ಶನಿವಾರ, ಅಕ್ಟೋಬರ್ 27, 2018

ಚಿತ್ರದುರ್ಗದಲ್ಲೆರಡು ದಿನದ ಚಾರಣ

ಚಿತ್ರದುರ್ಗ ಎಂದರೆ ಮನದಲ್ಲಿ ಮೂಡುವುದೇ ಐತಿಹಾಸಿಕ ತಾಣ ಚಿತ್ರದುರ್ಗದ ಏಳುಸುತ್ತಿನ ಕೋಟೆ. ನಾಗರಹಾವು ಚಲನಚಿತ್ರದಿಂದಾಗಿ ಇನ್ನೂ ಹೆಚ್ಚಿನ ಪ್ರಸಿದ್ಧಿ ಹೊಂದಿದ ಸ್ಥಳವದು. ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದಿಂದ ಚಿತ್ರದುರ್ಗಕ್ಕೆ ಎರಡು ದಿನದ ಚಾರಣ ಹಮ್ಮಿಕೊಂಡಿದ್ದರು. ಮೈಸೂರಿನಿಂದ ನಾವು ೨೪ ಮಂದಿ ಮಿನಿ ಬಸ್ಸಿನಲ್ಲಿ ೧೪..೧೮ರಂದು ರಾತ್ರಿ ೯.೩೦ಗೆ ನಿಗದಿಗೊಳಿಸಿದ ಸಮಯಕ್ಕೆ ಸರಿಯಾಗಿ ಹೊರಟೆವು. ಸರೋಜ ಮತ್ತು ನಾನು ನಿದ್ದೆ ಮಾಡದೆ ಮಾತಾಡುತ್ತ ಕುಳಿತೆವು. ನಾಗೇಂದ್ರಪ್ರಸಾದ್ ಚಾಲಕ ನಿಂಗಣ್ಣನ ಜೊತೆಗೆ ಮಾತಾಡುತ್ತ ಕುಳಿತರು.ಮೈಸೂರು ಮಂಡ್ಯ, ಹುಲಿಯೂರು ತುಮಕೂರು ದಾರಿಯಾಗಿ ನಾವು ಚಿತ್ರದುರ್ಗದ ಮುರುಘ ರಾಜೇಂದ್ರ ಮಠ ತಲಪುವಾಗ ೧೫..೧೮ರಂದು ಬೆಳಗ್ಗೆ ಮೂರುಗಂಟೆಯಾಗಿತ್ತು. ಅಲ್ಲಿ ಎರಡು ಕೊಟಡಿ ಪಡೆದು ಅಲ್ಲಿ ವಾಸ್ತವ್ಯ ಹೂಡಿದೆವು. ಒಂದು ಕೋಣೆ ಗಂಡಸರಿಗೆ. ಇನ್ನೊಂದರಲ್ಲಿ ನಾವು ಹೆಂಗಸರು ೯ ಮಂದಿ ಸೇರಿಕೊಂಡೆವು.

ಬೆಳಗ್ಗೆ ಎದ್ದು ೭ ಗಂಟೆಗೆ ನಾವು ತಯಾರಾಗಿ ಕೋಣೆಗಳಿಂದ ಹೊರಬಂದೆವು. ಐಶ್ವರ್ಯ ಫೋರ್ಟೆ ಎಂಬ ಹೊಟೇಲಿಗೆ ಹೋಗಿ ಇಡ್ಲಿ ವಡೆ ತಿಂದು ಕಾಫಿ ಕುಡಿದೆವು.ಅಲ್ಲಿ ಮಿಠಾಯಿ ಮುರುಗೇಶ್ ನಮ್ಮ ಜೊತೆ ಸೇರಿಕೊಂಡರು. ಅವರೇ ನಮಗೆ ಮಾರ್ಗದರ್ಶಕರು.ಅವರ ಸಂಪರ್ಕ ಸಂಖ್ಯೆ 9449682119




ಧವಳಪ್ಪನ ಗುಡ್ಡದತ್ತ ನಮ್ಮಯ ನಡಿಗೆ

ಬಹಳ ಹಿಂದಿನ ಕಾಲದಲ್ಲಿ  ಧವಳಪ್ಪ ಎಂಬ ಮುನಿ ಒಂದು ಗುಡ್ಡವನ್ನೇರಿ ಅಲ್ಲಿ ೧೦೧ ಶಿವಲಿಂಗಗಳನ್ನು ಅಲ್ಲಿರುವ ಬಂಡೆಗಳಲ್ಲಿ ಕೆತ್ತಿರುವರಂತೆ. ಅದಕ್ಕೆ ಧವಳಪ್ಪನ ಗುಡ್ಡ ಅಥವಾ ೧೦೧ಲಿಂಗು ಗುಡ್ಡ ಎಂದು ಹೆಸರು ಬಂತಂತೆ. ಅಲ್ಲಿಗೆ ನಮ್ಮ ಚಾರಣ ಸುರುವಾಯಿತು. ಮುಂದೆ ಮುರುಗೇಶ್. ಅವರನ್ನು ದಾಟಿ ಯಾರೂ ಮುಂದೆ ಹೋಗುವಂತಿಲ್ಲ ಎಂದು ಕಟ್ಟಪ್ಪಣೆ ವಿಧಿಸಲಾಯಿತು. ಧವಳಪ್ಪನ ಗುಡ್ಡಕ್ಕೆ ಹೋಗಲು ಎರಡು ದಾರಿಗಳಿವೆ. ಒಂದು ಸ್ವಲ್ಪ ಕಷ್ಟದ ದಾರಿ. ಆದರೆ ಚಾರಣಪ್ರಿಯರಿಗೆ ಬಲು ಇಷ್ಟವಾಗುವಂಥ ಸಾಹಸಮಯ ದಾರಿ. ಇನ್ನೊಂದು ಎಲ್ಲರೂ ಹೋಗುವಂಥ ಸಾದಾ ದಾರಿ. ನಾನು ನಿಮ್ಮನ್ನು ಕಷ್ಟದ ದಾರಿಯಲ್ಲಿ ಕರೆದುಕೊಂಡು ಹೋಗಿ, ವಾಪಾಸು ಬರುವಾಗ ಸುಲಭದ ದಾರಿಯಲ್ಲಿ ಕರೆದುಕೊಂಡು ಬರುವೆ ಎಂದರು ಮುರುಗೇಶ್. ಹೆಚ್ಚೇನೂ ದೂರವಿಲ್ಲ. ಕೇವಲ ೨ ಕಿಮೀ. ಅಷ್ಟೆ. ಕಷ್ಟವೂ ಅಂತದ್ದೇನಿಲ್ಲ ಎಂದಿದ್ದರು. ಸರಿ ಎಂದೊಪ್ಪಿ, ನಮ್ಮ ತಂಡದವರೆಲ್ಲ ಸಾಹಸ ಪ್ರವೃತ್ತಿಯವರೇ ಆದುದರಿಂದ ಯಾರೂ ಚಕಾರವೆತ್ತದೆ ಅವರ ಹಿಂದೆ ನಡೆದೆವು. ಹೋಗುವಾಗ ದಾರಿಯಲ್ಲಿ ಕರಡಿಯ ಸಮಾಧಿ ಕಂಡಿತು. ಕರಡಿಗೆ ಊರವರು ಅನ್ನ ಹಾಕುತ್ತಿದ್ದರಂತೆ. ಹೊಟ್ಟೆ ಕೆಟ್ಟು ಕರಡಿಗಳು ಸಾವನ್ನಪ್ಪಿದುವಂತೆ. ಅವುಗಳ ನೆನಪಿಗಾಗಿ ಅಲ್ಲಿ ಸಮಾಧಿ ಮಾಡಿದರಂತೆ. ನಾವು ಮನುಷ್ಯರು ಪಕ್ಷಿ ಪ್ರಾಣಿಗಳಿಗೆ ಆಹಾರ ಹಾಕಬಾರದು. ಅವುಗಳೇ ಆಹಾರ ಹುಡುಕಿಕೊಳ್ಳಬೇಕು. ಆಗ ಮಾತ್ರ ಅವು ಆರೋಗ್ಯದಿಂದಿರುತ್ತವೆ. ಎಂದು ಮುರುಗೇಶ್ ಪ್ರಕೃತಿಯ ಪಾಟ ಮಾಡುತ್ತಲೇ ಮುಂದುವರಿದರು.




