ಶುಕ್ರವಾರ, ಮಾರ್ಚ್ 19, 2021

ಚರಿತ್ರೆಗೆ ಸಾಕ್ಷಿ ಚನ್ನರಾಯನ ದುರ್ಗ

     ಮೈಸೂರಿನ ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ೧೮ ಮಂದಿ ಸದಸ್ಯರು ತಾರೀಕು ೧೪-೩.೨೦೨೧ರಂದು ಮಿನಿ ಬಸ್ಸಿನಲ್ಲಿ ಕೊರಟಗೆರೆ ಚನ್ನರಾಯನದುರ್ಗಕ್ಕೆ ಬೆಳಗ್ಗೆ ೫.೪೫ಕ್ಕೆ ಹೊರಟೆವು. ಬಸ್ ಹತ್ತಿ ಕುಳಿತ ಬಳಿಕ ಹೆಚ್ಚಿನ ಮಂದಿಯೂ ನಿದ್ರಾದೇವಿಗೆ ಶರಣಾದರು.

   ಚನ್ನಮಲ್ಲನಾಯಕ ನವತರುಣ. ಈಗಾಗಲೇ ಕೆಲವಾರು ಸ್ಠಳಗಳಿಗೆ ಚಾರಣದ ನೇತೃತ್ವ ವಹಿಸಿ ಯಶಸ್ವಿಯಾಗಿದ್ದ.   ತಿಂಡಿಗೆ ೮.೩೦ಗೆ ನಿಲ್ಲಿಸುವುದೆಂದು ಹೇಳಿದ್ದ ನಾಯಕ, ಒಳ್ಳೆ ಸ್ಥಳ ಸಿಗಲು ಕಾಯುತ್ತಿದ್ದ. ಆ ಒಳ್ಳೆಯ ಸ್ಥಳ ೯ ದಾಟಿದರೂ ಅವನಿಗೆ ಸಿಗಲೇ ಇಲ್ಲ! ಆಗ ಒಂದಿಬ್ಬರು ಎದ್ದು ಒಂದೆಡೆ ಬಸ್ ನಿಲ್ಲಿಸುವಲ್ಲಿ ಸಫಲರಾದರು. ಒಂದು ಹುಣಸೆ ಮರದಡಿಯಲ್ಲಿ ಉಪ್ಪಿಟ್ಟು, ಕೇಸರಿಬಾತ್ ತಿಂದಾಗ ಬುಸುಗುಡುತ್ತಿದ್ದ ಹೊಟ್ಟೆರಾಯ ತೃಪ್ತಿಗೊಂಡ.  ಬರುವಾಗಲೇ ಡಬ್ಬದಲ್ಲಿ ತಿಂಡಿ ಊಟ ತಯಾರಿಸಿ ತಂದಿದ್ದರು.  ಬುತ್ತಿ ಡಬ್ಬಕ್ಕೆ ಮೊಸರನ್ನ, ಬಿಸಿಬೇಳೆಭಾತ್ ಹಾಕಿಕೊಂಡರು. ನಾನು ಉಪ್ಪಿಟ್ಟು ಪ್ರಿಯಳಾದ್ದರಿಂದ ಉಪ್ಪಿಟ್ಟೇ ತುಂಬಿಸಿಕೊಂಡೆ. ಸೌತೆಕಾಯಿ ಕೊಟ್ಟರು.

    ತುಮಕೂರು ದಾಟಿ ನಾವು ತುಂಬಾಡಿ ಬಸ್ ನಿಲ್ದಾಣದ ಬಳಿ ಸಿದ್ದರಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ (ದೊಡ್ಡ ಕಮಾನು ಇದೆ) ಎಡಕ್ಕೆ ತಿರುಗಿ ಕೆಲವಾರು ಕಿಮೀ ಸಾಗಿದಾಗ ಕೊರಟಗೆರೆಯ ಚನ್ನರಾಯನದುರ್ಗ ತಲಪಿದೆವು. ಅಲ್ಲಿ ಬಸ್ಸಿಳಿದು, ಊರೊಳಗಿನ ದಾರಿಯಲ್ಲಿ ಸಾಗಿದಾಗ ಹೆಂಗಸರು ಮನೆ ಮುಂದೆ ಹುಣಸೆಹಣ್ಣು, ಹೊಂಗೆ ಬೀಜ ಕುಟ್ಟುತ್ತಿದ್ದುದು ಕಂಡೆವು. ಅವರನ್ನು ಮಾತಾಡಿಸುತ್ತ ಮುಂದೆ ಹೋಗಿ ದೊಡ್ದದಾದ ಬಂಡೆ ಬುಡಕ್ಕೆ ಹೋದೆವು. ಇಲ್ಲಿಂದಲೇ ದುರ್ಗಕ್ಕೆ ಹೋಗಲು ದಾರಿ ಸುರುವಾಗುತ್ತದೆ. ಆ ಬಂಡೆಯನ್ನು ಹತ್ತಲು ತೊಡಗಿದೆವು. ಹತ್ತಲು ಭಯಪಡುವವರ ಕೈ ಹಿಡಿದು ಮುನ್ನಡೆಸಿದೆವು. ಬಂಡೆ ಏರಲು ಅಭ್ಯಾಸ ಇರುವವರಿಗೆ ಕಷ್ಟವೇನಿಲ್ಲ.


