ಮಂಗಳವಾರ, ಅಕ್ಟೋಬರ್ 4, 2022

ಗುರುರಾಯರ ಸನ್ನಿಧಿಯಲ್ಲಿ

 ಮಂತ್ರಾಲಯಕ್ಕೆ ಹೋಗಬೇಕು ಎಂದು ನಾವು ಒಂದು ವರ್ಷದಿಂದ ಅಂದುಕೊಂಡಿದ್ದೆವು. ಆ ಸುಸಮಯ ಬಂದೇ ಬಂತು. ಅಕ್ಕ ಭಾವ ಕೇವಲ ಒಂದು ವಾರದಲ್ಲಿ ತಾರೀಕು ನಿಶ್ಚಯಿಸಿ, ತಂಗಿ ಬಾಡಿಗೆ ಕಾರು ಕಾದಿರಿಸುವ ಜವಾಬ್ದಾರಿ ವಹಿಸಿಕೊಂಡಳು. ತಾರೀಕು ೨೨-೯-೨೨ರಂದು ಸಂಜೆ ಅಕ್ಕ ಭಾವ ಕಾರಿನಲ್ಲಿ ಮೈಸೂರಿಗೆ ಬಂದು ನನ್ನನ್ನು ಹತ್ತಿಸಿಕೊಂಡು ಬೆಂಗಳೂರಿನ ಮುತ್ಯಾಲನಗರದಲ್ಲಿರುವ ತಂಗಿ ಮನೆಗೆ ರಾತ್ರೆ ೯.೪೫ಕ್ಕೆ ತಲಪಿದೆವು. ಬೆಂಗಳೂರು ಮೈಸೂರು ರಸ್ತೆ ಈಗ ಬಹಳ ಚೆನ್ನಾಗಿ ಆಗಿದೆ. ೨ ಗಂಟೆಯಲ್ಲಿ ಕೆಂಗೇರಿ ತಲಪಲು ಸಾಧ್ಯವಾಗುತ್ತದೆ.

    ತಾರೀಕು ೨೩.೯.೨೨ರಂದು ಬೆಳಗ್ಗೆ ೫.೧೫ ಗಂಟೆಗೆ ನಾವು ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ೭ ಮಂದಿ (ಬಾಲಸುಬ್ರಹ್ಮಣ್ಯ-ಮಂಗಲಗೌರಿ, ರವಿಶಂಕರ-ಸವಿತಾ, ನರಸಿಂಹಕುಮಾರ್- ಶಾರದಾ, ರುಕ್ಮಿಣಿಮಾಲಾ.) (ಸಂಘಸಂಸ್ಥೆಗಳ ಲೆಕ್ಕಪರಿಶೋಧನೆಯ ಕಾರ್ಯದೊತ್ತಡದಿಂದ ಅನಂತನಿಗೆ ಹೊರಡಲು ಸಾಧ್ಯವಾಗಿರಲಿಲ್ಲ) ಮಂತ್ರಾಲಯದೆಡೆಗೆ ಹೊರಟೆವು.. ಬೆಂಗಳೂರಿನಿಂದ ಮಂತ್ರಾಲಯ ಸುಮಾರು ೩೭೦ಕಿಮೀ. ದಾರಿ: ಯಲಹಂಕ- ಹೈದರಾಬಾದ್ ಹೈವೇ- ಅನಂತಪುರ- ಗೂಟಿ (ಗುತ್ತಿ)- ಅದೋನಿ- ಮಂತ್ರಾಲಯ

  ಯಲಹಂಕ ದಾಟಿ ಅನಂತಪುರದ ಸಮೀಪ ಬರುವವರೆಗೂ ದಾರಿಯಲ್ಲಿ ಯಾವುದೇ ಹೊಟೇಲ್ ಸಿಗುವುದಿಲ್ಲ. ನಾವು ಅನಂತಪುರದ ಬಳಿ ಉಪಾಹಾರ್ ಹೊಟೇಲಿನಲ್ಲಿ ತಿಂಡಿ ತಿಂದೆವು. ಗೂಟಿಯಿಂದ ಅದೋನಿಗೆ ರಾಜ್ಯ ಹೆದ್ದಾರಿಯ ಬದಲು ಗೂಗಲಣ್ಣ ನಮ್ಮ ದಾರಿ ತಪ್ಪಿಸಿ, ಹಳ್ಳಿ ದಾರಿಯಲ್ಲಿ ಸಾಗುವಂತೆ ನಿರ್ದೇಶಿಸಿದ್ದ. ಅದರಿಂದ ದೂರವೂ ಹೆಚ್ಚಾಗಿತ್ತು. ದಾರಿಯೂ ಸುಗಮವಾಗಿರಲಿಲ್ಲ.  

ಗೂಟಿ ಕಳೆದ ಮೇಲೆ ಎಲ್ಲಿ ನೋಡಿದರೂ ಕಲ್ಲುಬಂಡೆಗಳಿಂದ ಕೂಡಿದ ಪ್ರದೇಶ ಕಂಡೆವು.  ದೊಡ್ಡ ಸಣ್ಣ ಬಂಡೆಕಲ್ಲುಗಳು ನೋಡಲು  ಆಕರ್ಷಕವಾಗಿತ್ತು. ಕೆಲವೆಡೆ ‘ಬಂಡೆ’ ಕರಗಿರುವುದು ಕಂಡಿತು. ಅದು ಯಾರ ‘ಕೈ’ವಾಡವೋ ತಿಳಿಯಲಿಲ್ಲ.

ಆದರೆ ದಾರಿ ಚೆನ್ನಾಗಿ ಇಲ್ಲದಿದ್ದರೂ ದಾರಿಯ ಇಕ್ಕೆಲೆಗಳಲ್ಲಿ  ಕೃಷಿಭೂಮಿ ಕಂಡು, ಅಲ್ಲಿ ಬೆಳೆದ ಬೆಳೆ ನೋಡಿ ಸಂತೋಷಗೊಂಡೆವು. ದಾರಿಯುದ್ದಕ್ಕೂ ಬಯಲು ಪ್ರದೇಶ. ಎಕರೆಗಟ್ಟಲೆ ಸಮತಟ್ಟಾದ ಕೃಷಿಭೂಮಿ. ಅದರಲ್ಲಿ ಭತ್ತ, ಕಬ್ಬು, ಹತ್ತಿ, ಈರುಳ್ಳಿ, ಸಜ್ಜೆ,ಮೆಣಸು, ಟೊಮ್ಯಾಟೊ, ಕಡಲೆ ಹೀಗೆ ವೈವಿಧ್ಯ ಬೆಳೆಗಳು ನಳನಳಿಸುತ್ತಲಿದ್ದುವು. ಅಲ್ಲಿ ಬಹುಶಃ ಹತ್ತಿ ಪ್ರಮುಖ ಬೆಳೆಯಾಗಿರಬೇಕು. ರೈತನ ಶ್ರಮವನ್ನು ನೋಡಿ ಹೆಮ್ಮೆ ಪಟ್ಟುಕೊಂಡೆವು.


ಮಂತ್ರಾಲಯ
ಮಧ್ಯಾಹ್ನ ೧೨.೩೦ಕ್ಕೆ ನಾವು ಮಂತ್ರಾಲಯ ತಲಪಿದೆವು. ಮಠದ ವತಿಯಿಂದ ನಡೆಸಲ್ಪಡುವ ವಿಶ್ರಾಂತಿ ಗೃಹದಲ್ಲಿ ಕೋಣೆ ಪಡೆದೆವು. ದಿನಕ್ಕೆ ಬಾಡಿಗೆ ರೂ.೫೦೦. ಒಂದು ವಿಶಾಲ ಕೋಣೆಯಲ್ಲಿ ಮೂರು ಮಂಚ, ಬಚ್ಚಲಲ್ಲಿ ಗೀಸರ್ ಸಹಿತ ಸೌಲಭ್ಯವಿದ್ದು, ಅನುಕೂಲಕರವಾಗಿತ್ತು.ದೇವಾಲಯದ ಸನಿಹದಲ್ಲೇ ನಮಗೆ ಕೋಣೆ ಲಭಿಸಿತ್ತು. ಒಂದು ಕೋಣೆಯಲ್ಲಿ - ಮಂದಿ ತಂಗಲು ಅವಕಾಶ. ಒಬ್ಬರಿಗೆ ಕೋಣೆ ಕೊಡುವುದಿಲ್ಲ. ಕನಿಷ್ಟ ಇಬ್ಬರಾದರೂ ಇರಬೇಕು. ಹವಾನಿಯಂತ್ರಣ ಸೌಲಭ್ಯರುವ, ಇಲ್ಲದಿರುವ, ಬಿಸಿನೀರು ಇರುವ, ಇಲ್ಲದಿರುವ ಹೀಗೆ ರೂ.೪೦೦-೫೦೦-೧೨೦೦ ದರದಲ್ಲಿ ಸುಮಾರು ೯೦೦ ಕೋಣೆಗಳು ಅಲ್ಲಿ ಲಭ್ಯ.

