೧೫೦ ಮೀಟರು ಉದ್ದವಿದೆಯಂತೆ. ಬಿದಿರಿನ ಸೇತುವೆ ೭೦ ಮೀಟರ್ ಆಳವಿದೆಯಂತೆ.  ನಮಗೆ ಅಲ್ಲಿ ತಲಪಲು ಒಂದೂವರೆ ಗಂಟೆ ಬೇಕಾಯಿತು. ಸುತ್ತಲೂ ಕಣಿವೆಗಳು, ಕೆಳಗೆ ನದಿ, ಮೇಲೆ ಪರ್ವತಗಳ ಸಾಲು, ಹಸುರು ಉಡುಗೆಯುಟ್ಟ ವನದೇವಿ. ಅಲ್ಲಿಂದ ಕಾಣುವ ರಮಣೀಯ ದೃಶ್ಯ ವರ್ಣಿಸಲು ಅಸಾಧ್ಯ. ಪ್ರಕೃತಿಯ ದೃಶ್ಯ ವೈಭವವನ್ನು ನೋಡುತ್ತ ಕಾಲು ಗಂಟೆ ಅಲ್ಲಿ ಕುಳಿತೆವು.  ಆಗ ಅಲ್ಲಿಗೆ ಇತರ ಪ್ರವಾಸಿಗರು ಬಂದು ಗದ್ದಲ ಸುರುಮಾಡಿದಾಗ ಅಲ್ಲಿಂದ ಹೊರಟೆವು. ಗೈಡ್ ಅವರಿಂದ ಟಿಕೆಟ್ ಪರಿಶೀಲಿಸಲು ಮರೆಯಲಿಲ್ಲ!











  ಮಾವ್ರಿಂಗ್ ಬೆಟ್ಟದ ಬಗ್ಗೆ ಪೌರಾಣಿಕ ಕಥೆ ಬಲು ಚೆನ್ನಾಗಿದೆ. ಮಾವ್ರಿಂಗ್ ಖಾಂಗ್ ರಾಜ ಒಂದು ದೊಡ್ಡ ಬಂಡೆ. ಇದನ್ನು ಕಿಂಗ್ ಆಫ್ ಸ್ಟೋನ್ ಬಂಡೆಗಳ ಮಹಾರಾಜ ಎಂದು ಕರೆಯುತ್ತಾರೆ.  ಈ ರಾಜ ಪಕ್ಕದ ಊರಿನ ಮಿಸ್ ಕಿಯಾಂಗ್ ಎಂಬ ಇನ್ನೊಂದು ಮಹಿಳಾ ಬಂಡೆಯನ್ನು ಪ್ರೀತಿಸುತ್ತಾನೆ. ಆಗ ಅಲ್ಲಿಯ ರಾಜ ಮಾವ್ ಪೇಟರ್ (ಬಂಡೆ)   ಮಾವ್ರಿಂಗ್ ಖಾಂಗ್ ಮಧ್ಯೆ ಕಾಳಗ ಏರ್ಪಡುತ್ತದೆ. ಯುದ್ಧ ಸಮಯದಲ್ಲಿ ಯು ಮಾವ್ ಪೇಟರ್ ಮಾವ್ರಿಂಗ್ ಖಾಂಗ್ ಎಡಗೈಯನ್ನು ಮುರಿಯುತ್ತಾನೆ.  ಮಾವ್ರಿಂಗ್ ಖಾಂಗ್ ಯು ಮಾವ್ ಪೇಟರ್ ನ ತಲೆ ತೆಗೆಯುತ್ತಾನೆ. ಅದು ಉರುಳಿ ಆಳವಾದ ಕಮರಿಯಲ್ಲಿ ಬೀಳುತ್ತದೆ.  ಮಾವ್ರಿಂಗ್ ಖಾಂಗ್ ತನ್ನ ಪ್ರೀತಿಯ ಕಿಯಾಂಗ್ ನೊಡನೆ ಇದ್ದಾನೆ. ಅದೇ ಎರಡು ಬಂಡೆಗಳಿಗೆ ನಾವು ಬಿದಿರಿನ ಏಣಿ ಸೇತುವೆಗಳ ಮೂಲಕ ಹೋದದ್ದು. ಮಾವ್ ಪೇಟರ್ ಕಮರಿಯಲ್ಲಿ ಕಾಣುತ್ತದೆ!

   ನಾವು  ಕಿಯಾಂಗ್ ಬಂಡೆ ತಲಪಿದಾಗ ಗಣಪತಿ ಭಟ್ ಆಗಲೇ ಮಾವ್ರಿಂಗ್ ಖಾಂಗ್ ಬಂಡೆ ತುದಿಯಲ್ಲಿದ್ದು, ಅಲ್ಲಿಂದ ಇಳಿಯುತ್ತಲಿದ್ದರು. ಸಾವಿತ್ರಿ ಅರ್ಧ ದಾರಿ ಬಂದು ವಾಪಾಸು ಹೋಗಿದ್ದರು. ಅವರು ೪ ಗಂಟೆಯೊಳಗೆ ಶಿಲ್ಲಾಂಗ್ ಇಸ್ರೋ ತಲಪಬೇಕಾಗಿದ್ದದ್ದರಿಂದ ಸಾವಕಾಶವಾಗಿ ನೋಡಲು ಸಮಯವಿಲ್ಲದೆ ಬಂಡೆ ತುದಿ ಏರಿದ ತೃಪ್ತಿಯೊಂದಿಗೆ ಅವಸರದಲ್ಲಿ ವಾಪಾಸಾಗಿದ್ದರು. 
     ನಿಜಕ್ಕೂ ಇದೊಂದು ಸಾಹಸಮಯ ಪಯಣವೇ. ಇಲ್ಲಿಗೆ ಬಂದದ್ದು ತೃಪ್ತಿಕೊಟ್ಟಿತು ಎಂದು ಹೇಳಿಕೊಳ್ಳುತ್ತ ನಡೆದೆವು. ನಮ್ಮೊಡನೆಯೇ ಗೈಡ್ ಹಿಂದೆ ಬಂದ. ನಾವು ನಿಧಾನವಾಗಿ ನಡೆದೆವು. ನಡೆದು ಬೇಲಿ ಗೇಟ್ ಬಳಿ ಬಂದಾಗ ಯಾವ ಮಾಯದಲ್ಲೋ ಗೈಡ್ ನಮ್ಮಿಂದ ಮುಂದೆ ಹೋಗಿ ಅಲ್ಲಿ ಬುಟ್ಟಿ ಹೆಣೆಯುತ್ತ ಕೂತಿದ್ದ. ನಾವು ಅವನಿಗೆ ರೂ. ೫೦ ಕೊಟ್ಟೆವು. ಅವನು ತುಂಬ ಸಂತುಷ್ಟನಾಗಿ ಅವನು ಹೆಣೆದ ಬುಟ್ಟಿಯನ್ನು ನಮಗೆ ಕೊಟ್ಟ. ಬುಟ್ಟಿಗೆಂದು ಮತ್ತೆ ರೂ. ೫೦ ಕೊಟ್ಟೆವು. ಅವನು ತೆಗೆದುಕೊಳ್ಳಲು ಒಪ್ಪಲಿಲ್ಲ. ಬಲವಂತ ಮಾಡಿದಾಗ ತೆಗೆದುಕೊಂಡ. ಹ್ಯಾಪಿ ನ್ಯೂ ಇಯರ್ ಎಂದು ನಮ್ಮ ಕೈಕುಲುಕಿ ಬಿಳ್ಕೊಟ್ಟ. ಪ್ರವಾಸಿಗರಿಂದ ಟಿಕೆಟ್ ಪರಿಶೀಲನೆ, ಒಮ್ಮೊಮ್ಮೆ ಅವರೊಡನೆ ಬೆಟ್ಟದ ತುದಿಗೆ ಹೋಗಿಬರುತ್ತಾನೆ.  ಬಿಡುವಿನ ವೇಳೆಯಲ್ಲಿ ಬಿದಿರುಬುಟ್ಟಿ ಹೆಣೆಯುವ ಕಾಯಕವಂತೆ.