  ಬಿಸಿಲು ಜೋರಾಗಿದ್ದರೂ ತಣ್ಣಗೆ ಗಾಳಿ ಬೀಸುತ್ತಿದ್ದುದರಿಂದ ನಮಗೆ ಕಷ್ಟವಾಗಲಿಲ್ಲ. ಬಂಡೆ ಮೇಲೆ ಹತ್ತುವ ಸಂತೋಷ ಅನುಭವಿಸಿದೆ.  (ಹಿಂದಿನ  ವಾರ ದಾಂಡೇಲಿ ಚಾರಣ ಹೋಗಿದ್ದಾಗ, ಬಿಸಿಲಬೇಗೆಗೆ ಬಹಳ ಸುಸ್ತಾಗಿತ್ತು. ಇನ್ನು ಬೇಸಿಗೆ ಕಾಲದಲ್ಲಿ ಚಾರಣ ಹೊರಡುವುದಿಲ್ಲ ಎಂದು ಆ ಸಮಯದಲ್ಲಿ ಶಪಥ ಕೈಗೊಂಡಿದ್ದೆ. ೪ ದಿನ ಕಳೆದಾಗ ಈ ದುರ್ಗಕ್ಕೆ ಒಂದು ಹೋಗುತ್ತೇನೆ ಎಂದು ಶಪಥ ಮುರಿದು ಹೊರಟದ್ದು!)   

   ಎರಡು ಬೃಹತ್ ಬಂಡೆಯನೇರಿ ಮೇಲೆ ಹೋದಾಗ ಕೋಟೆಯ ಮೊದಲ ದ್ವಾರ ಎದುರಾಯಿತು.  ಒಟ್ಟು ಮೂರು ಹಂತದಲ್ಲಿ ಈ ಕೋಟೆ ಇವೆ. ಮೊದಲ ಹಂತದಲ್ಲಿ ಕೆರೆ ಹಾಗೂ ದೇವಾಲಯ ಇದೆ.  ವಿಶಾಲ ಸ್ಥಳದಲ್ಲಿ ಒಂದು ಕೆರೆ ಕಾಣುತ್ತದೆ. ಅದರಲ್ಲಿ ಈಗಲೂ ನೀರಿದೆ. ಮಳೆ ನೀರು ಸಂಗ್ರಹವದು. ಕೆರೆ ಏರಿಯ ಬಂಡೆಮೇಲೆ ಒಂದು ಸುಂದರ ಕೆತ್ತನೆಯ ದೇವಾಲಯವಿದೆ. ಈಗ ಪಾಳುಬಿದ್ದಿದೆ. ನಿಧಿ ಶೋಧಕ್ಕೆಂದು ಶಿವಲಿಂಗ, ಗಣಪತಿ ಮೂರ್ತಿಯನ್ನು  ಕಿತ್ತು ಹಾಕಿ ಗುಂಡಿ ತೋಡಿದ್ಡಾರೆ. ಎಂಥ ನೀಚರು ಅವರು.