ಕೋಣೆಯಲ್ಲಿ ನಮ್ಮ ಚೀಲ ಇಟ್ಟು, ದೇವಾಲಯಕ್ಕೆ ಹೋದೆವು. ಮೊದಲಿಗೆ ಮಂಚಾಲಮ್ಮನ ದರ್ಶನ ಪಡೆದೆವು. ಮಂಚಾಲಮ್ಮನಿಗೆ ನಮ್ಮ ಕೈಯಿಂದಲೇ ಆರತಿ ಮಾಡಿಸುತ್ತಾರೆ.

 ಮತ್ತೆ ಗುರುರಾಯರ ಸನ್ನಿಧಾನಕ್ಕೆ ಹೋದೆವು. ದಿನ  ಭಕ್ತರ ಸಂಖ್ಯೆ ಬೆರಳೆಣಿಕೆಯಷ್ಟೇ ಇದ್ದದ್ದರಿಂದ   ಬಹಳ ಬೇಗ ಸಲೀಸಾಗಿ ರಾಯರ      ದರ್ಶನ  ಲಭಿಸಿತು. ನಾವು ಪ್ರಶಸ್ತವಾದ ಸಮಯದಲ್ಲೇ ಬಂದಿದ್ದೆವು.



  ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಮಂತ್ರಾಲಯವು ತುಂಗಭದ್ರಾ ನದಿಯ ದಂಡೆಯಲ್ಲಿದೆ.

ಮಂತ್ರಾಲಯದ ಐತಿಹ್ಯ: ಮೊದಲು ಇಲ್ಲಿಗೆ ಮಂಚಾಲೆ ಎಂಬ ಹೆಸರಿತ್ತು. ಅಧಿದೇವತೆ ಮಂಚಾಲಾಂಬಿಕೆ ಆದ್ದರಿಂದ ಹೆಸರು ಬಂದಿರಬಹುದು. ಮಂಚಾಲೆ ಹಿರಣ್ಯಕಶಿಪುವಿನ ರಾಜ್ಯವಾಗಿತ್ತೆಂದೂ, ಮಂಚಾಲಾಂಬಿಕೆ ಆತನ ಕುಲದೇವತೆಯಾಗಿದ್ದಳೆಂದೂ, ಪ್ರಹ್ಲಾದ ಮಂಚಾಲಾಂಬಿಕೆಯನ್ನು ಪೂಜಿಸುತ್ತ, ಯಜ್ಞ ಯಾಗಾದಿಗಳನ್ನು ನಡೆಸಿದನೆಂದೂ ಪ್ರತೀತಿ. ಇಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನವಿದೆ. ಎದುರಿಗೇ ಆಂಜನೇಯನ ವಿಗ್ರಹವಿದೆ. ರಾಘವೇಂದ್ರ ಗುರುಗಳು ಮಧ್ವಮತ ಸಂಪ್ರದಾಯಸ್ಥರು. ಅವರು ಇಲ್ಲಿ ಸಶರೀರರಾಗಿ ಕ್ರಿ.. ೧೬೭೧ ಶ್ರಾವಣ ಬಹುಳ ಬಿದಿಗೆ ಗುರುವಾರದಂದು ಬೃಂದಾವನಸ್ಥರಾದರು. ದೇಗುಲದ ಬಲಭಾಗದಲ್ಲಿ ಇದುವರೆಗೆ ಮಠದ ಸ್ವಾಮಿಗಳಾಗಿ, ನಿಧನರಾದವರ ಬೃಂದಾವನಗಳೂ ಇವೆ. ಅಲ್ಲಿಯೂ ನಿತ್ಯ ಪೂಜೆ ನಡೆಯುತ್ತದೆ.
     ಮಹಾಮಂಗಳಾರತಿ ನೋಡಿ ನಾವು ದೇಗುಲದ ವತಿಯಿಂದ ನಡೆಸಲ್ಪಡುವ ಅನ್ನ ಪ್ರಸಾದ ಊಟ ಮಾಡಿದೆವು. (ಬ್ರಾಹ್ಮಣರಿಗೆಂದು ಪ್ರತ್ಯೇಕ ಊಟದ ವ್ಯವಸ್ಥೆ ಇದೆ.) ಬಾಳೆಲೆಯಲ್ಲಿ ಅನ್ನ ಸಾರು, ಪಲ್ಯ, ಪಾಯಸ, ಸಾಂಬಾರು, ಹಯಗ್ರೀವ, ಮೊಸರನ್ನದಿಂದ ಕೂಡಿದ ಪುಷ್ಕಳ ಭೋಜನ. ಇತ್ತೀಚೆಗೆ ಫೇಸ್ಬುಕ್ಪುಟದಲ್ಲಿ, ಬಾಳೆಲೆಯಲ್ಲಿ ಊಟ ಮಾಡಿ, ಎಲೆ ತೊಳೆದಿಟ್ಟಂತೆ ಕಾಣುವ ಹಾಗೆ ಇರುವ ಪಟ ಬಂದಿತ್ತು. ಅಂದರೆ ಒಂದಗುಳನ್ನೂ ಬೀಸಾಕಬಾರದು ಎಂಬ ನಿಲುವು. ಅದರ ನೆನಪಾಗಿ ನಾನು ಊಟ ಮಾಡಿದ ಮೇಲೆ ಖಾಲಿ ಎಲೆಯ ಪಟ ತೆಗೆದೆ. (ಬೇಕಷ್ಟನ್ನು ಮಾತ್ರ ಹಾಕಿಸಿಕೊಂಡು  ತಟ್ಟೆ, ಎಲೆಯಲ್ಲಿ ಏನೂ ಬಿಡದೆ ಊಟ ಮಾಡುವುದು ನನಗೆ ಮೊದಲಿನಿಂದಲೂ ರೂಢಿ) ಉಪ್ಪು ಮಾತ್ರ ವಿಧಿಯಿಲ್ಲದೆ ಬಿಡಬೇಕಾಯಿತು.  (ಹತ್ತು ಜನಕ್ಕೆ ಸಾಕಾಗುವಷ್ಟು ಉಪ್ಪು ಸುರಿದಿದ್ದರು.



ದೇವಾಲಯದೊಳಗೆ ಹೋಗಲು ವಸ್ತ್ರಸಂಹಿತೆಯ ಕಠಿಣ ನಿಲುವು ಇಲ್ಲ. ಗಂಡಸರು ಪ್ಯಾಂಟ್ ಧರಿಸಿ ಒಳಹೋಗಬಹುದು. ಆದರೆ ಅಂಗಿ ಬನಿಯನ್  ಹಾಕಿಕೊಂಡು ಹೋಗುವಂತಿಲ್ಲ. ಹೆಂಗಸರು ಸೀರೆ, ಚೂಡಿದಾರ ಧರಿಸಬಹುದು.   