    ಬಿದಿರ ಸೇತುವೆಯವರೆಗೆ ನಾವು ಸೀದಾ ಬಂದೆವು. ಅಲ್ಲಿಂದ ನೂರಿನ್ನೂರು ಮೆಟ್ಟಲು ಹತ್ತಲು ಮಾತ್ರ ನನಗೂ ದೇವಕ್ಕಿ ಅಕ್ಕನಿಗೂ ಸಮಯ ಹಿಡಿಯಿತು. ವಾಪಾಸು ಬರಲು ೧.೪೫ ಗಂಟೆ ಬೇಕಾಯಿತು. ೩.೧೫ ಗಂಟೆಯಲ್ಲಿ ನಾವು ಹೋಗಿ ಬಂದಿದ್ದೆವು. ಕಾರು ಬಳಿ ಬಂದು ಬುತ್ತಿಯೂಟ ಮಾಡಿದೆವು. ಮೇಘಾಲಯಕ್ಕೆ ಭೇಟಿ ಕೊಡುವವರು ತಪ್ಪದೆ ಈ ಮಾವ್ರಿಂಗ್ ಖಾಂಗ್ ಬೆಟ್ಟಕ್ಕೆ ಚಾರಣ ಹೋಗಲು ಮರೆಯದಿರಿ.

   ಮಾಫ್ಲಾಂಗ್ ಪವಿತ್ರ ಅರಣ್ಯ (Mawphlang Sacred Grove, Nongrum, Meghalaya 793121)

   ಶಿಲ್ಲಾಂಗಿನಿಂದ ೨೫ ಕಿ.ಮೀ ದೂರದಲ್ಲಿರುವ ಮಾಫ್ಲಾಂಗ್ ಅರಣ್ಯ ನೋಡಲು ಹೋದೆವು. ನಮ್ಮ ಚಾಲಕ ಗೈಡ್ ಎಲ್ಲ ಮಾಡಬೇಡಿ. ರೂ. ೩೦೦ ಕೇಳುತ್ತಾರೆ. ಸುಮ್ಮನೆ ಹೋಗಿ ಬನ್ನಿ ಎಂದಿದ್ದ. ನಾವು ಅರಣ್ಯದ ಬಳಿ ವಿಶಾಲವಾದ ಬಯಲು ಪ್ರದೇಶದಲ್ಲಿ ಕಾರಿಳಿದೆವು. ಕಾರಿಳಿದಾಗ ಒಮ್ಮೆಲೇ ಶೀತ ಗಾಳಿ ನಮ್ಮನ್ನು ಚಳಿಯಿಂದ ಮರಗಟ್ಟಿಸಿಬಿಟ್ಟಿತು. ಸ್ವೆಟರ್ ಟೊಪ್ಪಿ ಎಲ್ಲ ಹೇರಿಕೊಂಡು ಶರೀರವನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಹೆಣಗಿದೆವು. ಸ್ವಲ್ಪ ದೂರ ನಡೆಯುತ್ತಿದ್ದಂತೆ ಚಳಿಗೆ ಹೊಂದಿಕೊಂಡೆವು. ಅರಣ್ಯದ ಬಳಿ ತೆರಳಿದಾಗ ಅಲ್ಲಿ ಒಂದೆರಡು ಕಲ್ಲುಗಂಬಗಳನ್ನು ನೆಟ್ಟದ್ದು ಕಾಣಿಸಿತು. ಖಾಸಿಭಾಷೆಯ ಮಾ ಎಂದರೆ ಕಲ್ಲಂತೆ. ಹಾಗಾಗಿ ಕಲ್ಲು ನೆಟ್ಟಿರಬೇಕೆಂದು ಭಾವಿಸಿದೆ!  ನಾವು ಇನ್ನೇನು ಅರಣ್ಯ ಪ್ರವೇಶಿಸಬೇಕು ಎನ್ನುವಾಗ ದೂರದಿಂದ ಹೋಗಬೇಡಿ. ಗೈಡ್ ಇಲ್ಲದೆ ಒಳಗೆ ಪ್ರವೇಶವಿಲ್ಲ ಎಂದು ಬೊಬ್ಬಿರಿದರು. ಹೇಳಿದ್ದು ನಮಗಲ್ಲ ಎಂದು ಭಾವಿಸಿಕೊಂಡು ಒಳಪ್ರವೇಶಿಸಲು ಮುಂದಾದೆವು, ಆಗ ಇನ್ನೂ ಜೋರಾದ ಬೊಬ್ಬೆ ಕೇಳಿದಾಗ ಇದು ನಮಗೇ ಅನ್ವಯವೆಂದು ವಾಪಾಸಾದೆವು. ಕಾಡೊಳಗೆ ರುದ್ರಾಕ್ಷಿ ಮರಗಳಿವೆಯಂತೆ. ಮರಗಳಿಂದ ಉದುರಿದ  ರುದ್ರಾಕ್ಷಿ ಹೆಕ್ಕಿ ತಂದರೆ ಅದು ಅಪರಾಧವಂತೆ! ಇಲ್ಲಿಂದ ಏನನ್ನೂ ಅಂದರೆ ಒಂದು ಹುಲ್ಲುಕಡ್ಡಿಯನ್ನು ಕೂಡ ತೆಗೆದುಕೊಂಡು ಬರಲು ಅನುಮತಿ ಇಲ್ಲವಂತೆ! ಇದರಪ್ಪನಂತ ಅರಣ್ಯ ನೋಡಿದವರು ನಾವು. ಇದೇನು ಮಹಾ ಎಂದು ನಮ್ಮನ್ನು ಸಂತೈಸಿಕೊಂಡು ಹಿಂತಿರುಗಿದೆವು!









  ಮೇಘಾಲಯದ ಪೂರ್ವ ಖಾಸೀ ಹಿಲ್ಸ್  ಮತ್ತು ಜೈಂತಿಯ ಹಿಲ್ಸ್ ಜಿಲ್ಲೆಯು ಪವಿತ್ರವಾದ ಕಾಡುಗಳಿಂದ ತುಂಬಿವೆ. ಈ ಕಾಡುಗಳಲ್ಲಿ ಅತ್ಯಂತ ಪವಿತ್ರವಾದದ್ದು ಮಾಪ್ಲಾಂಗ್ ಪವಿತ್ರ ಅರಣ್ಯ. ಕಟ್ಟುನಿಟ್ಟಾದ ನಿಯಮದಿಂದ ಈ ಅರಣ್ಯವನ್ನು ಕಾಪಾಡಲಾಗಿದೆ. ಈ ಅರಣ್ಯ ಸುಮಾರು ೧೯೨ ಎಕರೆ ಪ್ರದೇಶದಲ್ಲಿ ಹಬ್ಬಿದೆ.
  ಪ್ರವೇಶ ಸಮಯ ಬೆಳಗ್ಗೆ ೯ರಿಂದ ಸಂಜೆ ೪.೩೦. ಶುಲ್ಕ ರೂ. ೨೦, ಕ್ಯಾಮರಾ ಶುಲ್ಕ ರು. ೨೦ , ಗೈಡ್ ರೂ. ೩೦೦
  ಅಲ್ಲೆ ಬಲಬಾಗದಲ್ಲಿ ಪಾರಂಪರಿಕಗ್ರಾಮವೆಂದು ಕಮಾನು ಹಾಕಿದ್ದು ಕಂಡು ಒಳಹೊಕ್ಕೆವು. ಮುರುಕು ಜೋಪಡಿಗಳು ಅಲ್ಲಲ್ಲಿ ಹಾಳುಸುರಿದದ್ದು ಕಂಡು ಮುಂದೆ ಹೋದಾಗ ಕಬ್ಬಿಣದ ಸೇತುವೆ ಕಂಡಿತು. ಕೆಳಗೆ ಈಜುಕೊಳ, ಒಳಾಂಗಣ ಕ್ರೀಡಾಂಗಣ ಎಲ್ಲ ನಿರ್ಮಾಣ ಹಂತದಲ್ಲಿದ್ದುವು, ಅಲ್ಲಿಂದ ಹಿಂದಕ್ಕೆ ಹೊರಟವರು ವಾಣಿಜ್ಯ ಮಳಿಗೆ ಕಾಂಪ್ಲೆಕ್ಸ್ ಬಳಿ ಬಂದಾಗ ಕಾಫಿ ಫಿಲ್ಟರ್‍ ಕಂಡು ಅಶೋಕಭಾವ ಅತ್ತ ನಡೆದರು. ಬಾಕಿದ್ದವರು ಕಾಫಿ ಕೂಡಿಯುವ ಧೈರ್ಯ ಮಾಡಲಿಲ್ಲ. ಬಯಲುರಂಗಮಂದಿರ ಶೋಕಾವಸ್ಥೆಯಲ್ಲಿ ಬಿಕೋ ಎಂದು ಅತ್ತಂತೆ ಕಂಡಿತು.  ಪಾಳುಬಿದ್ದ ಪಾರಂಪರಿಕ ಗ್ರಾಮದ ಅವಸ್ಥೆಯನ್ನು ಕಂಡು ಶೋಕಿಸುತ್ತ ಕಾರೇರಿದೆವು.