  

ನಾವು ಹತ್ತಿದ್ದು ಕೋಟೆಯ ಹಿಂಬಾಗಿಲಿನ ಮೂಲಕ ಎಂದ ಚೆನ್ನಮಲ್ಲನಾಯಕ. ನಮ್ಮನ್ನು ಕೋಟೆಯ ಮುಂಬಾಗಿಲು ತೋರಿಸಲು ಕೆಳಗೆ ಇಳಿಸಿದ. ಅಲ್ಲಿ ಕಲ್ಲಿನ ಗೋಡೆಯಲ್ಲಿಅಭಯ ಹಸ್ತವಿರುವ ಆಂಜನೇಯನ ಮೂರ್ತಿ ಬಹಳ ಸುಂದರವಾಗಿ ಕೆತ್ತಿದ್ದು ಕಂಡೆವು. ಅಲ್ಲಿಂದ ಕೆಳಗೆ ಪುಟ್ಟ ಗುಡಿ ಕಾಣುತ್ತದೆ. ಆ ಸ್ಥಳದಿಂದ ಕೋಟೆಯನ್ನು ಹತ್ತುವ ದಾರಿ. ಅಲ್ಲಿಂದ ಹತ್ತಲು ಅರಣ್ಯ ಇಲಾಖೆಯವರ ಅನುಮತಿ ಬೇಕಂತೆ. ಹಾಗಾಗಿ ಎಲ್ಲರೂ ಹಿಂಬಾಗಿಲಿನ ಮೂಲಕ ಹತ್ತುತ್ತಾರೆ ಎಂದ. ಅಲ್ಲಿ ಸ್ವಲ್ಪ ಹೊತ್ತು ಕೂತೆವು.







   ಪ್ರತೀ ದ್ವಾರದಲ್ಲೂ ಪುಟ್ಟ ಮಂಟಪವಿದೆ. ಅಲ್ಲಿ ಬಹಳ ತಂಪಾದ ವಾತಾವರಣ. ಅಲ್ಲಿ ಆರಾಮವಾಗಿ ಕೂತು, ನೀರು ಕುಡಿದು ಮುಂದುವರಿದೆವು. ನಾವು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸುತ್ತ, ನಿಧಾನವಾಗಿಯೇ ಹತ್ತಿದೆವು.




    ಎರಡನೆ ಹಂತದಲ್ಲಿ ಕೋಟೆ ಗೋಡೆ ಶಿಥಿಲಗೊಂಡಿವೆ. ಹಾಗೂ ನಿಧಿ ಹುಡುಕಾಟಕ್ಕೆಂದು ಗೋಡೆಯನ್ನೇ ಕೆಡವಿ ಅಗೆದು ಹಾಕಿದ್ದಾರೆ. ಈ ಕೋಟೆಯ ವಿಶೇಷತೆಯೆಂದರೆ ಒಂದು ಹಂತ ಹತ್ತಿದಾಗ ಇದೇ ಕೋಟೆಯ ಕೊನೆಯೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟು ಚೆನ್ನಾಗಿ ಯೋಜನೆ ಮಾಡಿ ಕಟ್ಟಿದ್ದಾರೆ. ಹತ್ತುತ್ತ ಹೋದಂತೆ ಅಯ್ಯೊ ಇನ್ನೂ ಹತ್ತಬೇಕಲ್ಲಪ್ಪ ಎಂದು ಕೆಲವರು ಉದ್ಗಾರ ತೆಗೆದರು. ಇನ್ನು ಮೇಲೆ ಹತ್ತಲಾರೆ, ಎಂದವರಿಗೆ ಇಷ್ಟು ಹತ್ತಿದ್ದೀರಲ್ಲ, ಇನ್ನು ಒಂದು ಹಂತ ದಾಟಿದರೆ ಗುರಿ ತಲಪುತ್ತೀರಿ ಎಂದು ಹುರಿದುಂಬಿಸುತ್ತ, ಸಾಗಿದೆವು. ಐದನೇ ದ್ವಾರ ದಾಟಿ ಮುಂದೆ ಹೋದಾಗ ಅಲ್ಲಿ ದರ್ಬಾರ್ ಹಾಲ್, ಅರಮನೆ ಇದ್ದ ಕುರುಹನ್ನು ನಾಯಕ ತೋರಿಸಿದ. ದರ್ಬಾರ್ ಹಾಲಿಗೆ ಹೋಗಿ, ‘ಯಾರಲ್ಲಿ, ನರ್ತಕಿಯರನ್ನು ಬರಮಾಡಿ. ಎಂಬ ಕೂಗು ಹಾಕಿದ! ನಾವು ಮುಂದೆ ಹೋಗುತ್ತೇವೆ. ನೀನು ನರ್ತಕಿಯರು ಬಂದು ಅವರ ನರ್ತನ ನೋಡಿ ಬರುವಿಯಂತೆ ಎಂದು ಹೇಳಿದೆವು. ಧವಸ ದಾಸ್ತಾನು ಮಾಡುತ್ತಿದ್ದ ಸ್ಥಳ, ಖಜಾನೆಯನ್ನು ನೋಡಿದೆವು. ಎಷ್ಟೆಲ್ಲ ವೈಭವದಿಂದ ಇದ್ದಿರಬಹುದು ಎಂದು ಕಲ್ಪನೆ ಮಾಡಿಕೊಂಡೆವು.