ಧವಳಪ್ಪನಗುಡ್ಡಕ್ಕೆ ಹೋಗಲು ಈ ದಾರಿ ನಾವು ಅಂದುಕೊಂಡಷ್ಟು ಬಹಳ ಸಲೀಸಾಗಿ ಏನೂ ಇರಲಿಲ್ಲ. ಕೆಲವು ಬಂಡೆಗಳ ಮಧ್ಯೆ ನುಸುಳಿ, ಮತ್ತೆ ಕೆಲವು ಬಂಡೆಗಳನ್ನು ಏರಿ ಇಳಿದು, ಇನ್ನು ಕೆಲವು ಕಡೆ ಬೃಹತ್ ಬಂಡೆಗಳ ಎಡೆಯಲ್ಲಿ ಅಡ್ಡಡ್ಡ ಚಲಿಸಿ ಹೋಗಬೇಕಿತ್ತು. ಚಾರಣದ ಸುಖವನ್ನು ಅನುಭವಿಸಿ ಬಂಡೆಗಳನ್ನು ದಾಟಿದೆವು. ನನಗೆ ಅಂಥ ಕಷ್ಟವೆನಿಸಲಿಲ್ಲ. ಖುಷಿಯೇ ಆಯಿತು. ಆದರೆ ಮುಂದೆ ಕಷ್ಟದ ಹಾದಿ ಕಣ್ಣೆದುರು ಬಂತು.

ಒಂದೆಡೆ ಬಂಡೆಗಳ ಒಳಗೆ ಅಡ್ಡಡ್ಡ ಹೋಗುವಂಥ ದಾರಿ. ಕತ್ತಲೋ ಕತ್ತಲು. ಟಾರ್ಚ್ ಸಹಾಯದಿಂದ ಮುಂದಡಿ ಇಟ್ಟೆವು. ಒಬ್ಬೊಬ್ಬರಾಗಿ ಮುಂದೆ ಸಾಗಬೇಕಿತ್ತು. ಮುರುಗೇಶ್ ಮುಂದೆ ಹೋಗಿದ್ದರು. ಅವರ ಹಿಂದೆ ಮೂರು ನಾಲ್ಕು ಮಂದಿ ಬಂಡೆ ಒಳಗೆ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ನಮ್ಮ ಮುಂದಿದ್ದವರು ಮುಂದೆ ಸಾಗುವುದು ಕಾಣುತ್ತಿರಲಿಲ್ಲ. ೧೦.೩೦ ಗಂಟೆ ಆಗಿತ್ತು ಆಗ. ಹಿಂದೆ ಇದ್ದವರಿಗೆ ಮುಂದೆ ಏನಾಗಿದೆ ಎಂದು ಗೊತ್ತಿಲ್ಲ. ಕಾದು ಕಾದು ಸಾಕಾಯಿತು. ಆಗ ಮುಂದಿನಿಂದ ಒಂದು ಕೂಗು ಕೇಳಿತು. ಹಿಂದೆ ಇದ್ದ ಉಮಾಶಂಕರರಿಗೆ ಕರೆ ಬಂತು. ಬೇಗ ಮುಂದೆ ಬಂದು ಸಹಾಯ ಮಾಡಬೇಕು. ಉಮಾಶಂಕರರು ಮುಂದೆ ಹೋಗಬೇಕಾದರೆ ಈಗಾಗಲೇ ಬಂಡೆ ಒಳಗೆ ಮುಂದೆ ಹೋಗಿದ್ದವರು ಒಬ್ಬೊಬ್ಬರಾಗಿ ಹಿಂದೆ ಬಂದು ಅವರಿಗೆ ಜಾಗ ಬಿಟ್ಟುಕೊಟ್ಟರು! ಒಂದೆಡೆ ಎರಡುಬಂಡೆಗಳ ಮಧ್ಯೆ ಆರಡಿ ಎತ್ತರದ ಬಂಡೆಯನ್ನು ಅಡ್ಡಡ್ಡವಾಗಿಯೇ ಏರಬೇಕಿತ್ತು. ಶತಾಯಗತಾಯ ಮೇಲೆ ಏರಲೇಬೇಕು. ಬೇರೆ ಉಪಾಯವಿಲ್ಲ. ಮುಂದೆ ಇಟ್ಟ ಹೆಜ್ಜೆ ಹಿಂದಿಡುವಂತಿಲ್ಲ. ಗುರಿ ಒಂದೇ . ಮುಂದೆ ಹೋಗಲೇಬೇಕು. ಮೇಲೆ ಮುರುಗೇಶ್ ಕೈಕೊಟ್ಟು ಎಳೆದರೂ ಕೆಳಗಿನವರ ಕಾಲು ಮೇಲೆ ಬರುತ್ತಿಲ್ಲ! ಹಿಂದಿನಿಂದ ಅವರಿಗೆ ನೂಕುಬಲ ಕೊಟ್ಟರೆ ಮಾತ್ರ ಮೇಲೇರಲು ಸಾಧ್ಯ! ಹಿಂದೆ ಇದ್ದವರು ಮುಂದಿನವರಿಗೆ ನೂಕುಬಲ ಕೊಟ್ಟು ತೊಡೆಮೇಲೆ ಅವರ ಕಾಲಿರಿಸಲು ಒಬ್ಬರಿಗೊಬ್ಬರು ಸಹಾಯ ಮಾಡಿ ಅಂತೂ ಇಂತೂ ಎಲ್ಲರೂ ಆ ಬಂಡೆ ಏರಿದ್ದಾಯಿತು. ಏರಿ ಉಸ್ಸಪ್ಪ ಎಂದು ತುಸು ಹೊತ್ತು ವಿಶ್ರಮಿಸಿದ್ದಾಯಿತು.ಆ ಒಂದು ಬಂಡೆ ಏರಿ ಎಲ್ಲರೂ ಮೇಲೆ ಬರಲು ಒಟ್ಟು ಒಂದು ಗಂಟೆ ಹಿಡಿಯಿತು. ಮೇಲೆ ಹತ್ತಿದವರು ಕೆಳಗಿನವರಿಗೆ ಹುರುಪು ತುಂಬಬೇಕು. ಅದುಬಿಟ್ಟು ಈಗ ಇಲ್ಲಿ ಮೇಲೆ ಬಂದರೂ ಮುಂದೆ ಇನ್ನೂ ಕಷ್ಟವಿದೆ. ಸಾಧ್ಯವೇ ಇಲ್ಲ ಎಂದು ಹೇಳಿದಾಗ ಕೆಳಗೆ ಬಂಡೆ ಏರಲು ಪ್ರಯತ್ನ ಮಾಡುತ್ತಿರುವವರ ಜಂಘಾಬಲವೇ ಉಡುಗಿ ಮೇಲೆ ಹತ್ತಲು ಕಾಲೇ ಮೇಲೇಳುತ್ತಿರಲಿಲ್ಲ. ‘ಇಲ್ಲ, ಅಷ್ಟೇನೂ ಕಷ್ಟವಿಲ್ಲ. ಇಷ್ಟು ಬಂದದ್ದಾಯಿತಲ್ಲ. ಈ ಬಂಡೆ ಒಂದು ಲೆಕ್ಕವೇ ನಿಮಗೆ. ಯೋಚನೆ ಮಾಡದೆ ಮೇಲೆ ಏರಿ’ ಎಂದು ಅವರನ್ನು ಹುರಿದುಂಬಿಸಿ ಮೇಲೆ ಹತ್ತಿಸುವಲ್ಲಿ ಯಶ ಸಾಧಿಸಿದೆವು! ಸೀರೆ ಉಟ್ಟ ವಿಜಯಲಕ್ಷ್ಮೀಯವರು ಆರಡಿ ಎತ್ತರದ ಬಂಡೆ ಏರಿ ಮುನ್ನಡೆದರು. ನೀರೆಗೆ ಬಂಡೆ ಏರಲು ಸೀರೆ ಏನೂ ತೊಡಕಾಗಲಿಲ್ಲ. ಏರುವ ಮನವೊಂದಿದ್ದರೆ ಸಾಕು ಜಯಿಸಬಹುದು.

