ಪಂಚಮುಖಿ
ಆಂಜನೇಯ

  ಊಟವಾಗಿ ತುಸು ವಿಶ್ರಾಂತಿ ಪಡೆದು ಗಂಟೆಗೆ (ಮಂತ್ರಾಲಯದಿಂದ ಸುಮಾರು ೧೯ಕಿಮೀ. ರಾಯಚೂರು ಜಿಲ್ಲೆಯ ಗಾಣಧಾಳ ಗ್ರಾಮ) ಪಂಚಮುಖಿ ಆಂಜನೇಯ ದೇಗುಲಕ್ಕೆ ಹೊರಟೆವು

ದಾರಿಯಲ್ಲಿ ಸಾಗುತ್ತಿರಬೇಕಾದರೆ, ರಾಘವೇಂದ್ರ ಮಠದ ವತಿಯಿಂದ ನಡೆಸಲ್ಪಡುವ ಗೋಶಾಲೆಯ ನೂರಾರು ಗೋವುಗಳು ಸಂಜೆ ಸಾಲಾಗಿ ಗೋಶಾಲೆಗೆ ಹಿಂತಿರುಗುವ ಮನಮೋಹಕ ದೃಶ್ಯ ನೋಡಿ ಪುಳಕಿತರಾದೆವು.

ಗಿಲ್ಲೆಸಗೂರಿನಿಂದ ಗಾಣಧಾಳ ಊರಿಗೆ ಹೋಗುವ ರಸ್ತೆ ಬಹಳ ಹಾಳಾಗಿದೆ. ಮಂತ್ರಾಲಯದಿಂದ ಅಲ್ಲಿಗೆ ಬಾಡಿಗೆಗೆ ರಿಕ್ಷಾ, ವ್ಯಾನ್ ಲಭ್ಯವಿದೆ. ಹದಗೆಟ್ಟ ರಸ್ತೆಯಲ್ಲಿ ರಿಕ್ಷಾದಲ್ಲಿ ಸಂಚರಿಸಿದವರ ಸೊಂಟ ಅಲ್ಲಿಗೆ ತಲಪುವಾಗ ಸರಿಯಾಗಿದ್ದರೆ ಪುಣ್ಯ.
ಆಂಜನೇಯ ದೇವಾಲಯ ತಲಪಿ, ದೇಗುಲದೊಳಗೆ ನಡೆದೆವು. ಮೊದಲಿಗೆ ಆಂಜನೇಯನ ಪಾದದ ದರ್ಶನ. ಮುಂದೆ ಸಾಗಿ ಬಂಡೆಯಡಿಯಲ್ಲಿ ಪಂಚಮುಖವಿರುವ ಆಂಜನೇಯನನ್ನು ನೋಡುತ್ತೇವೆ.



ಚಿತ್ರಕೃಪೆ: ಅಂತರ್ಜಾಲ
ದಂತಕಥೆ: ತ್ರೇತಾಯುಗದಲ್ಲಿ, ರಾಮ ಹಾಗೂ ರಾವಣರ ನಡುವೆ ಯುದ್ಧದ ಸಂದರ್ಭದಲ್ಲಿ, ಪಾತಾಳಲೋಕದ ಅಧಿಪತಿ ಮಹಿರಾವಣನು ವಿಭೀಷಣನ ವೇಷದಲ್ಲಿ ರಾಮಲಕ್ಷ್ಮಣರು ಕೂತಿದ್ದ ಜಾಗಕ್ಕೆ ಬಂದು, ಇಬ್ಬರನ್ನೂ ಅಪಹರಿಸಿ ಪಾತಾಳ ಲೋಕಕ್ಕೆ ಕರೆದೊಯ್ಯುತ್ತಾನೆ. ವಿಷಯ ಅರಿತ ಹನುಮ, ರಾಮಲಕ್ಷ್ಮಣರನ್ನು ಹುಡುಕಿಕೊಂಡು ಪಾತಾಳಕ್ಕೆ ಹೋಗುತ್ತಾನೆ. ಅಲ್ಲಿ ದಿಕ್ಕುಗಳಲ್ಲಿ ದೀಪ ಉರಿಯುತ್ತಲಿತ್ತು. ದೀಪಗಳನ್ನು ಏಕಕಾಲದಲ್ಲಿ ಆರಿಸಿದರೆ ಮಾತ್ರ ಮಹಿರಾವಣನ ವಧೆ ಮಾಡಲು ಸಾಧ್ಯ ಎಂದು ತಿಳಿದು, ಆಗ ಆಂಜನೇಯ ಪಂಚಮುಖಿ ರೂಪ ತಾಳಿ ಒಂದೇ ಸಮಯದಲ್ಲಿ ದೀಪ ನಂದಿಸಿ ಮಹಿರಾವಣನ ವಧೆ ಮಾಡಿ ರಾಮಲಕ್ಷ್ಮಣರನ್ನು ರಕ್ಷಿಸುತ್ತಾನೆ. ಹಾಗೆ ಐದು ಮುಖಗಳ (ವರಾಹ, ಗರುಡ, ನರಸಿಂಹ, ಹಯಗ್ರೀವ, ಹನುಮ) ಅವತಾರ ತಾಳಿದರು ಎಂಬುದು ಕಥೆ.
ಇಲ್ಲಿ ರಾಘವೇಂದ್ರ ಸ್ವಾಮಿಗಳು ೧೩ ವರ್ಷ ತಪಸ್ಸು ಮಾಡಿದ್ದರೆಂದೂ, ಆಗ ಆಂಜನೇಯ ಪಂಚಮುಖಗಳೊಂದಿಗೆ ದರ್ಶನ ಕೊಟ್ಟನೆಂದೂ, ಹನುಮನ ದರ್ಶನದನಂತರವೇ ಶ್ರೀ ರಾಘವೇಂದ್ರ ಸ್ವಾಮಿಗಳು ಜೀವ ಸಮಾಧಿಯನ್ನು ಪ್ರವೇಶಿಸಿದರು ಎಂಬುದು ನಂಬಿಕೆ.

ದೇಗುಲದ ಹೊರಗೆ ಆಂಜನೇಯನ ಪಾದರಕ್ಷೆ ಎಂದು ದೊಡ್ಡದಾದ ಪಾದರಕ್ಷೆಯನ್ನು ಇಟ್ಟಿದ್ದಾರೆ. ವರ್ಷಗಳಿಗೊಮ್ಮೆ ಹೊಸ ಪಾದರಕ್ಷೆ ಇಡುತ್ತಾರಂತೆ.
ಅಲ್ಲಿ ಗಾಣಧಾಳದ ನಾರಾಯಣ ಎಂಬವರು ತಂಬೂರಿಪದ ಹಾಡುತ್ತಿದ್ದರು. ಅವರ ಹಾಡನ್ನು ವೀಡಿಯೋ ಮಾಡಿದೆ. ಅದನ್ನು ನೋಡಿ ಅವರು ಬಹಳ ಖುಷಿಪಟ್ಟರು.

ಪುಷ್ಪಕವಿಮಾನ
ದೇಗುಲದ ಬಲಭಾಗದಲ್ಲಿ ಬೃಹತ್ ಬಂಡೆಗಲ್ಲುಗಳು ಒಂದರಮೇಲೊಂದು ನಿಂತಿರುವುದು ಕಂಡು ಸೋಜಿಗಪಟ್ಟೆವು. ಅದರ ಮೇಲೆ ಪ್ರಕೃತಿಯ ಪುಷ್ಪಕವಿಮಾನ ಎಂದು ಬರೆದಿತ್ತು. ಹೌದು ನಿಸರ್ಗದ ಇಂಥ ಚೋದ್ಯ ನೋಡುವುದೇ ಸೊಗಸು. ಅಲ್ಲೇ ಮುಂದಕ್ಕೆ ದೊಡ್ಡದಾದ ಬಂಡೆಗಲ್ಲು ಇತ್ತು. ಅದು ರಾಘವೇಂದ್ರ ಸ್ವಾಮಿಗಳು ಮಲಗುತ್ತಿದ್ದ ಬಂಡೆಗಲ್ಲು, ದಿಂಬು ಎನ್ನಲಾಗುವ  ಇನ್ನೊಂದು ಕಲ್ಲು ಕಾಣಬಹುದು



ಅಲ್ಲಿ ಒಬ್ಬ ನಮಗೆ ಗಂಟುಬಿದ್ದ. ಪಟ ತೆಗೆಸಿಕೊಳ್ಳಿ. ಬಂಡೆ ಹೀಗೆ ಹಿಡಿಯಿರಿ, ಹೀಗೆ ನಿಲ್ಲಿ ಎಂದೆಲ್ಲ ಅವನೇ ಹೇಳಿಕೊಟ್ಟ. ಅವನು ಹೇಳಿದ ಹಾಗೆ ಫೋಸು ಕೊಟ್ಟೆವುನಮ್ಮ ಮೊಬೈಲಲ್ಲಿ ಪಟ ಕ್ಲಿಕ್ಕಿಸಿದಪಟ ತೆಗದದ್ದಕ್ಕೆ ಚಹಾ ಕುಡಿಯಲು ಕಾಸು ಪಡೆದ!