 ಮೂರನೆ ಹಂತದಲ್ಲಿ ಸಿಗುವುದೇ ಕೋಟೆಯ ತುದಿ.  ಎಲ್ಲರೂ ಕೋಟೆ ಮೇಲೆ ತಲಪಿಬಿಟ್ಟೆವು.  ಆಹಾ ಏನು ಸೊಗಸಾಗಿದೆ ಆ ಸ್ಥಳ. ಆಗ ಗಂಟೆ ೧ ಆಗಿತ್ತು. ಇಲ್ಲಿ ಕೋಟೆಯ ಕಾವಲಿಗಾಗಿ ಮೂರು ಕಿಂಡಿಗಳಿವೆ.  ಕಾವಲು ಕಿಂಡಿಗಳಲ್ಲಿ ಇಣುಕಿದೆವು. ಅಬ್ಬ, ಈ ಕೋಟೆ ಕಟ್ಟಿದವರ ಜಾಣ್ಮೆ ಮೆಚ್ಚಬೇಕು. ಯಾವುದೇ ಕಡೆಯಿಂದ ಯಾರೇ ನುಸುಳಿ ಬಂದರೂ ಕಾಣುವಂಥ ವ್ಯವಸ್ಥೆ. ಚರಿತ್ರೆಗೆ ಸಾಕ್ಷಿಯಾಗಿ ಈ ಕೋಟೆ ಇದೆ. ಕೋಟೆ ಕಟ್ಟಿದವರ ಪರಿಣತಿಗೆ ಸಲಾಂ ಸಲ್ಲಲೇಬೇಕು.     







      ಕೋಟೆಯ ಸುತ್ತ ನಡೆದೆವು. ಕೋಟೆಯ ಮೆಲ್ಭಾಗದ ಆವರಣ ಗೋಡೆಯ ಇಟ್ಟಿಗೆ ಬಹಳ ಕಲಾತ್ಮಕವಾಗಿದೆ. ಅಲ್ಲಲ್ಲಿ ಜರಿದು ಬಿದ್ದರೂ ಚೆಲುವಿಗೆ ಮೋಸವಿಲ್ಲ. ಕೋಟೆಯ ಮೇಲಿಂದ ಸುತ್ತಲೂ ನೋಡಿದಾಗ ಎಲ್ಲೆಲ್ಲೂ ಬಂಡೆಗಲ್ಲುಗಳೇ ಕಾನುತ್ತವೆ.. ಕೆಲವು ದೊಡ್ಡದು, ಸಣ್ಣದು, ಮಧುಗಿರಿ ಬೆಟ್ಟ, ಸಿದ್ದರಬೆಟ್ಟ ಎಲ್ಲ ಕಾಣುತ್ತದೆ. ಬಿಸಿಲಲ್ಲಿ ಕೋಟೆ ನೋಡಲು  ಹೋದದ್ದು ಸಾರ್ಥಕ ಎನಿಸಿದ ಕ್ಷಣವದು. ಇನ್ನು ಕೆಲವೇ ವರ್ಷಗಳಲ್ಲಿ ಈ ಕೋಟೆ ಪೂರ್ಣ ಅವನತಿಯ ಅಂಚಿಗೆ ಸರಿಯಬಹುದು. ಈಗಲೇ ದೊಡ್ಡ ದೊಡ್ಡ ಮರಗಳು ಕೋಟೆಯ ಗೋಡೆಯಲ್ಲಿ ಬೆಳೆದು ನಿಂತಿವೆ. ಕೆಲವೆಡೆ ಜರಿದು ಬಿದ್ದಿವೆ. ಕಾಲಕ್ರಮೇಣ ಗೋಡೆಗಳು ಧರಾಶಾಯಿಯಾಗಬಹುದು.