ಅಲ್ಲಿಗೆ ಮುಗಿಯಲಿಲ್ಲ ಹಾದಿ. ಮುಂದೆ ಕಡಿದಾದ ಬಂಡೆ ಮಧ್ಯೆ ಸಪೂರ ದಾರಿಯಲ್ಲಿ ಬಂಡೆ ಹಿಡಿದು ಮುಂದೆ ಸಾಗಿ, ಕೆಲವು ಬಂಡೆ ಏರಿ ಅಂತೂ ಇಂತೂ ಧವಳಪ್ಪನಗುಡ್ಡದ ತುದಿ ಮುಟ್ಟಿದೆವು. ಅಲ್ಲಿ ಗುಹೆಯೊಳಗೆ ಹತ್ತಾರು ಶಿವಲಿಂಗಗಳನ್ನು ಕಂಡೆವು. ಹೊರಗೆ ಬಂಡೆಗಳಮೇಲೆ ಅಲ್ಲಲ್ಲಿ ಶಿವಲಿಂಗಗಳು. ಧವಳಪ್ಪ ಮುನಿಗೆ ಅದೇನು ಶಕ್ತಿಯೋ? ಅವನ ಈ ಭಕ್ತಿಯ ಪರಾಕಾಷ್ಟೆಯನ್ನು ನಾವೂ ನೋಡಿದೆವು. ನೋಡಿ ಧನ್ಯರಾದೆವು. ಅವರ ಈ ಕಾರ್ಯವನ್ನು ಕಣ್ಣಮುಂದೆ ಚಿತ್ರಿಸಿಕೊಂಡೆವು.
ಅಲ್ಲಿ ಸ್ವಲ್ಪ ಹೊತ್ತು ಸುತ್ತಲೂ ಪ್ರಕೃತಿಯ ಸೊಬಗನ್ನು ವೀಕ್ಷಿಸಿ ಖುಷಿಪಟ್ಟೆವು. ಎತ್ತ ನೋಡಿದರೂ ಚಿತ್ರವಿಚಿತ್ರ ಬೃಹತ್ ಬಂಡೆಗಲ್ಲುಗಳು, ಬೆಟ್ಟದಮೇಲಿನಿಂದ ಚಿತ್ರದುರ್ಗದ ಪೇಟೆ ಬಲು ಚೆನ್ನಾಗಿ ಕಾಣುತ್ತಿತ್ತು. ನಮ್ಮನ್ನೆಲ್ಲ ವೃತ್ತಾಕಾರವಾಗಿ ನಿಲ್ಲಿಸಿ, ಗುಡ್ಡ ಏರಿದ ನೆನಪಿಗಾಗಿ ಮುರುಗೇಶ್ ಒಂದು ಹಾಡು ಹೇಳಿಕೊಟ್ಟು ಒಂದಿಗೇ ನರ್ತನ ಮಾಡಿಸಿದರು. ಹಾಡು ಹಾಸ್ಯವಾಗಿ ಚೆನ್ನಾಗಿತ್ತು.
ಖೀರು ಖೀರು ಖೀರೂರಿ
ಖೀರು ಹೀಗೆ ಮಾಡ್ತೀವ್ರೀ
ಎಲ್ಲರೂ ಸೇರಿ ಕುಡಿತೀವ್ರೀ!
ಹೀಗೆ ಮಂದುವರಿಯುತ್ತದೆ ಹಾಡು. ಎಲ್ಲರೂ ಬಹಳ ಇಷ್ಟ ಪಟ್ಟರು. ಮತ್ತೆ ಒಂದು ಆಟ ಆಡಿಸಿದರು. ಸಂಖ್ಯೆ ಒಂದರಿಂದ ಹೇಳಬೇಕು. ಮೂರನೇ ಸಂಖ್ಯೆಗೆ ಚಪ್ಪಾಳೆ ಮತ್ತೆ ಮೂರು ಸಂಖ್ಯೆಗೆ ಚಪ್ಪಾಳೆ ಹೀಗೆ ಹೇಳುತ್ತ ಹೋಗಬೇಕು. ಚಪ್ಪಾಳೆ ತಟ್ಟದೆ ಸಂಖ್ಯೆಯೇ ಹೇಳಿದವರು ಆಟದಿಂದ ನಿರ್ಗಮನ. ಈ ಆಟಕ್ಕೆ ಏಕಾಗ್ರತೆ ಬಲುಮುಖ್ಯ. ಈ ಆಟವನ್ನೂ ಆಡಿ ಖುಷಿಪಟ್ಟೆವು. ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಧವಳಪ್ಪ ಕೆತ್ತಿದ ಲಿಂಗಗಳಿಗೆ ನಮಸ್ಕಾರ ಹಾಕಿ ಅಲ್ಲಿಂದ ೧೨.೩೦ಗೆ ಹೊರಟೆವು.