ಮಹಾಲಕ್ಷ್ಮಿ ದೇಗುಲ

ಆಂಜನೇಯ ದೇಗುಲದ ಹಿಂಭಾಗದಲ್ಲಿ ನೂರು ಹೆಜ್ಜೆ ದೂರದಲ್ಲಿ ಬಂಡೆಯಡಿಯಲ್ಲಿ ಮಹಾಲಕ್ಷ್ಮಿ ದೇಗುಲವಿದೆ. ಅಲ್ಲಿಗೆ ನಡೆದೆವು. (ಈಗ ಒಂದು ಬೈಕ್ ಆದರೂ ಇಲ್ಲಿ ಬಂದರೆ ಅಕ್ಕನಿಗೆ ಅದರಲ್ಲಿ ಹೋಗಬಹುದಿತ್ತು ಎಂದು ಮನದಲ್ಲಿ ಭಾವಿಸುವುದಕ್ಕೂ ಬೈಕ್ ಬರುವುದಕ್ಕೂ ಸರಿ ಹೋಯಿತು. ಆಗ ನನಗಾದ ಖುಷಿ ವರ್ಣಿಸಲು ಸಾಧ್ಯವಿಲ್ಲ. ಆ ಬೈಕಿನಲ್ಲಿ ಅಕ್ಕ ದೇವಾಲಯಕ್ಕೆ ಹೋದಳು. ಮಹಾಲಕ್ಷ್ಮಿಯನ್ನು ನೋಡಿದ ಬಳಿಕ ಅಕ್ಕನನ್ನು ಅವನು ಆಂಜನೇಯ ದೇಗುಲದ ಬಳಿ ಇಳಿಸಿ ಹೋದನಂತೆ. ಸಹಾಯ ಮಾಡಿದ ಆ ಅಪರಿಚಿತ ಯುವಕನಿಗೆ ನಮಸ್ಕಾರ.) ದೇಗುಲದಲ್ಲಿ ಲಕ್ಷ್ಮೀ ಸಹಿತ ವೆಂಕಟೇಶ್ವರ ವಿಗ್ರಹವಿದೆ.  


     ದೇಗುಲದ ಬಗ್ಗೆ ಒಂದು ದಂತಕಥೆ ಇದೆ. ಮುಸ್ಲಿಂ ದೊರೆ ಆದಿಲ್ ಷಾ ಆಳ್ವಿಕೆಯಲ್ಲಿ ಕಲ್ಲೂರಿನಲ್ಲಿ ಲಕ್ಷ್ಮೀಕಾಂತ ಆಚಾರ್ಯಾ ಎಂಬ ಮಾಧ್ವರು ವಾಸಿಸುತ್ತಿದ್ದರು. ಅವರು ಕೊಲ್ಲಾಪುರ ಮಹಾಲಕ್ಷ್ಮಿಯ ಭಕ್ತರು. ಪ್ರತೀವರ್ಷ ನವರಾತ್ರಿಯ ೮ನೇ ದಿನ ಅವರು ಕೊಲ್ಲಾಪುರಕ್ಕೆ ತೆರಳಿ ಸೇವೆ ಸಲ್ಲಿಸುತ್ತಿದ್ದರು. ಕಾಲಕ್ರಮೇಣ ವೃದ್ಧಾಪ್ಯದ ಕಾರಣದಿಂದ ಕೊಲ್ಲಾಪುರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅದರಿಂದ ದುಃಖಗೊಂಡ ಆಚಾರ್ಯರು ಒಂದು ರಾತ್ರಿ ಮಲಗಿದ್ದಾಗ, ಪ್ರತೀ ವರ್ಷ ನಾನು ಇಲ್ಲಿಗೆ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮಹಿಳೆಯ ಧ್ವನಿ ಕನಸಿನಲ್ಲಿ ಕೇಳಿದಂತಾಯಿತು. ಮರುದಿನ ಎಚ್ಚರಗೊಂಡಾಗ, ಕನಸಿನಲ್ಲಿ ಕೇಳಿದ ಮಾತನ್ನು ನಿರ್ಲಕ್ಷಿಸಿ, ಎಂದಿನಂತೆ ಪೂಜೆಗೆ ಗಂಧ ಅರೆಯಲು ತೊಡಗುತ್ತಾರೆ. ಗಂಧ ಅರೆದ ಕಲ್ಲಿನಲ್ಲಿ ಮಹಾಲಕ್ಷ್ಮಿ ಪ್ರತ್ಯಕ್ಷಳಾಗುತ್ತಾಳೆ. ಕೊಲ್ಲಾಪುರದ ಮಹಾಲಕ್ಷ್ಮಿ ತನ್ನ ಭಕ್ತನ ಮನೆಗೆ ಆಗಮಿಸಿದಳು. ಹಾಗೆ ಅಲ್ಲಿ ಮಹಾಲಕ್ಷ್ಮಿ ಉದ್ಬವಗೊಂಡಳು ಎಂಬುದು ಕಥೆ.

   ಅಲ್ಲಿಂದ ಹೊರಟು ದಾರಿಯಲ್ಲಿ ಗಿಲ್ಲಿಸಗೂರ್ ಕ್ಯಾಂಪ್ ಎಂಬಲ್ಲಿ ಪಂಚಮುಖಿ  ಎಂಬ ಕಾಫಿ ಚಹಾ ಪೆಟ್ಟಿಗೆ ಅಂಗಡಿಯಲ್ಲಿ ಚಹಾ ಕಾಫಿ ಸೇವನೆಗಾಗಿ ನಿಲ್ಲಿಸಿದೆವು. ಎಲಿಶ -ತಾಯಪ್ಪ ದಂಪತಿ ನಗುಮೊಗದಿಂದ ರುಚಿಕಟ್ಟಾದ ಕಾಫಿ ಚಹಾ ತಯಾರಿಸಿ ಕೊಟ್ಟಿದ್ದರು. 

ಬಿಚ್ಚಾಲೆ-ಬೃಂದಾವನ

   ಅಪ್ಪಣ್ಣಾಚಾರ್ಯರ ಕಾರ್ಯಕ್ಷೇತ್ರದ, ಅವರು ಸ್ಥಾಪಿಸಿದ ಬೃಂದಾವನ ನೋಡಲು ನಾವು ಬಿಚ್ಚಾಲೆಗೆ ಹೋದೆವು. ಸ್ವಲ್ಪ ದಾರಿ ತಪ್ಪಿದ್ದರಿಂದ ನಾವು ಅಲ್ಲಿ ತಲಪುವಾಗ ಕತ್ತಲಾವರಿಸಿತ್ತು. ಅಲ್ಲಿ ತುಂಗಾಭದ್ರಾ ನದಿ ದಂಡೆಯಲ್ಲಿ ಬೃಂದಾವನ ಇದೆ, ಬಿಚ್ಚಾಲಮ್ಮನ ದೇಗುಲವಿದೆ. ತುಂಗೆ ರಭಸದಿಂದ ಹರಿಯುತ್ತಿದ್ದಳು. ಕತ್ತಲಾದುದರಿಂದ ನೀರಿನ ಬಳಿ ಹೋಗಲಾಗಲಿಲ್ಲ.
ಅರ್ಚಕರಾದ ಪ್ರಹ್ಲಾದಾಚಾರ್ಯರು ಅಲ್ಲಿಯ ಐತಿಹ್ಯವನ್ನು ನಮಗೆ ತಿಳಿಸಿದರು.