 ಗೌಹಾತಿಯೆಡೆಗೆ ಪಯಣ

   ರಸ್ತೆಯಲ್ಲಿ ವಾಹನಗಳ ಸಾಲು. ಹಾಗಾಗಿ ನಿಧಾನವಾಗಿಯೇ ಕಾರು ಸಾಗಿತು. ರಸ್ತೆ ಹೊರಗೆ ನೋಡುತ್ತ ನಾವು ಕುಳಿತೆವು. ಟೆಂಪೋದಲ್ಲಿ ಸಾಮಾನು ಸಮೇತ ಮಲಗಿ ನಿದ್ರಿಸಿರುವವನನ್ನು ಕಂಡಾಗ ಎಂಥ ಸುಖ ಪುರುಷರಿವರು ಎಂದು ಹೇಳಿಕೊಂಡೆವು. ಮಿನಿ ವ್ಯಾನ್ ಹಿಂಭಾಗ ಏಣಿಯಲ್ಲಿ ರಗ್ಗು ಹೊದೆದು ಕುಳಿತ ದೃಶ್ಯ ನೋಡಿ ಬೆರಗಾದೆವು. ಸಿಟಿ ಬಸ್ ಸಂಚಾರ ಬಹುಶಃ ವಿರಳವಿರಬೇಕು ಎನಿಸಿತು.  ದಾರಿಮಧ್ಯೆ ಒಮ್ಮೆ ಚಹಾವಿರಾಮ. ನಮ್ಮ ಚಾಲಕ ಬಿದಿರ ಸೇತುವೆಗೆ ಹೋದ ರಸ್ತೆ ಸರಿ ಇರಲಿಲ್ಲ. ಎಂದು ಹೆಚ್ಚುವರಿ ದುಡ್ಡು ವಸೂಲಿ ಮಾಡಿದ್ದ ಎಂದು ಸಾವಿತ್ರಿ ದೂರವಾಣಿಸಿ ಹೇಳಿದರು. ನಮ್ಮ ಚಾಲಕನೂ ದುಡ್ದು ಕೇಳಿಯಾನು ಎಂದು ಸೂಚನೆ ಕೊಟ್ಟರು.  ಅಂತೂ ನಾವು ೮.೩೦ಗೆ ಗೂಗಲಪ್ಪನ ಸಹಾಯದಿಂದ ಹೊಟೆಲ್ ರಿಯಾ ತಲಪಿದೆವು.   ರಸ್ತೆ ಚೆನ್ನಾಗಿಲ್ಲ, ತಲಪಿದ್ದು ರಾತ್ರೆಯಾಯಿತು ಎಂಬ ಸಬೂಬು ಹೇಳಿ ಮೊದಲೇ ಮಾತಾಗಿದ್ದ ರೂ ೪೦೦೦ಕ್ಕೆ ಇನ್ನೂ ಹೆಚ್ಚಿನ ರೂ. ೭೦೦ ಪಡೆದುಕೊಂಡು ರಾಜ್ ದೀಪ್  ಹೋದ.



   ಅಭಯನ ಸ್ನೇಹಿತ ಗೌಹಾತಿಯ ಮೃಣಾಲ್ ಕುಮಾರ್ ಮೂಲಕ ಗೌಹಾತಿಯಲ್ಲಿ ರಾತ್ರೆ ಹೊಟೆಲ್ ವಾಸ್ತವ್ಯ, ಊಟ,  ಅಲ್ಲಿಂದ ಮರುದಿನ ಕಾಜಿರಂಗ ಸುತ್ತಾಟ, ಜೀಪ್ ಸಫಾರಿ, ಅಲ್ಲಿ ರೆಸಾರ್ಟ್ ವಾಸ್ತವ್ಯ, ಬೆಳಗ್ಗಿನ ಕಾಫಿತಿಂಡಿ, ರಾತ್ರೆ ಊಟ, ಕಾಜಿರಂಗದಿಂದ ಗೌಹಾತಿ ವಿಮಾನ ನಿಲ್ದಾಣಕ್ಕೆ ಇಳಿಸುವುದು  ಎಲ್ಲ ಸೇರಿ ನಾಲ್ಕು ಮಂದಿಗೆ ರೂ. ೨೧ ಸಾವಿರಕ್ಕೆ ಪ್ಯಾಕೇಜು.
    ರಾತ್ರೆ ಊಟ ಮಾಡಿ ನಾವು ಸ್ನಾನ ಮಾಡಿ ಮಲಗಿದೆವು. ಮಹಾರಾಷ್ಟ್ರದವರ ಕಲರವ ಇಲ್ಲದೆ ನಿದ್ದೆ ಬಂತು!  

   ಕಾಜಿರಂಗದೆಡೆಗೆ ಗಮನ (Kaziranga National Park, kanchanjuri Assam 784177

ತಾರೀಕು ೧೫-೨-೨೦೨೦ರಂದು ಬೆಳಗ್ಗೆ ಎದ್ದು ಹೊಟೇಲ್ ತಾರಸಿಗೆ ಹೋದೆವು. ಅಲ್ಲಿ ಸುಮಾರು ಹೂಗಿಡ ಬೆಳೆಸಿದ್ದನ್ನು ನೋಡಿದೆವು. ಹೊಟೇಲ್ ವತಿಯಿಂದ ಕೊಟ್ಟ ಪರೋಟ ತಿಂದು ಕಾಫಿ ಕುಡಿದಾಗುವಾಗ ಮೃಣಾಲ್ ಕುಮಾರ್ ಭೇಟಿಯಾಗಿ ದುಡ್ಡು ಪಾವತಿಸಿದೆವು.  ನಾವು ೮ ಗಂಟೆಗೆ ಹೊರಟೆವು. ಗೌಹಾತಿಯಿಂದ ಕಾಜೀರಂಗಕ್ಕೆ ಸುಮಾರು ೧೯೦ಕಿಮೀ. ಕಾರಿನ ಚಾಲಕ ದೀಪಕ್ ನಾಥ್. ರಸ್ತೆಯಲ್ಲಿ ವಾಹನ ಸಂಚಾರ ಸಾಕಷ್ಟು ಇತ್ತು. ಸ್ವಲ್ಪ ದೂರದವರೆಗೆ ಚತುಷ್ಪತ ರಸ್ತೆ. ಮುಂದಕ್ಕೆ ಚತುಷ್ಪತಕ್ಕೆ ತಯಾರಿಯೇನೋ ಆಗಿತ್ತಷ್ಟೆ. ಅರ್ಧಂಬರ್ಧ ಕೆಲಸ ಸುರುವಾಗಿದ್ದದ್ದು ಕಂಡಿತು.  ದಾರಿಯಲ್ಲೊಮ್ಮೆ ಚಹಾ ವಿರಾಮ. ಆಗ ಕಿತ್ತಳೆಹಣ್ಣು ತೆಗೆದುಕೊಂಡೆವು. ಒಂದು ಕಿತ್ತಳೆಗೆ ೧೦ರೂ. ಕಿತ್ತಳೆ ಗಾತ್ರಕ್ಕೆ ಅನುಗುಣವಾಗಿ ರೂ ೧೦-೧೫-೨೦ ಹೀಗೆ ತರಹೇವಾರಿ ದರಗಳಿದ್ದುವು. 