ಕೆಳಗೆ ಇಳಿಯುವ ಹಾದಿ ಹೋದ ಹಾದಿಗಿಂತ ಸುಲಭವಾಗಿತ್ತು. ದಾರಿ ನೋಡಲು ಭಯ ಹುಟ್ಟಿಸುವಂತಿದ್ದರೂ ಎಚ್ಚರದಿಂದ ಕಾಲಿಟ್ಟು ಇಳಿದೆವು. ಕೆಲವುಕಡೆ ಮೆಟ್ಟಿಲುಗಳಿದ್ದುವು. ಒಂದು ಕಾಲದಲ್ಲಿ ಮೆಟ್ಟಲು ಏರುವಾಗ ಹಿಡಿಯಲು ಕೈತಾಂಗುಗಳಿದ್ದಿರಬೇಕು. ಕಬ್ಬಿಣದ ಸಲಾಕೆ ಇದ್ದ ಕುರುಹಾಗಿ ಈಗ ಅದರ ಅವಶೇಷ ಇದೆ. ಕೆಲವುಕಡೆ ಕುಳಿತು ಜಾರಿ ಕೆಳಗೆ ಇಳಿದೆವು. ಇಳಿಯಲಾರದವರಿಗೆ ಕೈಹಿಡಿದು ಇಳಿಸಿದೆವು. .೪೫ಕ್ಕೆ ನಾವು ಕೆಳಗೆ ಇಳಿದು ಪಕ್ಕದಲ್ಲೇ ಗಿಡಗಳ ನರ್ಸರಿ ಇದ್ದ ಜಾಗದಲ್ಲಿ ಕುಳಿತು ಕೊಂಡೋದ ಬುತ್ತಿ ಬಿಚ್ಚಿ ಪಲಾವ್ ತಿಂದೆವು. ಅಲ್ಲಿಯೇ ಸ್ವಲ್ಪಹೊತ್ತು ವಿಶ್ರಾಂತಿ ಪಡೆದೆವು.


ಚಂದ್ರವಳ್ಳಿ ಗುಹೆ 

ನಾವು ೨.೩೦ಕ್ಕೆ ಚಂದ್ರವಳ್ಳಿ ಗುಹೆಗೆ ಹೋದೆವು. ಅದು ನಿಸರ್ಗನಿರ್ಮಿತ ಬಂಡೆಗಲ್ಲುಗಳ ಗುಹೆಗಳನ್ನು ಅಂದಿನ ರಾಜರ ಕಾಲದಲ್ಲಿ ಬದಿಗಳಿಗೆ ಗೋಡೆ ಕಟ್ಟಿ ಒಳಗೂ ಗೋಡೆಕಟ್ಟಿ ವಾಸ ಹಾಗೂ ಅವರ ರಹಸ್ಯ ಸಭೆ ನಡೆಸುವ ಸ್ಥಳಗಳಾನ್ನಾಗಿ ಮಾಡಿಕೊಂಡಿದ್ದರು. ಈಗ ಪಾರಿವಾಳದ ವಾಸಸ್ಥಾನವಾಗಿದೆ.





ಚಂದ್ರವಳ್ಳಿ ನಿಸರ್ಗನಿರ್ಮಿತ ಗುಹೆ

ಅಲ್ಲಿಂದ ನಾವು ನಿಸರ್ಗನಿರ್ಮಿತ ಗುಹೆಗೆ ಹೋದೆವು. ಬಂಡೆ ಸಂದಿಯಲ್ಲಿ ನಮ್ಮ ಶರೀರ ತೂರಿಸಿ ಒಳಗೆ ಹೋದೆವು. ಕೆಲವು ಕಡೆ ಟಾರ್ಚ್ ಬೆಳಕಿನ ಸಹಾಯ ಪಡೆದೆವು. ಒಂದು ಗುಹೆ ನೋಡಿ ಅಲ್ಲಿ ಕುಳಿತೆವು. ಬಂಡೆ ಅಡಿಯಲ್ಲಿ ವಿಸ್ತಾರವಾದ ಸ್ಥಳ. ಬಂಡೆಗಳೆಡೆಯಿಂದ ಸೂರ್ಯಕಿರಣ ಒಳಗೆ ರೇಖೆಯಂತೆ ಕಾಣುತ್ತಲಿತ್ತು. ಮುಂದೆ ಹೋದರೆ ಸುಮಾರು ಗುಹೆಗಳಿವೆ. ಅಲ್ಲಿಂದ ಹಾಗೆ ಹೊರಗೆ ಬರಬಹುದು ಎಂದು ಮುರುಗೇಶ್ ಹೇಳಿದರು. ಇದೇ ತರಹದ್ದಾದರೆ ಸಾಕು. ಇಲ್ಲೇ ಹೊರಗೆ ಕೆಲವರು ಇಲ್ಲಿಗೆ ಬರದೆ ಕಾದು ಕುಳಿತಿದ್ದಾರಲ್ಲ. ಇನ್ನು ಮುಂದೆ ಹೋಗುವುದು ಬೇಡ ಎಂಬ ತೀರ್ಮಾನಕ್ಕೆ ಬಂದರು. ಹೆಚ್ಚಿನವರು ಧವಳಪ್ಪನ ಗುಡ್ಡ ಹತ್ತಿ ಬಸವಳಿದಿರಬೇಕು! ಹಾಗಾಗಿ ಮುಂದೆ ಹೋಗದೆ ಹಿಂದಕ್ಕೆ ವಾಪಾಸಾದೆವು.



ಜೋಗಿಮಠಕ್ಕೆಹೋಗುವ ಬಗ್ಗೆ ಚರ್ಚೆ ಆಯಿತು. ಅಲ್ಲಿಗೆ ಒಂದು ಗಂಟೆ ಪಯಣ. ಅಲ್ಲಿ ೫ ಗಂಟೆವರೆಗೆ ಮಾತ್ರ ಅರಣ್ಯ ಇಲಾಖೆಯಿಂದ ಪ್ರವೇಶಾವಕಾಶ. ನಾವು ಅಲ್ಲಿ ತಲಪುವಾಗಲೇ ೫ ಗಂಟೆ ಆಗಬಹುದು. ಹಾಗಾಗಿ ಹೋಗಲು ಸಾಧ್ಯವಿಲ್ಲ ಎಂದು ಅಲ್ಲಿಗೆ ಹೋಗುವುದನ್ನು ಕೈಬಿಟ್ಟೆವು.
ಮುರುಘಾಮಠ
ಅಲ್ಲಿಂದ ನಾವು ಸಂಜೆ ೫ ಗಂಟೆಗೆ ಮುರುಘಾಮಠಕ್ಕೆ ಹೋದೆವು. ನಮ್ಮ ಕೋಣೆಗೆ ಬಂದು ಸ್ನಾನ ಮಾಡಿ ನವೋತ್ಸಾಹದಿಂದ ಮುರುಘಾಮಠ ನೋಡಲು ಸಜ್ಜಾದೆವು. ಗದ್ದುಗೆ ದೇವಾಲಯ ನೋಡಿದೆವು. ಆ ಗದ್ದುಗೆಗೆ ೪೦೦ವರ್ಷದ ಇತಿಹಾಸವಿದೆಯಂತೆ. ಪ್ರತೀ ತಿಂಗಳ ೫ನೇ ತಾರೀಕಿನಂದು ಮಠದ ವತಿಯಿಂದ ಅಲ್ಲಿ ಸಾಮೂಹಿಕ ವಿವಾಹ ನಡೆಯುತ್ತದಂತೆ. ಆ ದಿನ ಹುಣ್ಣಿಮೆ ಇರಲಿ, ಅಮಾವಾಸ್ಯೆ ಇರಲಿ ಮದುವೆ ಮಾತ್ರ ತಪ್ಪುವುದಿಲ್ಲವಂತೆ. ಆ ದಿನಕ್ಕೆ ಮುಹೂರ್ತ ಯಾವುದೂ ಭಾದಕವಿಲ್ಲ. ಪ್ರತೀ ತಿಂಗಳೂ ೬೦-೭೦ ಜೋಡಿಗಳು ವಿವಾಹವಾಗುತ್ತಾರಂತೆ. ಈಗಿನ ಸ್ವಾಮೀಜಿ ಈ ಸಾಮೂಹಿಕ ವಿವಾಹದ ರೂವಾರಿಗಳು.
ಮ್ಯೂಸಿಯಂ ನೋಡಿದೆವು. ಅಷ್ಟು ವ್ಯವಸ್ಥಿತವಾಗಿ ಇಟ್ಟಿಲ್ಲ . ಇರುವ ಕೆಲವು ಹಳೆಯ ಸಾಮಾನುಗಳನ್ನು ನಾಮಾಕಾವಸ್ಥೆಯಲ್ಲಿ ಇಟ್ಟಿದ್ದರು. ಮುರುಘಾಮಠದಿಂದ ಪ್ರತೀವರ್ಷ ಸಾಧನೆಗೈದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಿಂದೆ ಮಲಾಲಾಳಿಗೂ ಈ ಪ್ರಶಸ್ತಿ ಸಂದಿತ್ತು. ೨೦೧೭ನೇ ಸಾಲಿನ ಪ್ರಶಸ್ತಿ ಕಾಮೇಗೌಡರಿಗೆ ಸಂದಿರುವುದು ಅತ್ಯಂತ ಯುಕ್ತವಾಗಿದೆ. ಪ್ರಶಸ್ತಿ ಮೊತ್ತ ೫ ಲಕ್ಷ ರೂಪಾಯಿಗಳು. ಕಾಮೆಗೌಡರ ಬಗ್ಗೆ ಹಿಂದೆ ನಾನು ಬರೆದ ಲೇಖನ ಓದಲು ಈ ಕೊಂಡಿ ಬಳಸಿ. ಇದುವರೆಗೆ ಪ್ರಶಸ್ತಿ ಪುರಸ್ಕೃತಗೊಂಡವರೆಲ್ಲರ ಚಿತ್ರಗಳನ್ನು ಅಲ್ಲಿ ಹಾಕಿದ್ದಾರೆ.