ಅಪ್ಪಣ್ಣಾಚಾರ್ಯರ ಊರು ಬಿಚ್ಚಾಲೆ. ಅಲ್ಲಿ ಅವರು ಪಾಠಶಾಲೆ ತೆರೆದಿದ್ದರು. ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರು. ವಿದ್ಯಾರ್ಥಿಗಳು ಗ್ರಾಮದಲ್ಲಿ ಸುತ್ತಿ ಭಿಕ್ಷೆ ಸಂಗ್ರಹಿಸುತ್ತಿದ್ದರು. ಅವರು ತಂದ ಅಕ್ಕಿಯನ್ನು ಬಟ್ಟೆಯಲ್ಲಿ ಕಟ್ಟಿ ಆಲದ ಮರದಲ್ಲಿ ನೇತು ಹಾಕುತ್ತಿದ್ದರು. ತುಂಗಾನದಿಯ ನೀರನ್ನು ಅಪ್ಪಣ್ಣಾಚಾರ್ಯರು ಅದಕ್ಕೆ ಪ್ರೋಕ್ಷಣೆ ಮಾಡಿದಾಗ ಅಕ್ಕಿ ಬೆಂದು ಅನ್ನವಾಗುತ್ತಿತ್ತೆಂದು ಪ್ರತೀತಿ. ಅಲ್ಲಿಗೆ ಭಿಕ್ಷಾಲಯವೆಂದೂ ಹೆಸರಿತ್ತು.

    ೧೨ ವರ್ಷ ಗುರುರಾಯರು ಇಲ್ಲಿ ವಾಸವಾಗಿದ್ದರು. ಅಪ್ಪಣ್ಣಾಚಾರ್ಯರು ಗುರುರಾಯರ ಪರಮಭಕ್ತರಾಗಿದ್ದರು. ಅವರಿಬ್ಬರೂ ಗಂಟೆಗಟ್ಟಲೆ ಚರ್ಚಿಸುತ್ತಿದ್ದರಂತೆ. ಈಗಲೂ ಅವರಿಬ್ಬರೂ ಅಲ್ಲಿ ಬಂದು ಮಾತಾಡಿಕೊಳ್ಳುತ್ತಾರೆ ಎಂಬುದು ನಂಬಿಕೆ.
ಅಪ್ಪಣ್ಣಾಚಾರ್ಯರು ಗುರುರಾಯರಿಗೆ ಚಟ್ನಿ ರುಬ್ಬುತ್ತಿದ್ದ ಕಲ್ಲು ಎಂದು ಹೇಳಲಾಗುವ ಒರಳುಕಲ್ಲು ಈಗಲೂ ಅಲ್ಲಿ ಕಾಣಬಹುದು.


   ರಾತ್ರಿ ೭.೪೫ಕ್ಕೆ ನಾವು ಮಂತ್ರಾಲಯದ ಗುರುರಾಯರ ಮಠ ತಲಪಿದೆವು.  ದೇಗುಲ ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟು ಸುಂದರವಾಗಿ ಕಾಣುತ್ತಲಿತ್ತು.  ಗಂಟೆಗೆ ಮಹಾಮಂಗಳಾರತಿ ನೋಡಿ ಅನ್ನಪ್ರಸಾದ ಊಟ ಮಾಡಿ ಕೋಣೆಗೆ ಬಂದೆವು.


ಮಠದ ದ್ವಾರದ ಪಕ್ಕದಲ್ಲಿ ಚಪ್ಪಲಿ ಇಡಲು ಸ್ಥಳವಿದೆ. ಅಲ್ಲಿ ನಮ್ಮ ಭಾವನ ಚಪ್ಪಲಿಯನ್ನು ಯಾರೋ ಎಗರಿಸಿದ್ದರು. ಹಾಗೆ ಹೊಸಚಪ್ಪಲಿ ಕೊಳ್ಳುವ ಯೋಗ ಭಾವನಿಗೆ ಲಭಿಸಿತು

ತುಂಗೆಯ ತಟದಲ್ಲಿ

ತಾರೀಕು ೨೪..೨೦೨೨ರಂದು ಬೆಳಗ್ಗೆ ಬೇಗನೆ ಎದ್ದು ತಯಾರಾದೆವು. ನಮ್ಮ ಕೋಣೆಯ ಸನಿಹದಲ್ಲೇ ಇರುವ  ತುಂಗಾಭದ್ರಾ ನದಿಗೆ ನಾವು  ೬ಗಂಟೆಗೆ ಹೊರಟೆವು. ಅಲ್ಲಿ ಸ್ನಾನ ಮಾಡಲಿಲ್ಲನೀರಿಗೆ ಇಳಿದು ಪ್ರೋಕ್ಷಣೆ ಮಾಡಿಕೊಂಡೆವು



ಅಲ್ಲಿಂದ ದೇವಾಲಯಕ್ಕೆ ಹೋದೆವು. ಅಲಂಕಾರ ಇಲ್ಲದ ಆಂಜನೇಯ ಹಾಗೂ ಬೃಂದಾವನವನ್ನು ನೋಡುವ ಅವಕಾಶ ಲಭಿಸಿತು

 ಪ್ರತೀದಿನ ಬೆಳಗ್ಗೆ ೬ಗಂಟೆಗೆ ದೇಗುಲದ ಬಾಗಿಲು ತೆರೆಯುತ್ತಾರೆ. ಪ್ರವೇಶ ಸಮಯ೬ರಿಂದ ಮಧ್ಯಾಹ್ನ . ಸಂಜೆ ೪ರಿಂದ ೯ರ ತನಕ.

https://youtu.be/xjT3HP5_8ac

ಕನಕಾಭಿ಼ಷೇಕ

ಅಕ್ಕ ಭಾವ ಕನಕಾಭಿಷೇಕ ಸೇವೆ ಮಾಡಿಸಲು ಚೀಟಿ ಮಾಡಿದ್ದರುಹಾಗಾಗಿ ನಾವು ಸಮಯಕ್ಕೋಸ್ಕರ ದೇಗುಲದಲ್ಲೇ ಕಾಲ ಕಳೆದೆವು. ಪಾದಪೂಜೆ,, ಕನಕಾಭಿ಼ಷೇಕ ಇತ್ಯಾದಿ  ವಿವಿಧ ನಮೂನೆಯ ಸೇವೆ ಸಲ್ಲಿಸಲು ಚೀಟಿ ಪಡೆದವರನ್ನು ಒಂದು ಸಭಾಂಗಣಕ್ಕೆ ಕಳುಹಿಸುತ್ತಾರೆ. .೩೦ಗೆ ನಾವು ಅಲ್ಲಿ ಕೂತೆವು. ಗಂಟೆಗೆ ಅರ್ಚಕರು ಬಂದು ಶಾಸ್ತ್ರೋಕ್ತವಾಗಿ ರಾಯರ ಪಾದುಕಾಪೂಜೆ, ಕನಕಾಭಿಷೇಕ ನೆರವೇರಿಸಿದರು

ಮಂತ್ರಾಕ್ಷತೆ ಪಡೆಯಲು ಅಲ್ಲಿ ಸೇರಿದ್ದ ಮಂದಿ ನೂಕುನುಗ್ಗಲು ಮಾಡಿ ಅಧ್ವಾನಗೊಳಿಸಿದರು. ನಾವು ಸರತಿ ಸಾಲಿನಲ್ಲಿ ನಿಂತವರು ಹಿಂದಕ್ಕೆ ತಳ್ಳಲ್ಪಟ್ಟೆವು. ಅಲ್ಲಿ ಮಂತ್ರಾಕ್ಷತೆ ತೆಗೆದುಕೊಂಡು ನಾವು ಹೊರಬಂದೆವು.