   ಕಾಜಿರಂಗ ರಸ್ತೆಯ ಅರಣ್ಯ ಪ್ರದೇಶ ಪ್ರವೇಶಿಸಿದಾಗ ‘ಹೀಗೆ ಎರಡೂ ಬದಿ ಕಣ್ಣಾಡಿಸುತ್ತ ಇರಿ. ಘೇಂಡಾಮೃಗ ಜಿಂಕೆ ಇತ್ಯಾದಿ ಪ್ರಾಣಿಗಳು ಕಂಡರೂ ಕಾಣಬಹುದು’ ಎಂದ ದೀಪಕ್ ನಾಥ್. ನಾವು ರಸ್ತೆಯುದ್ದಕ್ಕೂ ಕಣ್ಣುಬಿಟ್ಟು ನೋಡಿಯೇ ನೋಡಿದೆವು. ಹಸು ಬಿಟ್ಟು ಯಾವ ಪ್ರಾಣಿಯೂ ಕಾಣಲಿಲ್ಲ.  ಆಗ ಅಶೋಕಭಾವನ ಉವಾಚ ಘೇಂಡಾಮೃಗ ಕಾಣದಿದ್ದರೂ ಗಂಡ ಪ್ರಾಣಿ ನೋಡಿಬಿಡಿ  ಎಂದು!
  ದಾರಿಯಲ್ಲಿ ಸೌದೆ ಹೊತ್ತ ಗಂಡಸರು ಹೆಂಗಸರನ್ನು ಕಂಡಾಗ ಇವರು ಕಷ್ಟ ಸಹಿಷ್ಣುತರು ಎನಿಸಿತು. 


   ನಾವು ೧೨.೩೦ ಗಂಟೆಗೆ ಕಾಜಿರಂಗದ ಟಿ.ಜಿ. ರೆಸಾರ್ಟ್ ತಲಪಿದೆವು. ರೆಸಾರ್ಟ್ ಖಾಲಿ ಹೊಡೆಯುತ್ತಿತ್ತು. ಈಗ ಸೀಸನ್ ಅಲ್ಲವಂತೆ. (Sanjaya Sil TG Resort, email: sanjaybitti@gmail.com, www.kazirangatgresort.com PHONE: 07896944555, 9101350970




   ಕೋಣೆ ದೊಡ್ಡದಾಗಿತ್ತು. ಊಟಕ್ಕೆ ಹೊರಗೆ ಹೋಗುವುದಾ? ಎಂಬ ಜಿಜ್ಞಾಸೆ ಕಾಡಿದಾಗ ರೆಸಾರ್ಟ್ ಸಿಬ್ಬಂದಿ ಅರ್ಧ ಗಂಟೆಯೊಳಗೆ ನಾವೇ ಊಟ ತಯಾರಿ ಮಾಡಿ ಕೊಡುತ್ತೇವೆ. ನೀವು ಹೊರಗೆ ಹೋದರೂ ಅಷ್ಟೇ ಹೊತ್ತಾಗುತ್ತದೆ ಎಂದ. ಸರಿ ಎಂದೊಪ್ಪಿದೆವು. ಅರ್ಧ ಗಂಟೆಯಲ್ಲಿ ಊಟ ತಯಾರು. ಅವರ ಅಡುಗೆ ಮನೆಗೆ ಇಣುಕಿ ನೋಡಿದೆವು. ಸಸ್ಯಾಹಾರ ಮಾಂಸಾಹಾರ ಬೇರೆ ಬೇರೆ ತಯಾರಿ ಇದೆಯಾ ಎಂದು ನೋಡುವ ಇರಾದೆ ಇತ್ತು ನಮಗೆ! ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಅವರು!
   ಚಪಾತಿ, ಬೇಳೆ ತೊವ್ವೆ, ತರಕಾರಿ ಕೂಟು. ಇಷ್ಟೇ ಹೇಳಿದ್ದು ನಾವು.  ಹಸಿನೀರುಳ್ಳಿ ನಿಂಬೆಹಣ್ಣು, ಹಸಿಮೆಣಸು ಹೆಚ್ಚುವರಿ ಆಗಿ ಇಟ್ಟಿದ್ದ. ಚಪಾತಿಗೆ ದಾಲ್ ನೆಂಚಿಕೊಂಡು ತಿಂದೆವು. ರುಚಿಯಾಗಿಯೇ ಇತ್ತು. ಚಪಾತಿಯನ್ನು ತರಕಾರಿ ಕೂಟಿಗೆ ಮುಳುಗಿಸಿ ತಿಂದಾಗ ಏನೋ ಅಡ್ಡ ವಾಸನೆ ಬರತೊಡಗಿತು. ಅವನನ್ನು ಕೇಳಿದಾಗ ಸಾಸುವೆ ಎಣ್ಣೆ ಎಂದ. ಸಾಸುವೆ ಎಣ್ಣೆ ಈ ತರಹ ವಾಸನೆ ಇಲ್ಲ. ಅದು ನಮಗೆ ಒಗ್ಗಿದೆ. ಇದು ಏನೋ ಸರಿ ಇಲ್ಲ. ಮೀನು ಕರಿದ ಎಣ್ಣೆ ಉಪಯೋಗಿಸಿರಬಹುದಾ?  ಎಂದು ನಮಗೆ ಸಂಶಯ ಬರತೊಡಗಿತು. ಒಮ್ಮೆ ಸಂಶಯ ಬಂದರೆ ಮತ್ತೆ ಮತ್ತೆ ವಾಸನೆ ಜೋರಾಗಿಯೇ ಬರುತ್ತದೆ! ಹಾಗಾಗಿ ಅದು ಒಗ್ಗಲೇ ಇಲ್ಲ. ಮತ್ತೆ ಕೂಟು ತಿನ್ನುವ ಗೋಜಿಗೇ ಹೋಗಲಿಲ್ಲ.  ದೇವಕ್ಕಿ ಅಕ್ಕ ಬೇಗ ಊಟ ಮುಗಿಸಿದವಳು,ತಿಂದದ್ದೆಲ್ಲ ವಾಪಾಸು ಬರುವಾಗೆ ಹೊಟ್ಟೆ ತೊಳಸುತ್ತ ಇದೆ ಎಂದು ಕೈತೊಳೆಯಲು ಓಡಿದಳು. ತಿಂದದ್ದು ವಾಪಾಸು ಬರಲಿಲ್ಲ!  ಬಿಸಿನೀರು ಕುಡಿದು ಸುಧಾರಿಸಿಕೊಂಡಳು. ಕಿತ್ತಳೆ ತಿಂದು ಹೊಟ್ಟೆ ಸರಿಮಾಡಿಕೊಂಡೆವು.

  ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸಫಾರಿ

    ೨.೧೫ಕ್ಕೆ ಜಿಪ್ಸಿ ಜೀಪ್ ರೆಸಾರ್ಟಿಗೇ ಬಂತು. ಅದರಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿ ಹೊರಟೆವು. ಒಟ್ಟು ಸಫಾರಿ ೨೫ಕಿಮೀ. ಬ್ರಹ್ಮಪುತ್ರ ನದಿಯಂಚಿನಲ್ಲಿರುವ ೪೩೦ ಚದರ ಕಿಮೀ ವಿಸ್ತಾರವಾದ ಈ ಉದ್ಯಾನವನ ಅಸ್ಸಾಂನ ಗೋಲಘಾಟ್ ಮತ್ತು ನೊವಗಾಂವ್ ಜಿಲ್ಲೆಗಳಲ್ಲಿ ವ್ಯಾಪಿಸಿವೆ. ಈ ವನ್ಯಧಾಮದ ಜವುಗುಭೂಮಿಯಲ್ಲಿ ಕೆಲವು ಪ್ರಾಣಿಗಳು ಮೇಯುತ್ತಿರುವುದು ಕಂಡೆವು. ಕಾಡೊಳಗೆ ನಿಧಾನವಾಗಿ ಜೀಪ್ ಸಾಗಿತು. ಮರಗಳು ಎಲೆ ಉದುರಿಸಿ ಬೋಳಾಗಿದ್ದುವು. ಅದರ ಸೌಂದರ್ಯವೇ ಬೇರೆ ತರಹ. ಯಾವುದಾದರೂ ಪ್ರಾಣಿ ಕಂಡಾಗ ಚಾಲಕ ಬಸಂತ್ ಜೀಪ್ ನಿಲ್ಲಿಸುತ್ತಿದ್ದ.  ಬ್ರಹ್ಮಪುತ್ರ ನದಿ ನೀರಲ್ಲಿ ಆನೆಗಳ ಹಿಂಡು ಕಾಣಿಸಿತು. ಜೀಪ್ ನಿಲ್ಲಿಸಿ ನಾವು ನೋಡುತ್ತಿದ್ದಂತೆಯೇ ಆನೆಗಳ ಸವಾರಿ ನೀರಿನಿಂದ  ಕಾಡಿನತ್ತ  ಹೊರಟಿತು. ಬಹಳ ದೂರದಲ್ಲಿ ಇದ್ದ ಕಾರಣ ಸ್ಪಷ್ಟ ಚಿತ್ರಣ ಸಿಗಲಿಲ್ಲ.  ಜಿಂಕೆ, ಘೇಂಡಾಮೃಗ, ಕಾಡೆಮ್ಮೆ, ಆನೆ, ಆಮೆ, ಜೋಡಿ ಗೂಬೆ, ಕೋತಿ, ಹದ್ದು, ಇತರೆ ಸಣ್ಣ ಪಕ್ಷಿಗಳನ್ನು ನೋಡುವ ಅದೃಷ್ಟ ನಮ್ಮದಾಯಿತು. ೫-೬ ಘೇಂಡಾಮೃಗಗಳೂ ದೂರದಲ್ಲಷ್ಟೇ ಕಾಣಿಸಿದುವು. ೨೦೧೮ರಲ್ಲಿಯ ಗಣತಿ ಪ್ರಕಾರ ಘೇಂಡಾಮೃಗಗಳ ಸಂಖ್ಯೆ ೨೪೧೩. ನಮ್ಮ ಜೀಪಿನ ಚಾಲಕ ಬಸಂತ್ ಹೇಳಿದ್ದು ಇಲ್ಲಿ ಸುಮಾರು ೩೨೫೦ ಘೇಂಡಾಮೃಗಗಳು ಹಾಗೂ ಸುಮಾರು ೨೫೦ ಹುಲಿಗಳಿವೆ. ದೂರದ ಸೈಬೀರಿಯಾದಿಂದ ಬಂದ ಬಾರ್ ಹೆಡೆಡ್ ಬಾತುಕೋಳಿಗಳು ಇದ್ದುವು. ಹುಲಿ ಮಾತ್ರ ಕಾಣಲು ಸಿಗುವುದಿಲ್ಲವಂತೆ.  



















    ಈ ಉದ್ಯಾನವನ ಅಳಿವಿನಂಚಿನಲ್ಲಿರುವ ಒಂದು ಕೊಂಬಿನ ಘೇಂಡಾಮೃಗಗಳ ಆಶ್ರಯ ತಾಣವೆಂದು ಪ್ರಸಿದ್ಧಿ ಪಡೆದಿದೆ. ೨೦೦೬ರಲ್ಲಿ ಇದನ್ನು ಹುಲಿ ಸಂರಕ್ಷಿತ ವನ್ಯಧಾಮವೆಂದು ಕೂಡ ಘೋಷಿಸಲಾಯಿತು. ೧೯೫೦ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಗಿದೆ.  ಇದನ್ನು ೧೯೮೫ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ೧೯೦೫ರಲ್ಲಿ ಮೀಸಲು ಅರಣ್ಯವಾಗಿ ಘೋಷಿಸಲ್ಪಟ್ಟ ಕಾಜಿರಂಗ ರಾಷ್ಟ್ರೀಯ ಉದ್ಯಾನವು ೨೦೦೫ರಲ್ಲಿ ನೂರು ವರ್ಷದ ಗಡಿ ದಾಟಿತು. ಮಳೆ ಪ್ರವಾಹದಲ್ಲಿ ಈ ಉದ್ಯಾನವನಕ್ಕೆ ಆಗಾಗ ಹಾನಿ ಸಂಭವಿಸುತ್ತಲೇ ಇರುತ್ತದೆಯಂತೆ. 

  ನಮ್ಮಿಂದ ಮುಂದೆ ನಾಲ್ಕೈದು ಜೀಪ್ ಸಫಾರಿ ಇತ್ತು. ಕೆಲವೆಡೆ ಅಂತೂ ಅದರ ಹಿಂದೆ ಹೋದ  ನಮಗೆ ಧೂಳಿನ ಮಾಘಸ್ನಾನ. ಒಂದು ಕೆರೆ ಆವರಣದಲ್ಲಿ ಸ್ವಲ್ಪ ಹೊತ್ತು ವಿರಾಮ. ದೂರದಲ್ಲಿ ಎರಡು ಘೇಂಡಾಮೃಗಗಳು ವಿಹರಿಸಿರುವುದು ಕಂಡಿತು. ಅಲ್ಲಿ ಜೀಪ್ ಇಳಿದು ಅಡ್ಡಾಡಿದೆವು.  ಅಲ್ಲಿ ವನರಕ್ಷಕರ ಪುಟ್ಟ ಅಟ್ಟಳಿಗೆ ಮನೆ ಇತ್ತು.  ದಾರಿ ಮಧ್ಯೆ ಇಂಥ ಮನೆಗಳು ಕೆಲವು ಕಾಣಿಸಿದ್ದುವು.
   ವನ್ಯಧಾಮ ಸುತ್ತಿ ವಾಪಾಸಾಗುತ್ತಿರುವಾಗ ಭಾಸ್ಕರನೂ ಮನೆಗೆ ತೆರಳಲು ತಯಾರಿ ನಡೆಸಿದ ಹೊತ್ತಲ್ಲಿ ಸಾಕಾನೆಗಳ ದರ್ಶನವಾಯಿತು. ಅನೆಗಳ ಮೈಮೇಲೆ ದೊಡ್ಡದಾದ ಹುಲ್ಲಿನ ಹೊರೆ ಹೊರೆಸಿಕೊಂಡು ಅವುಗಳ ಮಾವುತರು ಬರುತ್ತಲಿದ್ದರು. ರಾತ್ರೆ ಕಟ್ಟಿ ಹಾಕಿದಾಗ ಅವುಗಳಿಗೇ ಮೇವು ಅದು. ಆನೆ ಕೆಳಗೆ ಕೂತಂತೆ ಹುಲ್ಲಿನ ಹೊರೆ ಕೆಳಗೆ ಬೀಳಿಸಿದ ಮಾವುತ. ಈ ದೃಶ್ಯ ನೋಡಲು ರೋಚಕವಾಗಿತ್ತು. ಆನೆ ಕಟ್ಟುವ ಸರಪಳಿ ನೋಡಿದಾಗ ಮಾತ್ರ ಸ್ವಚ್ಛಂದವಾಗಿ ಕಾಡಿನಲ್ಲಿ ವಿಹರಿಸಿಕೊಂಡು ಇರಬೇಕಾಗಿದ್ದದ್ದು ಇಲ್ಲಿ ಸರಪಳಿಯಲ್ಲಿ ಬಂಧಿಯಾಗಬೇಕಲ್ಲ ಎನಿಸಿತು. ಮನುಜನ ಅತಿಯಾದ ಬುದ್ಧಿವಂತಿಕೆಯಿಂದ ಕೆಲವು ಪ್ರಾಣಿಗಳಿಗೆ ಇಂಥ ಹಿಂಸೆ ತಪ್ಪಿದ್ದಲ್ಲ ಎಂದು ಹೇಳಿಕೊಂಡೆ. ಸುಮಾರು ನಾಲ್ಕೈದು ಆನೆಗಳು ಸಫಾರಿಗಾಗಿ ಅಲ್ಲಿವೆ. ಆನೆ ಮೇಲೆ ಕುಳಿತು ಕಾಡೊಳಗೆ ಸಫಾರಿ ಕರೆದುಕೊಂಡು ಹೋಗುತ್ತಾರೆ. ಅದು ಬೆಳಗ್ಗೆ ಎರಡು ಪಾಳಿಯಲ್ಲಿ ಮಾತ್ರ ೫ರಿಂದ ೬, ೬.ರಿಂದ ೭ ಗಂಟೆಯೊಳಗೆ  ಇದೆಯಂತೆ. ೭ರಿಂದ ೮ ಕಾದಿರಿಸಿದ ಪ್ರಯಾಣಿಕರಿಗೆ ೨ ಪಾಳಿಯಲ್ಲಿ ಸ್ಥಳಾವಕಾಶವಾಗದೆ ಇದ್ದರೆ ಮಾತ್ರ. ಜೀಪ್ ಸಫಾರಿ ವೇಳೆ ಬೆಳಗ್ಗೆ ೮ರಿಂದ ೧೦ ಗಂಟೆವರೆಗೆ, ಸಂಜೆ ೨ರಿಂದ ೪ಗಂಟೆವರೆಗೆ. ಸಫಾರಿಗೆ ನಾಲ್ಕು ಗೇಟುಗಳಿಂದ ಹೊರಡುತ್ತದೆ.