ಮುರುಘಾವನ
ಮುರುಘಾವನಕ್ಕೆ ಪ್ರವೇಶ ದರ ರೂ.೫೦ ಪಾವತಿಸಿ ಒಳಗೆ ಹೋದೆವು. ವಿಶಾಲವಾದ ಉದ್ಯಾನವನದಲ್ಲಿ ವಚನಕಾರರ ಮೂರ್ತಿಗಳು, ಅವರ ವಚನಗಳ ಸಾಲುಗಳು, ಸಿಮೆಂಟಿನಲ್ಲಿ ರಚನೆ ಮಾಡಿದ ಹತ್ತಾರು ಮೂರ್ತಿಗಳನ್ನು ನೋಡಬಹುದು. ದೈತ್ಯ ಡೈನೊಸರ್, ಇತ್ಯಾದಿ ಮೂರ್ತಿಗಳು ಆಕರ್ಷಕವಾಗಿವೆ. ಸಂಗೀತ ಕಾರಂಜಿಯೂ ಇದೆ. ಸಂಜೆ ೭ರಿಂದ ೭.೧೫ರವರೆಗೆ. ಎರಡು ಕನ್ನಡ ಹಾಡುಗಳು, ಮೂರು ಹಿಂದಿ ಹಾಡುಗಳನ್ನು ಹಾಕಿದರು. ಚಿತ್ರದುರ್ಗದ ಕಲ್ಲಿನಕೋಟೆ ಹಾಡಿಗೆ ಕಾರಂಜಿ ಚಿಮ್ಮುವ ಪರಿ ನೋಡಿ ಬಲು ರೋಮಾಂಚನವಾಯಿತು. ಕನ್ನಡದ ಹಾಡುಗಳನ್ನು ಇನ್ನಷ್ಟು ಹಾಕಿದ್ದರೆ ಖುಷಿಯಾಗುತ್ತಿತ್ತು. ಶಾಲಾಮಕ್ಕಳು ಪ್ರವಾಸ ಬಂದಿದ್ದವರು ಹಾಡಿಗೆ ಹುರುಪುಗೊಂಡು ನೃತ್ಯ ಮಾಡುತ್ತಿದ್ದರು. ಅವರನ್ನು ನೋಡಿ ಹುಕಿ ಬಂದು ನಮ್ಮ ತಂಡದ ನಾಗೇಂದ್ರ ಹಾಗೂ ಉಮಾಶಂಕರರು ಅವರ ಜೊತೆ ಕುಣಿದು ಸಂತಸಪಟ್ಟರು.





ಮಠದಲ್ಲಿ ಉಚಿತ ಊಟ
೮ ಗಂಟೆಗೆ ಮಠದಲ್ಲಿ ಅನ್ನ ಸಾಂಬಾರು ಊಟ ಮಾಡಿ ಕೋಣೆಗೆ ಬಂದು ೯ ಗಂಟೆಗೆ ನಿದ್ದೆ ಮಾಡಿದೆವು.