  ಕಲ್ಲು ಸಕ್ಕರೆ, ಮಿಠಾಯಿ ಮಾರತ್ತಲಿದ್ದ ವಿಕಲಚೇತನದವನೊಬ್ಬ ನಮ್ಮ ಎದುರು ಬಂದು ಈ ಪ್ರಸಾದ ತೆಗೆದುಕೊಂಡು ಸಹಾಯಮಾಡಿ ಎಂದು ಭಿನ್ನವಿಸಿದ. ಅಲ್ಲಿ ಭಿಕ್ಷೆ ಬೇಡುವವರ ಹಾವಳಿ ವಿಪರೀತವಾಗಿತ್ತು. ಅಂಥದ್ದರಲ್ಲಿ ಯುವಕ ಸ್ವಾಭಿಮಾನದಿಂದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾನಲ್ಲ ಎಂದು ಖುಷಿಯಾಗಿ ನಾನು ಹಾಗೂ ಅಕ್ಕ ಅವನಿಂದ ನಾಲ್ಕು ಪೊಟ್ಟಣ ಪ್ರಸಾದ ಖರೀದಿಸಿದೆವು. ಇಲ್ಲೇ ಹತ್ತಿರದಲ್ಲಿರುವ ವೆಂಕಟೇಶ್ವರ ದೇಗುಲಕ್ಕೆ ಹೋಗಿ. ಅದನ್ನು ನೋಡದೆ ಹೋಗಬೇಡಿ ಎಂದು ಅವನು ಹೇಳಿದ

ವೆಂಕಟೇಶ್ವರ ದೇವಾಲಯ

ಉಡುಪಿಭವನದಲ್ಲಿ ತಿಂಡಿ ಕಾಫಿಯಾಗಿ ಮಂತ್ರಾಲಯದ ಹಳ್ಳಿ ಮನೆಗಳ ಸಂದುಗೊಂದಿನಲ್ಲಿ ಸಾಗಿ ನಾವು ವೆಂಕಟೇಶ್ವರ ದೇಗುಲಕ್ಕೆ ಹೋದೆವು. ದೇಗುಲವನ್ನು ಗುರು ರಾಘವೇಂದ್ರ ಸ್ವಾಮಿಗಳು ಸ್ಥಾಪಿಸಿ, ಪೂಜೆ ಮಾಡುತ್ತಿದ್ದದ್ದು ಎಂದು ಅರ್ಚಕರಾದ ಶ್ರೀಪಾದ ಆಚಾರ್ಯರು ಹೇಳಿದರು


 ಗೋಶಾಲೆ

ಹಿಂದಿನ ದಿನ ಗೋಶಾಲೆಯ ಗೋವುಗಳ ದರ್ಶನ ಆದಾಗಲೇ ಅಲ್ಲಿಗೆ ಭೇಟಿಕೊಡಬೇಕೆಂದು ಭಾವಿಸಿದ್ದೆವು. ಒಂದು ಘಳಿಗೆ ಅಲ್ಲಿಗೆ ಹೊಕ್ಕು, ಹಾಲು ಕರೆಯುವ ಗೋವುಗಳನ್ನು ನೋಡಿದೆವು. ಬೇರೆಲ್ಲ ಮೇಯಲು ಹೊರಗೆ ಹೋಗಿದ್ದುವು. ಮಂದಿ ಕೆಲಸಗಾರರು ಸುಮಾರು ೩೦ ಗೋವುಗಳ ಹಾಲು ಕರೆಯುತ್ತಾರಂತೆ. ಹಾಲನ್ನು ಮಠಕ್ಕೇ ಕಳುಹಿಸುತ್ತಾರೆ. ಅಲ್ಲಿ ಅಭಿಷೇಕಕ್ಕೆ ಹಾಗೂ ಅನ್ನ ಪ್ರಸಾದದ ಮೊಸರನ್ನಕ್ಕೆ ಉಪಯೋಗಿಸುತ್ತಾರಂತೆ

ಗೋಶಾಲೆಯಲ್ಲಿ ಸರಿ ಸುಮಾರು ೧೫೦೦ ಗೋವುಗಳಿವೆಯಂತೆಯಥಾನುಶಕ್ತಿ ದೇಣಿಗೆ ಸಲ್ಲಿಸಿ ನಾವು ಅಲ್ಲಿಂದ ನಿರ್ಗಮಿಸಿದೆವು.

ಮಂತ್ರಾಲಯಕ್ಕೆ ವಿದಾಯ

ಮಂತ್ರಾಲಯದಿಂದ .೧೫ಕ್ಕೆ ಹೊರಟೆವು. ಸಲ ಗೂಗಲಣ್ಣನ ಸಹಾಯ ಇಲ್ಲದೆಯೇ ಸರಿದಾರಿಯಲ್ಲಿ ಸಾಗಿದೆವು. ದಾರಿಯಲ್ಲಿ ಟೊಮ್ಯಾಟೊ ಹೊಲದ ಬಳಿ ಗಾಡಿ ನಿಲ್ಲಿಸಿ ಹೊಲದೊಳಗೆ ಹೋದೆವು. ಅಲ್ಲಿ ಟೊಮ್ಯಾಟೊ ಕೊಂಡೆವು. ಧನಲಕ್ಷ್ಮೀ ಹಾಗೂ ಶೇಖರ ಎಂಬ ಕಾರ್ಮಿಕರು ಟೊಮೆಟೊ ಕೊಯಿಲು ಮಾಡುತ್ತಲಿದ್ದರು. ಶಂಕರ ಭಂಡ ಎಂಬವರಿಗೆ ಸೇರಿದ ಹೊಲವಂತೆ ಅದು. ನಾವು ಅವರಿಂದ ಬಿಳ್ಕೊಂಡು ಕಾರು ಹತ್ತಿದೆವು. ಆಗ ಶೇಖರ ಓಡಿ ಬಂದು  ಒಂದು ಸೌತೆಕಾಯಿ ಕೊಟ್ಟು, ಒಂದೇ ಇದ್ದದ್ದು ಎಂದರು. ಅವರ ಪ್ರೀತಿಗೆ ನಮೋ ನಮಃ

 ಅದೋನಿ ದಾಟಿ ಗೂಟಿ ಹಾದು ಅನಂತಪುರ ತಲಪಿದಾಗ ಗಂಟೆ .೪೫.ಅನಂತಪುರದಲ್ಲಿ ಹೆದ್ದಾರಿ ಬದಿಯಲ್ಲೇ ಇರುವ ಇಸ್ಕಾನ್ ದೇಗುಲಕ್ಕೆ ಹೋದೆವು. ಬಾಗಿಲು ಹಾಕಿದ್ದರಿಂದ ಒಳಗೆ ಹೋಗಲು ಸಾಧ್ಯವಾಗದೆ  ಪಟ ತೆಗೆದು ಹಿಂದಿರುಗಿದೆವು. ಮಧ್ಯಾಹ್ನ ಗಂಟೆಗೆ ಮುಚ್ಚಿದರೆ ಸಂಜೆ ನಾಲ್ಕಕ್ಕೆ ಬಾಗಿಲು ತೆರೆಯುವುದು

    ಸಸ್ಯಾಹಾರಿ ಹೊಟೇಲ್ ಹುಡುಕುತ್ತ ಸಾಗಿದೆವು. ಒಂದು ಹೊಟೇಲ್ ಪಕ್ಕ ನಿಲ್ಲಿಸಿದಾಗ, ಅದು  ಸಸ್ಯ, ಮಾಂಸ ಎರಡೂ ಇರುವಂಥದ್ದೆಂದು ತಿಳಿದು, ಮುಂದೆ ಯಾವ ಹೊಟೇಲಿದೆ ಎಂದು ಅಲ್ಲಿಯ ಕಾವಲುಗಾರನನ್ನು ಕೇಳಿದಾಗ, ವಿವಾಹ ಭೋಜನ ಎಂಬ ಹೆಸರು ಹೇಳಿದ. ವಿವಾಹ ಭೋಜನ ಹೆಸರೇ ಆಕರ್ಷಕ, ಹೆಸರಿನ ಮೋಡಿಗೆ ಬಿದ್ದ ನಾವುಗಳು ಹಿಂದುಮುಂದೆ ಯೋಚಿಸದೆ ಹೊಟೇಲ್ ಒಳಹೊಕ್ಕು ಊಟಕ್ಕೆ ಕೂತೆವು. ಮೊದಲಿಗೆ ಜಿಲೇಬಿ ಬಂತು. ಜಿಲೇಬಿ ಖಾಲಿ ಮಾಡಿ ಅವರ ಆಹಾರದ ವಿವರವಿರುವ ಕಡತ ನೋಡಿದಾಗ ನಾವು ಪೆಚ್ಚಾದೆವು. ಅಲ್ಲಿಯೂ ಎರಡೂ ಆಹಾರ ಪದ್ದತಿ ಇತ್ತುಹಾಗಾಗಿ ವಿವಾಹ ಭೋಜನ ರುಚಿಸಲಿಲ್ಲ! ಊಟ ಮಾಡಿ ಅಲ್ಲಿಂದ ಮುಂದೆ ಸಾಗಿದಾಗ ಬೆನ್ನು ಬೆನ್ನು ಸಸ್ಯಾಹಾರಿ ಹೊಟೇಲುಗಳ ಹೆಸರು ಕಂಡು ಪರಿತಪಿಸಿದೆವು