 ಪ್ರತೀ ವರ್ಷ ಮೇ ತಿಂಗಳಿನಿಂದ ಅಕ್ಟೋಬರ ತಿಂಗಳವರೆಗೆ ಈ ಉದ್ಯಾನ ಮುಚ್ಚಲ್ಪಡುತ್ತದೆ. ಭೇಟಿ ನೀಡಲು ಪ್ರಶಕ್ತ ಕಾಲ ನವೆಂಬರಿನಿಂದ ಎಪ್ರಿಲ್ ವರೆಗೆ . 
 ಒಟ್ಟು ೨.೧೫ ಗಂಟೆಗಳ ಸಫಾರಿ ಸಂಜೆ ೪.೩೦ಗೆ ಮುಕ್ತಾಯವಾಯಿತು. ನಮ್ಮನ್ನು ವಾಪಸು ರೆಸಾರ್ಟಿಗೇ ಬಿಟ್ಟರು. ಪ್ರಸಿದ್ಧಿಪಟ್ಟ ನಮ್ಮ ರಾಷ್ಟ್ರೀಯ ಉದ್ಯಾನವನವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡದೆ ಇರುವುದು ಉಂಟಾ? ಎಂಬ ಪ್ರಶ್ನೆ ಬಾರದಂತೆ ಅದನ್ನು ನೋಡಿದ್ದು ನಮ್ಮ ಇತಿಹಾಸದ ಪುಟದಲ್ಲಿ ದಾಖಲಾಯಿತು. ರೆಸಾರ್ಟಿನಲ್ಲಿ ಚಹಾ ಕುಡಿದು ನಾವು ಕಾಲ ಕಳೆದೆವು.

ಆರ್ಕಿಡ್ ಉದ್ಯಾನವನ

   ಸಂಜೆ ೬ಕ್ಕೆ ಆರ್ಕಿಡ್ ಉದ್ಯಾನವನದಲ್ಲಿ ಅಸ್ಸಾಂ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಆರ್ಕಿಡ್ ಉದ್ಯಾನ ನೋಡಲೂ ತೆಗೆಯುವ ಟಿಕೆಟ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನ್ವಯಿಸುವುದಿಲ್ಲ. ಅದನ್ನು ನೋಡಲು ಪ್ರತ್ಯೇಕ ಟಿಕೆಟ್ ಪಡೆದು ಒಳಹೋಗಬೇಕು.  ಉದ್ಯಾನವನದಿಂದ ಸಂಜೆ ೫ ಗಂಟೆಗೆ ನಿರ್ಗಮಿಸಲೇಬೇಕು. ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ನಮಗೆ ಅನುವು ಮಾಡಿಕೊಟ್ಟಿದ್ದರು. ಆದರೆ ಆರ್ಕಿಡ್ ಉದ್ಯಾನವನ ನೋಡಲು ನಮಗೆ ಸಾಧ್ಯವಾಗಲಿಲ್ಲ. ಉದ್ಯಾನವನ ತಲಪುವಾಗ ಆಗಲೇ ಕತ್ತಲೆಯಾಗಿತ್ತು. ಹಾಗಾಗಿ ನಾವು ವಂಚಿತರಾದೆವು. ಮೊದಲೇ ಗೊತ್ತಿದ್ದರೆ ರೆಸಾರ್ಟಿನಲ್ಲಿ ಕಾಲ ಹರಣ ಮಾಡದೆಯೇ ಕೂಡಲೇ ಅಲ್ಲಿಗೆ ಹೋಗಬಹುದಾಗಿತ್ತು. ಅಪರೂಪದ ಸಸ್ಯಗಳು, ಔಷಧೀಯ ಸಸ್ಯಗಳು, ಆರ್ಕಿಡ್ ಸಸ್ಯಗಳೆಲ್ಲ ಅಲ್ಲಿ ಇವೆಯಂತೆ. ಎಲ್ಲಾ ಸುತ್ತಿ ನೋಡಲು ಒಂದು ಗಂಟೆಯಾದರೂ ಬೇಕು ಎಂಬುದು ಮತ್ತೆ ತಿಳಿಯುತು.   ಉದ್ಯಾನವನ ಟಿಕೆಟ್ ಹಣ ನಮಗೆ ಉಳಿತಾಯವಾದದ್ದೊಂದೇ ಲಾಭ!
ನಾವು ೬ ಗಂಟೆಗೆ ಖಾರು ಹತ್ತಿ ಅಲ್ಲಿಗೆ ಹೋಗಿ ಕುರ್ಚಿಯಲ್ಲಿ ಆಸೀನರಾದೆವು. ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿ ಜನ ಸೇರಿದ್ದರು. ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸುರುವಾಯಿತು. ಸುಮಾರು ೧೦ ಬಗೆಯ ನೃತ್ಯ ಪ್ರದರ್ಶನವಿತ್ತು. ನೃತ್ಯ ಅಂಥ ಅದ್ಭುತ ಎಂದೇನೂ ಅನಿಸಿರಲಿಲ್ಲ. ಸಾಮಾನ್ಯವಾಗಿತ್ತು. ಆದರೆ ಒಂದು ಗಂಟೆಗಳ ಕಾಲ ಅವನ್ನು ನೋಡುತ್ತ ಕಾಲ ಕಳೆಯಲು ತೊಂದರೆ ಅನಿಸಿರಲಿಲ್ಲ. ಪ್ರತೀ ನೃತ್ಯದ ಬಗ್ಗೆ ನಿರ್ವಾಹಕ ಹೇಳುತ್ತಲಿದ್ದಾಗ ನಾನು ನನಗೆ ಕೇಳಿಸಿದಂತೆ ಅವುಗಳ ಹೆಸರನ್ನು ದಾಖಲಿಸಿರುವುದು (ಉಚ್ಚಾರದಲ್ಲಿ ತಪ್ಪೂ ಇರಬಹುದು) ಹೀಗಿದೆ. ೧) ಜಂಕರ್ಡ್ ೨) ಬೂಟಾಲ್ ನೃತ್ಯ ೩) ಮತ್ಸ್ಯಕಡ ೪) ಹಂಸ ನರ್ತನ ೫) ಬಟರ್ ೬) ಬಗುರುಂಬ ನರ್ತನ ೭) ದೇವದನಿ ಭಯಾನಕ ನೃತ್ಯ (ಭಯಾನಕ ನೃತ್ಯ ಎಂದಾಗ ಹೇಗಿರುತ್ತಪ್ಪ? ಕಣ್ಣುಮುಚ್ಚಬೇಕಾದೀತೇನೋ ಅನಿಸಿತ್ತು. ಒಮ್ಮೆ ಕತ್ತಲು ಮಾಡಿ ಮತ್ತೆ ಬೆಳಕಲ್ಲಿ ಇಬ್ಬರು ಮಹಿಳೆಯರು ಕೂದಲು ಕೆದರಿಕೊಂಡು ಕುಣಿದರು. ಅದೇ ಅವರಿಗೆ ಭಯಾನಕ! ನಮ್ಮ ಯಕ್ಷಗಾನದಲ್ಲಿ ಬರುವ ಭಯಾನಕ ವೇಷ  ಅವರು ನೋಡಿದರೆ ಹೆದರಿ ಉಚ್ಚೆ ಹೊರಸುರಿದೀತು.)  ೮)ಮಿಸ್ಸಿಂಗ್ ಗೂಮ್ರ ನೃತ್ಯ ೯) ಕರ್ಬಿ ಬಂಬೂ ನರ್ತನ ೧೦) ಬಿಹು ನೃತ್ಯ