     ಕೋಟೆಮೇಲೆ ವಿಶಾಲವಾದ ಸ್ಥಳವಿದೆ.  ಅಲ್ಲಿ ಅಡ್ಡಾಡಿ ಕೋಟೆಯ ಚೆಲುವನ್ನು ನೋಡಿ ಅಲ್ಲೇ ಕುಳಿತು ಊಟ ಮಾಡಿದೆವು. ಒಂದು ನಾಯಿಯೂ ಅಲ್ಲಿಗೆ ಬಂದಿತ್ತು. ಅದಕ್ಕೆ ಮೊಸರನ್ನ, ಉಪ್ಪಿಟ್ಟು ಹಾಕಿದರೆ ಚಪ್ಪರಿಸಿ ತಿಂದಿತು. ಬಿಸಿಬೇಳೆಬಾತ್ ಮೂಸಿಯೂ ನೋಡಲಿಲ್ಲ! ನಾವು ಇಳಿದಾಗ ನಮ್ಮೊಡನೆ ಕೆಳಗೆ ಇಳಿಯಿತು.



 ಕೋಟೆಯ ಬಗ್ಗೆ ಕಿರು ಮಾಹಿತಿ

    ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿರುವ ಚನ್ನರಾಯನ ದುರ್ಗ   ಸಮುದ್ರಮಟ್ಟದಿಂದ ೩೭೫೦  ಅಡಿ ಎತ್ತರದಲ್ಲಿದೆ.   ಕೋಟೆಯನ್ನು೧೭ನೇ ಶತಮಾನದಲ್ಲಿ  ಮೊದಲಿಗೆ ಕಟ್ಟಿದವನು ಮಧುಗಿರಿಯ ಪಾಳೇಗಾರ ಚಿಕ್ಕಪ್ಪ ಗೌಡ ಎಂದು ದಾಖಲಾಗಿದೆ. ಬಹಳಷ್ಟು ವರ್ಷಗಳ ಕಾಲ ಕೋಟೆ ಮಧುಗಿರಿಯ ಪಾಳೇಗಾರರ ವಶದಲ್ಲೇ ಇತ್ತು. ಮರಾಠರ ಆಕ್ರಮಣಕ್ಕೆ ಮಧುಗಿರಿ ತುತ್ತಾದಾಗ ಕೋಟೆ ಕೂಡ ಅವರ ಕೈವಶವಾಯಿತು. ಚಿಕ್ಕದೇವರಾಯ ಒಡೆಯರ ಆಳ್ವಿಕೆಯಲ್ಲಿ ಚನ್ನರಾಯನದುರ್ಗ ಮೈಸೂರು ಸಂಸ್ಥಾನಕ್ಕೆ ಸೇರಿತು. ಆಗ ಇಲ್ಲಿಗೆ ಪ್ರಸನ್ನಗಿರಿ ಎಂಬ ಹೆಸರಿತ್ತಂತೆ. ಮತ್ತೊಮ್ಮೆ ಮರಾಠರ ಪಾಲಾದ ದುರ್ಗ ಚಂದ್ರಾಯದುರ್ಗವೆಂದೂ ಕರೆಸಿಕೊಂಡಿತ್ತು, ಮರಾಠಾ ಸೇನಾಧಿಕಾರಿಗಳಾದ ಶ್ರೀಪಂತ ಪ್ರಧಾನ ಹಾಗೂ ಮಾಧವರಾಯ ಬಲ್ಲಾಳ ಪ್ರಧಾನರ ಹೆಸರಿನಲ್ಲಿರುವ ೧೭೬೬ರ ಶಿಲಾಶಾಸನವನ್ನು ಕೋಟೆಯ ದ್ವಾರದಲ್ಲಿ ಈಗಲೂ ಕಾಣಬಹುದಂತೆ.  ಟಿಪ್ಪುವಿನ ಆಡಳಿತದ ಸಮಯದಲ್ಲಿ ಚನ್ನರಾಯನದುರ್ಗ ಮತ್ತೆ ಮೈಸೂರು ಸಂಸ್ಥಾನಕ್ಕೆ ಸೇರಿತು. ಅಂತಿಮವಾಗಿ ಮೂರನೆಯ ಮೈಸೂರು ಯುದ್ಧದ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಮ್ಯಾಕ್ಸ್ವೆಲ್ ಎಂಬಾತನ ನೇತೃತ್ವದಲ್ಲಿದ್ದ ಬ್ರಿಟಿಷ್ ಸೇನೆ ದುರ್ಗವನ್ನು ವಶಪಡಿಸಿಕೊಂಡಿತು. (ಮಾಹಿತಿ ಕೃಪೆ: ಅಂತರ್ಜಾಲ)