ಲೇಪಾಕ್ಷಿ

ವಿವಾಹ ಭೋಜನವುಂಡು ಗಂಡಸರು ಗಾಢ ನಿದ್ದೆಗಿಳಿದರು. ನಾವು ಹರಟುತ್ತ ಇದ್ದೆವು. ಏನೋ ಮಾತಿಗೆ ನಮ್ಮ ನಗೆಯು ಸ್ಫೋಟಗೊಂಡಾಗ ಮಲಗಿದ್ದವರೆಲ್ಲ ಎಚ್ಚರಗೊಂಡರು!

   ಮುಂದೆ ನಾವು ಆಂದ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಗ್ರಾಮವಾದ ಲೇಪಾಕ್ಷಿಗೆ ಹೋದೆವು. ಹಿಂದೂಪುರದಿಂದ ೧೫ಕಿಮೀ, ಬೆಂಗಳೂರಿನಿಂದ ೧೩೦ಕಿಮೀ. ಅಲ್ಲಿ  ವಿವಿಧ ಶಿಲ್ಪಗಳ ಕೆತ್ತನೆಗಳಿಂದ ಕೂಡಿದ ಭವ್ಯವಾದ ಪ್ರಾಚೀನ ದೇವಾಲಯವಿದೆ


ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ದೇಗುಲ ನಿರ್ಮಾಣಗೊಂಡಿದೆ. ಕೃಷ್ಣದೇವರಾಯನ ತಮ್ಮ ಅಚ್ಯುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣ ನಾಯಕ ಈ ದೇಗುಲದ ನಿರ್ಮಾತೃ ಎಂಬ ಉಲ್ಲೇಖವಿದೆ
 ದೊಡ್ಡದಾದ ವೀರಭದ್ರನ ವಿಗ್ರಹವಿದೆ
ಇದರ ಹಿಂದಿರುವ ಪೌರಾಣಿಕ ಕಥೆ: ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ವಿರೋಧ ವ್ಯಕ್ತಪಡಿಸಿದಾಗ, ರಾವಣ ಜಟಾಯುವಿನ ರೆಕ್ಕೆ ಕತ್ತರಿಸಿದಕೆಳಗೆ ಬಿದ್ದ ಪಕ್ಷಿ ಶ್ರೀರಾಮ ಬರುವುದನ್ನೇ ಕಾದಿದ್ದು, ರಾವಣ ಸೀತಾಮಾತೆಯನ್ನು ಅಪಹರಿಸಿದ ಸುದ್ದಿ ತಿಳಿಸಿತು. ರಾಮನು ಆಗ ಲೇ ಪಕ್ಷಿ ಎಂದು ಕರೆದು, ಜಟಾಯು ಲಯದಲ್ಲಿ ಲೀನವಾಗುವಂತೆ ಮಾಡಿದ. ಲೇ ಪಕ್ಷಿ ಎಂದದ್ದೇ ಅಲ್ಲಿಗೆ ಲೇಪಾಕ್ಷಿ ಎಂಬ ಹೆಸರು ಬರಲು ಕಾರಣವಾಯಿತು ಎಂಬುದು ಕಥೆ

ಲೇಪಾಕ್ಷಿ ದೇಗುಲ ವಿಜಯನಗರದ ವಾಸ್ತುಶಿಲ್ಪ ಶೈಲಿಯಲ್ಲಿದ್ದು ಪ್ರಾಕಾರಗಳನ್ನು ಹೊಂದಿದೆ. ಆದರೆ ಈಗ ಪ್ರಾಕಾರಗಳು ಮಾತ್ರ ಉಳಿದುಕೊಂಡಿದೆ. ಒಟ್ಟು ೭೦ ಕಂಬಗಳಿದ್ದು, ಅವುಗಳಲ್ಲಿ ವಿವಿಧ ರೀತಿಯ  ಶಿಲ್ಪಗಳು ಕೆತ್ತನೆಗೊಂಡಿವೆ. ಒಂದು ಕಂಬದ ತಳಭಾಗ ಮತ್ತು ನೆಲದ ನಡುವೆ ಅಂತರವಿದ್ದು, ತೆಳುವಾದ ಬಟ್ಟೆ ಅಥವ ಕಾಗದ ತೂರಿಸಬಹುದು. ಛಾವಣಿಯಲ್ಲಿ ನೈಸರ್ಗಿಕ ಬಣ್ಣದಿಂದ ಚಿತ್ರಿಸಿದ ವರ್ಣಚಿತ್ರಗಳು ಗಮನಸೆಳೆಯುತ್ತವೆ.

ನಾಗಲಿಂಗ ಶಿಲ್ಪ 

ಏಳು ಹೆಡೆಗಳಿರುವ ನಾಗಲಿಂಗ ಶಿಲ್ಪ ನೋಡಲು ಬಹಳ ಸುಮ್ದರವಾಗಿದೆ. ಶಿಲ್ಪ ನಿರ್ಮಾಣಗೊಂಡದ್ದು ಅತ್ಯಲ್ಪ ಕಾಲದಲ್ಲಿ ಎಂದು ಇತಿಹಾಸ ಹೇಳುತ್ತದೆ. ಅದರ ಒಂದು ಪಾರ್ಶ್ವದಲ್ಲಿ ಗಣೇಶನ ವಿಗ್ರಹ ಇದೆ.

ಕಲ್ಯಾಣಮಂಟಪ

ಅಲ್ಲಿ ಅಪೂರ್ಣಗೊಂಡ  ಕಲ್ಯಾಣಮಂಟಪ  ಇದೆ. ಅದರ ಕಂಬದಲ್ಲೂ ಕೆತ್ತನೆಗಳಿವೆ. ಕಲ್ಯಾಣಮಂಟಪದ  ಹಿಂದೆ ಒಂದು ದಂತ ಕಥೆಯಿದೆವಿರೂಪಣ್ಣ ನಾಯಕ ಕಲ್ಯಾಣಮಂಟಪದ ನಿರ್ಮಾಣಕ್ಕೆ ರಾಜ್ಯದ ಖಜಾನೆಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು ಮಂತ್ರಿ ಅಚ್ಯುತರಾಯನಿಗೆ  ದೂರು ಸಲ್ಲಿಸಿದ. ಮಂತ್ರಿಯ ದೂರು ಕೇಳಿದ ರಾಜ, ವಿರೂಪಣ್ಣ ನಾಯಕನ ಕಣ್ಣು ಕೀಳುವಂತೆ ಸೈನಿಕರಿಗೆ ಹೇಳುತ್ತಾನೆ. ಇದರಿಂದ ನೊಂದ ವಿರೂಪಣ್ಣ ನಾಯಕ ತಾನೇ ತನ್ನ ಕಣ್ಣುಗಳನ್ನು ಕಿತ್ತು ಮುಂಭಾಗದ ಗೋಡೆಗೆ ಎಸೆಯುತ್ತಾನೆ. ಚಿಹ್ನೆ ಈಗಲೂ ಗೋಡೆಯಲ್ಲಿ ಇದೆ ಎಂಬುದು ಪ್ರತೀತಿಅಲ್ಲಿಗೆ ಕಲ್ಯಾಣ ಮಂಟಪದ ಕೆಲಸವೂ ನಿಂತುಬಿಟ್ಟಿತು.