ಚಿತ್ರದುರ್ಗದ ಏಳುಸುತ್ತಿನ ಕೋಟೆ

೧೬--೧೮ರಂದು ನಾವು ಬೆಳಗ್ಗೆ ೬.೪೫ಕ್ಕೇ ತಯಾರಾದೆವು. ಸಂಘಟಕರು ಹೇಳಿದ ಸಮಯಕ್ಕೆ ಸರಿಯಾಗಿ ಎಲ್ಲರೂ ಹೊರಟರೆ ಅವರ ಹೊಣೆ ಕಡಿಮೆಯಾಗುತ್ತದೆ. ಐಶ್ವರ್ಯಾ ಫೋರ್ಟ್ ಹೊಟೇಲಿಗೇ ಹೋದೆವು. ಇಡ್ಲಿ, ಮೆಣಸಿನ ಬಜ್ಜಿ,ಪೊಂಗಲ್, ಉಪ್ಪಿಟ್ಟು ಕೇಸರಿಭಾತ್ (ಯಾರಿಗೆ ಯಾವುದು ಬೇಕೋ ಆ ತಿಂಡಿ ತಿನ್ನಬಹುದಿತ್ತು) ಕಾಫಿ, ಚಹಾ ಸೇವನೆಯಾಗಿ ನಾವು ಮುಂದುವರಿದೆವು. ಮುರುಗೇಶ್ ನಮ್ಮನ್ನು ಏಳುಸುತ್ತಿನ ಕೋಟೆಗೆ ಕರೆದುಕೊಂಡು ಹೋದರು.
ಪ್ರವೇಶ ಶುಲ್ಕ ಒಬ್ಬರಿಗೆ ರೂ. ೨೫ ಪಾವತಿಸಿ ನಾವು ಕೋಟೆ ಪ್ರವೇಶಿಸಿದೆವು. ಮೊದಲಿಗೆ ನಾವು ಮೂರನೇ ದ್ವಾರದಿಂದ ಒಳಗೆ ಪ್ರವೇಶಿಸಿದೆವು. ಇದಕ್ಕೆ ಗಂಟೆ ಬಾಗಿಲು ಎಂದು ಹೆಸರು. ಬಾಗಿಲಿನ ಒಳ ಭಾಗದಲ್ಲಿ ೨ ಚಾವಡಿ ಇದೆ, ಬೆಟ್ಟದಿಂದ ಹರಿದು ಬರುವ ನೀರು ಹರಿದು ಹೋಗಲು ತೂಬು ಇದೆ. ಕೋಟೆಯ ಮೊದಲ ಬಾಗಿಲಿಗೆ ಏಕನಾಥೇಶ್ವರಿ ಬಾಗಿಲು ಅಥವಾ ಅಜ್ಜಿಯ ಬಾಗಿಲು ಎಂದು ಹೆಸರು. ಇಲ್ಲಿ ದೀಪಸ್ತಂಭ, ಓಕುಳಿ ಹೊಂಡ, ಸಿಡಿಕಟ್ಟೆ, ಟಂಕಸಾಲೆ ಇದೆ. ಟಂಕಸಾಲೆಯೊಳಗೆ ಈಗ ಪ್ಲಾಸ್ಟಿಕ್, ಕಸ ತುಂಬಿದೆ.
ಎರಡನೇ ಸುತ್ತಿನ ಕೋಟೆಯ ಬಾಗಿಲನ್ನು ಟೀಕಿನ ಬಾಗಿಲು, ಕಸ್ತೂರಿ ರಂಗಪ್ಪನ ಬಾಗಿಲು ಎಂದು ಕರೆಯುತ್ತಾರೆ, ಇಲ್ಲಿ ಗರಡಿಮನೆ, ಮದ್ದಿನಮನೆ, ಕಲ್ಲಿನ ಕಣಜ, ಬಿಚ್ಚುಗತ್ತಿ ಭರಮಪ್ಪ ನಾಯಕನ ಸಮಾಧಿ ಇದೆ.
ನಾಲ್ಕನೇ ಸುತ್ತಿನ ಕೋಟೆಯ ಬಾಗಿಲಿಗೆ ಜಾಗಟೆ ಬಾಗಿಲು ಅಥವಾ ವಿಷದ ಕತ್ತಿ ಬಾಗಿಲು ಎಂದು ಹೆಸರು. ಈ ಬಾಗಿಲಿಗೆ ಜಾಗಟೆ ಕಟ್ಟುತ್ತಿದ್ದರಂತೆ. ಇಲ್ಲಿ ಗೊಂಬೆ ಚಾವಡಿ ಮಂಟಪವನ್ನೂ ನೋಡಬಹುದು.
ಐದನೇ ಸುತ್ತಿನ ಕೋಟೆಗೆ ಕಾಮನ ಬಾಗಿಲು ಎಂದು ಹೆಸರು. ಈ ದಾರಿಯ ಮೂಲಕ ಶತ್ರುಗಳು ಕೋಟೆ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಹುಲಿಯ ಮುಖದ ಬಾಗಿಲು ಎಂದೂ ಕರೆಯುತ್ತಾರೆ. ಈ ಕೋಟೆಯ ಪ್ರವೇಶ ದ್ವಾರದ ಗೋಡೆಯ ಮೇಲೆ ಗಣಪತಿ, ಕಮಲ, ಬಸವ, ಶಿವಲಿಂಗ, ವೀರಭದ್ರ. ಗಂಡಭೇರುಂಡ, ಸರ್ಪ ಹಾಗೂ ಹಂಸದ ಉಬ್ಬು ಶಿಲ್ಪಗಳ ಕೆತ್ತನೆಗಳಿವೆ. ನಾಲ್ಕು ಹಾಗೂ ಐದನೇ ಕೋಟೆಯ ಒಳಗೆ ಎಣ್ಣೆಕೊಳ, ಮದ್ದು ಬೀಸುವ ಕಲ್ಲು, ರುಬ್ಬುವ ಗುಂಡು, ಒಂಟಿಕಲ್ಲು ಬಸವನ ಗುಡಿ, ಬನಶಂಕರಿ ದೇವಾಲಯ, ಅಮ್ಮನ ಗುಡಿ ಹಾಗೂ ಶಿವಾಲಯಗಳಿವೆ.
ಆರನೇ ಸುತ್ತಿನ ಕೋಟೆಯ ಬಾಗಿಲನ್ನು ನಯವಾದ ಗಾರೆಯಿಂದ ಲೇಪನ ಮಾಡಿದ್ದಾರೆ. ಹಾಗಾಗಿ ಈ ಬಾಗಿಲಿಗೆ ಗಾರೆಯ ಬಾಗಿಲು ಎಂದು ಹೆಸರು.
ಏಳನೆಯ ಸುತ್ತಿನ ಕೋಟೆಯ ಬಾಗಿಲಿಗೆ ರಂಗಯ್ಯನ ಬಾಗಿಲು ಎಂದು ಹೆಸರು. ಈ ದ್ವಾರವು ಕಮಾನಿನ ಆಕಾರದಲ್ಲಿದ್ದು, ನಾಲ್ಕು ಮೂಲೆಗಳಲ್ಲೂ ಬತೇರಿಗಳಿವೆ. ಫಿರಂಗಿ ಹಾಗೂ ಕೋವಿ ಕಿಂಡಿಗಳಿವೆ. ದ್ವಾರದ ಎರಡೂ ಬದಿಯಲ್ಲಿ ದಿಡ್ಡಿ ಬಾಗಿಲುಗಳಿವೆ. ಈಗ ಅವುಗಳು ಶ್ರೀ ಸೀತಾರಾಮ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳಾಗಿವೆ.
ನಾವು ಕೊಳ, ಬನಶಂಕರಿ ದೇವಾಲಯ, ಮದ್ದು ಅರೆಯುವ ತಾಣ, ಎಣ್ಣೆಕೊಳ, ಗಣೇಶ ದೇವಾಲಯ, ಹಿಡಿಂಬೇಶ್ವರ ದೇವಾಲಯ, ಮುರುಘಾಮಠ, ಟಂಕಸಾಲೆ, ಸಂಪಿಗೆ ಸಿದ್ದೇಶ್ವರ ದೇವಾಲಯ, ಅರಮನೆ ಸಂಕೀರ್ಣ, ಕಣಜಗಳು, ಗೋಪಾಲಸ್ವಾಮಿ ಹೊಂಡ, ಗೋಪಾಲಸ್ವಾಮಿ ದೇವಾಲಯ, ಅಕ್ಕ ತಂಗಿ ಹೊಂಡ, ಕಾಶಿ ವಿಶ್ವನಾಥ ದೇವಾಲಯ ನೋಡಿ ಕೊನೆಗೆ ಒನಕೆ ಓಬವ್ವನ ಕಿಂಡಿಗೆ ಬಂದೆವು. ಒನಕೆ ಓಬವ್ವ ಇದ್ದ ಬಂಡೆಯಡಿಯ ಅವರ ಮನೆಯನ್ನೂ ನೋಡಿದೆವು. ಒನಕೆ ಓಬವ್ವನ ಕಿಂಡಿಯೊಳಗೆ ತೂರಿ ಹೊರಬಂದೆವು. ಈ ಕಿಂಡಿ ಅಸಲಿ ಕಿಂಡಿಯಲ್ಲ. ಪುಟ್ಟಣ್ಣ ಕಣಗಾಲ್ ಸಿನಿಮಾಗೋಸ್ಕರ ಸೃಷ್ಟಿಸಿದ್ದು ಈ ಕಿಂಡಿಯನ್ನು ಎಂದು ಮುರುಗೇಶ್ ಹೇಳಿದರು. ನಕಲಿಯೋ ಅಸಲಿಯೋ ನಮಗಂತೂ ಎರಡೂ ಗೊತ್ತಿಲ್ಲ. ನೋಡಿ ಸಂತಸಪಟ್ಟೆವು. ಈ ಐತಿಹಾಸಿಕ ತಾಣದ ಬಗ್ಗೆ ಮುರುಗೇಶ್ ಸವಿವರವಾಗಿ ವಿವರಿಸಿದ್ದನ್ನು ಕೇಳಿ ನಾವು ನಮ್ಮ ನಾಡಿನ ಇತಿಹಾಸವನ್ನು ಅರಿಯುವ ಪ್ರಯತ್ನ ಮಾಡಿದೆವು.
ಮದಕರಿ ನಾಯಕನ ಆಳ್ವಿಕೆಯ ಸಮಯದಲ್ಲಿ ಹೈದರಾಲಿಯ ಸೈನ್ಯವು ಕೋಟೆಯನ್ನು ಸುತ್ತುವರಿದಿದ್ದ ಸಂದರ್ಭ. ಒಬ್ಬ ಮಹಿಳೆ ಕೋಟೆಯ ಕಿಂಡಿಯೊಳ ತೂರಿ ಒಳಗೆ ಹೋಗುವುದನ್ನು ಕಂಡ ಹೈದರಾಲಿ ತನ್ನ ಸೈನಿಕರನ್ನೂ ಆ ಕಿಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆ ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನಿಗೆ ಆತನ ಹೆಂಡತಿ ಓಬವ್ವ ಊಟ ತರುತ್ತಾಳೆ. ಗಂಡನಿಗೆ ಊಟ ಕೊಟ್ಟು ನೀರು ತರಲು ಹೋದಾಗ ಅಲ್ಲಿ ಹೈದರಾಲಿ ಸೈನಿಕರು ಕಿಂಡಿ ಮೂಲಕ ಒಳ ಬರುವುದನ್ನು ನೋಡಿ ಅಲ್ಲಿದ್ದ ಒನಕೆಯಿಂದ ಒಳ ಬರುವ ಸೈನಿಕರ ತಲೆಗೆ ಪ್ರಹಾರ ಮಾಡುತ್ತಾಳೆ. ಸತ್ತುಬಿದ್ದ ಸೈನಿಕರನ್ನು ಆಚೆ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ, ತನ್ನ ಹೆಂಡತಿ ಇಷ್ಟು ಹೊತ್ತಾದರೂ ಬರದೆ ಇರುವುದನ್ನು ಕಂಡು ಹುಡುಕುತ್ತ ಅಲ್ಲಿಗೆ ಬಂದಾಗ ಓಬವ್ವ ರಣಚಂಡಿಯ ಅವತಾರದಲ್ಲಿ ರಕ್ತಸಿಕ್ತ ಒನಕೆಯೊಂದಿಗೆ ನಿಂತಿರುವುದು ಕಂಡು, ಸತ್ತುಬಿದ್ದ ಸೈನಿಕರನ್ನು ನೋಡಿದಾಗ ಪರಿಸ್ಥಿತಿಯನ್ನರಿತು ಕೂಡಲೇ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ. ಕೋಟೆಯು ಹೈದರಾಲಿಯ ವಶವಾಗುವುದನ್ನು ನಾಯಕನ ಸೇನೆಯು ತಪ್ಪಿಸುತ್ತದೆ. ಓಬವ್ವನ ಸಮಯ ಪ್ರಜ್ಞೆ, ಸಾಹಸ, ಅಪ್ರತಿಮ ಧೈರ್ಯ ಈಗಲೂ ಆದರ್ಶಪ್ರಾಯವಾಗಿ ಇತಿಹಾಸದ ಪುಟ ಸೇರಿದೆ. ಈ ಘಟನೆಗೆ ಸಾಕ್ಷಿ ಎಂಬಂತೆ ಈಗಲೂ ಆ ಕಿಂಡಿಯನ್ನು ನಾವು ಕಾಣುತ್ತೇವೆ. ಹೆಚ್ಚಿನ ಪ್ರವಾಸಿಗರ ಪ್ರಮುಖ ಆಕರ್ಷಣೆಯೂ ಇಲ್ಲಿಗೆ ಬಂದು ಈ ಕಿಂಡಿ ನೋಡುವುದರಲ್ಲಷ್ಟೇ ಸೀಮಿತವಾಗಿದೆಯೆಂದು ಮುರುಗೇಶ್ ಹೇಳಿದರು..
ಕೋತಿರಾಜ ಉಯ್ಯಾಲೆ ಕಂಬ ಏರಿ ಇಳಿಯುವುದನ್ನು ನೋಡಿ ಬೆರಗಾದೆವು. ನಾವು ನಾಲ್ಕನೇ ಸುತ್ತು ಕೋಟೆ ಪ್ರವೇಶ ಮಾಡುವಾಗಲೇ ಕೋತಿರಾಜನ ದರ್ಶನ ಆಗಿತ್ತು. ಅವರೊಂದಿಗೆ ನಾವು ಸಾಮೂಹಿಕವಾಗಿ ಪಟ ತೆಗೆಸಿಕೊಂಡಿದ್ದೆವು. ಅವರು ಸುಮಾರು ಮಂದಿ ಮಕ್ಕಳಿಗೆ ಗೋಡೆ ಏರಲು ತರಬೇತಿ ಕೊಡುತ್ತಾ ಇದ್ದಾರಂತೆ. ಒಬ್ಬ ಹುಡುಗ ಅವರ ಜೊತೆ ಇದ್ದ. ಗೋಡೆ ಏರಿ ಬಹುಮಾನ ಪಡೆದಿರುವನಂತೆ.
ಬೆಳಗ್ಗೆ ೮ರಿಂದ ೧೨ ಗಂಟೆವರೆಗು ಸುತ್ತಿದರೂ ಇಡೀ ಕೋಟೆ ನೋಡಲಾಗಲಿಲ್ಲ. ತುಪ್ಪದ ಕೊಳ ಬೆಟ್ಟ ಏರಲಾಗಲಿಲ್ಲ. ಕೋಟೆ ಇಡೀ ಸುತ್ತಿ ಎಲ್ಲ ನೋಡಲು ಬೆಳಗ್ಗೆಯಿಂದ ಸಂಜೆವರೆಗೂ ಸಮಯ ಬೇಕಂತೆ. ನಾವು ಮಧ್ಯಾಹ್ನವೇ ಚಿತ್ರದುರ್ಗದಿಂದ ನಿರ್ಗಮಿಸುವುದೆಂದು ಮೊದಲೇ ತೀರ್ಮಾನಿಸಿರುವುದರಿಂದ ಕೋಟೆಗೆ ವಿದಾಯ ಹೇಳಲೇಬೇಕಾಯಿತು.
ಮುರಗೇಶ್ ಅವರಿಗೆ ಕಿರುಕಾಣಿಕೆಯೊಂದಿಗೆ (ಎರಡೂ ದಿನದ್ದು ಸೇರಿ ರೂ.೪೦೦೦) ಧನ್ಯವಾದ ಅರ್ಪಿಸಿದೆವು. ಅವರು ನಮಗೆ ಹಳ್ಳಿ ಮನೆ ಖಾನಾವಳಿಗೆ ದಾರಿ ತೋರಿಸಿ ಬೀಳ್ಕೊಂಡರು. ಅದಾಗಲೇ ೧೨.೩೦ ಆಗಿತ್ತು. ಅಲ್ಲಿ ಜೋಳದರೊಟ್ಟಿ ಊಟ, ರಾಗಿಮುದ್ದೆ ಊಟ, ಚಪಾತಿ ಊಟ ಹೀಗೆ ಮೂರು ಬಗೆಯ ಊಟ ಸಿಗುತ್ತದೆ. ನಾವು ಚಪಾತಿ, ರಾಗಿಮುದ್ದೆ, ಜೋಳದರೊಟ್ಟಿ ಮೂರನ್ನು ಸ್ವಲ್ಪ ಸ್ವಲ್ಪ ರುಚಿ ನೋಡಿದೆವು. ಹೊಟ್ಟೆ ತುಂಬ ಅನ್ನ. ಸಾರು, ಸಾಂಬಾರು, ಕೂಟು, ಸಲಾಡ್, ಮಜ್ಜಿಗೆ ಮೊಸರು ಧಾರಾಳ ಊಟ. ಒಂದು ಊಟಕ್ಕೆ ಕೇವಲ ರೂ.೫೦. ಮನೆಯವರೇ ಅಡುಗೆ ತಯಾರಿಸುವುದಂತೆ. ಊಟ ಬಹಳ ರುಚಿಕರವಾಗಿತ್ತು. ಅನ್ನದಾತ ಸುಖೀಭವ ಎನ್ನುತ್ತ ನಾವು ಅಲ್ಲಿಂದ ೨ ಗಂಟೆಗೆ ನಿರ್ಗಮಿಸಿದೆವು.



