     ನೃತ್ಯ ನೋಡಿ ನಾವು ಅಲ್ಲಿದ್ದ ಅಂಗಡಿಬೀದಿ ಸುತ್ತಿ ಕಾರು ಹತ್ತಿ ರೆಸಾರ್ಟಿಗೆ ವಾಪಾಸಾದೆವು. ರಾತ್ರೆ ಊಟಕ್ಕೆ ಚಪಾತಿ ದಾಲ್ ಮಾತ್ರ ಸಾಕು ಎಂದಿದ್ದೆವು!

   ಕಾಜೀರಂಗದಿಂದ ನಿರ್ಗಮನ

ತಾರೀಕು ೧೬-೨-೨೦೨೦ರಂದು ನಾವು ಬೆಳಗ್ಗೆ ತಿಂಡಿ (ಚಪಾತಿ ದಾಲ್!) ತಿಂದು ೮ ಗಂಟೆಗೆ ತಯಾರಾಗಿ ಕಾಜೀರಂಗದಿಂದ ಹೊರಟೆವು. ನಮ್ಮನ್ನು ಗೌಹಾತಿಯ ಕಾಮಾಕ್ಯ ದೇವಾಲಯಕ್ಕೆ ಕರೆದುಕೊಂಡು ಹೋಗಿ ಮತ್ತೆ ವಿಮಾನ ನಿಲ್ದಾಣಕ್ಕೆ ಬಿಡು  ಎಂದು ದೀಪಕ್ ನಾಥನಿಗೆ ಕೇಳಿಕೊಂಡೆವು. ಗೌಹಾತಿ ವಿಮಾನ ನಿಲ್ದಾಣದ ರಸ್ತೆಯೇ ಬೇರೆ ಕಡೆ. ಕಾಮಾಕ್ಯ ಇನ್ನೊಂದು ದಿಕ್ಕು. ತುಂಬ ದೂರವಾಗುತ್ತದೆ ಸಾಧ್ಯ ಇಲ್ಲ ಎಂದು ನಮ್ಮ ಕೌತುಕಕ್ಕೆ ತಣ್ಣೀರು ಹಾಕಿದ.  ರೂ. ೫೦೦ ಕೊಟ್ಟರೆ ಹೋಗಬಹುದು ಎಂದ. (ಆಗ ಕಾಮಾಕ್ಯ ವಿಮಾನನಿಲ್ದಾಣ ರಸ್ತೆಯ ಸಮೀಪವೇ ಆದದ್ದು ಸೋಜಿಗ!) ನಾವು ಅವನಿಗೆ ೫೦೦ ಕೊಟ್ಟು ಪಾಪ ಕಟ್ಟಿಕೊಳ್ಳಲಿಲ್ಲ! ಅವನಿಗೆ ಹಿಂದಿನ ದಿನವೇ ಮಗಳು ದೂರವಾಣಿಸಿ ಅಪ್ಪ ಯಾವಾಗ ಬರುತ್ತೀಯ ಎಂದು ಕೇಳಿದ್ದು, ಬೇಗ ಬರುತ್ತೇನೆ ಎಂದು ಇವನು ಹೇಳಿದ್ದು ಕೇಳಿಸಿತ್ತು. ಹಾಗಾಗಿ ನಮ್ಮನ್ನು ಆದಷ್ಟು ಬೇಗ ವಿಮಾನ ನಿಲ್ದಾಣದಲ್ಲಿಳಿಸಿ ಮನೆಗೆ ಬೇಗ ಹೋಗಲು ಅವನಿಗೆ ಅತುರವಾಗಿತ್ತು.
   ದಾರಿಯಲ್ಲಿ ಒಂದು ಹೊಟೇಲಲ್ಲಿ ಚಹಾ ಕಾಫಿಗೆ ನಿಲ್ಲಿಸಿದ. ಅಲ್ಲಿ ಚಹಾ ಕಾಫಿಯೊಂದಿಗೆ ನೀರುಳ್ಳಿ ಪಕೋಡ ತೆಗೆದುಕೊಂಡೆವು. ನನ್ನ ಎದುರಿಟ್ಟ ಕಾಫಿಯಲ್ಲಿ ದಪ್ಪ ದಪ್ಪ ಕೆನೆ ತೇಲುತ್ತಿತ್ತು. ಇದನ್ನು ಕುಡಿದರೆ ವಾಂತಿ ಗ್ಯಾರಂಟಿ ಎನಿಸಿ ಸೋಸಿ ಕೊಡಬೇಕೆಂದು ಮಹಿಳಾ ಪರಿಚಾರಿಕೆಯವಳಿಗೆ ಅರ್ಥವಾಗುವಂತೆ ಹೇಳುವಲ್ಲಿ ದೇವಕ್ಕಿ ಅಕ್ಕ ಸಫಲಳಾದಳು. ಸೋಸಿದ ಕಾಫಿಯನ್ನು ಕುಡಿದೆ! ಅಲ್ಲಿ ಎಲ್ಲ ಕೆಲಸ ಮಹಿಳೆಯರೇ ಮಾಡುತ್ತಿದ್ದುದು ಕಂಡಿತು.

   ಬಿದಿರ ಸಾಮಾಗ್ರಿಗಳು

 ದಾರಿಯಲ್ಲಿ ಸಾಗುತ್ತಿರಬೇಕಾದರೆ ಬಿದಿರಿನಿಂದ ತಯಾರಿಸಿದ ಬುಟ್ಟಿ, ತಟ್ಟೆ ಆಟದ ಸಾಮಾನು ಇತ್ಯಾದಿ ಸಾಮಾಗ್ರಿಗಳ ಅಂಗಡಿ ಸಾಲುಗಳು ಕಂಡು, ಒಂದೆರಡು ಅಂಗಡಿಗಳಲ್ಲಿ ನಿಲ್ಲಿಸಿ ನಾವು ನೋಡಿದೆವು. ದೂರದಿಂದ ನೋಡಲು ಬಹಳ ಚೆನ್ನಾಗಿ ಕಾಣುತ್ತಿದ್ದುವು. ದೇವಕ್ಕಿ ಅಕ್ಕ ಒಂದು ತಟ್ಟೆ ಹಾಗೂ ನಾನು ಒಂದು ಆಟದ ಸಾಮಾನು ತೆಗೆದುಕೊಂಡೆವು. ಎಳನೀರು ಮಾರಾಟವೂ ಇತ್ತು. ಒಂದು ಎಳನೀರಿಗೆ ರೂ.೩೦ ದರ. ನಮ್ಮ ಊರಿನಷ್ಟೇ ಎಂದು ಮಾತಾಡಿಕೊಂಡೆವು. ಗಾತ್ರದಲ್ಲಿ ಮಾತ್ರ ದೊಡ್ಡದಾಗಿತ್ತು. ಅಸ್ಸಾಮಿನಲ್ಲಿ ತೆಂಗು ಬೆಳೆಯುತ್ತದೆ.