  ಒಂದು ಪಾರ್ಶ್ವದಲ್ಲಿ ಒಂದು ಶಿವಲಿಂಗ ಕಾಣುತ್ತದೆ. ಅಲ್ಲಿ ಒಂದು ನಾಯಿ ನಿಂತಿತ್ತು. ಪಟಕ್ಕೆ ಚಂದವಾಗಿ ಫೋಸು ಕೊಟ್ಟಿತು.

 
ಹೊರ ಪಾರ್ಶ್ವಕ್ಕೆ ಬಂದರೆ ಅಲ್ಲಿ ಆಂಜನೇಯನ ವಿಗ್ರಹ ನೋಡಬಹುದು. ಕೆಳಗೆ ಸೀತೆಯ ಪಾದವೆಂದೂ ಹೇಳಲ್ಪಡುವ ಒಂದು ಬೃಹತ್ ಪಾದದ ಗುರುತು ಇದೆಅದರಿಂದ ನೀರು ಜಿನುಗುತ್ತಲೇ ಇರುತ್ತದೆ. ಇನ್ನೊಂದು ಭಾಗದಲ್ಲಿ ಬಂಡೆಮೇಲೆ ತಟ್ಟೆಯಾಕಾರವನ್ನು ಕೆತ್ತಲ್ಪಟ್ಟಿದೆ. ರಾಮ ಲಕ್ಷ್ಮಣ ಸೀತೆ ಅದರಲ್ಲಿ ಊಟ ಮಾಡುತ್ತಿದ್ದರೆಂಬುದೂ ದಂತಕಥೆ. ದೇವಾಲಯದ ಹೊರಭಾಗದಲ್ಲಿ ನಾಗಲಿಂಗಪುಷ್ಪದ ಮರ ಹಾಗೂ ಬಿಲ್ವಮರವಿದೆ. ಬಿಲ್ವಮರದಲ್ಲಿ ಮಧ್ಯಭಾಗದಲ್ಲಿ ಅತ್ತಿಮರ ಬೆಳೆಯುತ್ತಿರುವುದನ್ನೂ ನೋಡಬಹುದು



ಒಟ್ಟಿನಲ್ಲಿ ಸುಂದರ ಅದ್ಭುತ ಕೆತ್ತನೆಗಳಿರುವ ಈ ದೇಗುಲವನ್ನು ಸರಿಯಾಗಿ ಇಂಚಿಂಚಾಗಿ ನೋಡಲು ಒಂದೆರಡು ಗಂಟೆ ವಿನಿಯೋಗಿಸಲೇಬೇಕು

  ನಂದಿ

ದೇಗುಲಕ್ಕೆ ಹೋಗುವ ರಸ್ತೆಯಲ್ಲಿ ದೊಡ್ಡದಾದ ನಂದಿ ಇದೆಏಕಶಿಲೆಯಲ್ಲಿ ಕೆತ್ತಿದ ನಂದಿವಿಗ್ರಹ ೧೬ ಅಡಿ ಎತ್ತರ, ೨೭ ಅಡಿ ಉದ್ದವಿದ್ದು, ಇದು  ಜಗತ್ತಿನಲ್ಲಿ ಅತಿ ಎತ್ತರದ ನಂದಿ ಎಂದು ಹೆಸರು ಪಡೆದಿದೆ

ಜಟಾಯು

ಎತ್ತರದ ಬಂಡೆ ಮೇಲೆ ಹದ್ದಿನ (ಜಟಾಯು) ಪ್ರತಿಮೆ ನಂದಿ ಬಳಿಯಿಂದ ಸುಂದರವಾಗಿ ಕಾಣುತ್ತದೆಅಲ್ಲಿಗೆ ನಾವು ಹತ್ತಲಿಲ್ಲ. ದೂರದಿಂದಲೇ ನೋಡಿ ತೃಪ್ತಿ ಹೊಂದಿದೆವು.

ನಾವು ಅಲ್ಲಿಂದ ಹೊರಟು ಬೆಂಗಳೂರು ತಲಪಿದಾಗ ರಾತ್ರಿ ಗಂಟೆ ದಾಟಿತ್ತು. ವಿದ್ಯಾರಣ್ಯಪುರದಲ್ಲಿರುವ ಪಾಕಶಾಲಾದಲ್ಲಿ ಹೊಟ್ಟೆಪೂಜೆ ಮುಗಿಸಿ ಮುತ್ಯಾಲನಗರದಲ್ಲಿರುವ ತಂಗಿ ಮನೆ ತಲಪಿದಾಗ ೧೦ ಗಂಟೆ ದಾಟಿತ್ತುಅಲ್ಲಿಗೆ ನಮ್ಮ ಮಂತ್ರಾಲಯದ ಯಾತ್ರೆಗೆ ತೆರೆ ಬಿತ್ತು. ನಮ್ಮ ಕಾರಿನ ಚಾಲಕ ಗೋವಿಂದ ಬಹಳ ಚೆನ್ನಾಗಿ ಕಾರು ಚಾಲಿಸಿ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವಾಪಾಸು ಕರೆ ತಂದಿದ್ದರು. ಅವರಿಗೆ ನಮ್ಮೆಲ್ಲರ ನಮಸ್ಕಾರ

ಮರಳಿ ಮನೆಗೆ

೨೫..೨೦೨೨ರಂದು ಅಕ್ಕ ಭಾವನ ಜೊತೆ ಅಕ್ಜನ ಮಗಳ ಮನೆಗೆ ಬೆಳಗ್ಗೆ ಹೊರಟಾಗ, ನನ್ನ ಚರವಾಣಿ ತಂಗಿ ಮನೆಯಲ್ಲೇ ಬಾಕಿಯಾಗಿದ್ದ ವಿಷಯ ತಿಳಿಸಿ, ಅಲ್ಲೇ ನಿಲ್ಲಿ ತಂದು ಕೊಡುವೆವು ಎಂದಾಗ, ನಾವು ಅಲ್ಲೇ ಕಾರು ನಿಲ್ಲಿಸಿದೆವು. ಭಾವ ಸ್ಕೂಟರಲ್ಲಿ ೨೦ ನಿಮಿಷದಲ್ಲಿ ಮೊಬೈಲ್ ತಂದು ಕೊಟ್ಟ. ಅವನಿಗೆ ಅನವಶ್ಯ ಕೆಲಸ ಕೊಟ್ಟದ್ದಕ್ಕೆ ಸಂಕಟವಾಯಿತು. ಮತ್ತೆ ಹೊರಟು ಅಕ್ಕನ ಮಗಳ ಮನೆ ಕೆಂಗೇರಿ ತಲಪಿ ಅಲ್ಲಿ ಊಟ ಮಾಡಿದೆವು.  ಮಧ್ಯಾಹ್ನ ೧.೩೦ ಗಂಟೆಗೆ ಅಲ್ಲಿಂದ ಹೊರಟು  ಮೈಸೂರಿಗೆ ತಲಪಿದಾಗ .೩೦ ಗಂಟೆ. ಮಗಳು ಅಕ್ಷರಿ ಮನೆಯಲ್ಲಿ ನನ್ನನ್ನಿಳಿಸಿ ಕಾಫಿಂಡಿಯಾಗಿ ಅವರು ಅವರೂರು ಸುಳ್ಯಕ್ಕೆ ತೆರಳಿದರು. ಅಲ್ಲಿಗೆ ನಮ್ಮ ಮಂತ್ರಾಲಯ ಯಾತ್ರೆ ಸುಖಕರವಾಗಿ ಸಂಪನ್ನಗೊಂಡಿತು. ಕಾರುಬಾಡಿಗೆ, ಊಟ, ವಸತಿ ಸೇರಿ  ನಮಗೆ ತಲಾ ಒಟ್ಟು ಸರಿಸುಮಾರು ರೂ. ೩೫೧೦  ಖರ್ಚಾಗಿತ್ತು

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