         ನಾವು ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ತಂಡದ ಪಟ ತೆಗೆಸಿಕೊಂಡು ಕೆಳಗೆ ಇಳಿಯಲು ಹೊರಟಾಗ ಗಂಟೆ ೨.೩೦. ಬಂಡೆಗಲ್ಲು ಕಾದು ಬರಿಗಾಲಲ್ಲಿ ನಡೆಯಲು ಆಗದಷ್ಟು ಸುಡುತ್ತಿತ್ತು. ಚನ್ನಮಲ್ಲನಾಯಕ ಅವನ ಹವಾಯಿ ಚಪ್ಪಲಿಯನ್ನು ಕೆಳಗೆ ಬಿಟ್ಟು ಬರಿಗಾಲಲ್ಲಿ ಬಂದಿದ್ದ. ಬೇಗ ಬೇಗ ಇಳಿಯಿರಿ. ಎಂದು ಅವನು ಆಗಾಗ ಎಚ್ಚರಿಸುತ್ತಿದ್ದ! ಇಳಿಯಲು ಕಷ್ಟವಾದವರ ಕೈಹಿಡಿದು ಕೆಳಗೆ ಇಳಿಸಿದೆವು. ನಾಲ್ಕು ಗಂಟೆಗೆ ನಾವು ಕೆಳಗೆ ತಲಪಿದೆವು.



 ಅಲ್ಲಿ ಯಲಿಯಮ್ಮದೇವಿ ದೇವಾಲಯವಿದೆ. ಒಬ್ಬಾತ ರಶೀತಿ ಪುಸ್ತಕ ಹೀಡಿದು ಅಲ್ಲಿ ಕುಳಿತು, ದೇವಾಲಯದ ಅಭಿವೃದ್ಧಿಗೆ ಧನ ಸಹಾಯ ಮಾಡಿ ಎಂದು ಕೋರಿಕೊಂಡ. ಕೆಲವರು ಹಣಕೊಟ್ಟು ರಸೀತಿ ಪಡೆದರು.

    ಕೆಳಗೆ ಬಂದು ಮುಖಕ್ಕೆ ನೀರು ಹಾಕಿ ತೊಳೆದಾಗ ಸುಖವೆನಿಸಿತು. ಚಹಾಪ್ರಿಯರು ಅಲ್ಲೇ ಪೆಟ್ಟಿಗೆ ಅಂಗಡಿಯಲ್ಲಿ ಚಹಾ ಹೀರಿದರು.

    ಅಲ್ಲಿ ಆದಿನ ರಾತ್ರೆ ಕುರುಕ್ಷೇತ್ರ ನಾಟಕ ಇತ್ತು. ಅದಕ್ಕಾಗಿ ರಸ್ತೆಯಲ್ಲಿ ರಂಗಸ್ಥಳ ಕಟ್ಟುತ್ತಿದ್ದರು.  ಇಲ್ಲೆ ಇದ್ದು, ನಾಟಕ ನೋಡಿ ಹೋಗಿ ಎಂದು ನಮಗೂ ಆಮಂತ್ರಣ ಕೊಟ್ಟರು. ಊರವರ ಜೊತೆ ಮಾತಾಡುತ್ತ ನಡೆದೆವು. ಎಲ್ಲಿಂದ ಬಂದಿರಿ? ಬೆಟ್ಟ ಹತ್ತಿದ್ರ? ನಮ್ಮವರ  ಬಿಳಿತಲೆ ನೋಡಿ ಅಜ್ಜಿಯರೂ ಹತ್ತಿದ್ರ?  ಎಂದು ಆಶ್ಚರ್ಯದಿಂದ ಕೇಳಿದರು. ಅಲ್ಲಿ ರಾಗಿ ಕಣಜ ಎಲ್ಲ ನೋಡಿದ್ರ? ಈ ಕೋಟೆಯಲ್ಲಿ ಭಾರತಿಯವರು ಅಭಿನಯಿಸಿದ ಬಂಗಾರದ ಜಿಂಕೆ ಸಿನೆಮಾ ಶೂಟಿಂಗ್ ಆಗಿದೆ. ಅಲ್ಲಿಂದ ಮತ್ತೆ ಬೆಟ್ಟಕ್ಕೆ ವಸಿ ಜನ ಬರಲು ಸುರುಮಾಡಿದರು. ಮತ್ತೂ ಒಂದೆರಡು ಸಿನೆಮಾ ಶೂಟಿಂಗ್ ಆಗಿತ್ತು.  ಎಂದರು.