    ಗೌಹಾತಿ ವಿಮಾನ ನಿಲ್ದಾಣ

ಗೌಹಾತಿಯಲ್ಲಿ ಬೇರೆ ಸ್ಥಳ ನೋಡುವ ಆಸೆ ಕೈಬಿಟ್ಟೆವು. ವಿಮಾನ ನಿಲ್ದಾಣಕ್ಕೆ ಅತಿ ಸಮೀಪದಲ್ಲೇ ಇರುವ ಸಸ್ಯಾಹಾರಿ ಹೊಟೇಲ್ ಬಳಿ ಕಾರು ನಿಲ್ಲಿಸಿದ. ಅಲ್ಲಿ ಚಪಾತಿ, ತರಕಾರಿ ಕೂಟು, ಅನ್ನ, ಮೊಸರು ಊಟವಾಯಿತು. ನೀರುಳ್ಳಿ, ನಿಂಬೆ, ಹಸಿಮೆಣಸು ತಂದಿಟ್ಟರು. ಅಸ್ಸಾಂ ಮೇಘಾಲಯಗಳಲ್ಲಿ ಊಟಕ್ಕೆ ಹಸಿಮೆಣಸು ಕೊಡುವ ಪದ್ಧತಿ ಇದೆಯೆಂದು ತೋರುತ್ತದೆ. ನಮಗೆ ಎಲ್ಲ ಕಡೆ ಹಸಿಮೆಣಸು ಕೊಟ್ಟಿದ್ದರು. ಹಸಿಮೆಣಸು ತಿನ್ನುವ ಸಾಮರ್ಥ್ಯ ನಮಗಿಲ್ಲವಾದ್ದರಿಂದ ನಾವು ಅದನ್ನು ಮುಟ್ಟಿರಲಿಲ್ಲ.ಇಷ್ಟು ದಿನದಲ್ಲಿ ಕೊಟ್ಟ ಹಸಿಮೆಣಸನ್ನು ಚೀಲಕ್ಕೆ ತುಂಬಿರುತ್ತಿದ್ದರೆ ತಿಂಗಳು ಕಾಲ ಹಸಿಮೆಣಸು ಸಾಕಾಗುತ್ತಿತ್ತು! ಹಾಗೆ ಮನಕ್ಕೆ ಬಂದದ್ದೇ ತಡ, (ಮನೆಗೆ ತೆರಳಿದ ಬಳಿಕ ಹಸಿಮೆಣಸು ಹಾಕಿ ಚಟ್ನಿ ಮಾಡಿ ಕಾರ ಇದೆಯೋ ಇಲ್ಲವೋ ತಿಳಿಯೋಣವೆಂದು) ಕೊನೆ ಊಟದ ಹಸಿಮೆಣಸನ್ನು ಚೀಲಕ್ಕೆ ಹಾಕಿಕೊಂಡೆ!
 ವಿಮಾನ ನಿಲ್ದಾಣದಲ್ಲಿ ನಮ್ಮನ್ನಿಳಿಸಿದ ದೀಪಕ್ ನಾಥ. ಆಗ ಗಂಟೆ ೨ ಆಗಿತ್ತಷ್ಟೆ. ನಾವು ಒಳಗೆ ಹೋಗಿ ಬ್ಯಾಗ್ ತಪಾಸಣೆ ಇತ್ಯಾದಿ ಕಲಾಪಗಳನ್ನು ನಿಧಾನವಾಗಿ ಮುಗಿಸಿ ವಿಮಾನ ಹತ್ತುವ ಗೇಟ್ ಬಳಿ ಹೋಗಿ ಗಂಟೆಗಟ್ಟಲೆ ಕಾದು ಕುಳಿತೆವು. ಅಷ್ಟರಲ್ಲಿ ಗಣಪತಿಭಟ್ ಸಾವಿತ್ರಿ ಬಂದು ಸೇರಿದರು. ಸಕಾಲಕ್ಕೆ ವಿಮಾನ ಹತ್ತಿದೆವು. 


ಮರಳಿ ಮನೆಗೆ 

೫.೩೫ಕ್ಕೆ ವಿಮಾನ ಹೊರಟು ಬೆಂಗಳೂರು ನಿಲ್ದಾಣ ತಲಪಿದಾಗ ರಾತ್ರೆ ೮.೩೦ ಆಗಿತ್ತು. ನಮ್ಮ ಲಗೇಜು ಪಡೆದು ಅವಸರವಾಗಿ ಹೊರಬಂದು ಮೈಸೂರು ಬಸ್ ಹತ್ತಿದೆವು. ನಾವು ಬಸ್ ಹತ್ತಿ ೫ ನಿಮಿಷದಲ್ಲಿ ಬಸ್ ಹೊರಟಿತು.  ಅಶೋಕಭಾವ ದೇವಕ್ಕಿ ಅಕ್ಕ ಊಬರ್ ಕಾರಿನಲ್ಲಿ ಮಗನ ಮನೆಗೆ ಹೋದರು.  ನಾವು ಮೈಸೂರು ಮನೆ ತಲಪಿದಾಗ ಮಧ್ಯರಾತ್ರೆ ೧ ಗಂಟೆ ಆಗಿತ್ತು. ಅಲ್ಲಿಗೆ ಒಟ್ಟು ೯ ದಿನದ ನಮ್ಮ ಮೇಘಾಲಯ ಅಸ್ಸಾಂ ಪ್ರವಾಸಕ್ಕೆ ತೆರೆಬಿತ್ತು.  ಇತ್ತ  ಸಿದ್ದಮ್ಮ ಹಾಗೂ ಅವಳ ಮಗ ರವಿ (ರಾತ್ರೆ ಮನೆ ಪಾರ) ಮನೆಯನ್ನು ಹಾಗೂ ನಮ್ಮ ಕೈತೋಟಕ್ಕೆ ನೀರು ಹಾಕಿ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರಿಂದ ನಮಗೆ ಬಹಳ ಉಪಕಾರಿಯಾಗಿತ್ತು. ಅವರಿಗೆ ಧನ್ಯವಾದ ಸಲ್ಲಲೇಬೇಕು. ರವಿಗೆ ಅದೆಷ್ಟು ದಾಕ್ಷಿಣ್ಯವೆಂದರೆ ಆ ರಾತ್ರೆ ೧ ಗಂಟೆಗೆ ಸ್ಕೂಟರ್ ಹತ್ತಿ ತನ್ನ ಮನೆಗೆ ಹೋಗಿದ್ದ! 
    ನಮಗೆ ಒಬ್ಬರಿಗೆ ಸರಿಸುಮಾರು ರೂ. ೨೫,೨೫೦ ಖರ್ಚಾಯಿತು. ಯೂಥ್ ಹಾಸ್ಟೆಲ್ ವತಿಯಿಂದ ೬ ದಿನವೂ ಉತ್ಕೃಷ್ಟ ಪೌಷ್ಟಿಕ ಆಹಾರ ಕೊಟ್ಟದ್ದರಿಂದ ಹಾಗೂ ನಾವು ಚಪಾತಿ ತರಕಾರಿ ಕೂಟು, ಬೇಳೆ ತೊವ್ವೆ ಅಷ್ಟೇ ತಿಂದದ್ದರಿಂದ ನಮ್ಮ ಹೊಟ್ಟೆ ಅಷ್ಟು ದಿನವೂ ಸುಸ್ಥಿತಿಯಲ್ಲೇ ಇದ್ದದ್ದರಿಂದ ಪ್ರಯಾಣ ಸುಖಕರವಾಗಿ ಆಗಿತ್ತು!
 ಇಲ್ಲಿ ಬಳಸಿದ ಕೆಲವು ಪಟಗಳ ಕೃಪೆ: ಗಣಪತಿ ಭಟ್ ಹಾಗೂ ಅಶೋಕವರ್ಧನ