ಹಾಲುರಾಮೇಶ್ವರ
ನಾವು ಮೈಸೂರಿಗೆ ಹೋಗುವ ದಾರಿಯಲ್ಲಿ ಹೊಸದುರ್ಗದಲ್ಲಿರುವ ಹಾಲು ರಾಮೇಶ್ವರ ದೇವಾಲಯಕ್ಕೆ ಹೋದೆವು. ಪುಟ್ಟದಾದ ದೇವಾಲಯ. ಎದುರು ರಾಮನ ಗುಡಿ, ಹಿಂಬಾಗದಲ್ಲಿ ಗಂಗೆಯ ಗುಡಿ. ನಮ್ಮ ಮನದ ಬೇಡಿಕೆಗಳನ್ನು ಈಡೇರಿಸಲು ಕೇಳಿಕೊಂಡು .ಮನದಲ್ಲೇ ಗಂಗಾದೇವಿಯನ್ನು ಪ್ರಾರ್ಥಿಸಿಕೊಂಡಾಗ ಆ ಕೆಲಸ ನೆರವೇರುತ್ತದೆಯೆಂದಾದರೆ ನೀರೊಳಗಿನಿಂದ ತೆಂಗಿನಕಾಯಿ ಮೇಲೆ ಬರುತ್ತದಂತೆ. ನಮ್ಮ ಮನದ ಬೇಡಿಕೆ ಈಡೇರುವುದಿಲ್ಲವೆಂದಾದರೆ ತೆಂಗಿನ ಬರೀ ಚಿಪ್ಪು ಬರುತ್ತದಂತೆ. ಗಂಗಮ್ಮನಲ್ಲಿ ಇಂಥ ಪ್ರಾರ್ಥನೆಗಾಗಿ ಬಹಳ ಜನ ಸರತಿಯಲ್ಲಿ ಕಾದಿದ್ದರು. ನಾವು ಸಂದಿಯಲ್ಲಿ ನುಸುಳಿ ಗಂಗಾಮಾತೆಯನ್ನು ನೋಡಿ ಕೈಮುಗಿದು ಎಲ್ಲರಿಗೂ ಒಳ್ಳೆಯದು ಮಾಡು ತಾಯಿ ಎಂದು ಪ್ರಾರ್ಥಿಸಿ ಹೊರಬಂದು ಬಸ್ ಹತ್ತಿದೆವು.