ರಾಗಿ ಕಣಜ ಯಾವುದು ಎಂದು ಗೊತ್ತಿಲ್ಲ. ಆದರೆ ಎಲ್ಲವನ್ನೂ ನೋಡಿದೆವು ಎಂದೆವು.

ನಮ್ಮ ಹುಡುಗರನ್ನು ಕರೆದುಕೊಂಡು ಹೋಗಬೇಕಿತ್ತು. ಎಲ್ಲ ಚೆನ್ನಾಗಿ ವಿವರಿಸಿ ತೋರಿಸುತ್ತಿದ್ದರು ಎಂದರು.

    ಅಲ್ಲೆ ಹುಡುಗರು ಗೋಲಿಯಾಡುತ್ತಿದ್ದರು. ಅದನ್ನು ತುಸುಹೊತ್ತು ನೋಡಿ ಬಸ್ಸಿಗೆ ಹತ್ತಿದೆವು. ೪.೩೦ಗೆ ಅಲ್ಲಿಂದ ಹೊರಟೆವು. ಎಲ್ಲರಿಗೂ ದ್ರಾಕ್ಷೆ ಹಂಚಿದರು. ಆ ಹೊತ್ತಲ್ಲಿ ದ್ರಾಕ್ಷೆ ಬಹಳ ರುಚಿಯಾಗಿ ಹೊಟ್ಟೆ ಸೇರಿತ್ತು.

         ಮದ್ದೂರು ತಲಪಿದಾಗ ೭.೧೦. ಶಿವದಾಸ್ ಖಾನಾವಳಿಯಲ್ಲಿ ಸೆಟ್ ದೋಸೆ ಕಾಫಿ ಕುಡಿದು ಹೊರಟು ಮೈಸೂರು ಮನೆ ತಲಪಿದಾಗ ಗಂಟೆ ೯.೩೦ ಆಗಿತ್ತು.

    ಸೋಮಶೇಖರ್ ಹಾಗೂ ಚನ್ನಮಲ್ಲನಾಯಕರ ನೇತೃತ್ವದಲ್ಲಿ  ಚನ್ನರಾಯನದುರ್ಗಕ್ಕೆ  ಚಾರಣವನ್ನು ಯಶಸ್ವಿಯಾಗಿ ಮಾಡಿದ್ದೆವು. ಅವರಿಗೆ ನಮ್ಮ ಸಹಚಾರಣಿಗರೆಲ್ಲರ ಪರವಾಗಿ ಧನ್ಯವಾದ.  ಚಾರಣ ಶುಲ್ಕ ರೂ.೯೫೦

ದಾರಿ:    ಮೈಸೂರು-ಮಂಡ್ಯ-ಮದ್ದೂರು-ಕುಣಿಗಲ್-ತುಮಕೂರು-ತುಂಬಾಡಿ-ಕೊರಟಗೆರೆ-ಚನ್ನರಾಯನದುರ್ಗ. ಸುಮಾರು ೨೧೦ಕಿಮೀ. ಬೆಂಗಳೂರಿನಿಂದ ೧೦೦ಕಿಮೀ.

ಇಲ್ಲಿ  ಕೆಲವು ಪಟಗಳು ಸಹಚಾರಣಿಗರು ಕ್ಲಿಕ್ಕಿಸಿದ್ದನ್ನು ಬಳಸಿಕೊಂಡಿರುವೆ. ಅವರಿಗೆ ಧನ್ಯವಾದ.


ದಾರಿ:    ಮೈಸೂರು-ಮಂಡ್ಯ-ಮದ್ದೂರು-ಕುಣಿಗಲ್-ತುಮಕೂರು-ತುಂಬಾಡಿ-ಕೊರಟಗೆರೆ-ಚನ್ನರಾಯನದುರ್ಗ. ಸುಮಾರು ೨೧೦ಕಿಮೀ. ಬೆಂಗಳೂರಿನಿಂದ ೧೦೦ಕಿಮೀ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