ಅಲ್ಲಿಂದ ಹೊರಟು ತುಮಕೂರು ದಾರಿಯಾಗಿ ಸಾಗಿ ತುಮಕೂರಲ್ಲಿ ಊಟಕ್ಕೆ ನಿಲ್ಲಿಸಿದರು, ಆಗಲೆ ಗಂಟೆ ಎಂಟು ಆಗಿತ್ತು. ನಿಮ್ಮ ಇಷ್ಟದಂತೆ ತಿಂಡಿ. ಊಟ ಏನು ಬೇಕೋ ತಿನ್ನಿ ಎಂದು ಆಯೋಜಕರು ಬಿಗಿ ಸಡಿಲಗೊಳಿಸಿದರು! ಹುಡುಗರು ಗೋಭಿಮಂಚೂರಿ, ನೂಡಲ್ಸ್, ಅದು ಇದು ತರಿಸಿ ಹೊಡೆದರು. ಮಹಡಿಮೇಲೆ ತಿಂಡಿ ಸರಬರಾಜು ಮಾಡಲು ಒಬ್ಬನೇ ಒಬ್ಬ. ಅದಾಗಲೇ ಅರ್ಧ ಕಂಠ ಏರಿಸಿದ್ದ ಬೇರೆ! ನಮ್ಮ ೨೨ ಮಂದಿಗೆ (ಇಬ್ಬರು ಬೆಂಗಳೂರಿಗೆ ತೆರಳುವವರು ಹೋಗಿ ಆಗಿತ್ತು) ಕೇಳಿದ ತಿಂಡಿ ಕೊಟ್ಟು ನಾವು ತಿಂದಾಗುವಾಗ ಒಂದೂ ಕಾಲು ಗಂಟೆ ವ್ಯಯವಾಯಿತು. ಒಂದಿಬ್ಬರಿಗೆ ತಿಂಡಿ ಬರಲು ಸಾಕಷ್ಟು ವೇಳೆ ಕಳೆದಿತ್ತು. ಆಗ ಅವರ ತಾಳ್ಮೆಯ ಕಟ್ಟೆಯೂ ಒಡೆಯಲು ಪ್ರಾರಂಭವಾಗಿತ್ತು! ಅಂತೂ ಹೊಟ್ಟೆ ತುಂಬಿಸಿ ಗಾಡಿ ಏರಿ ಮೈಸೂರು ಮನೆ ತಲಪುವಾಗ ರಾತ್ರೆ ೧೧.೪೫.
ಇಂಥ ಸಮಯದಲ್ಲಿ ತಂಡದ ಮುಖ್ಯಸ್ಥರೇ ಯಾವ ತಿಂಡಿ, ಊಟ ಎಂದು ಹೇಳಿಬಿಡಬೇಕು. ತಂಡದವರಿಗೆ ಆಯ್ಕೆಗೆ ಅವಕಾಶ ಕೊಡಬಾರದು. ಆಗ ಸಮಯವೂ, ಹಣವೂ ಎರಡೂ ಉಳಿತಾಯವಾಗುತ್ತದೆ. ಅಪವ್ಯಯವಾಗುವುದು ತಪ್ಪುತ್ತದೆ ಎಂದು ನಮ್ಮ ಅನಿಸಿಕೆ.

ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ನಾಗೇಂದ್ರಪ್ರಸಾದ್ ಮತ್ತು ವೈದ್ಯನಾಥನ್ ಈ ಎರಡು ದಿನದ ಚಾರಣ ಕಾರ್ಯಕ್ರಮ ಹಮ್ಮಿಕೊಂಡು ಅದನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಅವರಿಗೆ ಸಹಚಾರಣಿಗರಾದ ನಮ್ಮೆಲ್ಲರ ಧನ್ಯವಾದ









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